ಸಂಸಾರದಲ್ಲಿ ಅಂತರ ಹೆಚ್ಚಾದಾಗ
ಸಂಸಾರದಲ್ಲಿ ಅಂತರ ಹೆಚ್ಚಾದಾಗ
ಅಯ್ಯೋ! ಸಮಸ್ಯೆಗಳು ಬಗೆಹರಿಯೊದ್ಯಾವಾಗ,
ಸಮಸ್ಯೆಗಳು ಅಂದರೆ ಹಾಗೆ, ಕಷ್ಟಗಳು ಅಂದರೆ ಹಾಗೆ. ತೊಂದರೆಗಳು ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತವೆಯಾ?
ಈ ರೀತಿಯ ಮಾತುಗಳನ್ನೇ ಕೇಳುತ್ತ ಬೆಳೆದವಳು ನಾನು. ಕಷ್ಟದಲ್ಲಿದ್ದವರಿಗೆ ನಮ್ಮ ಅಜ್ಜಿ ಹೇಳುತ್ತಿದ್ದ ಮಾತುಗಳಿವು. ಪುನಃ ಈ ಮಾತುಗಳನ್ನೇ ನನ್ನ ಚಿಕ್ಕಪ್ಪ ಕೂಡ ಹೇಳುತ್ತಿದ್ದರು. ಅದೂ ಬೇರೆ ಯಾವುದೇ ರೀತಿಯ ಸಮಸ್ಯೆಗಳಾದರೂ ಸರಿ, ಇಂದಿಲ್ಲ ನಾಳೆ ಸರಿಹೋಗಬಹುದು ಅಂತ ಧೈರ್ಯ ತಂದುಕೊಂಡು ಸುಮ್ಮನಾಗಬಹುದು.
ಆದರೆ ಈ ಸಮಸ್ಯೆ ಎಂಬ ಸುಳಿಯು ಸುಂದರವಾದ ಸಂಸಾರದಲ್ಲಿ ಎದುರಾದರೆ ಹೇಗೆ ಧೈರ್ಯ ತಂದುಕೊಳ್ಳುವುದು, ಹೇಗೆ ಹೊಂದಿಕೊಂಡು ಹೋಗುವುದು, ಎಷ್ಟು ಅಂತ ಸಹಿಸಿಕೊಳ್ಳುವುದು, ಹೇಗೆ ಸಮಾಧಾನವಾಗಿರುವುದು?
ಸಂಚಿತ್ ಒಬ್ಬನೇ ಮಗನಾಗಿರುವ ಸುಂದರವಾದ ಕುಟುಂಬದಲ್ಲಿ ಖುಷಿಯಾಗಿ ಜೀವನ ಮಾಡಲು ಕೊರತೆ ಇರಲಾರದಷ್ಟು ಚೆಂದದ ಕುಟುಂಬ. ಸಂಚಿತ್ ಕೂಡ ಒಳ್ಳೆ ವಿದ್ಯಾವಂತ, ಬುದ್ದಿವಂತ . ಒಳ್ಳೆಯ ಕೆಲಸದಲ್ಲಿ ಸೇರಿಕೊಂಡಿದ್ದ. ಕೆಲಸಕ್ಕೆ ಸೇರಿ ನಾಲ್ಕೈದು ವರ್ಷಗಳು ಆಗಿದ್ದವು. ಅವನ ಅಪ್ಪ ಅಮ್ಮ ಮದುವೆ ಮಾಡಲು ಯೋಚಿಸಿದರು.
ಆಗಲೇ ಇವನು ಸಿಂಚನ ಎನ್ನುವ ಆಗರ್ಭ ಶ್ರೀಮಂತ ಮನೆಯ ಹುಡುಗಿಯನ್ನು ಲವ್ ಮಾಡುತ್ತಿದ್ದನು. ನೋಡಲು ಕಣ್ಣು ಕುಕ್ಕುವಂತಿದ್ದ ಸಿಂಚನಾ ತುಂಬಾ ಮಾಡರ್ನ್, ಮತ್ತು ನೇರ ನುಡಿ ಸ್ವಭಾವದವಳು, ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಅವಳಿಗೆ ಕಷ್ಟ ಎಂಬುದರ ಅರ್ಥವೇ ಗೊತ್ತಿರಲಿಲ್ಲ. ಹಾಗೆ ಅವಳ ಅಪ್ಪ ಬೆಳೆಸಿದ್ದ. ಅಮ್ಮ ಇಲ್ಲದ ಮಗಳೆಂದು ತಾನೇ ಅಮ್ಮನೂ ಆಗಿ ಅಷ್ಟೊಂದು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಸಿಂಚನಾಳ ಅಪ್ಪ ಮಗಳು ಇಷ್ಟಪಟ್ಟಿದ್ದನ್ನು ಕ್ಷಣಾರ್ಧದಲ್ಲಿ ತಂದು ಕೈಗಿಡುತ್ತಿದ್ದ. ಹೀಗಾಗಿ ಸಿಂಚನಾಗೆ ಕಾಯುವ, ಅಥವಾ ಸಿಗುವುದಿಲ್ಲ ಎಂದು ಸುಮ್ಮನಾಗುವ ಸ್ವಭಾವದಳಾಗಿರಲಿಲ್ಲ.
ಅದ್ಹೇಗೋ ಸಿಂಚನಾ ಸಂಚಿತ್ ಒಬ್ಬರಿಗೊಬ್ಬರು ತುಂಬಾ ಪ್ರೀತಿ ಮಾಡುತ್ತಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಆಳವಾಗಿತ್ತು ಅವರ ಪ್ರೀತಿ. ಇತ್ತ ಸಂಚಿತ್ ಮನೆಯಲ್ಲಿ ಪ್ರೀತಿ ವಿಷಯ ಗೊತ್ತಾದಾಗ ಆತನ ಅಪ್ಪ ಅಮ್ಮ ತುಂಬಾನೇ ಹೆದರಿದರು. ಸುಮ್ಮನೆ ಯಾಕೆ ದೊಡ್ಡಮಂದಿ ಉಸಾಬರಿ ಅಂತ. ಅದರೆ ಸಂಚಿತ್ ಒತ್ತಾಯ ಮಾಡಿ ಒಪ್ಪಿಸಿದ.
ಸಿಂಚು ಮನೆಯಲ್ಲಿ ವಿಷಯ ಗೊತ್ತಾದಾಗ ಆಕೆಯ ಅಪ್ಪ ಸಂಚಿತ್ ಆಸ್ತಿ, ಮನೆ , ಜಾಬ್, ಸ್ಯಾಲರಿ ಹೀಗೆ ಎಲ್ಲದರ ಬಗ್ಗೆ ವಿಚಾರಿಸಿ,
ಸಿಂಚು, ಈ ಮದುವೆ ನಡೆಯೋದಕ್ಕೆ ಸಾಧ್ಯನೇ ಇಲ್ಲ, ನನ್ನ ಮನೆಯ ರಾಜಕುಮಾರಿಯನ್ನು ಆ ಕೊಂಪೆಗೆ ಕೊಡಲು ನಾನು ಒಪ್ಪಲ್ಲ.
ಪಪ್ಪಾ ಏನಾಗಿದೆ ನನ್ನ ಸಂಚಿತ್ ಮನೆಗೆ,
ಅದು ಒಂದು ಮನೇನಾ? ಆ ಬಣ್ಣ ಮಾಸಿದ ಗೋಡೆ, ಆ ಕಟ್ಟೆ ಬಾಗಿಲು ನೋಡಿದೆಯಾ? ಛಿ, ಛಿ!
ಪಪ್ಪಾ ಛಿ ಅನ್ನುವಷ್ಟು ಏನೂ ಆಗಿಲ್ಲ, ನಾನು ತಾನೇ ಅಲ್ಲಿರೋದು,ನಾನು ಹೊಂದಿಕೊಳ್ತೇನೆ..
ಮಗಳೇ ನಿನಗೆ ಗೊತ್ತಾಗಲ್ಲ, ಪ್ರೀತಿಯಲ್ಲಿ ನಿನ್ನ ಕಣ್ಣು ಕುರುಡಾಗಿದೆ ಅದ್ಕೆ ಹೀಗೆಲ್ಲ ಹೇಳ್ತಿದಿಯಾ
ಪಪ್ಪಾ ಸುಮ್ಮ್ನೆ ಏನೇನೋ ಹೇಳಿ ನಂಗೆ ಸಿಟ್ಟು ತರಿಸಬೇಡಿ. ಮದುವೆ ಮಾಡಿ ಆಶೀರ್ವಾದ ಮಾಡಿ ಕಳುಹಿಸಿಕೊಡಿ.
ಸಾಧ್ಯವೇ ಇಲ್ಲ, ಜೊತೆಗೆ ನೀನೇನಾದರೂ ಅವನನ್ನೇ ಮದುವೆ ಆದ್ರೆ ನನ್ನ ಆಸ್ತಿಯಲ್ಲಿ ಒಂದು ಬಿಡಿಗಾಸು ಸಿಗಲ್ಲ ನಿನಗೆ.
ಸರಿ ಬಿಡಿ ಪಪ್ಪಾ, ನಿಮ್ಮ ಆಸ್ತಿ ನೀವೇ ಇಟಗೊಳ್ಳಿ, ನನಗೆ ಸಂಚಿತ ಪ್ರೀತಿ ಸಿಕ್ರೆ ಸಾಕು..
ಹೀಗೆ ಅಪ್ಪ ಮಗಳ ನಡುವೆ ವಾದ ವಿವಾದ ನಡೆದು ಕೊನೆಗೆ ಸಿಟ್ಟಲ್ಲಿ ಇಬ್ಬರು ದೂರವಾದರು.
ಸಂಚಿತ ಅಪ್ಪ ಅಮ್ಮ ಸಂಚಿತ್ ಸಿಂಚು ಮದುವೆ ಮಾಡಿ ಮುಗಿಸಿದರು. ಇಬ್ಬರು ಪ್ರೇಮವಿಹಾರದಲ್ಲಿ ತೇಲಾಡುತ್ತ ಖುಷಿಯಾಗಿದ್ದರು.
ದಿನಗಳೆದಂತೆ ಸಿಂಚನಾಗೆ ಅಲ್ಲಿ ಇರಲು ಕಷ್ಟವಾಗತೊಡಗಿತು. ಬೇಕಿದ್ದನ್ನು, ಇಷ್ಟಪಟ್ಟಿದ್ದನ್ನು ಪಡೆಯಲು ವಾರಗಟ್ಟಲೆ ಕಾಯಬೇಕಿತ್ತು. ಸಂಚಿತ್ ಕೂಡ ಕೆಲಸ ಕೆಲಸ ಅಂತ ಸ್ವಲ್ಪ ಬ್ಯುಸಿಯಾದಂತೆ ಕಾಣತೊಡಗಿದನು. ಅತ್ತೆ ಮಾವ ಒಮ್ಮೊಮ್ಮೆ ಬರಿಗೈಯ್ಯಲ್ಲಿ ಬಂದವಳೆಂದು ಹೀಯಾಳಿಸುತ್ತಿದ್ದರು.
ಕೆಲವೊಮ್ಮೆ ಬೇಜಾರಾದರೂ ಸಂಚಿತ್ ನ ಪ್ರೇಮದ ಕೈ ತಲೆ ಸವರಲಿಲ್ಲ, ಒಮ್ಮೊಮ್ಮೆ ಅತ್ತಾಗ ಕಣ್ಣೀರು ವರೆಸಲಿಲ್ಲಿ. ಬಹಳ ಬೇಜಾರಗತೊಡಗಿದಳು. ಗಂಡನಿಗೆ ಒಂದು ವಾರ ಹೊರಗಡೆ ಸುತ್ತಾಡಿಕೊಂಡು ಬರೋಣವೆಂದು ಹೇಳಿದಳು. ಆದರೆ ಸಂಚಿತ್ ಅಯ್ಯೋ ಈ ದುಡಿಮೆಯಲ್ಲಿ ನಿನ್ನ ಬೇಕು ಬೇಡಗಳನ್ನು ತೀರಿಸುವುದರಲ್ಲೇ ಸಾಕಾಗ್ತಿದೆ. ಅಂಥದ್ದರಲ್ಲಿ ಹೊರಗಡೆ ಸುತ್ತಾಡಲು ಹಣ ಏನು ನಿಮ್ಮ ಅಪ್ಪ ಕೊಡ್ತಾನಾ ಅಂತ ಸಿಟ್ಟಲ್ಲಿ ಕೂಗಾಡಿದನು.
ಅಪ್ಪನ ಹೆಸರು ಎತ್ತಿದ್ದಕ್ಕೆ ಸಿಟ್ಟಾದ ಸಿಂಚು, ನಾನು ಬೇಡ ಅಂತ ಬಿಟ್ಟು ಬಂದ ಅಪ್ಪನ ಹೆಸರನ್ನು ಮದ್ಯ ತರುವುದೇಕೆ? ಅಪ್ಪನನ್ನು ಮದ್ಯ ಎಳೆದರೆ ಸರಿಯಿರುವುದಿಲ್ಲ ಎಂದು ಅವಳೂ ಸಿಟ್ಟಲ್ಲಿ ಹೇಳಿದಳು.
ಹೀಗೆ ಮಾತಿಗೆ ಮಾತು ಬೆಳೆಯತೊಡಗಿತು.ಕೊನೆಗೆ ಸಿಂಚನಾಳೆ ಸಮಾಧಾನ ಮಾಡಿಕೊಂಡು ಸಂಚಿತನನ್ನು ಸಮಾಧಾನಿಸಿದಳು.
ಆದರೆ ಇದು ಒಂದು ದಿನದ ಮಾತಾಗಿರಲಿಲ್ಲ. ಪ್ರತಿದಿನ ಒಂದಲ್ಲ ಒಂದು ಸಣ್ಣಪುಟ್ಟ ವಿಷಯಗಳೂ ಸಹ ರಂಪವಾಗತೊಡಗಿದವು. ಸಿಂಚನ ಎಷ್ಟೋ ಬಾರಿ ಸಹನೆಯಿಂದ , ತಾಳ್ಮೆಯಿಂದ ನಡೆದುಕೊಳ್ಳುತ್ತಿದ್ದಳು.
ಇಲ್ಲಿ ಸಮಸ್ಯೆ ಬಂದಿದ್ದು ಅವಳ ಬೇಕು ಬೇಡದ ಸಲುವಾಗಿ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯವಾದದ್ದು ಇನ್ನೊಂದಿದೆ. ಅದೇನೆಂದರೆ ಸಂಚಿತ್ ಎರಡು ಕಣ್ಣು ಸಿಂಚನಾಳ ಅಪ್ಪನ ಆಸ್ತಿಯ ಮೇಲೆ ಬಿದ್ದಿತ್ತು.
ಆದರೆ ಅದು ಸಿಗುವುದು ಸಾಧ್ಯವೇ ಇಲ್ಲವೆಂದು ಗೊತ್ತಾದಾಗ ದಿನದಿಂದ ದಿನಕ್ಕೆ ಜಗಳಗಳು, ಮನಸ್ತಾಪಗಳು, ಹೆಚ್ಚಾಗತೊಡಗಿದವು. ಸಿಂಚನಾ ಎಷ್ಟು ಅಂತ ತಾಳುತ್ತಾಳೆ, ಮನೆಯಲ್ಲಿ ಖುಷಿಯೆನ್ನುವುದು ಮರೀಚಿಕೆಯಾಯಿತು. ಹೊಂದಿಕೊಂಡು ಎಷ್ಟಂತ ಇರುವುದು, ಒಂದಲ್ಲ ಒಂದಕ್ಕೆ ಗಂಡ ಅತ್ತೆ ಮಾವ ಎಲ್ಲರೂ ಅವಮಾನ ಮಾಡಿ, ಬೈಯುವವರೇ.
ಈಗ ಅಪ್ಪ ಹೇಳಿದ ಮಾತುಗಳು ಒಂದೊಂದಾಗಿ ನೆನಪಾಗತೊಡಗಿದವು ಮತ್ತು ನಿಜ ಅನ್ನಿಸತೊಡಗಿದವು.
ಅನುಸರಿಸಿಕೊಂಡು ಬದುಕುವುದು ಅನಿವಾರ್ಯವಾಗಿತ್ತು. ಆದರೆ ಬರುಬರುತ್ತಾ ತುಂಬಾ ಕಷ್ಟವಾಗತೊಡಗಿತು. ಸಮಸ್ಯೆಗಳು ಉಲ್ಬಣವಾಗತೊಡಗಿದವು. ಸಂಸಾರದಲ್ಲಿ ಬಿರುಕು ಮೂಡತೊಡಗಿತು. ಸಂಚಿತ್ ಕುಡಿಯಲು ಕಲಿತು, ದಿನಾಲೂ ಕುಡಿದುಬಂದು ಜಗಳ ತೆಗೆಯುತ್ತಿದ್ದ, ಒಮ್ಮೊಮ್ಮೆ ಜಗಳ ಅತೀರೇಖವಾದಾಗ ಸಿಂಚನಾಳ ಮೇಲೆ ಕೈಯೆತ್ತುತ್ತಿದ್ದ.ಅತ್ತೆ ಮಾವ ನೋಡುತ್ತಿದ್ದರೆ ಹೊರತು ಮಗನಿಗೆ ಏನೂ ಹೇಳುತ್ತಿರಲಿಲ್ಲ..
ಸಿಂಚನ ಸಂಚಿತ್ ಮದ್ಯ ತುಂಬಾ ಅಂತರ ಸೃಷ್ಟಿಯಾಯಿತು. ದಿನದಿಂದ ದಿನಕ್ಕೆ ಈ ಅಂತರ ಹೆಚ್ಚಾಗತೊಡಗಿತು. ಇದರಿಂದ ಬಹಳ ಕುಗ್ಗಿ ಹೋದ ಸಿಂಚು ಇನ್ನು ಈ ಜೀವನದಲ್ಲಿ ಸಹಿಸಿಕೊಂಡು ಬದುಕಲು ಏನೂ ಉಳಿದಿಲ್ಲ, ಪ್ರಪಂಚ ದೊಡ್ಡದಿದೆ, ಹೇಗಾದರೂ ಜೀವನ ಮಾಡಬಹುದೆಂದು ವಿಚಾರ ಮಾಡಿ ಮನೆಯಿಂದ ಹೊರ ನಡೆದಳು. ಆದರೆ ಸ್ವಾಭಿಮಾನಿ ಸಿಂಚನಾ ಅಪ್ಪನ ಮನೆಗೂ ಹೋಗಲಿಲ್ಲ. ಒಂದು ಕೆಲಸ ಹುಡುಕಿಕೊಂಡು ಜೀವನ ಮಾಡಲು ಶುರುವಾದಳು, ಗಂಡನಿಗೆ ವಿವಾಹ ವಿಚ್ಛೇದನ ಬೇಕೆಂದು ನೋಟಿಸ್ ಕಳುಹಿಸಿದಳು...