ತುಂಬಿದ ಸಂಸಾರ.ಭಾಗ 10.
ತುಂಬಿದ ಸಂಸಾರ.ಭಾಗ 10.
ಲತಾ ಗೀತಾಳನ್ನು ಹುಡುಗನ ಕಡೆಯವರು ನೋಡಲಿಕ್ಕೆ ಬರುತ್ತಾರೆ ಎಂದ ಕೂಡಲೇ ಮನೆಯವರೆಲ್ಲರ ವಿರೋಧ ವ್ಯಕ್ತವಾಯಿತು. ಆದರೆ ಸಿದ್ದಪ್ಪನವರು ಆ ಆತುರದ ನಿರ್ಧಾರ ಮಾಡಿದ್ದರ ಹಿಂದಿನ ಕಾರಣ ಮಾತ್ರ ಯಾರಿಗೂ ಗೊತ್ತಿರಲಿಲ್ಲ. ಧರ್ಮಪತ್ನಿಗೂ ಗೊತ್ತಿಲ್ಲ. ಆದರೆ ಒಮ್ಮೆ ನಿರ್ಧಾರ ಮಾಡಿದ ಮೇಲೆ ಬದಲಾಯಿಸುವ ಜಾಯಮಾನ ಅವರದ್ದಾಗಿರಲಿಲ್ಲ. ಹೀಗಾಗಿ ಮನೆಯವರೆಲ್ಲರೂ ಎಷ್ಟೇ ಬೇಡವೆಂದರೂ ತನ್ನಿಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಗಟ್ಟಿ ನಿರ್ಧಾರ ಮಾಡಿಯಾಗಿತ್ತು.
ಕೊನೆಗೆ ಮನೆಯವರೆಲ್ಲರೂ ಚಿಕ್ಕವಳಾದ ಲತಾಳ ಮದುವೆಯನ್ನು ಕೈಬಿಡುವ ಕುರಿತು ಹೇಳಿದರು. ವಯಸ್ಸು ಸಣ್ಣದು , ಇನ್ನು ಏನೂ ಕಲಿಯಲಾರದ ಹುಡುಗಬುದ್ಧಿಯ ವಯಸ್ಸಿನ ಹುಡುಗಿ ಎಂದು ಹೇಳಿದರು. ಆದರೆ ಸಿದ್ದಪ್ಪನವರು ನಾಳೆ ಬೆಳಿಗ್ಗೆ ಹುಡುಗನ ಕಡೆಯವರು ಬರುತ್ತಿದ್ದಾರೆ. ಎಲ್ಲರೂ ಮನೆಯಲ್ಲಿರಿ , ಗೀತಾ ಲತಾಳನ್ನು ರೆಡಿ ಮಾಡಿ ಎಂದು ಗಡಸು ದ್ವನಿಯಲ್ಲಿ ಹೇಳಿ ಹೊರಗಡೆ ಹೊರಟು ಹೋದರು.
ಎಲ್ಲರಿಗೂ ಆಶ್ಚರ್ಯವಾದರೂ ಅಪ್ಪನ ಮನಸ್ಸಲ್ಲಿ ಏನು ಓಡುತ್ತಿದೆಯೋ ಏನೋ ಎಂದು ಯೋಚನೆ ಮಾಡಿದರು. ರಾಜೇಶನಿಗೆ ಬಹುಶಃ ಜ್ಯೋತಿಯ ಈ ಕಿತ್ತಾಟವೇ ಇದಕ್ಕೆಲ್ಲ ಕಾರಣ ಆಗಿರಬಹುದಾ ಎಂದು ಶಂಕರನ ಜೊತೆಗೆ ಚರ್ಚಿಸಿದನು. ಆದರೆ ಯಾವುದಕ್ಕೂ ಉತ್ತರವಿಲ್ಲ.
ಹುಡುಗನ ಕಡೆಯವರು ಬಂದಿದ್ದು ಆಯಿತು. ಅಕ್ಕ ತಂಗಿಯನ್ನು ಒಂದೇ ಮನೆಯವರು ನೋಡಲು ಬಂದಿದ್ದರು. ತಮ್ಮ ಇಬ್ಬರು ಗಂಡು ಮಕ್ಕಳಿಗೆ ಗೀತಾ ಲತಾಳನ್ನು ಮದುವೆ ಮಾಡಿ , ತಮ್ಮ ಮನೆಗೆ ಸೊಸೆಯರನ್ನಾಗಿ ಮಾಡಿಕೊಳ್ಳುವುದಾಗಿ ಸಿದ್ದಪ್ಪನವರ ಆತ್ಮೀಯ ಸ್ನೇಹಿತ ಸೋಮಪ್ಪ ಮಾತು ಕೊಟ್ಟಿದ್ದರು. ಆ ಪ್ರಕಾರ ಈಗ ಹೆಣ್ಣು ನೋಡುವ ಶಾಸ್ತ್ರ ಮಾಡಿದರು. ಆ ಇಬ್ಬರು ಹೆಣ್ಣು ಮಕ್ಕಳು ತಮ್ಮ ಸೊಸೆಯರೆಂದು ತಿಳಿಸಿ ಸಿಹಿ ಹಂಚಿ ಸಂಭ್ರಮ ಪಟ್ಟರು.
ಗೀತಾ ಲತಾಳನ್ನು ಸಿದ್ದಪ್ಪನವರು ಎರಡು ದಿನದ ಮುಂಚೆಯೇ ಮದುವೆಯ ಕುರಿತು , ಅವರನ್ನು ನೋಡಲಿಕ್ಕೆ ಬರುವ ವಿಚಾರವಾಗಿ ತಿಳಿಸಿದ್ದರು. ಹುಡುಗನ ಮನೆಯವರ ಕುರಿತೂ ಹೇಳಿದ್ದರು. ಆಗ ಗೀತಾ ಮತ್ತು ಲತಾ " ಅಪ್ಪಾ , ನಿವೇನೇ ಮಾಡಿದರೂ ಯೋಚಿಸಿ , ನಮ್ಮ ಒಳ್ಳೆಯದಕ್ಕೆ ಮಾಡುತ್ತೀರಿ ಅಂತ ಗೊತ್ತು , ನೀವು ಹೇಳಿದಂತೆ ನಾವು ಮದುವೆಗೆ ಒಪ್ಪಿಕೊಳ್ತೀವಿ " ಎಂದು ಹೇಳಿದ್ದರು. ಆ ಒಂದು ಮಾತಿಂದಲೇ ಸಿದ್ದಪ್ಪನವರು ಮುಂದುವರೆದಿದ್ದರು.
ಹುಡುಗ ಹುಡುಗಿಯರಿಬ್ಬರು ಒಪ್ಪಿಕೊಂಡು , ಎಲ್ಲವೂ ಸರಳವಾಗಿ ಮುಗಿದು , ಮದುವೆ ಮಾತ್ರ ಉಳಿದ ತನ್ನಿಬ್ಬರು ಗಂಡುಮಕ್ಕಳ ಮದುವೆ ಮಾಡುವಾಗ ಈ ಇಬ್ಬರದು ಮದುವೆ ಎಂದು ನಿರ್ಧರಿಸಿದರು.
ಹೀಗೆ ಮನೆಯಲ್ಲಿ , ಊರಿನಲ್ಲಿ ಒಂದು ಗತ್ತಲ್ಲಿ ಯಾವಾಗಲೂ ಹೀಗೆಯೇ ಇರುತ್ತಿದ್ದರು. ಒಂದು ನಿರ್ಧಾರ ತೆಗೆದುಕೊಂಡರು ಎಂದರೆ ಅದಕ್ಕೆ ಒಂದು ಅರ್ಥವಿರುತ್ತಿತ್ತು. ಒಂದು ನಿರ್ಣಯ ಮಾಡಿದ ಮೇಲೆ ಅದನ್ನು ಹಿಂತೆಗೆದುಕೊಳ್ಳುವುದು ಆಗಲಿ , ನಿರ್ಣಯವನ್ನು ಬದಲಿಸುವುದಾಗಲಿ ಇಲ್ಲವೇ ಇಲ್ಲ ಎಂಬ ಧ್ಯೇಯ ಅವರದಾಗಿತ್ತು. ಹಾಗೆಯೇ ಎಷ್ಟೋ ವರ್ಷಗಳಿಂದ ನಡೆದು ಬರುತ್ತಿತ್ತು. ಊರಲ್ಲಿ ಮಾತ್ರ ವಿಶೇಷ ವ್ಯಕ್ತಿಯಾಗಿಯೇ ಗುರುತಿಸಿಕೊಂಡಿದ್ದ ಶೆಟ್ಟರು , ತಮ್ಮ ಮಕ್ಕಳ ಜೀವನದ ವಿಷಯದಲ್ಲೂ ಕೂಡ ಅವರು ತೆಗೆದುಕೊಳ್ಳುವ ನಿರ್ಣಯಗಳು ಸರಿಯಾಗಿಯೇ ಇರುತ್ತವೆ ಎನ್ನುವುದು ಮಕ್ಕಳಿಗೂ ತಿಳಿದಿದ್ದರಿಂದಲೇ ಹೆಣ್ಣು ಮಕ್ಕಳಿಬ್ಬರು ಅಪ್ಪನ ಮಾತಿಗೆ ಬೆಲೆ ಕೊಟ್ಟು ಮದುವೆಗೆ ತಮ್ಮ ಒಪ್ಪಿಗೆಯನ್ನು ಕೊಟ್ಟಿದ್ದರು.
ಶೆಟ್ಟರು ಮುಂದೆ ಏನು ಮಾಡಿದರೆಂದು ಈ ಕತೆಯ ಮುಂದಿನ ಭಾಗದಲ್ಲಿ ನೋಡೋಣ.