*ಅವಳ ಸಾಧನೆ*
*ಅವಳ ಸಾಧನೆ*
ಸೀತಾ ಆಗಷ್ಟೇ ಹೆಣ್ಣು ಮಗಳಿಗೆ ಜನ್ಮ ಕೊಟ್ಟಿದ್ದಳು. ಹೆಣ್ಣು ಹೆತ್ತಿದ್ದೆ ಘೋರ ಅಪರಾಧ ಎನ್ನುವಂತೆ ವರ್ತಿಸುತ್ತಿದ್ದರು ಗಂಡ, ಅತ್ತೆ,ಮಾವ. ಅವರ ಚುಚ್ಚು ಮಾತುಗಳನ್ನು ದಿನವು ಕೇಳಿಯು ಕೇಳದ ಹಾಗೇ ಮೌನವಾಗಿ ಇರುತ್ತಿದ್ದಳು ಸೀತಾ. ಜನ್ಮ ಕೊಟ್ಟ ತಂದೆಯಿಂದಲೇ ತಿರಸ್ಕಾರಕ್ಕೆ ಒಳಪಟ್ಟಿತು ನನ್ನ ಹಸುಗೂಸು. ಅದಕ್ಕೆ ನಾಮಕರಣವನ್ನು ಯಾರೂ ಮಾಡುವರಿಲ್ಲ ವಿಧಿಯೇ ಎಂಥಹ ಪರಿಸ್ಥಿತಿ ತಂದುಬಿಟ್ಟೆ? ತಂದೆ ತಾಯಿ ಎರಡು ಸ್ಥಾನದಲ್ಲಿ ನಿಂತು ನನ್ನ ಕೂಸಿಗೆ "ಪ್ರೀತಿ" ಎಂದು ನಾಮಕರಣ ಮಾಡುತ್ತಿದ್ದೇನೆ. ಇವಳಿಗೆ ಮುಂದೆ ತಂದೆಯ ಪ್ರೀತಿ ಹುಡುಕಿ ಬರುವ ಹಾಗೇ ನನ್ನ ಮಗಳು ಧೈರ್ಯದಿಂದ ಸಾಧಿಸಲಿ ಎಂದು ಹಾರೈಸು ದೇವ್ರೇ ಎಂದಳು ಸೀತಾ.
ಪ್ರೀತಿ ಹುಟ್ಟಿದ ಕೆಲವು ತಿಂಗಳಲ್ಲಿಯೇ ಸೀತಾಳಿಂದ ಶಾಶ್ವತವಾಗಿ ದೂರಾದ ಪತಿ ರಾಮ್. ಡಿವೋರ್ಸ್ ನೀಡಿ ಬೇರೊಂದು ವಿವಾಹವಾಗಿ ಬೇರೆ ಸಂಸಾರ ಮಾಡಿದನು. ಪುಟ್ಟ ಕೂಸನ್ನು ಬಿಟ್ಟು ಹೋಗಲು ಮನಸ್ಸಾದರೂ ಹೇಗೆ ಬಂತೋ ರಾಮನಿಗೆ ಅಂತಾ ಅನಿಸುತ್ತೆ ಅಲ್ವಾ?
ಆದ್ರೆ ರಾಮನ ಒಳ ಕಾರಣವೆ ಬೇರೆ ಇದೆ ಸೀತಾಳಿಗೆ ಮತ್ತೊಂದು ಮಗುವನ್ನು ಹೆರಲು ಸಾಧ್ಯವಿಲ್ಲ ಗರ್ಭಕೋಶ ತೆಗೆದುಬಿಟ್ಟಿದ್ದಾರೆ.
ಗಂಡು ಮಗುವಿನ ಅಪೇಕ್ಷೆ ಇಟ್ಟ ರಾಮನಿಗೆ ಆದ ನಿರಾಸೆ ಹೆಂಡತಿ ಮಕ್ಕಳಿಂದ ದೂರ ಮಾಡಿತು.
ಇಂಥಹ ಸಂದರ್ಭದಲ್ಲಿ ಒಂಟಿ ಹೆಣ್ಣಾದ ಸೀತಾಳಿಗೆ ತವರಿಗೆ ಹೋಗಿ ಇರಲು ಪ್ರೀತಿಸುವ ಅತ್ತಿಗೆ ಇಲ್ಲ, ಸಾಂತ್ವನ ನೀಡುವ ಅಣ್ಣನಿಲ್ಲ,ಹೆತ್ತವರೇ ಭಾರವೆಂದು ಭಾವಿಸಿರುವ ಅಣ್ಣಾ, ಅತ್ತಿಗೆ.
ಹೇಗೆ ತಾನೇ ಗಂಡ ಬಿಟ್ಟ ಹೆಣ್ಣಿಗೆ ಆಶ್ರಯವಾಗುವರು? ಸಾಯಬೇಕು ಅಂದ್ರೆ ಕೈಯಲ್ಲಿ ಪುಟ್ಟ ಕೂಸು. ನನ್ನ ಹಣೆಬರಹ ನಾನೇ ನೋಡಿಕೊಳ್ಳಬೇಕು ಅಲ್ಲವೇ? ಅವರಿವರ ಮನೆ ಕೆಲಸ ಮಾಡಿ ಮಗುವನ್ನು ಸಾಕುತ್ತಾಳೆ.
ಸೀತಾ ಮನಸ್ಸು ಮಾಡಿದ್ದರೆ ಅವಳು ಕೂಡಾ ಇನ್ನೊಂದು ಮದುವೆಯಾಗಬಹುದಿತ್ತು. ಆದ್ರೆ ಪ್ರೀತಿಗೆ ತಂದೆ ಪ್ರೀತಿ ಸಿಗಲಾರದು ಎಂಬ ವಾಸ್ತವತೆ ಅರಿತಿರುತ್ತಾಳೆ. ಹೆಣ್ಣು ಎಂಬ ಕಾರಣಕ್ಕೆ ಸಿಗದ ಪ್ರೀತಿ ಹುಡುಕಿಕೊಂಡು ಬರಬೇಕು ಆ ಮಟ್ಟಕ್ಕೆ ನನ್ನ ಮಗಳು ಸಾಧಿಸಬೇಕು ಎಂದು ನಿರ್ಧರಿಸುತ್ತಾಳೆ.
ಅವಳು ಕೆಲಸ ಮಾಡುವ ಮನೆಯ ಒಡತಿಗೆ ಮಕ್ಕಳಿಲ್ಲದ ಕಾರಣ ಪ್ರೀತಿಯನ್ನೇ ಸ್ವಂತ ಮಗಳ ಹಾಗೇ ನೋಡಿಕೊಳ್ಳುತ್ತಾರೆ. ಅವಳ ಓದಿಗೆ ಅವರೇ ಸಹಾಯಕರಾಗಿ ನಿಲ್ಲುತ್ತಾರೆ.
ಸೀತಾ ಯಾವಾಗಲೂ ಹೇಳುತ್ತಾಳೆ, ನನ್ನ ಹಾಗೇ ನಿನ್ನ ಜೀವನ ಆಗಬಾರದು ಏನಾದ್ರು ಸಾಧನೆ ಮಾಡು. ಹೆಣ್ಣು ಮಗುವೆಂದು ಬಿಟ್ಟು ಹೋದ ನಿನ್ನ ತಂದೆ ನಿನಗೆ ಸಹಾಯ ಕೇಳಿಕೊಂಡು ಬರಬೇಕು. ಆಗ ನನ್ನ ಮಗಳಾಗಿದ್ದು ಸಾರ್ಥಕವೆಂದು.ಮತ್ತು ಮನೆ ಕೆಲಸದವಳ ಮಗಳು ಮನೆ ಕೆಲಸದವಳೇ ಆಗುತ್ತಾಳೆ. ಅದಕ್ಕೆ ಲಾಯಕ್ಕು ಅವಳು.ನನ್ನ ಮಗನ ಹಾಗೇ ಡಾಕ್ಟ್ರು ಕಲೆಕ್ಟ್ರು ಆಗ್ತಳಾ?ಇಲ್ಲವಲ್ಲ ಎಂದಿದ್ದಾರೆ. ಆ ಮಾತು ಮೀರಿ ಬೆಳೆದು ತೋರಿಸು ಮಗಳೇ, ಎಂದಿದ್ದಾರೆ ನನ್ನ ಅಮ್ಮ.
ಅದಕ್ಕಾಗಿಯೇ ಧೈರ್ಯವಾಗಿ ಯಾರೇನು ಅಂದರು, ಅಪ್ಪ ಇಲ್ಲದ ಮಗಳು ಎಂದು ಆಡಿಕೊಂಡರು ಅದ್ಯಾವುದನ್ನು ಲೆಕ್ಕಿಸದೆ ಮನಸ್ಸಿಟ್ಟು ಓದುತ್ತಿರುವೆ ಸರ್ ಎಂದಾಗ ಗುರುಗಳ ಕಣ್ಣಲ್ಲಿ ಕಂಬನಿ ಧಾರೆ ಹರಿಯುತ್ತದೆ. ನಿನ್ನ ಓದಿಗೆ ನನ್ನಿಂದ ಏನಾದ್ರು ಸಹಾಯ ಬೇಕಿದ್ದರೆ ಕೇಳು ಎಂದಾಗ, ಬೇಡ,ನನ್ನ ಅಮ್ಮ ಕೆಲಸ ಮಾಡುವ ಮನೆಯ ಒಡತಿ ಅದರ ವ್ಯವಸ್ಥೆ ಮಾಡಿದ್ದಾರೆ ಈ ವಿಷಯದಲ್ಲಿ ನಾನು ಪುಣ್ಯವಂತೆ ಸರ್.
ಶ್ರದ್ಧೆಯಿಂದ ಪ್ರೀತಿ ಓದಿ ಟಾಪರ್ ಆಗ್ತಾ ಹೋದಳು. ತಾಯಿಯ ಕನಸಿನಂತೆ ಪ್ರೀತಿ ಐಎಎಸ್ ಪರೀಕ್ಷೆಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿ ಅದೃಷ್ಟಕ್ಕೇ ತನ್ನದೇ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಬಂದಾಗ ಸೀತಾ ಖುಷಿಯಿಂದ ಮಗಳನ್ನು ತಬ್ಬಿಕೊಂಡು ಹೇಳಿದಳು. ಒಂಟಿಯಾಗಿ ಹೆಣ್ಣು ಬದುಕು ಸಾಗಿಸುವುದು ಅಸಾಧ್ಯವೆಂದು ಧೈರ್ಯಗೆಟ್ಟು ಜೀವ ಕಳೆದುಕೊಂಡಿದ್ದರೆ ನಮಗೆ ಇಂದು ಈ ಸಂತೋಷ ಸಿಗುತ್ತಿರಲಿಲ್ಲ. ಇದಕ್ಕೆ ನಿನ್ನ ಪರಿಶ್ರಮ ಮತ್ತು ನಮ್ಮ ಮನೆಯ ಮಾಲೀಕರು ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಹೊತ್ತು ನಿನ್ನ ಏಳಿಗೆ ಬಯಸಿದರ ಪ್ರತಿಫಲವಮ್ಮ ಎಂದಳು.
ನಿಜ ಅಮ್ಮ, ನೀವಿಬ್ಬರೂ ನನಗೆ ತಾಯಂದಿರು ನಿಮ್ಮ ಋಣ ಎಷ್ಟು ಜನ್ಮಕೂ ತೀರಿಸಲಾರೆ ಎಂದು ಇಬ್ಬರನ್ನೂ ತಬ್ಬಿಕೊಂಡು ಆನಂದ ಭಾಷ್ಪ ಹರಿಸುತ್ತಾಳೆ.
ಆಗ ಇಬ್ಬರೂ ಆಶೀರ್ವಾದ ಮಾಡಿ, ಇಲ್ಲಿಗೆ ಮುಗಿದಿಲ್ಲ ಪ್ರೀತಿ ಇನ್ನು ಮುಂದೆ ಇದೆ, ಯಾವ ತಂದೆ ಹೆಣ್ಣೆಂದು ದೂರ ತಳ್ಳಿ ಹೋಗಿದ್ದನೋ ಆ ಪುಣ್ಯ ಪುರುಷ ಇದೆ ಊರಲ್ಲಿ ಇದ್ದಾನೆ. ಅವ್ನು ನಿನ್ನ ಮಗಳು ಎಂದು ಒಪ್ಪಿಕೊಳ್ಳಬೇಕು ಹಾಗೂ ತನ್ನ ತಪ್ಪಿನ ಅರಿವು ಮಾಡಿಕೊಂಡು ಸೋತು ಶರಣಾಗಿ ಬರಬೇಕು ಹಾಗೇ ಮಾಡಿ ತೋರಿಸು. ಇಲ್ಲಿ ನೋಡು ಇವ್ನೆ ನಿನ್ನ ತಂದೆ ರಾಮ್,ಇವಳು ನಿನ್ನ ತಂದೆಯ ಎರಡನೇ ಹೆಂಡತಿ ಸ್ನೇಹಾ, ತೇಜಸ್ ನಿನ್ನ ತಂದೆಯ ಗಂಡು ಸಂತಾನ ಎಂದು ಭಾವಚಿತ್ರ ತೋರಿಸಿ ಹೇಳಿದಾಗ ಪ್ರೀತಿ ಖುಷಿಯಿಂದ ತೇಜಸ್ ನನ್ನ ತಮ್ಮನಾ ಅಮ್ಮ? ಇವ್ನು ಎಷ್ಟು ಮುದ್ದಾಗಿದ್ದಾನೆ ಎನ್ನುತ್ತಾಳೆ.
ಸೀತಾ ನಿನಗೇನಾದ್ರು ತಲೆ ಕೆಟ್ಟಿದಿಯಾ ದ್ವೇಷ ಮಾಡಬೇಕಾದೋರನ್ನ ಪ್ರೀತಿ ಮಾಡ್ತೀಯಾ?
ಅಮ್ಮ ಇದರಲ್ಲಿ ಅಪ್ಪ ಮಾಡಿದ್ದು ತಪ್ಪು. ಚಿಕ್ಕಮ್ಮ ತೇಜಸ್ದು ಏನು ತಪ್ಪಿಲ್ಲ .
ಹೌದು,ತೇಜಸ್ ನಿನಗೆ ಹೇಗೆ ಗೊತ್ತು?
ಅಮ್ಮ ಅವ್ನು ನನ್ನ ಜೂನಿಯರ್ ವಿದ್ಯೆ ತಲೆಗೆ ಹತ್ತಲಿಲ್ಲ ಹಾಗಾಗಿ ಅಲ್ಲಿ ಇಲ್ಲಿ ಕೆಲಸ ಮಾಡ್ಕೊಂಡು ಇದ್ದ ಅವನಿಗೆ ನಾನೇ ಜವಾನನ ಪೋಸ್ಟ ಖಾಲಿ ಇದೆ ಬಾ ಎಂದು ಕರೆದುಕೊಂಡು ಬಂದೇ..
ಕ್ಷಮಿಸು ಅಮ್ಮ ಅವನ ಓದು ಜ್ಞಾನಕ್ಕೇ ಅದೇ ಸರಿ ಇತ್ತು ಹಾಗಾಗಿ ಕರೆದುಕೊಂಡು ಬಂದೇ ಮೊದಲೇ ನನ್ನ ತಮ್ಮ ಎಂದು ಗೊತ್ತಿದ್ದರೆ? ನಾನು ಬೇರೆ ವ್ಯವಸ್ಥೆ ಮಾಡುತ್ತಿದ್ದೆ.
ಸೀತಾ ನಿನ್ನ ಉದಾರ ಗುಣಕ್ಕೆ ಏನು ಹೇಳಲಿ ಪ್ರೀತಿ ಕೈಯತ್ತಿ ಮುಗಿಯಬೇಕು ನಿನ್ನ ದೊಡ್ಡ ಗುಣಕ್ಕೆ..
ಪ್ರೀತಿಗೇ ತಮ್ಮನೆಂದು ತಿಳಿದ ಮೇಲೆ ಹೆಚ್ಚು ಅಕ್ಕರೆ ತೋರಿಸುತ್ತಿದ್ದಳು. ತನ್ನ ಸ್ವಂತ ತಮ್ಮ ಎಂದು ಕಾಳಜಿ
ಮಾಡುತ್ತಿದ್ದಳು.
ಅದನ್ನು ತಂದೆ ರಾಮ್ ಹತ್ತಿರ ಬಂದು ಹೇಳುತ್ತಾನೆ. ಜಿಲ್ಲಾಧಿಕಾರಿಯಾಗಿ ನನ್ನ ಒಡಹುಟ್ಟಿದವನ ಹಾಗೇ ಕಾಣುತ್ತಾರೆ ಅಪ್ಪ ಅವರು ಎಂದನು.
ಹಾಗಿದ್ದರೆ ನೀನ್ಯಾಕೆ ಒಂದು ಮಾತು ಕೇಳಿ ಮತ್ತೊಂದು ದೊಡ್ಡ ಕೆಲಸ ಪಡೆಯಬಾರದು ಎಂದನು?
ಆ ಕೇಳುವ ಕೆಲಸ ಬೇಕಿದ್ದರೆ ನೀವೇ ಮಾಡಿ ನನಗೆ ಆಗಲ್ಲ ಎಂದನು ತೇಜಸ್. ಸರಿ ನಾನೇ ಬಂದು ಮಾತಾಡುವೆ ಎಂದನು ರಾಮ್.
ಜಿಲ್ಲಾಧಿಕಾರಿಯನ್ನು ಕಾಣಲು ಬಂದನು ರಾಮ್. ಪ್ರೀತಿ 25 ವರುಷದಿಂದ ತಂದೆಯ ಮುಖವೇ ನೋಡಿರಲಿಲ್ಲ. ಮೊದಲ ಸಲ ತಂದೆಯನ್ನು ಕಂಡಾಗ ತಬ್ಬಿಕೊಂಡು ನಾನು ನಿಮ್ಮ ಮಗಳು ಎಂದು ಹೇಳಬೇಕು ಅನ್ನಿಸುತ್ತೆ, ಆದ್ರೆ ಮೋಸಗಾರ ತಂದೆ ಮಾಡಿದ ತಪ್ಪು ಇಂದು ಒಪ್ಪಿಕೊಳ್ಳಲಿ ಎಂದು ಸುಮ್ಮನಾಗುತ್ತಾಳೆ. ಮಗಳು ಎಂಬುದೇ ತಿಳಿಯದ ವ್ಯಕ್ತಿ ರಾಮ್.
ಮೇಡಂ ನಮಸ್ತೇ ನಾನು ತೇಜಸ್ ತಂದೆ ಅವನ ಕುರಿತು ಸ್ವಲ್ಪ ಮಾತಾಡಬೇಕಿತ್ತು ಅನ್ನುತ್ತಾನೆ.
ಮೊದಲು ಕುಳಿತುಕೊಳ್ಳಿ ಅಪ್ಪ...
ಮೇಡಂ ನೀವು ನನ್ನ ಅಪ್ಪ ಅಂತೀರಾ?
ನೀವು ತೇಜಸ್ ತಂದೆ ಅಲ್ವಾ ಅದ್ಕೆ ಹಾಗೇ ಅಂದೆ, ನನಗೆ ತಮ್ಮ ಇಲ್ಲ ಹಾಗಾಗಿ ಅವನನ್ನು ನನ್ನ ಸ್ವಂತ ತಮ್ಮ ಅಂದುಕೊಂಡೆ ಹಾಗಾಗಿ ನಿಮಗೆ ಅಪ್ಪ ಅಂದೆ.
ನಿಮಗೆ ಹೆಣ್ಣು ಮಕ್ಕಳು ಅಪ್ಪ ಅನ್ನೋದು ಇಷ್ಟ ಇಲ್ಲ ಅಂದ್ರೆ ಕರೆಯೋದಿಲ್ಲ ಬಿಡಿ ಸರ್.
ಅಯ್ಯೋ ಹಾಗ್ಯಾಕ್ ಅಂತೀಯಾ ಮಗಳೇ?
ನನಗೂ ಹೆಣ್ಣು ಮಗಳು ಇಲ್ಲ ಹಾಗೊಂದು ವೇಳೆ ಇದ್ದಿದ್ದರೆ ನಿನ್ನ ವಯಸ್ಸಿನವಳೇ ಆಗಿರುತ್ತಿದ್ದಳು.
ಡಿ ಸಿ ಯಾಗಿ ನೀವು ನನ್ನ ಅಪ್ಪ ಅನ್ನೋದು ನನ್ನ ಪುಣ್ಯ ಹಾಗೇ ಕರಿ.
ಅಪ್ಪ ತುಂಬಾ ದೊಡ್ಡ ಮನಸ್ಸು ನಿಮ್ಮದು ಧನ್ಯವಾದಗಳು. ಆದ್ರೂ ಒಂದು ಮಾತು ಕೇಳ್ತೀನಿ ಬೇಸರ ಮಾಡ್ಕೋಬೇಡಿ.
ನಾನು ಜಿಲ್ಲಾಧಿಕಾರಿಯಾಗಿರದೆ ಸಾಧಾರಣ ಮುಸುರೆ ತಿಕ್ಕವಳ ಮಗಳಾಗಿದ್ದರು ಇಷ್ಟೇ ಪ್ರೀತಿಯಿಂದ ಈ ಪ್ರೀತಿಯನ್ನು ಕಾಣುತ್ತಿದ್ದೀರಾ?
ರಾಮ್, ಹೆಣ್ಣು ಯಾರ ಮಗಳಾದರೇನು?
ನನಗೆ ಹೆಣ್ಣು ಮಕ್ಕಳು ಅಂದ್ರೆ ತುಂಬಾ ಇಷ್ಟ ಆದ್ರೆ ದೇವರು ನನಗೆ ಹೆಣ್ಣು ಮಕ್ಕಳನ್ನು ಕೊಡಲಿಲ್ಲ.
ಭೇಷ್ ಅಪ್ಪ ಭೇಷ್, ಅಷ್ಟೊಂದು ಹೆಣ್ಣು ಮಕ್ಕಳನ್ನು ಇಷ್ಟ ಪಡೋ ನೀವು 25 ವರುಷಗಳ ಹಿಂದೆ ಸೀತಾ ಹೆಣ್ಣು ಹೆತ್ತಳು ಎಂಬ ಕಾರಣಕ್ಕೇ, ಹಾಗೇ ಇನ್ನೂ ಮುಂದೆ ಯಾವ ಮಗುವನ್ನು ಹೆರಲು ಸಾಧ್ಯವಿಲ್ಲ. ಎಂದು ತಿಳಿದ ಕ್ಷಣವೇ, ಹಸುಗೂಸನ್ನು ಹೆಂಡತಿಯನ್ನು ಬಿಟ್ಟು, ಡಿವೋರ್ಸ್ ಕೊಟ್ಟು ಬೇರೆ ಮದುವೆ ಆಗುವಾಗ ಎಲ್ಲಿತ್ತು ಅಪ್ಪ ಮಗಳ ಮೇಲಿನ ಈ ಮಮಕಾರ?
ಒಂಟಿ ಹೆಣ್ಣಿಗೆ ಯಾವುದೇ ಸಹಾಯ ನೀಡದೆ ಮುಸುರೆ ತಿಕ್ಕುವಳ ಮಗಳು ಮುಸುರೆ ತಿಕ್ಕಲು ಲಾಯಕ್ಕು ಎಂದು ಅಣುಕಿಸಿ ಮಾತಾಡುವಾಗ ಎಲ್ಲಿ ಇತ್ತು ಅಪ್ಪ ಈ ಪ್ರೀತಿ?
ನಿಮ್ಮ ಮಗ ಗಂಡು ಸಂತಾನ ಏನು ಮಾಡಿಸಿದ್ದೀರಾ ಕೇವಲ ಜವಾನ. ಹೀಯಾಳಿಸಿ ಮಾತಾಡುವುದು ತುಂಬಾ ಸುಲಭ,ಆದ್ರೆ ಅದರಂತೆ ನಡೆಯುವುದು ತುಂಬಾ ಕಷ್ಟ.
ಇದೆಲ್ಲಾ ನಿನಗೆ ಹೇಗೆ ಗೊತ್ತು?
ಯಾವ ಮುಸುರೆ ತಿಕ್ಕುವಳಿಗೆ ನಿನ್ನ ಹಾಗೇ ನಿನ್ನ ಮಗಳು. ಅವಳಿಗೂ ಬೇರೆಯವರ ಮನಿ ಕೆಲಸಕ್ಕೆ ಹಚ್ಚು ನಿನಗೇನೂ ನನ್ನ ಮಗನ ಹಾಗೇ ದೊಡ್ಡ ವ್ಯಕ್ತಿ ಮಾಡಲು ಸಾಧ್ಯವಿಲ್ಲ ಎಂದು ಅವಮಾನಿಸಿ ಹೋದರಲ್ಲ ಅದೇ ಮುಸುರೆ ತಿಕ್ಕುವವಳ ಮಗಳು ಪ್ರೀತಿ.
ನೋಡಿದ್ರ ಅಪ್ಪ ಕಾಲ ಕೊನೆಗೆ ನನ್ನ ಕಾಲತ್ರ ತಂದು ನಿಲ್ಲಿಸಿತು ನಿಮ್ಮನ್ನ.
ಸಾಧನೆ ಮಾಡೋಕೆ ಗಂಡು ಹೆಣ್ಣು ಮುಖ್ಯ ಅಲ್ಲಾ ಗಟ್ಟಿ ಮನಸ್ಸು. ಸೋತರು ಧೃತಿಗೆಡದೆ ಮುಂದೆ ಸಾಗುವ ಧೈರ್ಯ ತುಂಬಿದ ಗುಂಡಿಗೆ.ಅದು ನನಗೂ ನನ್ನ ತಾಯಿಗೂ ಇತ್ತು.
ಕ್ಷಮಿಸು ಪ್ರೀತಿ ನನಗೆ ನನ್ನ ತಪ್ಪಿನ ಅರಿವಾಗಿದೆ. ಮತ್ತೆ ಮತ್ತೆ ಚುಚ್ಚಿ ಚುಚ್ಚಿ ಮಾತಾಡಿ ನೋಯಿಸಬೇಡ.
ಅಪ್ಪ ನೋಯಿಸುವ ಬುದ್ಧಿ ನನಗಿಲ್ಲ ನಿಮ್ಮ ತಪ್ಪಿನ ಅರಿವು ಆಗಲಿ ಅಂತಾ ಇಷ್ಟು ಮಾತಾಡಿದೆ.
ನೀವೇನು ಚಿಂತಿಸಬೇಡಿ.ತೇಜಸಗೇ ನಾನು ಬೇರೆ ವ್ಯವಸ್ಥೆ ಮಾಡಿ ಈ ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಿ ರೂಪಿಸುತ್ತೇನೆ. ಆ ಜವಾಬ್ದಾರಿ ಅಕ್ಕನಾಗಿ ನನ್ನ ಮೇಲಿದೆ ನಾನು ಆ ಕೆಲಸ ಖಂಡಿತವಾಗಿಯೂ ಮಾಡುತ್ತೇನೆ ನೀವಿನ್ನು ಹೊರಡಿ ಎಂದಳು.
ಎಂಥಹ ಮಗಳಿಗೆ ನಾನು ಎಂಥಹ ಕೆಟ್ಟ ತಂದೆ ಎಂದು ಅರ್ಥವಾದ ಮೇಲೆ ರಾಮ್ ಸೋತ ಮುಖ ಹೊತ್ತು
ಸೀತಾಳ ಬಳಿ ಬಂದು ಕ್ಷಮೆ ಕೇಳುತ್ತಾ ನೀನು ಧೈರ್ಯವಂತೆ ನಿನ್ನ ಮಗಳನ್ನು ದೊಡ್ಡ ವ್ಯಕ್ತಿಯಾಗಿ ಮಾಡಿ ಸಾಧಿಸಿ ತೋರಿಸಿದೆ. ನನಗೂ ತಪ್ಪಿನ ಅರಿವು ಆಗಿದೆ ನಾವೆಲ್ಲರೂ ಒಟ್ಟಿಗೆ ಇರೋಣ ಬಾ ಎಂದನು.
ಒಳ್ಳೇದು, ಆದ್ರೆ ಗಂಡನ ಆಶ್ರಯದಲ್ಲಿರುವ ವಯಸ್ಸು ಈಗ ನನ್ನದಲ್ಲ, ನಿಮ್ಮ ಅವಶ್ಯಕತೆ ಇದ್ದಾಗ ನಮ್ಮನ್ನು ನಡು ಬೀದಿಯಲ್ಲಿ ಬಿಟ್ಟು ಹೋದ್ರಿ, ಈಗ ನಿಮ್ಮೊಟಿಗೆ ಇರುವ ಅಗತ್ಯವೇನಿದೆ? ನೀವು ಸ್ನೇಹಾ ಜೊತೆಗೆ ಚೆನ್ನಾಗಿರಿ ಎಂದು ತೆರೆದ ಬಾಗಿಲನ್ನು ಜೋರಾಗಿ ಬಡಿದು ಮುಚ್ಚಿದಳು.ಅದು ಮನೆ ಬಾಗಿಲು ಮಾತ್ರವಲ್ಲ ಅವಳ ಹೃದಯದ ಬಾಗಿಲು ಸಹ ಆಗಿತ್ತು.
ಧೈರ್ಯ ಎಲ್ಲವನ್ನು ಸಾಧಿಸಲು ಸಾಧ್ಯವಾಗಿಸುತ್ತದೆ ಎಂಬುದನ್ನು ಸೀತಾ ಪ್ರೀತಿ ಜಗತ್ತಿಗೆ ಸಾಧಿಸಿ ತೋರಿಸಿ ಕೊಟ್ಟರು.