ಮಾತೃ ವಾತ್ಸಲ್ಯ
ಮಾತೃ ವಾತ್ಸಲ್ಯ
![](https://cdn.storymirror.com/static/1pximage.jpeg)
![](https://cdn.storymirror.com/static/1pximage.jpeg)
ಇದು ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದ ಸತ್ಯ ಘಟನೆ. ಆಂಧ್ರ ಪ್ರದೇಶದಲ್ಲಿ ಒಬ್ಬ ಖ್ಯಾತ ಕ್ರಿಮಿನಲ್ ಲಾಯರ್ ಕುಟುಂಬ . ಯಾವುದೋ ಒಂದು ಕೇಸ್ ನಲ್ಲಿ ತಮ್ಮ ವಿರುದ್ಧ ವಾದಿಸಿದ್ದರೆಂದು ಒಬ್ಬ ಕುಖ್ಯಾತ ರೌಡಿ ಇವರ ಕುಟುಂಬದ ಎಲ್ಲ ಸದಸ್ಯರನ್ನು ಒಂದು ರಾತ್ರಿ ಮುಗಿಸಿಬಿಟ್ಟ. ಆದರೆ ಇವರ ಒಬ್ಬಳೇ ಮಗಳು ಮದುವೆಯಾಗಿ ಕೆಲವೇ ದಿನದಲ್ಲಿ ಅತ್ತೆ ಮನೆಯಲ್ಲಿ ಇದ್ದ ಕಾರಣ ಉಳಿದು ಕೊಂಡಳು. ತಂದೆಯ ಎಲ್ಲ ಆಸ್ತಿಗೆ ಇವಳೇ ವಾರಸುದಾರಳು. ಗಂಡನೂ ನ್ಯಾಯವಾದಿ. ಇವರಿಗೆ ಒಂದು ಗಂಡು ಮಗು ಆದ ಕೆಲವೇ ದಿನಗಳಲ್ಲಿ ಇವರ ಹತ್ಯೆಗೆ ಹೊಂಚು ಹಾಕುತ್ತಿದ್ದ ಅದೇ ಗುಂಪು ಒಂದು ದಿನ ಇವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದಾಗ ಪತಿ ತೀರಿಕೊಂಡು ಪುಟ್ಟ ಮಗು ಮತ್ತು ಆ ಹೆಂಗಸು ಬದುಕುಳಿದರು. ಆ ಊರು ಬಿಟ್ಟು ತಾಯಿ ಮನೆಯಲ್ಲಿ ವಾಸ ಮಾಡಬೇಕಾಯ್ತು . ಹೇಗೋ ಕಷ್ಟಪಟ್ಟು ಗಂಡು ಮಗುವನ್ನು ಶಿಸ್ತಿನಿಂದ ಸಾಕಿ ಛಲದಿಂದ ಅವನನ್ನೂ ಒಬ್ಬ ಕ್ರಿಮಿನಲ್ ಲಾಯರ್ ಆಗಿಯೇ ಮಾಡಿದಳು. ಈಗ
ಮನೆಯಲ್ಲಿ ವೃದ್ದ ತಾಯಿ ಮಗ ಮತ್ತು ಒಂದು ಕೆಲಸದ ಹೆಂಗಸು ಮಾತ್ರ.ಒಂದು ದಿನ ರಾತ್ರಿ ಒಂಬತ್ತು ಗಂಟೆಯಾದರೂ ಮಗ ಮನೆಗೆ ಬಂದಿಲ್ಲ. ಬಹಳ ಕೋಪ ಬಂದಿತ್ತು.ಎಂದೂ ಸಂಜೆ ಆರು ಗಂಟೆಯ ನಂತರ ಮನೆಗೆ ಬಂದಿಲ್ಲದವನು ಅಂದು ಮೊದಲ ಸಲ ಇಷ್ಟು ತಡವಾಗಿ ಬಂದಿದ್ದ. ತಕ್ಷಣ ತಾಯಿಯಿಂದ ಕಪಾಳ ಮೋಕ್ಷ ವಾಯ್ತು. ಇದಕ್ಕೆ ಸಾಕ್ಷಿ ಆ ಮನೆ ಕೆಲಸದವಳು. ಅಂದು ಇಬ್ಬರೂ ಊಟಮಾಡದೆ ಮಲಗಿದರು. ಇಬ್ಬರಿಗೂ ನಿದ್ದೆಯಿಲ್ಲ. ತಾಯಿಯೇ ಹೋಗಿ ಮಗನನ್ನ ಬಲವಾಗಿ ಅಪ್ಪಿಕೊಂಡು ತಪ್ಪು ಮಾಡಿಬಿಟ್ಟೆ ಅಂತ ಅಳಲು ಮಗ ಸಮಾಧಾನ ಮಾಡಿದ .ಆಗ ಮಗ ಹೇಳಿದ್ದು ಅಮ್ಮ ನೀನು ಹೊಡೆದಿದ್ದಕ್ಕೆ ನನಗೆ ಕೋಪವಿಲ್ಲ. ಮೊದಲು ಎಷ್ಟೋ ವೇಳೆ ನನಗೆ ಕಪಾಳಕ್ಕೆಹೊಡೆದಿದ್ದಿಯೆ ಎಷ್ಟೊಂದು ಜೋರಾಗಿ ಏಟು ಬೀಳುತ್ತಿತ್ತು.ಆದರೆ ಇಂದು ನೀನು ಹೊಡೆದಾಗ ನನಗೆ ಅನಿಸಿದ್ದು ನನ್ನ ಅಮ್ಮ ಇಷ್ಟೊಂದು ನಿಶ್ಯಕ್ತಳಾಗಿ ಹೋದಳಲ್ಲ ಅಂತ . ಅಮ್ಮ ಮಲಗೋ ವರೆಗೂ ತಲೆಯ ಹತ್ತಿರವೇ ಕುಳಿತಿದ್ದ. ಒಂದು ಸಾರಿ ನೀರು ಕೇಳಿದಳು ಬಿಸಿ ನೀರನ್ನೆ ಯಾವಾಗಲೂ ಕುಡಿಯುವುದರಿಂದ ಕಾಸಿ ತರಲು ತಡವಾಯಿತು. ಬರುವ ಹೊತ್ತಿಗೆ ಮತ್ತೆ ಮಲಗಿ ಬಿಟ್ಟಿದ್ದಳು ಮತ್ತೆ ಯಾವಾಗಲಾದರೂ ನೀರು ಕೇಳಬಹು ದೆಂದು ನೀರು ಕೈಯಲ್ಲಿ ಇಟ್ಟುಕೊಂಡೇ ಇಡೀ ರಾತ್ರಿ ಅಮ್ಮನ ತಲೆಯ ಹತ್ತಿರವೇ ಕುಳಿತಿದ್ದ. ಇದು ಬೆಳಗ್ಗೆ ಎದ್ದಾಗ ಗೊತ್ತಾಯ್ತು. ಬಹಳ ನೊಂದು ಮಗನಿಗೆ ಹಿಂದಿನ ದಿನದ ಘಟನೆ ಬಗ್ಗೆ ಕೇಳಿದಾಗ ಅವನು ಹೇಳಿದ್ದು ಅಮ್ಮ ನೆನ್ನೆ ನನಗೆ ಜಡ್ಜ್ ಆಗಿ ಪ್ರಮೋಷನ್ ಆಯ್ತು ಸ್ನೇಹಿತರೆಲ್ಲ ಗಲಾಟೆ ಮಾಡಿದ ಕಾರಣ ಅವರಿಗೆ ಪಾರ್ಟಿ ಕೊಡಬೇಕಾದ ಕಾರಣ ಅಷ್ಟು ತಡವಾಯಿತು.ಫೋನ್ ಮಾಡೋಣ ಅಂದರೆ ಫೋನ್ ಬೇರೆ ಒಂದು ವಾರದಿಂದ ಕೆಟ್ಟು ಕೂತಿದೆ ,ಅಂದಾಗ ಅಮ್ಮನಿಗೆ ಮಾತೇ ಬಾರದಾಗಿ ಅವನನ್ನ ಮತ್ತೆ ಅಪ್ಪಿ ಕಣ್ಣೀರು ಸುರಿಸಿದಳು.