ತುಂಬಿದ ಸಂಸಾರ.ಭಾಗ 9.
ತುಂಬಿದ ಸಂಸಾರ.ಭಾಗ 9.
ಮಗ ರಾಜಾ ತೀರ ತಲೆಕೆಡಿಸಿಕೊಂಡಿದ್ದನ್ನು ಕಂಡ ಅಪ್ಪ , ರಾಜಾ ಸ್ವಲ್ಪ ಸಮಯ ಕೊಟ್ಟು ಕಾದು ನೋಡೋಣ , ಇವಾಗ ಮಲಗಿ ಎಂದು ಹೇಳಿ ಅಣ್ಣ ತಮ್ಮಂದಿರಿಬ್ಬರನ್ನು ಕಳುಹಿಸಿದರು.
ಮಕ್ಕಳನ್ನೇನೋ ಕಳುಹಿಸಿದರು. ಆದರೆ ಸಿದ್ದಪ್ಪನವರಿಗೆ ನಿದ್ದೇನೆ ಬರಲಿಲ್ಲ. ಹೆಂಡತಿಯೊಂದಿಗೆ ಅದೇ ವಿಷಯದ ಕುರಿತು ಚರ್ಚೆ ಮಾಡಿದರು. ಆದರೆ ಯಾವ ನಿರ್ಣಯ ತೆಗೆದುಕೊಳ್ಳಲಿಲ್ಲ.
ಇತ್ತ ಕೋಣೆಗೆ ಬಂದ ರಾಜೇಶನಿಗೆ ಹೆಂಡತಿ ಜ್ಯೋತಿ , ಎನೇನ್ ಮಾತುಕತೆ ಮಾಡಿಕೊಂಡು ಬಂದ್ರಿ, ಮಾವನವರು ನನಗೆ ಬೈಯ್ದಿರಬೇಕಲ್ಲ. ಮೊನ್ನೆಯಷ್ಟೇ ನನ್ನನ್ನು ಕರೆದು ಮಾತಾಡಿಸಿ , ಬುದ್ದಿ ಹೇಳಿ ಕಳುಹಿಸಿದ್ದರು. ನಾನು ಸಹ ಹೊಂದಿಕೊಳ್ಳಲು ಸ್ವಲ್ಪ ಸಮಯ ಕೇಳಿದ್ದೆ. ಆದರೆ ನಿವಿಂದು ಹೋಗಿ ಏನು ಮಾತಾಡಿದಿರೋ ಕಾಣೆ, ಆದರೆ ನನ್ನನ್ನಂತೂ ಕೆಟ್ಟವಳನ್ನಾಗಿ ಮಾಡಿಯೇ ಇರುತ್ತೀರಿ , ಇಬ್ಬರೇ ಇರೋಣ , ನಮ್ಮ ಭವಿಷ್ಯದ ಕುರಿತು ಯೋಚಿಸೋಣ ಎಂದು ಹೇಳಿದ್ದೆ ತಪ್ಪಾಯಿತಾ? ನನ್ನ ಅಪ್ಪನು ಸಹ ಯಾವಾಗಲೂ ಹೊರಗಡೆ ಸ್ವಚ್ಛಂದವಾಗಿ ಹಾರಾಡಲು ಒಮ್ಮೆಯೂ ಬಿಡಲಿಲ್ಲ , ಮದುವೆ ಆದ್ಮೇಲೆ ನಿನ್ನ ಗಂಡನೊಡನೆ ಹಾರಾಡುವಿಯಂತೆ ಎಂದು ಹೇಳುತ್ತಾ ಮದುವೆಯನ್ನೇ ಮಾಡಿಮುಗಿಸಿದರು. ನನ್ನ ಆಸೆ ಇಲ್ಲಿ ಬಂದ ಮೇಲಾದರೂ ಈಡೇರುತ್ತದೆಯೆಂದರೆ ಅದೂ ಆಗಲ್ಲ ಎನ್ನುವಂತೆ ಕಾಣುತ್ತಿದೆ. ನೀವೊ , ನಿಮ್ಮ ಈ ಅವಿಭಕ್ತ ಕುಟುಂಬವೋ , ಅಯ್ಯೋ ಹೆಣ್ಣಾಗಿ ಹುಟ್ಟಿದ್ದಕ್ಕೆ ಎಲ್ಲರ ಪ್ರತಿಯೊಂದಕ್ಕೂ ಒಪ್ಪಿಗೆ ಪಡೆದು ಈ ಹಾಳಾದ ಜೀವನ ಮಾಡ್ಬೇಕು ಎಂದಳು.
ಒಂದು ಮಾತನ್ನೂ ಆಡದೇ ರಾಜೇಶ್ ತೆಪ್ಪಗೆ ಮಲಗಿಕೊಂಡನು. ಜ್ಯೋತಿ ಅದೆಷ್ಟೋ ಹೊತ್ತಿನವರೆಗೆ ವಟಗುಡುತ್ತ ಆಮೇಲೆ ಮಲಗಿದಳು.
ಬೆಳಿಗ್ಗೆ ಎದ್ದು ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ತೊಡಗಿರಲು , ಜ್ಯೋತಿ ಏನು ಆಗೇ ಇಲ್ಲವೇನೋ ಎಂಬಂತೆ ಎದ್ದು ಬಂದು ಅಕ್ಕ ಜಾನಕಿಯ ಜೊತೆಗೆ ಕೆಲಸ ಮಾಡುತ್ತಿದ್ದಳು. ಆದರೆ ಮುಖದಲ್ಲಿ ಸ್ವಲ್ಪ ವ್ಯತ್ಯಾಸ ಗೋಚರಿಸುತ್ತಿತ್ತು. ಆದರೂ ತೋರಿಕೆಯ ಹುಸಿನಗು ಬೀರುತ್ತ ತನ್ನ ಕೆಲಸದಲ್ಲಿ ಮಗ್ನಳಾಗಿದ್ದಳು.
ಸಿದ್ದಪ್ಪನವರು ಮಕ್ಕಳೆಲ್ಲರನ್ನ ಕರೆದು ತಮ್ಮ ಹೆಣ್ಣು ಮಕ್ಕಳಿಬ್ಬರು ಗೀತಾ ಲತಾಳನ್ನು ನೋಡಲು ಹುಡುಗನ ಕಡೆಯವರು ಬರುತ್ತಿದ್ದಾರೆ ಎಂದು ಹೇಳಿದಾಗ ಎಲ್ಲರೂ ಆಶ್ಚರ್ಯ ಪಟ್ಟರು. ಕಾರಣ ಗೀತಾಳಿಗಿಂತ ಲತಾ ತುಂಬಾ ಚಿಕ್ಕವಳು. ಅವಳಿಗೇಕೆ ಇಷ್ಟು ಬೇಗನೆ ಮದುವೆ ಮಾಡುವುದು , ಓದಿಕೊಂಡು , ಆಡಿಕೊಂಡು ಇನ್ನೊಂದು ಸ್ವಲ್ಪ ವರ್ಷ ಇರಲಿ , ಆಮೇಲೆ ಮದುವೆ ಮಾಡೋಣ ಎಂದು ಸಿದ್ದಪ್ಪನವರ ಗಂಡುಮಕ್ಕಳೆಲ್ಲ ಹೇಳಿದರು.
ಅದು ಇನ್ನು ಚಿಕ್ಕದು ಕಣ್ರೀ , ನೀವೇನು ಆಗ್ಲೇ ಮದುವೆ ಮಾಡೋಕೆ ಹೊರಟಿದಿರಿ , ಯಾಕೆ ಈ ನಿರ್ಧಾರ? ಯಾರಾದ್ರೂ ನಿಮ್ಮ ಸ್ನೇಹಿತರಿಗೆ ಮಾತು ಕೊಟ್ಟು ಬಂದಿದಿರೋ ಹೇಗೆ? ಆಡೋ ವಯಸ್ಸಲ್ಲಿ ಮದುವೆ ಬೇಡ ರಿ ಎಂದು ಸಿದ್ದಪ್ಪನವರ ಧರ್ಮಪತ್ನಿ ಹೇಳುತ್ತಿದ್ದರು.
ಆದರೆ , ಸಿದ್ದಪ್ಪನವರು ಮಾತ್ರ ಮದುವೆ ಮಾಡುವ ನಿರ್ಣಯವನ್ನು ಮಾಡಿಬಿಟ್ಟಿದ್ದರು. ಒಮ್ಮೆ ಮಾಡಿದ ನಿರ್ಧಾರವನ್ನು ಬದಲಾಯಿಸಲು ಯಾರಿಂದಾನು ಸಾಧ್ಯ ಇರಲಿಲ್ಲ. ಹೀಗಾಗಿ ಅಣ್ಣಂದಿರು ಹಾಗೂ ಅಮ್ಮ ಏನೆಲ್ಲ ಕಸರತ್ತು ಮಾಡಿದರೂ ಲತಾಳ ಮದುವೆ ನಿಲ್ಲಿಸುವ ಲಕ್ಷಣಗಳು ಕಾಣಲಿಲ್ಲ.
ಆದರೆ ಈ ದಿಢೀರ್ ಮದುವೆ ತಯಾರಿಯ ಹಿಂದಿನ ಉದ್ದೇಶವಾದರೂ ಏನು ಅಂತ ತಿಳಿಯಬೇಕೆ?
ಹಾಗಾದರೆ ಮುಂದಿನ ಭಾಗದಲ್ಲಿ ನೋಡೋಣ ಬನ್ನಿ.
