ತಾಯಿಯೇ ದೇವರು
ತಾಯಿಯೇ ದೇವರು
"ಬೇಡಾ ರೀ...ಅಂಥಾ ಪಾಪದ ಕೆಲಸ ಮಾಡೋದ ಬೇಡಾ ಇದು ನಮ್ಮ ಕುಡಿ ದಯಮಾಡಿ ಉಳಿಸಿಕೊಳ್ಳೊಣಾ.. ನಿಮ್ಮ ಅಮ್ಮನಿಗೆ ನೀವೆ ತಿಳಿಸಿ ಹೇಳಿ". "ಇಲ್ಲಾ ಸರು... ಅಮ್ಮಾ ಯಾರ ಮಾತು ಕೇಳಲ್ಲಾ, ಸುಮ್ನೆ ವಾದಾ ಮಾಡಿ ಜಗಳಾ ಮಾಡಿ ಮನಸ್ಸು ಕೆಡಸಿಕೊಳ್ಳೊ ಬದಲು ಅವರ ಹೇಳಿದಂಗೆ ಕೇಳೊದು ಒಳ್ಳೆಯದು. ಅಲ್ಲಾ ಸರು ಅಮ್ಮಾ ಹೇಳೊದು ಸರಿಯಾಗೆ ಇದೆ ತಾನೆ ನಮಗೂ ಒಂದು ಮಗು ಗಂಡಾದ್ರೆ ಒಳ್ಳೆಯದಲ್ವಾ, ವಂಶೋದ್ಧಾರಕ ಬಂದಂಗೆ, ಅದು ಮೊದಲ ಮಗು ಗಂಡಾದ್ರೆ ಎಲ್ಲರ ಮುಂದೆ ನಮ್ಮ ಗೌರವಾನು ಹೆಚ್ಚು ಅಲ್ವೆ...?"
ದೇವಸ್ಥಾನದಲ್ಲಿ ಜೋಡಿ ಕುಳಿತು ಮಾತನಾಡುತ್ತಿದ್ದ ಮಾತಿದು.
ಹೆಂಡತಿ ಕಣ್ಣಲ್ಲೀ ನೀರು ತುಂಬಿದೆ.
ಇದನ್ನ ಕೇಳಿಸಿ ಕೊಂಡ ಅಂಬುಜಳಿಗೆ ಮನಸ್ಸು ತುಂಬಾ ಘಾಸಿ ಆಯ್ತು, ಇದು 2019ನೇ ಇಸ್ವಿ ಆದ್ರೂ ಇನ್ನೂ ನಮ್ಮ ಜನರ ಕೀಳು ಮಟ್ಟದ ವಿಚಾರ ಬದಲಾಗಲಿಲ್ಲವೇ..? ಹೆಣ್ಣು ಗರ್ಭ ಧರಿಸಿದ ಮೂರು ತಿಂಗಳಿಗೆ ಭ್ರೂಣದ ಲಿಂಗ ಪತ್ತೆ ಮಾಡೊದು ಹೆಣ್ಣಾದರೆ ಹೊಸಕಿ ಹಾಕೊದು. ಭ್ರೂಣ ಲಿಂಗ ಪತ್ತೆ ಅಪರಾಧವಾದರು ಕೆಲವು ಕಡೆ ದುಡ್ಡಿಗಾಗಿ ಇನ್ನೂ ಅಂತಹ ಕೆಲಸಗಳನ್ನಾ ಮಾಡುತ್ತಾರೆ... ಇನ್ನೂ ಹಳ್ಳಿಗಳಲ್ಲಿ ಗರ್ಭಿಣಿಯ ಹಾವ ಭಾವದ ಮೇಲೆ ಹೆಣ್ಣೊ ಗಂಡೊ ನಿರ್ಧಾರ ಮಾಡಿ ಬಿಡುತ್ತಾರೆ.
ಇಂತಹ ಅನಿಷ್ಟಕ್ಕೆ ತಾನೂ ಒಳಗಾಗಿ ಐದು ಭ್ರೂಣ ಕಳೆದು ಕೊಂಡವಳಲ್ಲವೇ.. ಅಂಬುಜಾಳ ಮನಸ್ಸು ತುಂಬಾ ಹಿಂದೆ ಓಡಿತು.
"ಲೋ ಸುಂದರಾ ಮೊದಲೇರಡು ಹೆಣ್ಣು ಹೆತ್ತವಳೇ ಮತ್ಯಾಕೊ ಮೂರನೇದು ಅದೇ, ಮೊದಲ ಹೋಗಿ ಪರಿಕ್ಷೇ ಮಾಡಿಸಿಕೊಂಡು ಬಾ ಹೆಣ್ಣು ಪಿಳ್ಳೇ ಆಗಿದ್ರೆ ತೆಗೆಸಿ ಬಿಡೊ... ಈ ಸಾರಿ ನನಗೆ ಮೊಮ್ಮಗಾ ಬೇಕು. ಎಲ್ಲಿಂದಾ ಅನಿಷ್ಟ ಗಂಟು ಬಿತ್ತೊ ಬರಿ ಹೆಣ್ಣು ಹೆರೊದೆ ಆಯ್ತು. ಅವು ಮೊದಲೇರಡ ಹುಟ್ಟಿದ್ದ ಪಿಳ್ಳೆಗಳು ಬರಿ ತಿನ್ನೊದೆ ಆಯ್ತು."
ಅತ್ತೆಯ ಮಾತುಗಳಿಗೆ ತತ್ತರಿಸಿ ಹೋದಳು ಅಂಬುಜಾ... ಹೀಗೆ ಪರೀಕ್ಷೆ ಮಾಡಿದರು ಸತತವಾಗಿ ಐದು ಹೆಣ್ಣು ಎಂದಾಗ ಐದು ಭ್ರೂಣವನ್ನ ತೆಗೆಸಿ ಹಾಕಿದ್ದರು. ಮೊದಲ ಹೆಣ್ಣು ಮಕ್ಕಳಿಗೆ ಶಾಲೆಗೆ ಕಳಿಸಲು ಬಿಡುತ್ತಿರಲಿಲ್ಲಾ... ಸರಿಯಾಗಿ ಊಟಕ್ಕೂ ಕೊಡುತ್ತಿರಲಿಲ್ಲಾ. ಐದು ಭ್ರೂಣಗಳನ್ನ ಕಳೆದು ಕೊಂಡು ಅಂಬುಜಾ ಒದ್ದಾಡುತ್ತಿದ್ದಳು. ಮೈಯಲ್ಲಾ ಹಿಂಡಿ ಹಿಪ್ಪೆಯಂತಾಗಿತ್ತು...
ಪ್ರತಿ ಬಾರಿ ಎಷ್ಟೇ ಅಂಗಲಾಚಿದರೂ ಕೇಳುತ್ತಿರಲಿಲ್ಲಾ... ಇತ್ತ ತನ್ನ ಕರುಳು ಕಣ್ಣು ತೆಗೆಯುವ ಮುಂಚೆಯೆ ಕತ್ತರಿಸಿ ತೆಗೆಯುತ್ತಿದ್ದರು ಇನ್ನೂ... ದೈಹಿಕ ನೋವಂತು ಹೇಳ ತೀರದು ಮರದಲ್ಲಿ ಮಾಗಿದ ಹಣ್ಣು ಸುಲಭವಾಗಿ ಬಂದಹಾಗೆ.. ಹಸಿ ಕಾಯಿ ಕಿತ್ತಿ ತೆಗೆಯೊದು ಅಷ್ಟು ಸುಲಭವಲ್ಲಾ.. ಅಂಬುಜಾಳ ಪರಿಸ್ಥಿತಿಯು ಹಾಗೆ ನರಕ ಅನುಭವಿಸುತ್ತಿದ್ದಳು. ಏಳು ಮಕ್ಕಳ ಪೈಕಿ ಎರಡೇ ಅವಳ ಪಾಲಾಗಿದ್ದು. ಎಂಟನೇ ಭ್ರೂಣ ಬೆಳೆಯುತ್ತಿರುವ ಸೂಚನೆ ಅಂಬುಜಳಿಗೆ ಸಿಕ್ಕಾಗಿತ್ತು.
ಅಂಬುಜಾ ಸಾಧು ಸ್ವಭಾವದವಳು, ಎಲ್ಲ ಕಷ್ಟ ಸಹಿಸಿಕೊಂಡು ಎಲ್ಲರ ಬಿರು ನುಡಿ ಅನಿಸಿಕೊಂಡು ಶಾಂತಮೂರ್ತಿಯಂತಿರುತ್ತಿದ್ದಳು. ದಿನಾಲು ಮಕ್ಕಳಿಗೆ ತನಗೆ ಅರ್ಧ ಹೊಟ್ಟೆ ಮಾತ್ರ ಊಟಾ ಆದರೂ ಸುಮ್ಮನೆ ಇರುತ್ತಿದ್ದಳು. "ಎಂಟನೇ ಮಗು ಗಂಡಾಗದಿದ್ದರೇ ನಿನ್ನ ಸಮೆತ ನಿನ್ನ ಎರಡು ಮಕ್ಕಳನ್ನ ಸುಟ್ಟು ಬಿಡ್ತಿವಿ, ನನ್ನ ಮಗನಿಗೆ ಬೇರೆ ಮದುವೆ ಮಾಡ್ತಿನಿ" ಅಂತಾ ಬೆದರಿಕೆ ಹಾಕಿದ್ರೂ.
"ಅತ್ತೆ ನಮ್ಮನ್ನ ಬಿಟ್ಟು ಬಿಡಿ ತವರುಮನೆಗೆ ಹೋಗಿ ಜೀವನ ನಡೆಸ್ತಿವಿ" ಅಂದ್ರು ಕೇಳಿಲ್ಲಾ... "ನಿಮ್ಮ ಜೀವನೊಪಾಯಕ್ಕೆ ಯಾರು ಹಣಾ, ಆಸ್ತಿ ಸುರಿಬೇಕು" ಅಂದ್ರು.
ಇದನ್ನ ಕೇಳಿ ರಾತ್ರಿಯೆಲ್ಲಾ ಯೋಚನೆ ಮಾಡಿ ಬೆಳ್ಳಗಿನ ಜಾವ ನಾಲ್ಕು ಗಂಟೆಗೆ ಮಕ್ಕಳೊಡನೆ ಮನೆ ಬಿಟ್ಟು ದೂರದೂರಿಗೆ ಹೋರಟು ಹೋದಳು. ಎಂಟನೇ ಮಗು ಹೆಣ್ಣು ಮಗುವೆ ಆಗಿತ್ತು ಅವರ ಕೈಯಿಂದ ಈ ಮಗುವನ್ನ ಉಳಿಸಿಕೊಂಡ ಸಾರ್ಥಕ ಖುಷಿ ಅವಳ ಮುಖದಲ್ಲಿತ್ತು. ಸಿಕ್ಕ ಸಿಕ್ಕ ಕೆಲಸ ಮಾಡಿ ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸಿದಳು... ಮೊದಲ ಮಗಳು ಬ್ಯಾಂಕ್ ಉದ್ಯೋಗಿ, ಎರಡನೇಯವಳು ನಗರಸಭೆಯಲ್ಲಿ ದ್ವೀತಿಯ ದರ್ಜೆ ಸಹಾಯಕಿ ಮತ್ತು ಮೂರನೇಯವಳು ಪೋಲಿಸ್ ಹುದ್ದೆಯಲ್ಲಿದ್ದಾಳೆ. ಮೂರು ಜನ ಹೆಣ್ಣು ಮಕ್ಕಳು ಅಮ್ಮನ್ನಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅಂಬುಜಾ ಮೂರು ಮಕ್ಕಳ ಸಹಾಯದಿಂದ ಅನಾಥ ಹೆಣ್ಣು ಮಕ್ಕಳನ್ನ ಸಾಕುತ್ತಿದ್ದಾಳೆ. ಕೆಲವರು ಮದುವೆಗಿಂತಾ ಮುಂಚೆ ಹೆತ್ತವರು ಇನ್ನೂ ಕೆಲವರು ಹೆಣ್ಣೂ ಅಂತಾ ಬಿಸಾಕಿ ಹೋದ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ.
ಸ್ನೇಹಿತರೆ ತಾಯಿ ಮನಸ್ಸು ಎಷ್ಟು ದೊಡ್ಡದು ಅಲ್ವಾ ಮಗು ಹೆಣ್ಣೆ ಆಗ್ಲಿ ಗಂಡೇ ಆಗ್ಲಿ, ಪ್ರೀತಿಯಿಂದ ಬೇದ ಭಾವ ಇಲ್ಲದೆ ಕಾಣುವಳು ತಾಯಿ ಮಾತ್ರ... ಯಾವುದೇ ಅಪೇಕ್ಷೆ ಇಲ್ಲದೆ ಸಂತಾನವನ್ನ ಪ್ರೀತಿಯಿಂದ ಬೆಳೆಸುವಳು ತಾಯಿ ಮಾತ್ರ.
ಅದಕ್ಕೆ ಹೇಳುವುದು ಹೆತ್ತವಳ ಪ್ರೀತಿಗೆ ಅವಳೇ ಸಾಟಿ.
ಇದು ನೈಜವಾದ ಘಟನೆ ಅಂದರೇ ನೀವೆಲ್ಲ ನಂಬಲೇ ಬೇಕು... ಇನ್ನೂಇಂತಹ ಶೋಷಣೆ ಕಡಿಮೆಯಾಗಿಲ್ಲಾ, ಪ್ರತಿ ತಾಯಿಯು ಅಂಬುಜಾಳಂತೆ ಗಟ್ಟಿ ನಿರ್ಧಾರ ಮಾಡಿದರೆ ಮಾತ್ರ ಹೆಣ್ಣು ಭ್ರೂಣ ಹತ್ಯೆ ತಡಿಯಬಹುದು. ತಾಯ್ತನಕ್ಕೆ ಬೆಲೆಯು ಉಳಿಯುವುದು.
