ನಿರಾಸೆ
ನಿರಾಸೆ
ಋತುಮಾನದ ಬದಲಾವಣೆಯಲ್ಲಿ
ಮಗ್ನವಾಗಿ ಹೋದ ಮನ
ಮಳೆಯ ನಿರಂತರ ಧಾರೆಗೆ ತೋಯಲು
ಕಾತರಿಸಿ ಕಾದು ಕೂತಿದೆ..
ಗಾಳಿಯ ಸೋಕುವ ಸ್ಪರ್ಶದಂತೆ
ನೀರಿನ ಅಲೆಯ ಆಪ್ತತೆಯಂತೆ..
ಇರುಳ ಏಕಾಂತದ ನಶೆಗೆ ಕನ್ನ ಹಾಕಿದ
ಕನಸುಗಳಿಗೆಲ್ಲ
ನಿತ್ಯ ನಲಿವಿನ ದೂರದ ಬೆಟ್ಟವನ್ನ ತೋರಿಸಿ
ನಯವಾಗಿ ಯಾಮಾರಿಸುತ್ತಿವೆ...ಮನಸ್ಸು.
ಹುಟ್ಟು ಮೂಗನ ಮೌನದಷ್ಟು ಸಹಜವಲ್ಲ
ಒಂಟಿತನ..
ಮನದೊಳಗೆ ಹುಟ್ಟಿಸುವ ಮೌನಿ
ಕೂಸಿನ ನಿಶ್ಯಬ್ಧ..
ತಂಪು ಸುರಿದ ಹಗಲಿನುದ್ದ
ಹನಿ ಮಳೆಯ ಕನಸು ಜೀವಂತವೇ ಆಗಿತ್ತು
ಆದರೆ ದುರುಳ ಬಾನ ಕಣ್ಣಲ್ಲಿ
ಕೇವಲ ಮಳೆಯ ಸುರಿವ ಸೋಗಿತ್ತು
ಒಮ್ಮೆ ಮನ ಸೋತ ಮೇಲೆ ಕಳೆದುಕೊಳ್ಳಲಿಕ್ಕೆ
ನನ್ನಲ್ಲಿ ಇನ್ನೇನೂ ಉಳಿದೇ ಇಲ್ಲ.
ಹಳೆಯ ಹಾದಿಯ ಜಾಡಿನಲ್ಲಿ
ಮೂಡಿರುವ ಹೆಜ್ಜೆಗಳು ಆಳವಾಗಿ
ಮನದ ಅವೆ ಮಣ್ಣಿನಲ್ಲಿ ಉಳಿದು
ಹೋಗಿರೋವಾಗ, ಕಣ್ಣೀರ ಮಳೆಗೆ
ಅಲ್ಲಿ ಕೆಸರೆದ್ದದ್ದು ಸಹಜ ತಾನೆ..?
ಬೇರಿಲ್ಲದೆ ಸಸಿ ಎಂದಾದರೂ ಬಾಳೀತೇನು?
ಖುಷಿಯೊಂದು ಕಲ್ಪಿತ ಭ್ರಮೆ
ಆಸೆ ಹುಟ್ಟಿಸಿದ ಮಳೆಯ ಹಳೆಯ
ಮೋಸದ ಮೋಹವನ್ನೇ
ಅತಿಯಾಗಿ ನಂಬಿರುವ ಅಮಾಯಕ
ಭೂಮಿ, ಇನ್ನೂ ಬಿರಿದು ಹನಿ ಪ್ರೀತಿಗಾಗಿ
ಬಾಯ್ತೆರೆದುಕೊಂಡು ಕಾದಿದೆ
ಕಾಮನೆಗಳ ಬಿಸಿಲುಗುದುರೆ ಏರಿ ಹೊರಟು
ಜಗವನ್ನೆಲ್ಲಾ ಸುತ್ತಿ ಬಳಲಿ ಬೆಂಡಾಗಿ ಬಂದರೂ....
ಎಲ್ಲೂ ಮನದ ಅಪೇಕ್ಷೆಯ ಸುಮ
ಅರಳುವ ತಾಣ
ಕಡೆಗೂ ಕಾಣಸಿಗಲೇ ಇಲ್ಲ..