ಕಲ್ಪನಾ ಮುಗಿಸಿದ ಪಯಣ
ಕಲ್ಪನಾ ಮುಗಿಸಿದ ಪಯಣ
ಮಲೆನಾಡಿನ ಹಸಿರಿನ ಸಿರಿಯಲ್ಲಿ ಪುಟ್ಟದಾದ ಊರಲ್ಲಿ ಅತೀ ಶ್ರೀಮಂತವೂ ಅಲ್ಲದ, ಅತೀ ಬಡತನವೂ ಅಲ್ಲದ ಮಧ್ಯಮ ವರ್ಗದ ಒಂದು ಚೆಂದದ ಕುಟುಂಬ. ನಾಗರಾಜ್ ಹಾಗೂ ಕಲ್ಪನಾ ದೈವದ ಸಾಕ್ಷಿಯಾಗಿ, ಗುರು ಹಿರಿಯರ ಆಶೀರ್ವಾದದಿಂದ ಮದುವೆಯಾಗಿದ್ದರು. ಪ್ರತಿಯೊಂದು ವಿಷಯದಲ್ಲೂ ಗಂಡ ಹೆಂಡತಿ ಇಬ್ಬರು ಒಬ್ಬರಿಗೊಬ್ಬರು ಹೊಂದಾಣಿಕೆಯಿಂದ, ಪ್ರೀತಿಯಿಂದ ಜೀವನ ಮಾಡುತ್ತಿದ್ದರು. ಅವರನ್ನು ಬೇರೆಯವರು ನೋಡಿದರೆ ಹೊಟ್ಟೆಕಿಚ್ಚು ಪಡುವಷ್ಟು ಚೆಂದದ ಸಂಸಾರ ಅವರದಾಗಿತ್ತು. ಮುದ್ದಾದ ಮೂರು ಮಕ್ಕಳನ್ನು ಹೆತ್ತು ತಾಯಿಯಾಗಿದ್ದರೂ ಸಹ ಕಲ್ಪನಾ ಹೆಚ್ಚು ಕಡಿಮೆ ಊರಲ್ಲಿರೋ ಎಲ್ಲ ಮಕ್ಕಳಿಗೂ ತಾಯಿಯಂತಿದ್ದಳು. ಜೊತೆಗೆ ಆಕೆ ಆ ಪುಟ್ಟ ಊರಲ್ಲಿ ಇರುವ ಎಲ್ಲ ಹೆಣ್ಣು ಮಕ್ಕಳಿಗೆ ಬಹು ಅಚ್ಚುಮೆಚ್ಚಿನವಳಾಗಿದ್ದಳು. ಯಾರದ್ದೇ ಮನೆಯಲ್ಲಿ ಏನಾದರೂ ಶಾಸ್ತ್ರ ಮಾಡುವುದಿದ್ದರೆ ಅಲ್ಲಿ ಕಲ್ಪನಾ ಮುಂದೆ ಇರಬೇಕಿತ್ತು. ಎಲ್ಲರಿಗೂ ಆಕೆಯ ಮೇಲೆ ವಿಶೇಷ ಗೌರವ ಇರುತ್ತಿತ್ತು. ಆಕೆ ಹೇಳಿದ ಮೇಲೆ ಮತ್ತೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಒಟ್ಟಾರೆಯಾಗಿ ಎಲ್ಲರಿಗೂ ಮಾದರಿಯಾಗಿದ್ದಳು.
ನಾಗರಾಜ್ ಕೂಡ ತನ್ನ ಕೈಲಾದಷ್ಟು ಸಹಾಯ ಮಾಡುತ್ತ ತನ್ನ ಹೊಲಮನೆ ನೋಡಿಕೊಳ್ಳುತ್ತ ಮಕ್ಕಳ ಮುದ್ದಿನ ಅಪ್ಪನಾಗಿದ್ದ. ಇಬ್ಬರು ಹೆಣ್ಣು ಮಕ್ಕಳು ಓದಿನಲ್ಲಿ ಮುಂದಿದ್ದರು. ಅಮ್ಮನಷ್ಟೇ ಇಬ್ಬರು ತಿಳುವಳಿಕೆಯುಳ್ಳವರಾಗಿದ್ದರು. ಆದರೆ ಮಗ ಮಹಾರಾಜ ಮಾತ್ರ ಪೆದ್ದುಗುಂಡನಾಗಿದ್ದ. ನಾಗರಾಜ್ ಕಲ್ಪನಾ ತಮ್ಮ ಜೀವನದಲ್ಲಿ ಎಲ್ಲದು ಇದ್ದರೂ ಮಗನ ಪೆದ್ದುತನದಿಂದಾಗಿ ತುಂಬಾ ಕೊರಗುತ್ತಿದ್ದರು.ಇರುವ ಆಸ್ತಿಯನ್ನು,ತನ್ನ ಅಕ್ಕತಂಗಿಯರನ್ನು ಚೆನ್ನಾಗಿ ನೋಡಿಕೊಂಡು ಹೋಗಬೇಕಾದ ಮಗ ತಿಳುವಳಿಕೆಯಲ್ಲಿ, ಬುದ್ಧಿವಂತಿಕೆಯಲ್ಲಿ, ಜಾಣತನದಲ್ಲಿ ಪೆದ್ದನಾಗಿರುವುದನ್ನು ನೋಡಿ ನೋಡಿ ಗಂಡಹೆಂಡತಿ ಇಬ್ಬರೂ ದಿನವೂ ಕೊರಗುತ್ತ, ಚಿಂತಿತರಾಗಿದ್ದರು.
ಮಕ್ಕಳು ಬೆಳೆದು ದೊಡ್ಡವರಾದಂತೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಯೋಚಿಸಿದರು. ಆ ಪ್ರಕಾರ ಎಲ್ಲ ಹೆಣ್ಣು ಮಕ್ಕಳಿಗೆ ಒಳ್ಳೆಯ ಕುಟುಂಬಕ್ಕೆ ಕೊಟ್ಟು ಮದುವೆ ಮಾಡಿಕೊಟ್ಟರು. ಗಂಡನ ಮನೆಯಲ್ಲಿ ಮೂರು ಹೆಣ್ಣು ಮಕ್ಕಳು ಬಹಳ ಸುಖವಾಗಿದ್ದರು. ಮುದ್ದಾದ ಮೊಮ್ಮಕ್ಕಳು ಸಹ ಜನಿಸಿದರು. ಈ ಖುಷಿಯಲ್ಲಿಯೂ ಸಹ ಮಗನ ಸಲುವಾಗಿ ಕೊರಗುತ್ತಿದ್ದಳು ಕಲ್ಪನಾ. ಆ ಕೊರಗು ಆಕೆಯನ್ನು ದಿನೇ ದಿನೇ ಚಿಂತೆಗೆ ನೂಕುತ್ತಿತ್ತು.
ಮದುವೆ ಮಾಡಿದ್ರೆ ಮಗ ಸರಿದಾರಿಗೆ ಬರಬಹುದೆಂದು ಯೋಚಿಸಿ, ಹುಡುಗಿಯನ್ನು ಹುಡುಕಿ ಮದುವೆ ಕೂಡ ಮಾಡಿದರು. ಮದುವೆ ಆದಮೇಲೆ ಮಗ ಹೆಂಡತಿಯೊಡನೆ ಚೆನ್ನಾಗಿ ಇದ್ದನು. ಅದರೆ ಮೂರು ವರುಷದ ಬುದ್ದಿ ನೂರು ವರುಷದ ತನಕ ಅನ್ನುವಂತೆ ಮಗ ಬದಲಾಗಲಿಲ್ಲ.
ಈ ಮಧ್ಯೆ ನಾಗರಾಜ ಕಲ್ಪನಾ ಇದ್ದರೂ ಸಹಿತ ಬೇಲಿ ಹಾರುವ ಪ್ರಯತ್ನ ಮಾಡಿದ್ದ. ಹೆಂಡತಿ ಇದ್ದರೂ ಸಹ ಮತ್ತೊಂದು ಹೆಣ್ಣಿನ ಸಹವಾಸ ಮಾಡಿದರೆ ಯಾವ ಹೆಣ್ಣು ತಾನೇ ಸಹಿಸಿಯಾಳು? ಕಲ್ಪನಾಳಿಗೆ ಗಂಡನ ಈ ನಾಚಿಕೆಗೇಡಿನ ವಿಷಯ ತಿಳಿದಮೇಲೆ ಸಣ್ಣ ಜಗಳಗಳು ಶುರುವಾದವು.ಅದು ತಾನು ಇನ್ನೊಂದು ಹೆಣ್ಣಿನ ಸಂಘ ಮಾಡಿದ್ದು ಸ್ವತಃ ತನ್ನ ಮಗನ ಹೆಂಡತಿಯೊಡನೆ. ಹೀಗಾಗಿ ಈ ಬಿಸಿತುಪ್ಪವನ್ನು ಹೇಗೆ ನುಂಗಬೇಕು? ಕಲ್ಪನಾ ಎಷ್ಟೇ ತಿಳಿಹೇಳಿದರೂ ಆಕೆಯ ಮಾತನ್ನು ಇಬ್ಬರೂ ತಲೆಗೆ ಹಾಕಿಕೊಳ್ಳಲಿಲ್ಲ. ಕರ್ಮಕಾಂಡವನ್ನು ಕಣ್ಣಾರೆ ನೋಡಿದ ಆಕೆ ನೊಂದು ತನ್ನ ಬಾಳಿನ ಪಯಣವನ್ನು ಮುಗಿಸುವ ನಿರ್ಧಾರಕ್ಕೆ ಬಂದಿದ್ದಳು.
ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದಿರುವ ಸಮಯದಲ್ಲಿ ನೇಣಿಗೆ ಶರಣಾಗಿ ತನ್ನ ಬದುಕಿನ ಪಯಣವನ್ನು ಮುಗಿಸಿದ್ದಳು.