ಮಾನಸಿಕ ಖಿನ್ನತೆಯತ್ತ ಪ್ರಯಾಣ.ಭಾಗ1
ಮಾನಸಿಕ ಖಿನ್ನತೆಯತ್ತ ಪ್ರಯಾಣ.ಭಾಗ1
ಅದೊಂದು ಸುಂದರವಾದ ಕುಟುಂಬ. ಗಂಡ ಹೆಂಡತಿ ಅವರ ಇಬ್ಬರು ಮಕ್ಕಳು.
ರಮೇಶ್, ಲತಾ ದಂಪತಿಗಳು ಕಣ್ಣಿಗೆ ಕಾಣುವ ಎಲ್ಲ ಸುಣ್ಣ ಹಚ್ಚಿದ ಒಂದು ಕಲ್ಲನ್ನು ಸಹ ದೇವರೆಂದು ತಿಳಿದು , ಭಕ್ತಿಯಿಂದ ಕೈ ಮುಗಿದು , ಮಗುವಿಗೋಸ್ಕರ ಹರಕೆ ಕಟ್ಟುತ್ತಿದ್ದರು. ಒಂದು , ಎರಡು , ಮೂರು ಅನ್ನುತ್ತಾ ಹರಕೆಯ ಪಟ್ಟಿ ಬೆಳೆಯುತ್ತಲೇ ಇತ್ತು. ಆದರೆ ಮಗು ಮಾತ್ರ ಆಗುವ ಲಕ್ಷಣಗಳು ಕಾಣಲಿಲ್ಲ. ಹೀಗೆಯೇ ಆಗಿ ವರುಷಗಳು ಉರುಳಿದ್ದವು. ನಂತರ ಒಂದು ದಿನ ಲತಾ ಬೆಳಿಗ್ಗೆಯಿಂದ ಸುಸ್ತು ಎನ್ನುತ್ತಾ , ಏನನ್ನೂ ತಿನ್ನದೇ ಬರಿ ಮಲಗಿಯೇ ಇದ್ದಳು. ಹೆಂಡತಿ ಪದೇ ಪದೇ ಮಲಗುವುದನ್ನು ನೋಡಿ ರಮೇಶ್ " ಏನೇ ಲತಾ , ಏನಾಗ್ತಿದೆ ನಿಂಗೆ ? ಬೆಳಿಗ್ಗೆಯಿಂದ ಬರಿ ಮಲಗೋದೇ ಆಗ್ತಿದೆ. ಯಾಕೆ ಹುಷಾರಿಲ್ವಾ? ಏನಾದ್ರೂ ತಿಂದೆಯಾ ಅಥವಾ ಇಲ್ವಾ? ನಡೆ ಆಸ್ಪತ್ರೆಗಾದ್ರೂ ಹೋಗಿ ಬರೋಣ " ಎಂದನು.
ಆಗ ಲತಾ ರೀ , ನನಗೆ ಎದ್ದೆಳೋಕೆ ಆಗ್ತಿಲ್ರಿ , ಸುಸ್ತಾಗ್ತಿದೆ , ಏನನ್ನೂ ತಿನ್ನುವ ಮನಸ್ಸಾಗ್ತಿಲ್ಲ , ಮಲಗಬೇಕು ಅಂತ ಅನ್ನಸ್ತಿದೆ ಎಂದು ಹೇಳಿದಳು.
ಆಗ ರಮೇಶ್ , ನೋಡು ಹುಷಾರಾಗಬೇಕು ಅಂದ್ರೆ ಏಳು , ಎದ್ದು ಏನಾದ್ರು ಸ್ವಲ್ಪ ತಿನ್ನು , ಚಹಾ ಆದ್ರೂ ಕುಡಿ , ಆಮೇಲೆ ಆಸ್ಪತ್ರೆಗೆ ಹೋಗಿ ಬರೋಣ ಅಂತ ಹೇಳಿದನು.
ಗಂಡ ಹೇಳಿದ್ದನ್ನು ಕೇಳಿ ಲತಾ ಎದ್ದು , ಇಬ್ಬರಿಗೂ ಚಹಾ ಮಾಡಿದಳು. ಚಹಾ ಜೊತೆ ಬಿಸ್ಕತ್ತು ತಿಂದು ಇಬ್ಬರು ಆಸ್ಪತ್ರೆಗೆ ಹೊರಟರು. ಆಗ ಲತಾ , ರೀ ನನ್ನದು ಈ ತಿಂಗಳು ಪಾಳೇ ಆಗೇ ಇಲ್ಲಾರಿ , ಅದಕ್ಕೆ ಹೊಟ್ಟೆ ನೋವು , ಅದರ ಜೊತೆಗೆ ಈ ಸುಸ್ತು , ವಾಂತಿ ಬೇರೆ ಆಗ್ತಿದೆ. ಏಳೋಕು ಕಷ್ಟ ಅನಿಸುವಂತಾಗುತ್ತಿತ್ತು ಎಂದಳು.
ಇರಲಿ ಬಾ , ಆಸ್ಪತ್ರೆಗೆ ಹೊರಟಿದಿವಿ , ನೋಡೋಣ. ಈ ಬಾರಿ ನಮ್ಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೊಸದಾಗಿ ಬಂದಿರುವ ಆ ಮೇಡಂ ಬಹಳ ಒಳ್ಳೆಯವರಂತೆ. ಪ್ರತಿಯೊಬ್ಬ ರೋಗಿಯನ್ನು ಬಹಳ ಚೆನ್ನಾಗಿ ನೋಡುತ್ತಾರಂತೆ. ತಾವೇ ಮುತವರ್ಜಿ ವಹಿಸಿ ನೋಡುತ್ತಾರಂತೆ. ತಮ್ಮಿಂದ ಆಗದೆ ಇದ್ದ ಪರಿಸ್ಥಿತಿಯಲ್ಲಿ ಮಾತ್ರ ಅನಿವಾರ್ಯವಾಗಿ ಸಿಟಿ ಆಸ್ಪತ್ರೆಗೆ ಬರೆದು ಕೊಡುತ್ತಾರಂತೆ. ಅದಕ್ಕೋಸ್ಕರ ನಿನ್ನನ್ನು ಇಲ್ಲಿಗೆ ಕರೆದುಕೊಂಡು ಬಂದೆ. ಏನೇನು ಆಗುತ್ತಿದೆಯೋ ಅದೆಲ್ಲವನ್ನು ಸರಿಯಾಗಿ ಡಾಕ್ಟರ್ ಮೇಡಂ ಹತ್ರ ಹೇಳಿಬಿಡು. ನೋಡೋಣ ಮುಂದಿನದನ್ನು ದೇವರು ದಾರಿ ತೋರಿಸುತ್ತಾನೆ ಎಂದನು.
ಆಯ್ತು ರಿ ಅನ್ನುತ್ತಾ , ದೇವರ ಸ್ಮರಣೆ ಮಾಡುತ್ತ ಆಸ್ಪತ್ರೆಯ ಒಂದೊಂದೇ ಮೆಟ್ಟಿಲನ್ನು ಹತ್ತಿದಳು. ಇವರ ಪಾಳೇ ಬಂದು ವೈದ್ಯರ ಮುಂದೆ ಕುಳಿತಾಗ ಎದೆಯಲ್ಲಿ ಡವ ಡವ , ಆತಂಕ . ತನಗಾಗುತ್ತಿದ್ದ ಎಲ್ಲವನ್ನು ವೈದ್ಯರ ಮುಂದೆ ಹೇಳಿದಾಗ ವೈದ್ಯರು ತುಂಬಾ ಹೊತ್ತು ಕೌನ್ಸಿಲಿಂಗ್ ಮಾಡಿ , ಕೆಲವೊಂದು ಟೆಸ್ಟ್ಗಳನ್ನು ಬರೆದು ಕೊಟ್ಟರು. ಆ ಪ್ರಕಾರ ಲತಾಳ ಟೆಸ್ಟ್ ಮುಗಿದು ರಿಪೋರ್ಟ್ ಬಂದಿತು. ವೈದ್ಯರು ಟೆಸ್ಟ್ ರಿಪೋರ್ಟ್ ನೋಡಿ ಮಂದಹಾಸ ಬೀರಿ , ಅಭಿನಂದನೆಗಳು ನಿಮ್ಮಿಬ್ಬರಿಗೆ ಎಂದಾಗ , ಲತಾ ರಮೇಶ್ ದಂಪತಿಗಳು ಒಬ್ಬರಿಗೊಬ್ಬರು ಆಶ್ಚರ್ಯ ಚಕಿತರಾಗಿ ಮುಖ ನೋಡಿಕೊಂಡು , ಏನು ಅಭಿನಂದನೆಗಳಾ? ಯಾಕೆ ಮೇಡಂ? ಎಂದರು.
ವೈದ್ಯರು ರಮೇಶ್'ಗೆ , ನೀವು ಅಪ್ಪ ಆಗ್ತಿದಿರಾ, ನಿಮ್ಮ ವೈಫು ಪ್ರಗನೆಂಟ್ ಎಂದರು.
ಎಷ್ಟೋ ಸಾರಿ ಆಸೆ ಪಟ್ಟಾಗ, ಕೈ ತಪ್ಪಿದ ಈ ಒಂದು ಸಂತಸದ ಕ್ಷಣ ಇಂದು ಮತ್ತೆ ಕೂಡಿ ಬಂದಿದೆಯೆಂದರೆ ಅದೇ ನಮ್ಮ ಅದೃಷ್ಟ ಮೇಡಂ, ತುಂಬಾ ಖುಷಿಯಾಯ್ತು, ಅಂತ ಹೇಳಿದನು. ಗಂಡ ಹೆಂಡತಿಯ ಸಂತಸಕ್ಕೆ ಪಾರವೇ ಇರಲಿಲ್ಲ. ವೈದ್ಯರು ಕೆಲ ಮಾತ್ರೆಗಳನ್ನು ಬರೆದುಕೊಟ್ಟು , ಜಾಗೃತೆಯಾಗಿ ಇರುವಂತೆ ಹೇಳಿದರು. ಆಯ್ತು ಎಂದು ಹೇಳಿ ದಂಪತಿಗಳು ಸಂತಸದಿಂದ ಮನೆಗೆ ತೆರಳಿದರು.
ಮುಂದುವರೆಯುವುದು........