ಮುರಿದ ಮನಸ್ಸು
ಮುರಿದ ಮನಸ್ಸು
ಸೋಮಶೇಖರ್ ಎನ್ನುವ ಐದಡಿ ಎತ್ತರದ ಆಸಾಮಿ. ತೀರ ಹೇಳಿಕೊಳ್ಳುವ ಎತ್ತರ ಅಲ್ಲದಿದ್ದರೂ ಈ ಸೋಮಶೇಖರ್ನ ಕೀರ್ತಿ ಅತ್ಯಂತ ಎತ್ತರದಲ್ಲಿ ಹಾರಾಡುತ್ತಿತ್ತು. ಸುತ್ತ ಹತ್ತಾರು ಹಳ್ಳಿಗಳಿಗೆ ಸರಪಂಚನಾಗಿ, ಬಡವರ ಬಂಧುವಾಗಿ, ಕಷ್ಟದಲ್ಲಿರುವವರಿಗೆ ಸಹಾಯದ ಹಸ್ತವಾಗಿ ಪ್ರಸಿದ್ಧಿಯಾಗಿದ್ದನು. ಸೋಮಶೇಖರನಿಗೆ ತಕ್ಕ ಮಡದಿಯಾಗಿ ಅನ್ನಪೂರ್ಣಮ್ಮನವರು ಬಂದರು. ಸಾಕ್ಷಾತ್ ಅನ್ನಪೂರ್ಣೇಶ್ವರಿಯ ಅಪರಾವತಾರ ಎನ್ನುವಷ್ಟು ತಾಯಿ ಹೃದಯ ಹೊಂದಿದ ಅನ್ನಪೂರ್ಣ ಗಂಡನ ಪ್ರತಿಯೊಂದು ಕೆಲಸಕ್ಕೂ, ಪ್ರತಿಯೊಂದು ಸಹಾಯಕ್ಕೂ ಹೆಗಲು ಕೊಟ್ಟು, ಜೊತೆಗೆ ಗಂಡನ ಪ್ರತಿಯೊಂದು ಖುಷಿ ದುಃಖಕ್ಕೆ ಜೊತೆಯಾಗುತ್ತಿದ್ದಳು.
ಹೀಗೆ ಇವರಿಬ್ಬರ ಸಂಸಾರದಲ್ಲಿ ಖುಷಿಯನ್ನು ಹೆಚ್ಚಿಸಲು ಮುದ್ದಾದ ಮಕ್ಕಳ ಆಗಮನವಾಗಿತ್ತು.ಈಗಂತೂ ನಾಲ್ಕು ಮಕ್ಕಳ ಸುಂದರವಾದ ಕುಟುಂಬ ಸೋಮ ಶೇಖರನದಾಗಿತ್ತು.
ಮುದ್ದಾದ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಖುಷಿಯಾದ ಜೀವನ ಬಂಡಿ ಸಾಗುತ್ತಿರುವಾಗ ಬರಿ ಖುಷಿಯೇ ತುಂಬಿತ್ತು, ಯಾವುದಕ್ಕೂ ಕೊರತೆ ಇರದ ಆ ಸುಂದರವಾದ ಕುಟುಂಬದಲ್ಲಿ ನಗು, ತುಂಬಿ ತುಳುಕುತ್ತಿತ್ತು. ಹೀಗೆ ಸೋಮಶೇಖರ ಅನ್ನಪೂರ್ಣ ದಂಪತಿಗಳು ಬಡವರ ಸೇವೆ ಮಾಡುತ್ತ , ತಮ್ಮ ಸಮಯದ ಸದುಪಯೋಗ ಮಾಡಿಕೊಳ್ಳುತ್ತ ಚೆಂದದ ಜೀವನ ಮಾಡುತ್ತಿದ್ದರು.
ಹೀಗೆ ಸಾಗುತ್ತಿರುವಾಗ ದಾಯಾದಿಯಗಳ ಕೆಟ್ಟ ಕ್ರೂರ ದೃಷ್ಟಿಯು ಈ ಕುಟುಂಬದ ಮೇಲೆ ಬೀಳತೊಡಗಿತು. ಸೋಮಶೇಖರ ತಾನು ದುಡಿದು ಗಳಿಸಿದ ಆಸ್ತಿಯನ್ನು ಯಾರಿಗಾದರೂ ಹಂಚಿದರೆ ಈ ದಾಯಾದಿಗಳಿಗೆ ಏನು ಕಷ್ಟವಾಗ್ತಿತ್ತೋ ಗೊತ್ತಿಲ್ಲ . ಬಾರಿ ಬಾರಿ ಅಡ್ಡ ಬರುತ್ತಿದ್ದರೂ ಸೋಮಶೇಖರ್ ತನ್ನ ಅಣ್ಣ ತಮ್ಮಂದಿಗೆ ಬುದ್ದಿ ಹೇಳಿ ತನ್ನ ಕಾಯಕದಲ್ಲಿ ನಿರತನಾಗಿಬಿಡುತ್ತಿದ್ದ. ಆದರೆ ನಾಯಿ ಬಾಲ ಡೊಂಕು ಎನ್ನುವಂತೆ ಆ ದಾಯಾದಿಗಳು ಬುದ್ದಿ ಕಲಿತುಕೊಳ್ಳುವ ಜಾಯಮಾನದವರಾಗಿರಲಿಲ್ಲ. ಶುದ್ದ ಮನಸ್ಸಿರದ ಅವರು ಯಾವಾಗಲೂ ಅಡ್ಡ ದಾರಿಯೇ ಅವರ ಮಂತ್ರವಾಗುತ್ತಿತ್ತು..
ತನ್ನ ಮನೆತದವರೇ ಅಲ್ಲವೇ,, ತನ್ನ ಅಪ್ಪನ ಅಣ್ಣ ತಮ್ಮಂದಿರ ಮಕ್ಕಳೇ ತಾನೇ, ಇರಲಿ ಸಮಯ ಸಂದರ್ಭ ಅವರಿಂದ ಒಮ್ಮೊಮ್ಮೆ ಕೆಟ್ಟ ಕೆಲಸ ಮಾಡಿಸುತ್ತಿದೆ, ತಿದ್ದಿ ಹೇಳಿದರೆ ಪಾಠ ಕಲಿಯುತ್ತಾರೆ ಎನ್ನುವುದು ಸೋಮಶೇಖರ್ ನ ನಿಲುವಾಗಿತ್ತು. ಆದರೆ ಅವರೆಲ್ಲ ತಮಗಿಂತ ಈತ ಎಲ್ಲದರಲ್ಲಿಯೂ ಮುಂದುವರೆಯುತ್ತಿದ್ದಾನೆ, ಜೊತೆಗೆ ಇರುವಷ್ಟು ಆಸ್ತಿಯನ್ನು ಕಂಡವರ ಪಾಲು ಮಾಡುತ್ತಾನೆ ಎಂದು ಹೇಗಾದರೂ ಮಾಡಿ ಆತನನ್ನು ಧರ್ಮದರ್ಶಿ ಸ್ಥಾನದಿಂದ ಕೆಳಗಿಳಿಸಿ, ಹೇಗಾದರೂ ಮಾಡಿ ಆತನ ಆಸ್ತಿಯನ್ನು ಪಡೆದು ಆ ಕುಟುಂಬವನ್ನ ಬೀದಿಗೆ ತರಲು ಹೊಂಚು ಹಾಕುತ್ತಿದ್ದರು.
ಈ ಒಂದು ಕೆಟ್ಟ ಕೆಲಸಕ್ಕೆ ಸೋಮಶೇಖರನ ಸ್ವಂತ ತಮ್ಮ ಸಹ ಸಾಥ್ ಕೊಟ್ಟಿದ್ದನು. ಅವನಿಗೆ ಆಸ್ತಿ ಪೂರ್ಣವಾಗಿ ತಾನೇ ಅನುಭವಿಸಬೇಕೆಂಬ ಹೊಲಸು ಆಸೆ ವಿಪರೀತವಾಗಿ ಬೇರೂರಿ ಬಿಟ್ಟಿತ್ತು. ಅಣ್ಣನನ್ನು ಕೊಲೆ ಮಾಡುವ ಮಟ್ಟಕ್ಕಾದರೂ ಇಳಿಯುವಂತಹ ಮನಸ್ಥಿತಿ ಬಂದುಬಿಟ್ಟಿತ್ತು.
ಹೀಗೆ ಒಂದೆರಡು ಬಾರಿ ತನ್ನ ಸ್ವಂತ ಒಡಹುಟ್ಟಿದವನ ಕ್ರೂರ ಕೃತ್ಯಗಳನ್ನು ಮಾಡುತ್ತಿದ್ದ ಸಮಯದಲ್ಲಿ ಅಣ್ಣನ ಕೈಯ್ಯಲ್ಲಿ ಸಾಕ್ಷಿ ಸಮೇತ ಸಿಕ್ಕಿಬಿದ್ದ ಈ ತಮ್ಮ ಏನೇನೋ ಕಾರಣ ಹೇಳಿ, ನೆಪವೊಡ್ಡಿ ತಪ್ಪಿಸಿಕೊಂಡಿದ್ದನು. ಸ್ವತಃ ತಂಬ ಅಣ್ಣನ ಕೋಣೆಯಲ್ಲಿ ಅತ್ತಿಗೆಯ ಆಭರಣ ಹಾಗೂ ಅಣ್ಣನ ದುಡ್ಡು ಕಳುವು ಮಾಡುವಾಗ ಅತ್ತಿಗೆ ಅನ್ನಪೂರ್ಣಾಳ ಕೈಗೆ ಸಿಕ್ಕು ತಪ್ಪಾಯ್ತು ಎಂದು ಕಾಲುಬಿದ್ದು ಬೇಡಿಕೊಂಡಿದ್ದ.
ತಾಯಿ ಹೃದಯ ಅಲ್ವಾ, ಮರುಗಿ ಗಂಡನಿಗೆ ಈ ವಿಷಯ ತಿಳಿಸದೆ ಮುಚ್ಚಿ ಹಾಕಿದ್ದಳು. ಆದರೂ ಸಹ ಸೋಮಶೇಖರ್ ನ ತಮ್ಮ ಅವಮಾನವಾಯಿತೆಂದು ಕತ್ತಿ ಮಸೆಯುತ್ತಿದನು.ಹೀಗೆ ಪ್ರಯತ್ನ ಮಾಡುತ್ತಲೇ ಇದ್ದನು.. ಆದರೆ ಈ ಸಲ ಅಣ್ಣನನ್ನು ಹೇಗಾದರೂ ಕೊಲೆ ಮಾಡಬೇಕೆಂಬ ಸಂಚು ಮಾಡುವ ಮಟ್ಟಕ್ಕೆ ಇಳಿದುಬಿಟ್ಟಿದ್ದನು.
ಆದರೆ ಕೊಲ್ಲಲು ಒಬ್ಬ ಇದ್ದರೆ, ಕಾಯಲು ಸಹ ಒಬ್ಬ ಇದ್ದೆ ಇರುತ್ತಾನೆ. ಅಣ್ಣ ಯಾವುದೋ ಕೆಲಸ ಮುಗಿಸಿಕೊಂಡು ತಡರಾತ್ರಿ ಬರುತ್ತಿರುವಾಗ ಸ್ವತಃ ತಮ್ಮನೆ ಬಂದು ಅಣ್ಣನಿಗೆ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆಮಾಡಲು ಪ್ರಯತ್ನಿಸಿದನು. ಚಾಕು ಚುಚ್ಚಿ ನಿಂತು ನೋಡಿ, ಇನ್ನೇನು ಅವನು ಸಾಯುತ್ತಾನೆ ಎಂದುಕೊಂಡು , ತಾನೇ ಕೊಲೆ ಮಾಡಿದ್ದು ಎಂದು ಅಣ್ಣನಿಗೆ ಸೊಕ್ಕಿನಲ್ಲಿ ಹೇಳಿ ಹೊರತು ಹೋದನು. ಇತ್ತ ಸೋಮಶೇಖರ್ ಸಾವು ಬದುಕಿನ ಮದ್ಯ ಹೋರಾಡುತ್ತಿರುವಾಗ, ತಾನು ಮಾಡಿದ ಪುಣ್ಯದ ಕೆಲಸಗಳಿಂದಾಗಿ ಸೋಮಶೇಖರ ಯಾರೋ ಒಬ್ಬರು ಪುಣ್ಯಾತ್ಮರು ಈತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು. ಒಂದೆರಡು ದಿನ ಬಿಟ್ಟು ಮರಳಿ ಬಂದಾಗ ತಮ್ಮನಿಗೆ ಆಶ್ಚರ್ಯ . ಸತ್ತೆ ಹೋದ ಅಂದುಕೊಂಡರೆ ಮರಳಿ ಬರಲು ಹೇಗೆ ಸಾಧ್ಯ.
ಕೊನೆಗೆ ಬುದ್ಧಿಕಲಿತ ಸೋಮಶೇಖರ್ ತಮ್ಮನನ್ನು ಕರೆಸಿ, ಸರಿಯಾಗಿ ಬುದ್ದಿ ಹೇಳಿ ಮನೆಯಿಂದ ಆಚೆ ಹಾಕಿದನು. ಎಷ್ಟರ ಮಟ್ಟಿಗೆ ಎಂದರೆ ಇನ್ನುಮೇಲೆ ಶಾಶ್ವತವಾಗಿ ಆತನ ಪಾಲಿಗೆ ಅವನ ಅಣ್ಣನ ಮನೆಯ ಬಾಗಿಲು ಮುಚ್ಚಿದ ಬಾಗಿಲು ಆಯಿತು.
ಹೀಗೆ ಒಮ್ಮೆ ಮನಸ್ಸು ಮುರಿಯೆತೆಂದರೆ ಮುಗಿದೇ ಹೋಯಿತು. ಎಷ್ಟೇ ಪ್ರಯತ್ನ ಪಟ್ಟರೂ ಮನಸಿನ ಬಾಗಿಲು ಒಮ್ಮೆ ಮುಚ್ಚಿತೆಂದರೆ ಅದು ಮುಚ್ಚಿದ ಬಾಗಿಲಾಗಿಯೇ ಇರುತ್ತದೆ. ಏನೇ ಮಾಡಿದರೂ ಮೊದಲಿನ ಪ್ರೀತಿ, ಬಾಂಧವ್ಯ ಸಿಗಲು ಸಾಧ್ಯವೇ ಇಲ್ಲ.