ಗಾಳಿ ಮಾತು
ಗಾಳಿ ಮಾತು
ಸುನೀತಾ ರಾಮಸ್ವಾಮಿಯ ಒಬ್ಬಳೇ ಮಗಳು. ರಾಮಸ್ವಾಮಿ ಸಮಾಜದಲ್ಲಿ ಪ್ರತಿಷ್ಟಿತ ವ್ಯಕ್ತಿ. ಸುನೀತ ಕಾಲೇಜಿನಲ್ಲಿ ಓದುತ್ತಿದ್ದಾಳೆ.
ಅವಳದು ಐ ಎ ಎಸ್. ಮಾಡಬೇಕೆನ್ನುವ ಒಂದೇ ಗುರಿ .ಕಾಲೇಜು ಮನೆ ಬಿಟ್ಟರೆ ಸ್ನೇಹಿತೆಯರ ಜೊತೆಗೆ ಬೇರೆಯವರಂತೆ ಎಲ್ಲೂ ಹೋಗೋಳಲ್ಲ. ಒಂದು ದಿನ ಕಾಲೇಜಿನಲ್ಲಿ ನಾಲ್ಕು ಜನ ಹುಡುಗರು ಮಾತನಾಡೋವಾಗ ಸುನೀತ ವಿಚಾರ ಬಂತು .ಅವರಲ್ಲಿ ಅಮರ್ ಅನ್ನೋ ಸೀನಿಯರ್ ವಿಧ್ಯಾರ್ಥಿ ಮದುವೆ ಆದರೆ ಸುನೀತಾ ತರಾ ಇರೋ ಹುಡುಗಿಯನ್ನ ಮದುವೆ ಆಗಬೇಕು. ಲೈಫ್ ನಲ್ಲಿ ಸೆಟಲ್ ಆಗಬಹುದು ಅಂದ. ಮತ್ತೊಬ್ಬ ಹೇಳಿದ ಹೌದು ನಮ್ಮ ಕಾಲೇಜಿನಲ್ಲೇ ಡೀಸೆಂಟ್ ಅಂದರೆ ಸುನೀತ ಮಾತ್ರ. ಆ ಕ್ಷಣದಿಂದ ಅದೇಕೋ ಅಮರ್ ಗೆ ಸುನೀತಾ ಮೇಲೆ ಒಂದು ತರಾ ಇಷ್ಟ. ಮತ್ತೊಂದು ದಿನ
ಸ್ನೇಹಿತರ ಜೊತೆ ಕಾಫಿ ಡೇನಲ್ಲಿ ಇರೋವಾಗ ಅಮರ್ ಹೇಳಿದ ನೀವ್ಯಾರೂ ನಂಬಲ್ಲ. ಭಾನುವಾರ ಸುನೀತಾ ಅವರ ಅಮ್ಮನ ಜೊತೆ ಸಾಯಿ ಬಾಬಾ ಟೆಂಪಲ್ ನಲ್ಲಿ ನೋಡಿದೆ. ಚಪ್ಪಲಿ ಹಾಕ್ಕೋಳೋ ವಾಗ ಅವಳೇ ಹಾಯ್ ಅಂದಳು ನನಗೆ ಶಾಕ್. ನಾನೂ ಹಿಂದೆ ನೋಡಿ ಹಾಯ್ ಅಂದೆ. ನಕ್ಕು ಇವರು ಅಮರ್ ನಮ್ಮ ಕಾಲೇಜೇ ಅಂತ ಅವರ ತಾಯಿಗೆ ನನ್ನ ಬಗ್ಗೆ ತೆಲುಗಿನಲ್ಲಿ ಹೇಳಿದಳು. ನಾವು ಇಲ್ಲಿ ನೋಡೋ ಸುನೀತಾ ಈಸ್ ಟೋಟಲಿ ಡಿಫರೆಂಟಪ್ಪ ಅಂದ.
ಇವನ ಮುಖಾನೇ ಕುತೂಹಲದಿಂದ ನೋಡ್ತಾ ಇದ್ದ ಒಬ್ಬ ಏನೋ
ರಸ್ಕ್ ಕಾಫಿನಲ್ಲಿ ಮುಳುಗ್ತಾ ಇದೆ ಅಂದಾಗ ಏನೋ ಹಾಗಂದ್ರೆ ಅಂದ.
ರಸ್ಕ್ ಕಾಫಿ ಯಲ್ಲಿ ಮುಳುಗಿತಂದ್ರೆ ತೆಗೆಯಕ್ಕೂ ಆಗಲ್ಲ ಕಾಫಿ ಕುಡಿಯಕ್ಕೂ ಆಗಲ್ಲ ಅಂದ. ಏನು ಹೇಳ್ತೀರೋ ಅರ್ಥ ಆಗಲ್ಲ ಅಂತ ಅಮರ್ ಅಂದ. ಅಲ್ಲಿಂದ ಎಲ್ಲಾ ಹೊರಟರು.. ಅಮರ್ ಇವರೆಲ್ಲಾ ನಂಬೋ ತರಾನೆ ಎಷ್ಟು ಚನ್ನಾಗಿ ರೈಲ್ ಬಿಟ್ಟೆ ಅಂತ ತಾನೇ ನಕ್ಕು ಸ್ಕೂಟರ್ ಸ್ಟಾರ್ಟ್ ಮಾಡ್ದ.
ಸ್ವಲ ದಿನ ಆದಮೇಲೆ ಒಂದು ದಿನ ಏನಮ್ಮ ಸಾಯಿ ಬಾಬಾ ಟೆಂಪಲ್ ಗೆ ಹೋಗೋದೇ ಬಿಟ್ಟು ಬಿಟ್ಯೋ ಅಥವಾ ಡೈರೆಕ್ಷನ್ ಬದಲಾಗಿದೆಯೋ ಅಂದ ಒಬ್ಬ. ಇನ್ನೂ ಸ್ವಲ್ಪ ಸ್ವಾರಸ್ಯ ವಾಗಿರಲಿ ಅಂತ ನೀವು ಅವಳ ಬಗ್ಗೆ ಇನ್ನು ಮುಂದೆ ಹೀಗೆಲ್ಲಾ ಮಾತಾಡಕ್ಕೆ ಆಗಲ್ಲ ಅಂದ. ಓ ಇದು ಬೇರೇ ರೂಟ್ ಹಿಡಿದಿದೆ .ನಮಗೆ ಯಾಕೆ ಬಿಡ್ರೋ .ಪಾಪ ಬೇಗ ಸೆಟಲ್ ಆಗ್ಲಿಅಂತ ಎಲ್ಲರೂ ಒಂದೇ ಧ್ವನಿ ಯಲ್ಲಿ ಹೇಳಿದರು. ಇವರಲ್ಲಿದ್ದ ಒಬ್ಬ ಅವನ ಮತ್ತೊಬ್ಬ ಸ್ನೇಹಿತನಿಗೆ(ಅವನು ಸುನೀತ ಕ್ಲಾಸ್ ನವನೇ ) ಹೇಳಿದ ಸುನೀತ ಇಷ್ಟರಲ್ಲೇ ಮದುವೆ ಆಗ್ತಾಳೆ ನಿಮಗೆ ಯಾರಿಗೂ ಗೊತ್ತಿಲ್ಲ ಅಲ್ವಾ .ಹೌದಾ 'ಹೂ ಈಸ್ ದಟ್ ಲಕ್ಕಿ ಬಾಯ್ ' ಅಂದದ್ದಕ್ಕೆ ಅದು ಸೀಕ್ರೆಟ್. ಆದರೆ ಇದೇ ಕಾಲೇಜು ಅಂತ ಮಾತ್ರ ಹೇಳ್ತೀನಿ ಅಂದ.
ಅವನು ಮತ್ತೊಬ್ಬನಿಗೆ ಹೇಳೋವಾಗ ಲಾಸ್ಟ್ ಸಂಡೇ ಎಂಗೇಜ್ ಮೆಂಟ್ ಆಯಿತು. ಮುಂದಿನ ತಿಂಗಳು ಮದುವೆ ಅಂತ ಹೇಳಿದ. ಹೀಗೆ ರೆಕ್ಕೆ ಪುಕ್ಕ ಸೇರಿ ಸುನೀತ ಕಿವಿ ಮುಟ್ಟೋ ಹೊತ್ತಿಗೆ ಅವಳ ನೆಂಟರೊಬ್ಬರು ಅದೇ ಕಾಲೇಜಿ ಆಫೀಸ್ ನಲ್ಲಿ ಇದ್ದವರ ಮೂಲಕ ಅವಳ ತಂದೆ ರಾಮಸ್ವಾಮಿಗೂ ತಿಳಿದು ,ಅವರು ಏನೂ ಮಾತ ನಾಡದೆ ಅವರ ತಂಗಿ ಮಗನ ಜೊತೆ ಮದುವೆ ನಿಶ್ಚಯ ಮಾಡಿ ಕಾಲೇಜು ಬಿಡಿಸಿ ಮದುವೆ ಮುಗಿಸಿ ಅತ್ತೆ ಮನೆಗೆ ಕಳಿಸಿಬಿಟ್ಟರು. ಸುನೀತಳ ಐಎಎಸ್ ಆಸೆ ಮಣ್ಣಾಯ್ತು. ಒಂದೇ ವರ್ಷ ದಲ್ಲಿ ಅವಳ ಪತಿ ಹಾರ್ಟ್ ಅಟಾಕ್ ಆಗಿ ತೀರ್ಕೊಂಡು ಅಪ್ಪನ ಮನೆಗೆ ವಾಪಸ್ ಬಂದಳು. ಒಂದು ಸುಳ್ಳು ಹತ್ತು ಸುಳ್ಳಾಗಿ ಅದು ಕೊನೆಗೆ ನಿಜದ ಬಣ್ಣ ಪಡೆದು ಏನೂ ಅರಿಯದ ಒಂದು ಹುಡುಗಿ ಬಾಳನ್ನೇ ಹಾಳು ಮಾಡಿ ಬಿಟ್ಟಿತು.
ಆಮೇಲೆ ಪಶ್ಚಾತ್ತಾಪ ಪಟ್ಟು ಅಮರ್ ಇದಕ್ಕೆಲ್ಲಾ ಕಾರಣ ನಾನೇ ಅವಳನ್ನು ಹೇಗಾದರೂ ಒಪ್ಪಿಸಿ ಓದು ಮುಂದು ವರೆಸಕ್ಕೆ ಹೇಳ್ತೀನಿ. ಆದರೆ ಅವಳಿಗೆ ಹೊಸ ಬಾಳು ಕೊಡಕ್ಕೂ ನಾನು ರೆಡಿ ಅಂತ ಹೇಳಿದ .ಎಲ್ಲರೂ ಹೊಗಳಿ ಅಟ್ಟಕ್ಕೇರಿಸಿದರು. ಒಂದು ದಿನ ಅವಳ ಮನೆಗೆ ಧೈರ್ಯ ಮಾಡಿ ಹೋದ. ಮನೆಯಲ್ಲಿ ಕೆಲಸ ಮಾಡೋ ಹೆಂಗಸು ಬಂದು ಯಾರು ಬೇಕು ಅಂತ ಕೇಳಿದಳು. ಸುನೀತ ಇದಾರ
ಅಂದ ,ಇಲ್ಲ ಆಸ್ಪತ್ರೆಯಲ್ಲಿ ಇದಾರೆ ಅಂದಾಗ ಹೆದರಿ ಏನಾಯ್ತು ಅಂದ .ಹೆರಿಗೆ ಆಯ್ತು ಹೆಣ್ಣು ಮಗು. ಅವಳ ಅಪ್ಪ ಅಕ್ಕ ಎಲ್ಲಾ ರಾತ್ರಿ ಯಿಂದಾ ಅಲ್ಲೇ ಇದ್ದಾರೆ ಅಂದಾಗ ಏನೂ ಮಾತಾಡ್ದೇ ವಾಪಸ್ ಬಂದ.