ತೋಟಿ
ತೋಟಿ
ನಿಜವಾಗಿಯೂ ನಾನ್ಯಾರು?..ನಮ್ಮ ಸುತ್ತಮುತ್ತಲ ಪರಿಸರದಲ್ಲಿ ವಾಸಿಸುವ ಮನುಷ್ಯ ಜೀವಿಗಳಲ್ಲಿ ನಾನೂ ಒಬ್ಬ ನಿಜ. ಆದರೆ ನನ್ನಂಥಹ ಭಾವನೆ ಇತರರಲ್ಲಿ ಇರಬಹುದೇ? ಅಥವಾ ಅವರಲ್ಲಿಲ್ಲದ ಭಾವನೆ ನನ್ನಲ್ಲಿ ಅಲೆಅಲೆಯಾಗಿ ಬಂದಾಗ ಅದನ್ನು ನಾನು ಸಮಾಜದ ಮುಂದೆ ಒತ್ತಿ ಹೇಳಲು ಮನಸಿಲ್ಲದೆ ತಟಸ್ಥವಾಗಿ ಇದ್ದಿರುವುದರಿಂದ ಭೋಗಲಾಲಸೆಯಲ್ಲಿ, ಅತೀ ಕಡುಬಡವರ ಕಷ್ಟದ ಅನುಭವವಿಲ್ಲದೆ ತೊಡಗಿರುವವರ ವರ್ಗಕ್ಕೆ ನಾನೂ ಸೇರುತ್ತೇನೆಯೇ? ಅಥವಾ ನನ್ನ ಹಾಗೇ ಇತರರಿಗೂ ಸಮಾಜದ ದ್ವಂದ್ವಗಳಭಾವನೆ ಬಂದರೂ ನಿರ್ಲಕ್ಷö್ಯದಿಂದಿದ್ದಾರೆಯೇ? ಹಾಗಾದರೆ ಸಾಮಾಜಿಕ ಕ್ರಾಂತಿಯ ಮಾತಂತೂ ಇಲ್ಲ.
ದಢ್ ದಢ್’ ಶಬ್ದದಿಂದ ವಾಸ್ತವಕ್ಕೆ ಬಂದೆ.
ಮಾದ ತನ್ನ ಕೈಗಾಡಿಯನ್ನು ತಳ್ಳುತ್ತಾ, ಗುಡಿಸಬೇಕಾಗಿದ್ದ ಸ್ಥಳಕ್ಕೆ ತಂದು ನಿಲ್ಲಿಸಿ, ರಪರಪನೆ ಗುಡಿಸಲು ಪ್ರಾರಂಭಿಸಿದ. ನಾನು ಬಸ್ಸಿಗಾಗಿ ಕಾಯುತ್ತಿದ್ದೆ. ಬೆಳಗಿನ ಜಾವ ಮಂಜು ಇನ್ನೂ ಕರಗಿರಲಿಲ್ಲ. ಮಾದನ ಪೊರಕೆಯ ‘ರಪರಪ’ ಶಬ್ದ ಬಿಟ್ಟರೆ ನಿಟ್ಟೂರೆಲ್ಲಾ ನಿಶ್ಯಬ್ದ. ಆ ಬದಿಯಲ್ಲಿದ್ದ ವಿದ್ಯುದ್ದೀಪದ ಬೆಳಕು ಸಾಕಷ್ಟು ಹರಡಿದ್ದರೂ, ನಾಲ್ಕಾರು ಕಡೆ ಕತ್ತಲೆ ಹರಡಿತ್ತು. ಅಂಗಡಿ ಬಾಗಿಲು ಯಾವುದೂ ತೆರದಿರಲಿಲ್ಲ. ತಿಳಿಗಾಳಿಗೆ ಚಳಿಯಾಗುತ್ತಿತ್ತು. ಶ್ವಾನಗಳ ದಂಡು ತಮಗಿಷ್ಟ ಬಂದ ಕಡೆಯಲ್ಲೆಲ್ಲಾ ಓಡಾಡುತ್ತಿತ್ತು. ಹಾಲಿನವನು ಸೈಕಲ್ನಲ್ಲಿ ಎಲ್ಲಿಗೋ ಹೋಗುತ್ತಿದ್ದ. ಮಾದನನ್ನೇ ನೋಡುತ್ತಿದ್ದ ನನಗೆ ಆ ಭಾವನೆ ಬಂದಿದ್ದರಲ್ಲಿ ತಪ್ಪಿಲ್ಲವೆನ್ನಬಹುದು. ತನ್ನ ನೀಳ ಪೊರಕೆಯಿಂದ ಕಸವನ್ನು ಗುಡಿಸಿ ಗುಡ್ಡೆ ಹಾಕಿ ಆ ಗುಡ್ಡೆಯನ್ನ ಬಾಚಿ ಕೈಗಾಡಿಗೆ ಹಾಕುತ್ತಿದ್ದ. ಸುಮಾರು ನಲ್ವತ್ತು ನಲ್ವತ್ತೆöÊದು ಆಗಿರಬಹುದು. ತೋಟಿ ಮಾದನ ಶರೀರ ಸೊರಗಿತ್ತು. ಪಂಚಾಯಿತಿ ಹೊಲಿಸಿಕೊಟ್ಟಿದ್ದ, ತನ್ನ ಖಾಕಿ ಅಂಗಿ ಹಾಗೂ ಚಡ್ಡಿಗೆ ಎರಡರಿಂದ ಮೂರು ವರ್ಷಗಳೇ ಆದಂತಿದೆ. ಹಾಗೇ ಗುಡಿಸುತ್ತಾ ಶೆಟ್ಟç ಅಂಗಡಿ ಮುಂದೆ ಬಂದು
ಅಯ್ನೋರೇ..’ಎಂದು ಜೋರಾಗಿ ಕರೆದು, ಪುನಃ ತನ್ನ ಕಾಯಕದಲ್ಲಿ ತಲ್ಲೀನನಾದ. ಸ್ವಲ್ಪ ಹೊತ್ತಿನ ನಂತರ ಆ ಚಿಕ್ಕದಾದ ಅಂಗಡಿಯ ಬಾಗಿಲು ತರೆದು ಶೆಟ್ಟರು ಹೊರಗೆ ಬಂದು ಆಕಳಿಸಿದರು. ‘ಏನ್ಲಾ ಮಾದ ಬಂದೆಯಾ..’ ಅಂದರು ಮಾದ ನಮಸ್ಕಾರ ಅರ್ಪಿಸಿ ಕೈಗಾಡಿ ಮುಂದೆ ತಳ್ಳಿದ. ಶೆಟ್ಟರು ಬಕೆಟ್ ಹಿಡಿದು ನಲ್ಲಿಗೆ ಹೋದರು. ಮಾದ ಕೈಗಾಡಿಯನ್ನು ಪ್ರಯಾಸದಿಂದ ತಳ್ಳುತ್ತಾ ಹೋದನು.
ಬಸ್ ಬಂತು. ಹತ್ತಿ ಕುಳಿತೆನು. ಅದು ತನ್ನ ಪಾಡಿಗೆ ಚಲಿಸತೊಡಗಿತು..ಮನಸ್ಸು ಮಾದನ ಬಗ್ಗೆ ಯೋಚಿಸುತ್ತಿತ್ತು.
ನಿಟ್ಟೂರಿನ ಜನರಿಗೆ ಮಾದ ಬೇಕೇ ಬೇಕು. ಊರಿನ ಅಂಗಡಿ ಮುಗ್ಗಟ್ಟುಗಳ ಮಾಲೀಕರು ಹಾಗೂ ನಿಟ್ಟೂರು ಟೌನಿನ ಅಕ್ಕಪಕ್ಕ ವಾಸಿಸುವ ಜನರಿಗೆ ಮಾದ ತನ್ನ ಕಾಯಕದಿಂದ ಚಿರಪರಿಚಿತ. ಜನರ ಬಾಯಲ್ಲಿ ತೋಟಿ ಮಾದ ಎಂದೇ ಪ್ರಚಲಿತ. ಮಾದ ಇದ್ದದ್ದು ನಿಟ್ಟೂರಿನ ೨-೩ ಕಿಮೀ ದೂರದಲ್ಲಿದ್ದ ಮಸಣದ ಪಕ್ಕದಲ್ಲಿನ ಪಂಚಾಯಿತಿ ಕಟ್ಟಿಸಿಕೊಟ್ಟಿದ್ದ ಪಾಳು ಬಿದ್ದ ಎರಡು ಕೋಣೆಯ ಚಿಕ್ಕ ಮನೆಯಲ್ಲಿ. ಅದು ಅವನಿಗೆ ರಾತ್ರಿ ನಿದ್ರೆ ಮಾಡುವ ಸಲುವಾಗಿ ಮಾತ್ರ ಎಂಬAತಿತ್ತು. ಮಾದ ನಿಟ್ಟೂರಿನ ಶುಚಿತ್ವ ಕಾಪಾಡುತ್ತಿದ್ದ. ಅದು ಆತನ ಕರ್ತವ್ಯ ನಿಷ್ಠೆ.
‘ಮಾದ ಬಾ ಇಲ್ಲಿ..ಒಂದು ನಾಯ್ ಸತ್ತೋಗದೆ..ಅದ್ನ ಹೂಳ್ಬಿಡು ವಾಸ್ನೆತಡಿಯೋಕಾಕ್ತಿಲ್ಲ ಅಂತAದ್ರೆ ಸತ್ತ ನಾಯಿಯನ್ನು ದರದರನೆ ಎಳೆಯುತ್ತಾ ಹೋಗಿ..ಗುಂಡಿ ತೋಡಿ ಹೂತಿಟ್ಟ ನಂತರ, ನಾಯಿಯ ವಾರಸುದಾರರ ಮುಂದೆ ಎಲೆಅಡಿಕೆ ಜಗಿದು..ತನ್ನ ಕೆಂಪಾದ ಕೆಲವೇ ಕೆಲವು ಹಲ್ಲುಗಳನ್ನು ಬಿಟ್ಟು ಗಿಂಜುತ್ತಾ ತಲೆಕೆರೆಯುತ್ತಿದ್ದ. ಯಜಮಾನ್ರು ಎರಡೋ-ಐದೋ ನೀಡಿದಾಗ ಸಂತುಷ್ಟನಾದವನAತೆ ನಮಸ್ಕರಿಸಿ ರ್ತೀನಿಸಾಮಿ’ಎಂದು ನಡೆಯುತ್ತಿದ್ದ. ಹೀಗೆ ಹತ್ತು ಹಲವು ಕೆಲಸಗಳನ್ನು ಪೂರೈಸಲು ಮಾದ ಬೇಕೇಬೇಕು. ಚರಂಡಿ ಕ್ಲೀನ್ ಮಾಡಲು ಜನ ಕರೆಯುತ್ತಿದ್ದರು. ದನ, ಹಂದಿ, ನಾಯಿ ಸತ್ತು ನಾರುತ್ತಿದ್ದು, ಜನರು ಮೂಗು ಮುಚ್ಚಿ ತಿರುಗುತ್ತಿದ್ದರೆ ಕೆಲವರ ಆದೇಶದ ಮೇರೆಗೆ ಮಾದ ಬಂದು ಪ್ರಾಣಿಯನ್ನು ಕೊಂಡೊಯ್ದು ಹೂಳುತ್ತಿದ್ದನು. ದುರ್ವಾಸನೆ ದೂರವಾದಾಗ ಜನ ನಿಟ್ಟುಸಿರುಬಿಡುತ್ತಿದ್ದರು. ಆದರೆ ರಸ್ತೆಯಲ್ಲಿ ಮಾದ ನಡೆದು ಬರುತ್ತಿದ್ದರೆ, ಸರಿದು ನಿಲ್ಲುತ್ತಿದ್ದರು. ಗೌರವದಿಂದAತೂ ಅಲ್ಲ..!. ಹೀಗಿದ್ದರೂ ಜನರಿಗೆ ಮಾದ ಬೇಕು. ನಿಟ್ಟೂರಿಗೆ ಮಾದ ಬೇಕು..ಯಾಕೆ? ಪಾಪ ನಮ್ ಮಾದ ಬಿಟ್ರೆ ಇನ್ಯಾರು ಆ ಕೆಲ್ಸ ಮಾಡ್ತಾರೆ?. ಬಹುಶ: ಆ ಕೆಲಸ ಮಾದ ಮದುವೆಯಾಗಿ ಮಕ್ಕಳಿರುತ್ತಿದ್ದರೆ ವಂಶ ಪಾರಂಪರ್ಯವಾಗಲು ಬಯಸುತ್ತಿದ್ದರು. ಮಾದ ಬೇಕು..ಮಾದನ ವೃತ್ತಿ ಬೇಡ. ಆದರೆ ಶುಚಿತ್ವಕ್ಕಾಗಿ ಈ ನಿಟ್ಟೂರೇ ಮಾದನನ್ನು ಅವಲಂಬಿಸಿರುವುದAತೂ ನಿತ್ಯ ಸತ್ಯ.
ಜನ ಹೇಳಿದ ಕೆಲಸವನ್ನು ವಿನಯದಿಂದ ಪಾಲಿಸುತ್ತಿದ್ದ ಮಾದ, ರಾತ್ರಿಯಾಯಿತೆಂದರೆ ಕಂಠಮಟ್ಟ ಕುಡಿದು ಮನೆ ಕಡೆಗೆ ತೂರಾಡುತ್ತಾ, ಸಿನೆಮಾ ಹಾಡೊಂದನ್ನು ಜೋರಾಗಿ ಹಾಡುತ್ತಾ..ಹೋಗುತ್ತಿದ್ದ. ರಾತ್ರಿಯೇನಾದರೂ ಮಸಣದಿಂದ ನರಿ ಹೂಳಿಟ್ಟರೆ..ಮನೆಯೊಳಗಿಂದ ತಾನೂ ಅದರಂತೆ ಅರಚುತ್ತಿದ್ದ. ತಿಂಗಳಾಯಿತೆAದರೆ ಪಂಚಾಯಿತಿ ಸೆಕ್ರೆಟರಿ ಮುಂದೆ ನಿಂತಿರುತ್ತಿದ್ದ. ಸೆಕ್ರೆಟರಿಯಾದರೋ ಮಾದನ ಕೆಲಸಗಳಲ್ಲಿನ ಸಣ್ಣ ತಪ್ಪುಗಳನ್ನು ಹುಡುಕಿ ಬಯ್ಯುತ್ತಿದ್ದ. ಹತ್ತಿರದ ಟಾಯ್ಲೆಟ್ಗಳಿಗೆ ನೀರು ತಂದು ಸುರಿದು, ಸ್ವಚ್ಛ ಮಾಡಿದ ಮೇಲೆಯೇ ತಿಂಗಳ ಸಂಬಳ ಸಿಗುತ್ತಿದ್ದುದು. ದುಡ್ಡನ್ನು ಕಣ್ಣಿನ ಹತ್ತಿರಕ್ಕೆ ಹಿಡಿದು ಒಂದೆರಡು ಸಲ ಲೆಕ್ಕ ಮಾಡಿ, ರ್ತೀನಿ ಸಾಮಿ ಎಂದು ನಿರ್ಗಮಿಸುತ್ತಿದ್ದ.
ಆದರೇನು? ತಿಂಗಳ ಊಟದ ಬಿಲ್ಲು, ಸಾರಾಯಿ ಬಾಕಿ, ಮೂಲೆ ಅಂಗಡಿಯ ಬೀಡಿ, ಎಲೆ ಅಡಿಕೆ ಬಾಕಿಗಳು ಸೇರಿ ಸಾಲ ತೀರಿಸಬೇಕಾದರೆ ಮಾದನ ಕೈಲಿ ಸುಮಾರೆಂದರೆ ಮೂವತ್ತೋ ಐವತ್ತೋ ಉಳಿಯುತ್ತಿತ್ತು. ರಾತ್ರಿಯಾಯಿತೆಂದರೆ ಕುಡಿದು ತನ್ನ ಪಾಡಿಗೆ ಹಾಡನ್ನು ಗುನುಗುನಿಸುತ್ತಾ ಮನೆ ಕಡೆ ತೂರಾಡುತ್ತಾ ಹೋಗಿ ನಿಶ್ಯಬ್ದತೆ ಆವರಿಸಿರುತ್ತಿದ್ದ ಮಸಣದಲ್ಲಿ ಅವರಿವರ ಗೋರಿಯ ಮೇಲೆ ಕುಳಿತು ಅವರ ಹಣೆಬರಹಕ್ಕೆ ಬಾಯಿ ಮಾತಿನಲ್ಲೇ ಮರುಗುತ್ತಿದ್ದ. ತುಂಬಾ ಹೊತ್ತಾದ ನಂತರ, ಆ ಮನೆಯಲ್ಲಿ ಬುಡ್ಡಿದೀಪವನ್ನು ಉರಿಸಿ, ಅದರ ಮಂದ ಬೆಳಕಿನಲ್ಲಿ ಯಾವುದಾದರೊಂದು ಪುಸ್ತಕವೋ, ಮ್ಯಾಗಝೀನ್ ಹಳೆಯವಾದರೂ ಹಿಡಿದು ನೋಡುತ್ತಿದ್ದ ಓದಲು ಪ್ರಯತ್ನಿಸುತ್ತಿದ್ದ.
ತೋಟಿ ಮಾದ ತನ್ನ ಜೀವನದಲ್ಲಿ ಇನ್ನೊಂದು ಬಹುಮುಖ್ಯವಾದ ಕೆಲಸವನ್ನು ಮಾಡುತ್ತಿದ್ದ. ಆದ್ದರಿಂದಲೇ ಜನ ಮಾದನನ್ನು ಬಿಡುತ್ತಿರಲ್ಲಿಲ್ಲ. ಊರಿನಲ್ಲಿ ಯಾವುದೇ ಹೆಣ ಬಿದ್ದರೂ ಮಾದ ಮಸಣಕ್ಕೋಗಿ ಆರಡಿ ಮೂರಡಿ ಗುಂಡಿಯನ್ನು ತೋಡಿ ಗುದ್ದಲಿ ಹಿಡಿದು ಬೆವರೊರೆಸುತ್ತಾ..ಒಂದು ಜಾಗದಲ್ಲಿ ಕುಳಿತ್ತಿರುತ್ತಿದ್ದ. ಕೆಲವೊಮ್ಮೆ ಅತಿಯಾಗಿ ಬೆವರುತ್ತಿದ್ದರೂ ಬೀಡಿ ಸೇದುವ ಅಭ್ಯಾಸವಿಟ್ಟುಕೊಂಡಿದ್ದನು.
ಸಾವಿನ ವಾರಸುದಾರರು ಜನರೊಂದಿಗೆ ಚಟ್ಟದಲ್ಲಿ ಶವ ತಂದಿಟ್ಟು ಶಾಸ್ತçಕ್ಕೆ ಹಿಡಿಮಣ್ಣು ಎಸೆದರೆ ಮುಗೀತು. ಇನ್ನು ಮಾದನ ಕೆಲಸ. ಗುದ್ದಲಿಯಿಂದ ಮಣ್ಣನ್ನು ಎಳೆದೆಳೆದು ಹಾಕಿ ಹದ ಮಾಡಿದ ಮೇಲೆ ಮುಗೀತು..ಮಾದ ಬದೀಗೆ, ಇತರರು ಗೋರಿ ಬಳಿಯಲ್ಲಿ. ಗೋರಿಯ ಮೇಲೆ ಬಾಳೆಹಣ್ಣು ತೆಂಗಿನಕಾಯಿ ಊದುಬತ್ತಿ ಜತೆಗೆ ಹೂವಿನ ಅಲಂಕಾರ..ಜತೆಗೊAದಿಷ್ಟು ಕಣ್ಣೀರು. ಎಲ್ಲಾ ಮುಗಿದ ಮೇಲೆ ಮಾದನ ಕೈಗೆ ಹತ್ತೋ ಇಪ್ಪತ್ತೋ ಸಿಗುತ್ತಿತ್ತು. ಜನ ಖಾಲಿಯಾದ ನಂತ್ರ ನಿಶ್ಯಬ್ದತೆ ಜತೆಗೆ ಭಯ ಮೂಡಿಸುವ ಆ ಸ್ಮಶಾನದಲ್ಲಿ ಅಲಂಕಾರದಿAದ ಕೂಡಿದ ಆ ಗೋರಿಯನ್ನು ತದೇಕ ಚಿತ್ತದಿಂದ ನೋಡುತ್ತಿದ್ದ. ಅಲ್ಲಿ ಗೋರಿಯ ಮೇಲಿನ ಅಲಂಕಾರ ಮಾದನ ಶ್ರಮವನ್ನು ಮರೆಸುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಅಕ್ಕ ಪಕ್ಕ ನೋಡಿ ಯಾರೂ ಇಲ್ಲವೆಂದರಿತ ಮೇಲೆ, ಗೋರಿಯ ಮೇಲಿನ ಬಾಳೆಹಣ್ಣು,ತೆಂಗಿನ ಕಾಯಿಗಳನ್ನು ತೆಗೆದು ತಿನ್ನುತ್ತಿದ್ದನು. ರಾತ್ರಿಯಾಯಿತೆಂದರೆ ಪುನಃ ಅದೇ ರಾಮಾಯಣ..ಕುಡಿಯುತ್ತಿದ್ದ. ತೂರಾಡುತ್ತಾ ಗೋರಿಯ ಬಳಿಗೆ ಬಂದು ಸತ್ತ ಮನುಷ್ಯನ ಜೀವನದಲ್ಲಿ ನಡೆದ ಘಟನೆ, ಆತನ ಗುಣ,ಜೀವನ ಶೈಲಿ ಸೇರಿದಂತೆ ಪೂರಾ ಹಣೆಬರಹವನ್ನು ತನ್ನ ಶ್ರಮಿಕ ಕಣ್ಣಿಗಾದ ಅನುಭವದಲ್ಲಿ ಒದರುತ್ತಿದ್ದ. ಅದೊಂದ್ಸಲ ಊರಿನ ದೊಡ್ಡಕುಳ ನಾಗಶೆಟ್ರಪ್ಪ ಸತ್ತ ರಾತ್ರಿಯೇ ಆತನ ಸಮಾಧಿ ಮೇಲೆ ಕೂತ್ಕೊಂಡು ಶುರುಮಾಡ್ಕೊಂಡಿದ್ದ.
ಆಹಾ..ಪುಣ್ಯಾತ್ಮ..ಆವೊತ್ತು ನಿನ್ ನಾಯಿ ಸತ್ತೋಗದೆ ಅಂದಾಗ..ನಿನ್ ಮನೆತಾವ್ಕೆ ಬಂದು ಸತ್ತ ನಾಯ್ನ..ನಾನೇ ಮಣ್ ಮಾಡ್ದೆ..ನಿನ್ ತಾವ್ಕೆ ಬಂದು ದುಡ್ ಕೇಳ್ದಾಗ..ಅದು ಪಂಚಾಯ್ತಿಯೋರ ಕೆಲ್ಸ..ಸುಮ್ಕೆ ಓಗ್ಲಾ ಅಂದೆ ನೀನು..ಆದ್ರೆ ನಾನು..ತಲೆಕರ್ಕೊಂಡು ಅಲ್ಲೇ ನಿಂತಾಗ ..ದುಡ್ ಬದ್ಲು..ನಂಗೆ ಒದೆ ಕೊಟ್ಟೆ..ಅಲ್ವಾ...’
ಸ್ವಲ್ಪ ಹೊತ್ತು ಮೌನ..
ನಿಡಿದಾದ ನಿಟ್ಟುಸಿರು..ಮತ್ತೆ ಸಮಾಧಿ ಕಡೆ ತೀಕ್ಷ÷್ಣ ದೃಷ್ಠಿ..
ಇವತ್ತು..ಸತ್ತ್ ಬಿದ್ದಿದ್ದೀಯಾ ಯಾವ್ ಸೂಳೇಮಗ್ನೂ ಗುಂಡಿ ತೋಡೋಕ್ ಬಂದಿಲ್ಲ ಕಣ್ಲಾ. ನಾನು..ನಾನು..’ತೋಟಿ ಮಾದ ಎದೆ ತಟ್ಟುತ್ತಾ ತೊದಲಿದ್ದ.
ಸುಮ್ಕೆ ಮಲ್ಕಾ..ನಿಂಜೊತೆ ಯಾರವ್ರೆ ಹೇಳು..ನೀನ್ ಮಾಡ್ದ ಆಸ್ತಿ..ನಿನ್ ಅಹಂಕಾರ ಯಾವ್ದೂ ಇಲ್ಲ..ಮಣ್ಣು ಮಾತ್ರ ಸಾಸ್ವತ. ನಾಳೆ ನಂಗೂ ಇದೇ ಗತಿ ಬುಡು..ಆ ದ್ಯಾವ್ರು ರ್ದಾಗ ಓಯ್ತಿನಿ..ಸರಿ ರ್ಲಾ..ನಿದ್ದೆ ಮಾಡ್ಬೇಕು..ನಾಳೆ ಡೂಟಿ ಗೊತ್ತಲ್ಲಾ..’
ಅನ್ನುತ್ತಾ ತನ್ನ ರೂಮಿನ ಕಡೆ ಬಂದು ಬುಡ್ಡಿದೀಪ ಉರಿಸಿ, ಹಾಡು ಗುನುಗುನಿಸುತ್ತಾ ಚಾಪೆ ಹಾಸಿ ಉರುಳುತ್ತಿದ್ದ..ರೂಮು ದೂರ ಇದ್ದುದರಿಂದ ಹಾಗೂ ಮಸಣಕ್ಕೆ ಹತ್ತಿರವಿದ್ದುದರಿಂದ ಈತನ ರಾತ್ರಿಯ ವರ್ತನೆ ಊರಿನ ಜನಕ್ಕೆ ಗೊತ್ತಾಗುತ್ತಿರಲಿಲ್ಲ. ಅದು ಜನಕ್ಕೆ ಬೇಕೂ ಇರಲ್ಲಿಲ್ಲ.
ಬೆಳಗಾಯಿತೆಂದರೆ ಮಾದ ಮತ್ತೆ ತನ್ನ ಕಾಯಕದಲ್ಲಿ ತೊಡಗುತ್ತಿದ್ದನು. ಅಂಗಡಿ ಶೆಟ್ಟರಿಂದ ಹಿಡಿದು ಅಕ್ಕಪಕ್ಕದ ಶ್ರೀಮಂತ ಮೇಲ್ಮನೆ ನಂಜಪ್ಪ, ಸಿದ್ದಣ್ಣ, ವಕೀಲ ಗೋಪಾಲ ಎಲ್ಲರ ಕೆಲಸಗಳನ್ನೂ ಆ ದಿನದಲ್ಲೇ ಮಾದ ಪೂರೈಸಬೇಕಾಗಿತ್ತು. ಜತೆಗೆ ಯಾವುದಾದರೊಂದು ಪ್ರಾಣಿ ಸತ್ತೋಗಿದ್ರೆ..ಟಾಯ್ಲೆಟ್ ಕ್ಲೀನ್ ಬೇರೆ..ಸ್ವಚ್ಛತೆ ಕೆಲಸಗಳು.
ವಾಸ್ತವಕ್ಕೆ ಬಂದೆನು. ಬಸ್ ರಾಮಾಪುರ ತಲುಪಿತ್ತು.ಅಲ್ಲಿಯ ವೈಯಕ್ತಿಕ ಕೆಲಸ ಮುಗಿಸಿ ಪುನಃ ಬೇರೆ ಬಸ್ನಲ್ಲಿ ನಿಟ್ಟೂರಿಗೆ ಬಂದೆನು.
ದಿನಗಳುರುಳುತ್ತಿತ್ತು ಸಮಯಕ್ಕೆ ತಡೆಯಿಲ್ಲ ಮಾದನನ್ನು ಗಮನಿಸುತ್ತಿದ್ದೆನು..ಪಾಪ! ಅವನು ತುಂಬಾ ಸೊರಗುತ್ತಿದ್ದ. ಮಾತ್ರೆ ಔಷಧಗಳು ಅವನ ಕುಡಿತದ ಮುಂದೆ ನಿಷ್ಪçಯೋಜಕವಾಗಿದ್ದವು. ತನಗೆ ಪರಿಚಯವಿರುವ ಜನರಲ್ಲಿ ತನ್ನ ರೋಗದ ಬಗ್ಗೆ ಹೇಳುತ್ತಲೇ ಇದ್ದ. ಮಾದ ಮಾಡುವ ಕೆಲಸದ ಪ್ರಯೋಜನ ಬೇಕಿತ್ತೇ ಹೊರತು ಮಾದನ ಆರೋಗ್ಯದ ಕಡೆ ದಿವ್ಯ ನಿರ್ಲಕ್ಷö್ಯ ತಾಳಿದ್ದರು. ಅಹುದೇನು? ಎಂದು ಕನಿಕರದಿಂದ ಉದ್ಘಾರವೆತ್ತಿದ ಮಹನೀಯರುಗಳು ಸಹಾಯ ನೀಡಲು ಮನಸ್ಸಂತೂ ಮಾಡಲಿಲ್ಲ.
ಅದೊಂದು ದಿನ ಮುಂಜಾನೆ ನಿಟ್ಟೂರಿನ ಟೌನಿನಲ್ಲಿ ಕೈಗಾಡಿಯ ದಡದಡ’ ಶಬ್ದವಾಗಲೀ ನೀಳ ಪೊರಕೆಯ ರಪರಪ ಶಬ್ದವಾಗಲೀ ಕೇಳಲಿಲ್ಲ. ನಿಟ್ಟೂರಿನಲ್ಲಿ ನೀರವತೆ ಮಾತ್ರ.
ಇವ್ನೆಲ್ಲಾಳ್ಬಿದ್ದೋದಾ..? ಇಷ್ಟೋತ್ತಾದ್ರೂ ರ್ಲೇ ಇಲ್ವಲ್ಲಪ್ಪಾ..’ ಜನರ ಮಾತು ಆಕ್ರೋಶದ ಕಡೆ ತಿರುಗಿತು. ಕಸಗುಡ್ಡೆಗಳು, ಹಾಗೇ ಇದ್ದವು. ನಿಟ್ಟೂರು ಇವತ್ತು ಸ್ವಚ್ಛವಾಗಲೇ ಇಲ್ಲ. ಮೊನ್ನೆ ಹುಚ್ಚು ಹಿಡಿದ ನಾಯಿಯೊಂದು ಸತ್ತೋಗಿದ್ದರಿಂದ, ದೇಹ ಉಬ್ಬಿ ದುರ್ಗಂಧ ಬರಲುತೊಡಗಿತ್ತು. ಜನರು ಸಹಿಸಿ ಸಾಕಾಗಿ ಪಂಚಾಯಿತಿಗೆ ದೂರು ಹೋಗಿತ್ತು.
ಸೆಕ್ರೆಟರಿಯ ಆಜ್ಞೆ ಮೇರೆಗೆ, ಬಿಲ್ ಕಲೆಕ್ಟರ್ ಸುರೇಶ್ ಹೋಗಿ ನೋಡಿದಾಗ, ತೋಟಿ ಮಾದ ಕೈಗಾಡಿಗೆ ಒರಗಿ ಕುಳಿತ್ತಿದ್ದ...ನಿದ್ರೆಯಲ್ಲಿದ್ದ. ಸೂಕ್ಷö್ಮವಾಗಿ ಗಮನಿಸಿದಾಗ ಅದು ಚಿರನಿದ್ರೆಯೆಂದು ತಿಳಿಯಿತು..’ ತೋಟಿ ಮಾದನ ಹೆಣ ತನ್ನ ಜಗುಲಿಯಲ್ಲಿದ್ದ ಕೈಗಾಡಿಗೆ ಒರಗಿತ್ತು. ನೀಳ ಪೊರಕೆ ಪಕ್ಕದಲ್ಲೇ ಬಿದ್ದಿತ್ತು. ದೂರದಿಂದಲೇ ವಿಕಾರ ರೂಪ ಗಮನಿಸಿದ ಸುರೇಶ್ ಓಡಿ ವಿಷಯ ಹಬ್ಬಿಸಿದ. ನಿಟ್ಟೂರಿನ ಜನತೆ ಕಂಗಾಲಾಯಿತು. ಛೆ..ಪಾಪ ಸತ್ತೋಗ್ಬುಟ್ನಾ..ಕಂಠಪೂರ್ತಿ ಕುಡೀದ್ರೆ ಇನ್ನಾಗೋದೇನು? ಇನ್ನ ಇವ್ನು ಕೆಲ್ಸ ಮಾಡರ್ಯಾರು?? ಎಂಬ ಗಾಢ ಪ್ರಶ್ನೆಯೇ!’
ಮಾದನ ಹೆಣ ಆತನ ಮನೆಯ ಪಾಳು ಜಗುಲಿಯಲ್ಲೇ ಬಿದ್ದಿತ್ತು. ಅನಾಥವಾಗಿ ಬಿದ್ದಿದ್ದ..ಆ ಹೆಣಕ್ಕೆ ಗುಂಡಿ ತೋಡಲು, ಯಾರೂ ಸಿದ್ದರಿಲಿಲ್ಲ. ಹೆಣ ವಾಸನೆ ಬರಬಹುದೆಂಬ ಆತಂಕ ಬೇರೆ. ಮಾದ ಬದುಕಿದ್ದಾಗ ಎಷ್ಟೋ ಹೆಣಗಳಿಗೆ ಗುಂಡಿ ತೋಡಿದ್ದ. ನಿಟ್ಟೂರು ದುರ್ಗಂಧಮಯವಾಗಲು ಸನ್ನದ್ಧವಾಗಿತ್ತು.
ಮಾದನ ಹೆಣ ಅನಾಥವಾಗಿಯೇ ಇತ್ತು. ಹೆಣ ನಾಯಿನರಿಗಳಿಗೆ ಆಹಾರವಾಗುವ ಮುಂಚೆ ಪಕ್ಕದೂರಿನ ತೋಟಿಗಳನ್ನು ಕರೆಸಿ ಹೆಣ ಊಳಿಸಿಬಿಡಬೇಕು. ಇಲ್ಲದಿದ್ದಲ್ಲಿ ಸ್ಮಶಾನಕ್ಕೂ ಹೋಗೋಕ್ಕಾಗಲ್ಲ ಎಂಬ ತೀರ್ಮಾನ ನಡೆದಿತ್ತು. ಮುಂದಿನ ಕಾರ್ಯಯೋಜನೆಯ ಮಾತುಕತೆ ನಡೆದಿತ್ತು.
ಮಾದನ ಹೆಣ ನಿಸ್ತೇಜವಾಗಿ ಬಿದ್ದಿತ್ತು..ತನಗಾಗಿ ಗುಂಡಿ ತೋಡುವವರನ್ನು ಕಾಯುತ್ತಾ..
***