ಹೃದಯ ಸ್ಪರ್ಶಿ

Drama Tragedy Inspirational

4.5  

ಹೃದಯ ಸ್ಪರ್ಶಿ

Drama Tragedy Inspirational

ತಿರುಗುಬಾಣ

ತಿರುಗುಬಾಣ

4 mins
533



'ರೀ... ಏನೋ ಬೇಜಾರಿನಲ್ಲಿರುವಂತಿದೆ. ಏನಾಯಿತು..?' ಕೇಳಿದಳು ನಳಿನಿ.



'ಯಾಕೋ ಗೊತ್ತಿಲ್ಲ ನಳಿನಿ. ಇತ್ತೀಚೆಗೆ ಮನಸ್ಸೇ ಸರಿ ಇಲ್ಲ...!' ಅವನ ಗೊಂದಲದ ಮಾತನ್ನು ಕೇಳಿ, 

'ಯಾಕ್ರೀ..? ಮೈಗೆ ಹುಷಾರಿಲ್ವಾ..?' ಹಣೆ, ಕತ್ತು ಮುಟ್ಟಿ ನೋಡುತ್ತಾ ಕೇಳಿದಳು. 


'ಇಲ್ವಲ್ಲಾ..? 

ಮತ್ಯಾಕೆ ಇಷ್ಟೊಂದು ವಿಚಿತ್ರವಾಗಿ ಮಾತನಾಡ್ತಿದ್ದೀರಿ..?' ಕೇಳಿದಳು ನಳಿನಿ. 


'ನಿನಗೆ ಅರ್ಥ ಆಗಲ್ಲ, ನಳಿನಿ. ದಿನೇ ದಿನೇ ನಮ್ಮ ಕಂಪನಿ ಲಾಸಿನಲ್ಲೇ ಹೋಗ್ತಿದೆ. ಏನು ಮಾಡೋದು ಅಂತಾನೇ ಗೊತ್ತಾಗ್ತಿಲ್ಲ. ಅದಲ್ಲದೆ ನಮಗೆ ಸಿಗೋ ಎಲ್ಲಾ ಪ್ರಾಜೆಕ್ಟ್‌ಗಳು ಈಗ ನಮ್ಮ ಕೈ ತಪ್ಪಿ ಇನ್ನೊಬ್ಬರ ಕೈ ಸೇರ್ತಿದೆ. ಹೀಗೇ ನಡೆದ್ರೆ... ಹೇಗೆ ನಮ್ಮ ಜೀವನ?'



ನಳಿನಿ ಮತ್ತು ಕಮಲ್ ಇತ್ತೀಚೆಗಷ್ಟೇ ಮದುವೆಯಾಗಿರೋ ನವದಂಪತಿ. ಅವರ ಸಂಸಾರದಲ್ಲಿ ಯಾವುದೇ ಅಡೆ ತಡೆಯಿರಲಿಲ್ಲ, ಈ ಒಂದೆರಡು ತಿಂಗಳಿನ ಹಿಂದೆ. ಆದರೆ ಇತ್ತೀಚೆಗೆ ಸಮಸ್ಯೆಯೇ ಸಮಸ್ಯೆ..!!


ಹೋದಲ್ಲಿ ಬಂದಲ್ಲಿ ಅವನ ಕೈ ಹಿಡಿಯುತ್ತಿದ್ದ ಅದೃಷ್ಟ ದೇವತೆ ಇತ್ತೀಚೆಗೆ ಅವನ ಕೈ ಬಿಟ್ಟಿದ್ದಾಳೆ. ಈಗ ಮುಟ್ಟಿದ್ದೆಲ್ಲಾ ಕರಗಿ ಹೋಗುತ್ತಿದೆ..



'ಅದರ ಬಗ್ಗೆ ಯೋಚಿಸುತ್ತಾ ಕುಳಿತರೆ ಸಮಸ್ಯೆ ಪರಿಹಾರ ಆಗುತ್ತಾ ಕಮಲ್? ಇಲ್ಲ ತಾನೇ..? ಮೊದಲು ಸಮಸ್ಯೆಯ ಬಗ್ಗೆ ಗಮನ ಕೊಡಿ. ಎಲ್ಲಾ ಸರಿ ಹೋಗುತ್ತೆ...!!' ಪ್ಲೇಟಿನಲ್ಲಿ ಎರಡು ಚಪಾತಿ ಮತ್ತು ಚೂರು ಚಟ್ನಿ ಹಾಕಿ ತಂದು ಅವನ ಮುಂದಿಟ್ಟಳು.


'ನನ್ನ ಕೈ ಹಿಡಿದು ನೀನೂ ನರಳಬೇಕಾಯಿತಲ್ಲ...?' ಬೇಸರದಿ ನೋಡಿದ.


'ಹಾಗೆಲ್ಲಾ ಮಾತನಾಡಬೇಡಿ ನನಗೆ ಬೇಸರ ಆಗುತ್ತೆ. ಯಾವುದೂ ನಮ್ಮ ಕೈಯ್ಯಲ್ಲಿಲ್ಲ. ಎಲ್ಲವೂ ಆ ದೇವರ ಕೈಯ್ಯಲ್ಲಿ, ಅವನು ನಡೆಸಿದಂತೆ ನಡೆಯುವುದೊಂದೇ ನಮ್ಮ ಕೆಲಸ..' ಅವಳ ಮಾತಿಗೆ ತಲೆಯಾಡಿಸಿ ಚಪಾತಿ ತಿಂದು ಎದ್ದವನು ಆಫೀಸ್ ಕಡೆ ಹೊರಟಿದ್ದ.


ಅವನು ಅತ್ತ ಹೋಗುತ್ತಲೇ ಯಾರಿಗೋ ಕರೆ ಮಾಡಿದಳು ನಳಿನಿ..

'ಏನು, ನಾನು ಹೇಳಿರೋದೆಲ್ಲಾ ರೆಡಿಯಾಗಿದೆ ತಾನೇ? ಇವತ್ತೇ ಕೊನೆ, ಈ ನಾಟಕಕ್ಕೆಲ್ಲಾ ಇಂದೇ ಅಂಕದ ಪರದೆ ಎಳಿಬೇಕು. ನನಗೂ ಸಾಕು ಸಾಕಾಗಿದೆ...!' ಮೊಬೈಲ್ ಬೆಡ್ ಮೇಲಿಟ್ಟು ತನ್ನೆಲ್ಲಾ ಸಾಮಾನುಗಳನ್ನು ಪ್ಯಾಕ್ ಮಾಡತೊಡಗಿದಳು.



ಎಲ್ಲವೂ ವಿಚಿತ್ರವಾಗಿ ತೋರುತ್ತಿದೆ.

ಒಂದು ಕ್ಷಣದ ಹಿಂದೆಯಷ್ಟೇ ಬೇಸರದಲ್ಲಿದ್ದ ಕಮಲ್ ಗೆ ಸಮಾಧಾನದ ಮಾತುಗಳನ್ನಾಡುತ್ತಿದ್ದವಳಲ್ಲಿ ಈಗ ಇಷ್ಟೊಂದು ಬದಲಾವಣೆ.!!



ಲಗ್ಗೇಜ್ ಪ್ಯಾಕ್ ಮಾಡಿದವಳು, ಒಂದು ಪೆನ್ ಮತ್ತು ಪೇಪರ್ ಹಿಡಿದು ಬಂದು ಕುಳಿತಳು. ಒಂದೆರಡು ನಿಮಿಷ ಕಣ್ಮುಚ್ಚಿ ಕುಳಿತು ಮನಸ್ಸು ಗಟ್ಟಿ ಮಾಡಿಕೊಂಡು ಬರೆಯತೊಡಗಿದಳು.


ದುಂಡು ದುಂಡಗಿನ ಅಕ್ಷರಗಳು ಒಂದೊಂದರಂತೆ ಪೇಪರ್ ಮೇಲೆ ಮುದ್ರಿತವಾದವು.

ನಂತರ ಅದನ್ನಲ್ಲೇ ಮಡಚಿ ಎದುರಿಗೆ ಕಾಣುವಂತೆ ಪುಸ್ತಕದ ಅಡಿಯಲ್ಲಿಟ್ಟು, ರೂಮಿಗೆ ಹೋದವಳು ತನ್ನ ಲಗ್ಗೇಜ್ ಬ್ಯಾಗ್ ಹಿಡಿದು ಮನೆಯಿಂದ ಹೊರಟು ಹೋಗಿದ್ದಳು. ಹೊರಗಡಿಯಿಡುತ್ತಲೇ ಒಮ್ಮೆ ತಿರುಗಿ ನೋಡಿದವಳು,

'ಇಂದಿಗೆ ನನ್ನ ನಿನ್ನ ಋಣ ಮುಗಿಯಿತು. ನಾನು ಬಂದ ಉದ್ದೇಶವೂ ಪೂರ್ಣಗೊಂಡಿತು, ನನ್ನ ಜೀವನ್ ಗಾದ ಮೋಸಕ್ಕೆ ಪ್ರತಿಕಾರ ತೀರಿಸಿದ್ದೇನೆ. ಇನ್ನು ನನಗೂ ಈ ಮನೆಗೂ ಯಾವುದೇ ಬಂಧನವಿಲ್ಲ...' ಮತ್ತೆ ಅಲ್ಲಿ ನಿಲ್ಲದೆ ಹೊರಟು ಹೋಗಿದ್ದಳು. 







ಸಂಜೆ ಐದರ ಸಮಯ. 

ಆಫೀಸ್ ಮುಗಿಸಿ ಮನೆಗೆ ಬಂದ ಕಮಲ್ ಗೆ ಯಾಕೋ ಮನೆ ಬಿಕೋ ಎನಿಸತೊಡಗಿ ಸುತ್ತ ಮುತ್ತ ಮಡದಿಗಾಗಿ ಅರಸಿದ. ಎಲ್ಲೂ ಕಾಣಿಸದಿದ್ದಾಗ, ಎಲ್ಲಿ ಹೋಗಿರಬಹುದು ಎಂಬ ಚಿಂತೆಯಲ್ಲಿ ಸೋಫಾ ಮೇಲೆ ಬಂದು ಕುಳಿತವನಿಗೆ ಟೀಪಾಯಿ ಮೇಲಿದ್ದ ಪುಸ್ತಕದೊಳಗಿನಿಂದ ಸ್ವಲ್ಪವೇ ಹೊರಗಿಣುಕುತ್ತಿದ್ದ ಕಾಗದವೊಂದು ಕಾಣಿಸಿತ್ತು. 


ಮೆಲ್ಲನೇ ಅದನ್ನು ಕೈಗೆತ್ತಿಕೊಂಡವನು, 

ಅದನ್ನು ಓದತೊಡಗಿದ. ಮೊದ ಮೊದಲು ತನ್ನ ಪತ್ನಿಯೇ ತನಗೆ ಮೋಸ ಮಾಡಿದ್ದು ತಿಳಿದು ಕೋಪ ಬಂದರೂ ಅದರ ಕಾರಣ ತಿಳಿದು ಮನದಲ್ಲೇ ಮರುಗತೊಡಗಿದ. 




"ಈ ನಂಬಿಕೆ ಅನ್ನುವುದು ಮೂರಕ್ಷರದ ಸಣ್ಣ ಪದ. ಇದು ಸಂಬಂಧಗಳ ಅಡಿಪಾಯ ಇದ್ದಂತೆ, ಆದರೆ ಅಡಿಪಾಯ ಗಟ್ಟಿಯಿಲ್ಲದಿದ್ದರೆ..?

ಯಾವ ಸಂಬಂಧವೂ ಉಳಿಯದು.

ಇವಳ್ಯಾಕೆ ಹೀಗೆ ಮಾತನಾಡುತ್ತಿದ್ದಾಳೆ ಅಂತ ನೀನಂದ್ಕೋಬಹುದು, ಕಮಲ್. ಆದರೆ ಎಲ್ಲಾ ಸಂಬಂಧವೂ ಈ ನಂಬಿಕೆಯ ಮೇಲೆಯೇ ನಿಂತಿರುತ್ತದೆ ಎಂದು ನೀನು ಮರೆತಿರೋದನ್ನು ನಾನಿಂದು ನೆನಪಿಸಲೇಬೇಕಾಗಿದೆ.


ಇದನ್ನೆಲ್ಲಾ ನಿನ್ನ ಮುಂದೆ ನಿಂತು ಹೇಳಬಹುದು, ಆದರೆ ನನಗೆ ನಿನ್ನ ಮುಖ ನೋಡಲೂ ಇಷ್ಟ ಇಲ್ಲ! ಅದಕ್ಕಾಗಿ ಈ ಪತ್ರದ ಮೂಲಕ ವಿಷಯ ತಿಳಿಸುತ್ತಿದ್ದೇನೆ. ನನಗೆ ಗೊತ್ತು ನೀನು ನನ್ನನ್ನು ತುಂಬಾ ಪ್ರೀತಿಸುತ್ತಿದ್ದೆ ಎಂದು. ಆದರೆ ನಾನ್ಯವತ್ತೂ ನಿನ್ನ ಪ್ರೀತಿಸಿಲ್ಲ, ಅದು ಸಾಧ್ಯವೂ ಇಲ್ಲ!


ನನ್ನ ಪ್ರೀತಿ ಏನೇ ಇದ್ದರೂ ಅದು ಕೇವಲ ನನ್ನ ಜೀವುಗೆ ಮಾತ್ರ. ಜೀವು... ಜೀವನ್!

ನಾನು ಯಾರ ಬಗ್ಗೆ ಹೇಳುತ್ತಿದ್ದೇನೆಂದು ಅರಿವಾಗಿರಬೇಕಲ್ಲ ನಿನಗೆ..? ನಿನ್ನದೇ ಪ್ರಾಣ ಸ್ನೇಹಿತ!

ಅವನಿಗೆ ನಿನ್ನ ಮೇಲೆ ಎಷ್ಟೊಂದು ನಂಬಿಕೆ. ಅದೇ ಕಾರಣಕ್ಕೆ ಅವನು ತನ್ನೆಲ್ಲಾ ಹಣವನ್ನು ನಿನ್ನ ಕೈಗೆ ನೀಡಿ ಜೋಪಾನವಾಗಿರಿಸುವಂತೆ ಹೇಳಿದ್ದು. ಅದರ ಕುರಿತು ಕೆಲವೊಮ್ಮೆ ನಾನೂ ತಮಾಷೆ ಮಾಡುತ್ತಿದ್ದೆ ನಿನ್ನ ಈ ನಂಬಿಕೆಗೆ ಅವನೇನಾದರೂ ಮೋಸ ಮಾಡಿದರೆ ಎಂದು..?

ಆದರೆ ಅವನು ಏನು ಹೇಳುತ್ತಿದ್ದ ಗೊತ್ತಾ..? ನನ್ನ ಗೆಳೆಯ ಅವನು. ನಿನಗೆ ಗೊತ್ತಿಲ್ಲ ಅವನ ಬಗ್ಗೆ ಎಂದು..!


ಇಲ್ಲ, ನಿಜವಾಗಿಯೂ ನನಗೆ ಗೊತ್ತಿರಲಿಲ್ಲ.!! ನೀನು ಈ ರೀತಿಯಲ್ಲಿ ಮೋಸ ಮಾಡಬಲ್ಲೆ ಎಂದು. 25ಲಕ್ಷ ಹಣದೊಂದಿಗೆ ಹೇಳದೆ ಕೇಳದೆ ನೀನು ನಾಪತ್ತೆಯಾದೆ. ಆದರೆ ಅವನು...?

ಅವನ ಸ್ಥಿತಿ ಹೇಗಾಗಿತ್ತು ಗೊತ್ತಾ ನಿನಗೆ..? ತನ್ನ ತಾಯಿಯ ಆಪರೇಷನ್ ಗೆಂದು ಕಷ್ಟ ಪಟ್ಟು ಒಟ್ಟುಗೂಡಿಸಿದ್ದ ಹಣವದು...!" ಕಣ್ಣ ಹನಿಗಳು ಅಲ್ಲಲ್ಲಿ ಚೆಲ್ಲಿ ಅಕ್ಷರಗಳು ಅಲ್ಪ ಸ್ವಲ್ಪ ಅಳಿಸಿದ್ದವು.


"ಇತ್ತ ತಾಯಿಯನ್ನು ಉಳಿಸಿಕೊಳ್ಳಲಾಗಲಿಲ್ಲ. ಅತ್ತ ಅವನು ನಿನ್ನ ಮೇಲಿರಿಸಿದ್ದ ನಂಬಿಕೆಯೂ ಸತ್ತು ಹೋಗಿತ್ತು. ನೀನು ಅವನ ಜೀವನಕ್ಕೆ ಎಷ್ಟು ದೊಡ್ಡ ಪೆಟ್ಟು ಕೊಟ್ಟು ಬಂದಿದ್ದೆ ಎಂಬುದನ್ನು ನೀನು ಊಹಿಸಲೂ ಸಾಧ್ಯವಿಲ್ಲ.!!

ತಾಯಿಯನ್ನು ಉಳಿಸಿಕೊಳ್ಳಲಾಗದ ಅವನು ನಂಬಿಕೆಯನ್ನೂ ಕಳೆದುಕೊಂಡು, ಯಾರ ಸಮಾಧಾನದ ಮಾತಿಗೂ ಸಾಂತ್ವನಗೊಳ್ಳದೆ ಹುಚ್ಚನಂತಾಗಿದ್ದವನು, ಒಂದು ದಿನ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡ. ನನ್ನ ಜೀವು ನಿನ್ನ ಕಾರಣದಿಂದ ನರಳಿ ಪ್ರಾಣ ಬಿಟ್ಟ. ಅಂದೇ ನಿರ್ಧರಿಸಿದ್ದೆ ನಾನು...?!


ತಮ್ಮ ಮನಸ್ಸಿಗೆ ಅತೀ ಸಮೀಪದವರು, ಯಾರ ಮೇಲೆ ತಾವು ಅತೀವ ನಂಬಿಕೆ ಇಟ್ಟಿರುತ್ತೇವೋ ಅವರೇ ನಮ್ಮ ನಂಬಿಕೆಯನ್ನು ಮುರಿದರೆ... ಹೇಗೆ ಆಗುತ್ತದೆ ಎಂಬುದನ್ನು ನಿನಗೂ ತೋರಿಸಬೇಕು, ಅದರ ನೋವು ಹೇಗಿರುತ್ತದೆ ಎಂಬುದನ್ನು ನಿನ್ನ ಅನುಭವಕ್ಕೂ ತರಬೇಕು ಎಂದು.!! 

ಅದೇ ಉದ್ದೇಶದಿಂದಲೇ ನಿನ್ನನ್ನು ಮದುವೆಯಾಗಿ, ನಿನ್ನ ಮಡದಿಯಾಗಿ ಆ ಮನೆಗೆ ಕಾಲಿರಿಸಿದ್ದು ನಾನು.


ಇವತ್ತಿನ ನಿನ್ನ ಈ ಸ್ಥಿತಿಗೆ ನಾನು ಕಾರಣವಾದರೂ ಅದರ ಹಿಂದಿರುವ ಕಾರಣ ನೀನೇ ಆಗಿದ್ದೆ, ಕಮಲ್. ಅವನ ಹಣ ಹಿಡಿದು ಬಂದು ನೀನು ಶ್ರೀಮಂತನಾದೆ, ಆದರೆ ನನ್ನ ಜೀವು..?!

ನಿನ್ನಿಂದಾದ ಅವನ ಸಾವಿಗೆ ನ್ಯಾಯ ಒದಗಿಸಬೇಕೆಂದೇ ನಾನಿದನ್ನೆಲ್ಲಾ ಮಾಡಿದೆ. ನಿನ್ನ ಸಹಿ ಪೋರ್ಜರಿ ಮಾಡಿ ನಿನ್ನ ಕಂಪನಿ ಹಣವನ್ನು ಜೀವನಬಂಧು ಅನಾಥಾಶ್ರಮದ ಅಕೌಂಟ್ ಸೇರುವಂತೆ ಮಾಡಿದೆ.


ಜೀವನಬಂಧು ನನ್ನ ಜೀವು ನೆನಪಿಗೆ ನಾನು ನಡೆಸುತ್ತಿರೋ ಸಂಸ್ಥೆ. ನ್ಯಾಯವಾಗಿ ನೋಡಿದರೆ ನಾನು ನನ್ನ ಜೀವು ಹಣವನ್ನು ತೆಗೆದುಕೊಂಡೆನೇ ಹೊರತು ನಿನ್ನ ಹಣವನ್ನಲ್ಲ. ಅದಿಕ್ಕೆ ನೀನು ಬ್ಯಾಂಕಿನಲ್ಲಿ ವಿಚಾರಿಸಿದಾಗ ಅವರಿಗೆ ಹಣ ನೀಡಿ ಏನೂ ಹೇಳದಂತೆ ಮಾಡಿದ್ದು.


ನಂತರ ನಿನ್ನ ಕಂಪನಿಗೆ ಸಿಗಬೇಕಿದ್ದ ಎಲ್ಲಾ ಪ್ರಾಜೆಕ್ಟ್ ಗಳನ್ನೂ ನಿನ್ನ ಎದುರಾಳಿ ಕಂಪನಿಗಳಿಗೆ ಸೇರುವಂತೆ ಮಾಡಿದ್ದೂ ನಾನೇ...!


ಒಟ್ಟಿನಲ್ಲಿ ನಿನ್ನ ಜೀವನ ಈ ಸ್ಥಿತಿಗೆ ಬರುವಂತೆ ಮಾಡಿದ್ದು ನಾನೇ. ಆದರೆ ನಾನು ನಿನ್ನ ಬಳಿ ಕ್ಷಮೆ ಕೇಳುವುದಿಲ್ಲ ಕಮಲ್. ಇಷ್ಟು ದಿನದ ನನ್ನ ಬದುಕಿನಲ್ಲಿ ಇವತ್ತು ನಾನು ನೆಮ್ಮದಿಯಿಂದ ನಿದ್ದೆ ಮಾಡುತ್ತೇನೆ..!

ನನ್ನ ಜೀವು ಸಾವಿಗೆ ನ್ಯಾಯ ಒದಗಿಸಿರುವೆ ಆತ್ಮ ತೃಪ್ತಿ ನನಗಿದೆ. ಇನ್ನು ಮುಂದೆ ನಿನ್ನ ಜೀವನದಲ್ಲಿ ಒಳ್ಳೆಯದಾಗಲೀ, ಕೆಟ್ಟದಾಗಲೀ ನಾನು ಮತ್ತೆ ಕಾಲಿಡುವುದಿಲ್ಲ. ನನ್ನ ಪ್ರತೀಕಾರ ತೀರಿತು.


ಜೀವು ನೆನಪಿನೊಂದಿಗೆ ಈ ಮನೆಯಿಂದ ಹೊರಡುತ್ತಿದ್ದೇನೆ ನಾನು. 

ಗುಡ್ ಬಾಯ್"


ಇಡೀ ಪತ್ರವನ್ನು ಓದಿದ ಕಮಲಗೆ ತನ್ನ ತಪ್ಪಿನ ಅರಿವಾಗಿತ್ತಾದರೂ ಅದಾಗಲೇ ಸಮಯ ಮೀರಿತ್ತು. ಕೈಯಿಂದ ಜಾರಿದ ಪತ್ರ ನೆಲ ಸೇರಿದರೆ, ಅಲ್ಲೇ ಕುಸಿದು ಕುಳಿತಿದ್ದ ಕಮಲ್.


'ಅಯ್ಯೋ, ನನ್ನಿಂದ ಇದೇನಾಗಿ ಹೋಯಿತು. ಕ್ಷಣಿಕ ಆಸೆಯ ಬಲೆಗೆ ಬಿದ್ದು, ನನ್ನನ್ನೇ ಜೀವ ಎಂದುಕೊಂಡಿದ್ದ ನನ್ನ ಜೀವದ ಗೆಳೆಯನಿಗೆ ಮೋಸ ಮಾಡಿಬಿಟ್ಟೆ. ನನ್ನ ಕ್ಷಮಿಸಿ ಬಿಡೋ ಜೀವು...!!' ಕಂಬನಿ ನದಿಯಂತೆ ಹರಿಯತೊಡಗಿದ್ದವು.



ಮಾಡಿದ ತಪ್ಪನ್ನು ಮನವರಿಕೆ ಮಾಡುವುದರ ಜೊತೆಗೆ ತನ್ನ ಪ್ರತಿಕಾರ ತೀರಿಸಿಕೊಂಡ ನಳಿನಿ, ತಾನೇ ನಡೆಸುತ್ತಿರೋ ಜೀವನಬಂಧು ಅನಾಥಾಶ್ರಮದಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದರೆ.. 


ಮಾಡಿರೋ ಕೆಲಸಕ್ಕೆ ಪಶ್ಚಾತ್ತಾಪ ಪಡುತ್ತ ತನ್ನಿಂದಾಗಿರುವ ಅಪರಾಧಕ್ಕೆ ಪ್ರತಿದಿನ ಮರುಗುತ್ತಿದ್ದಾನೆ ಕಮಲ್. ಆದರೆ ಸರಿದು ಹೋದ ಕಾಲ ಮತ್ತೆ ಮರಳಿ ಬರುವುದಿಲ್ಲ, ಅದೇ ಸತ್ಯ.! 



ನಂಬಿಕೆ ಮೇಲೆ ನಿಂತಿದೆ ಈ ಜಗ. ನಂಬಿಕೆಯ ಗಳಿಸುವುದು ಎಷ್ಟು ಕಷ್ಟವೋ, ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ.! 






Rate this content
Log in

Similar kannada story from Drama