ಸುವ್ವಿ ಸುವ್ವಲಾಲಿ - ೩
ಸುವ್ವಿ ಸುವ್ವಲಾಲಿ - ೩
ಆಸ್ಪತ್ರೆ ಒಳಗೆ ನಡೆದು ಡಾಕ್ಟರ್ ಗುರುದಾಸ್ ಅವರನ್ನ ಕಾಣಲು ಬಂದ. ಆದರೆ ಅವರು ಈ ಸಮಯದಲ್ಲಿ ಕಾರ್ಯ ನಿರತರಾಗಿದ್ದಾರೆ, ಸ್ವಲ್ಪ ಹೊತ್ತು ಕಾಯುವಂತೆ ಅಲ್ಲಿನ ನರ್ಸ್ ಹೇಳಿದರು.
ಅರ್ಜುನ್ ಗೆ ಸಮಾಧಾನ ಆಗುತ್ತಿಲ್ಲ. ಮಗುವಿನ ಅಳು ಅವನ ಸಂಯಮ ಕೆಡಿಸುತ್ತಿದೆ.
"ಚಿನ್ನು ಮರಿ ಇಲ್ಲಿ ನೋಡು ಪಪ್ಪಾ, ಪಪ್ಪಾನ ನೋಡು"
ಅದು-ಇದು ಏನೇನು ಹೇಳುತ್ತಿರುವ. ಆಸ್ಪತ್ರೆಯಲ್ಲಿ ಕಾಣುವ ಎಲ್ಲವನ್ನೂ ತೋರಿಸಿದ. ಆದರೆ ಮಗು ಸಮಾಧಾನ ಆಗುತ್ತಲೇ ಇಲ್ಲ.
"ಸಾಕು ನಿಲ್ಸು"
ಈ ಬಾರಿ ಸ್ವಲ್ಪ ಜೋರಾಗಿ ಹೇಳಿದ. ಮಗು ಬೆಚ್ಚಿತು. ತನ್ನ ದುಡುಕು ಬುದ್ಧಿಗೆ ತಾನೇ ನೊಂದುಕೊಂಡ.
"ಹಲೋ... ಮಿಸ್ಟರ್"
ಹೆಣ್ಣಿನ ಧ್ವನಿ ಕೇಳಿ ಹಿಂತಿರುಗಿ ನೋಡಿದ.
"ನಿಮಗೆ ಸ್ವಲ್ಪವೂ ಕಾಮನ್ ಸೆನ್ಸ್ ಇಲ್ವಾ? ಮಗುನಾ ಹೀಗಾ ರೇಗೋದು?"
ಅಮೃತಾ ಮಗುವನ್ನು ಎತ್ತಿಕೊಳ್ಳಲು ಮುಂದಾದಳು. ಆದರೆ ಮಗು ತಂದೆಯ ಕತ್ತನ್ನು ಬಿಗಿಯಾಗಿ ತಬ್ಬಿಕೊಂಡಿತ್ತು.
"ಚಿನ್ನು, ಕಂದ ಇಲ್ನೋಡು ಇದೇನು... ನೋಡು"
ಆಕೆಯ ಸ್ಟೆಥೋಸ್ಕೋಪ್ ಮಗುವಿನ ಕೈಗೆ ನೀಡಿದಳು. ಮುದ್ದಿನ ಮಾತುಗಳನ್ನು ಆಡುತ್ತಾ ಮಗುವನ್ನ ಎತ್ತಿಕೊಂಡಳು. ಮಗುವಿನ ಮೈ ತುಂಬಾ ಸುಡುತ್ತಿತ್ತು.
"ಇಷ್ಟೊಂದು ಜ್ವರ ಇದೆ ಮಗುಗೆ. ಬುದ್ಧಿ ಇಲ್ವಾ ನಿಮಗೆ, ಮಗು ಜೊತೆ ಇಂತ ಟೈಮ್ ನಲ್ಲಿ ತಾಳ್ಮೆಯಿಂದ ಮಾತಾಡೋದು ಬಿಟ್ಟು, ರೇಗಾಡ್ತಿದೀರಲ್ಲ"
ಮಗುವನ್ನ ಸಮಾಧಾನ ಮಾಡುತ್ತಾ ಅರ್ಜುನ್ ಮೇಲೆ ರೇಗಿದಳು. ಅವಳ ಮಾತುಗಳಿಗೆ ಒಂದು ಪದ ಸಹ ಉತ್ತರ ಕೊಡಲು ಅವನಿಂದ ಆಗಲಿಲ್ಲ.
ಮಗುವಿಗೆ ಚಕ್ಕಪ್ ಮಾಡಿದಳು. ಅರ್ಜುನ್ ಒಂದು ಮಾತಾಡದೇ ಅಲ್ಲೇ ಕುಳಿತ. ಮಗುವನ್ನ ಮುದ್ದಿಸುತ್ತಾ ಮೆಲ್ಲನೆ ಇಂಜೆಕ್ಷನ್ ನೀಡಿದಾಗ, ಮಗುವಿನ ಅಳು ಇನ್ನೂ ಜೋರಾಯಿತು.
"ಕಂದ ಏನು ಆಗಿಲ್ಲ. ಇಷ್ಟೇ... ಇಷ್ಟೇ"
ಏನೇನು ತೋರಿಸಿದಳು. ಅರ್ಜುನ್ ಸದ್ಯಕ್ಕೆ ಏನು ಹೇಳುವುದೋ ಅರಿಯದೆ ನೋಡುತ್ತಾ ನಿಂತು ಬಿಟ್ಟ. ಅದೇಕೋ ಮಗುವನ್ನ ಎತ್ತಿ ಸಮಾಧಾನ ಮಾಡಬೇಕೆಂಬುದು ಅವನಿಗೆ ಮರೆತೇ ಹೋಗಿದೆ.
ಮಗುವನ್ನ ಹೆಗಲಲ್ಲಿ ಮಲಗಿಸಿಕೊಂಡ ಅಮೃತಾ ಲಾಲಿ ಹಾಡಲು ಶುರು ಮಾಡಿದಳು.
ತುಸು ಮೆಲ್ಲ ಬೀಸು ಗಾಳಿಯೇ,
ಈ ಲಾಲಿ ... ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ
ಹೂಂ..ಹುಂ..ಹುಂ..ಹೂಂ
ಆ ಆ ಆ ಆ ಹಾ
ಬಾಳುವೆ ನಾ ಈ ಕಂದನ
ಎಡವಿ ಏಳೊ ದಾರಿಯಲಿ
ಮೀಯುವೆ ನಾ ಈ ಕಂದನ
ತೊದಲ ನುಡಿಯ ಮಳೆಯಲಿ
ನನ್ನ ಎದೆ ತುಂಬುವ .....
ಭಾಗ್ಯ ನೀಡ ಬಂದ ಬಾಲ ದೈವಕೆ
ಹೂಂ..ಹುಂ..ಹುಂ..ಹೂಂ
ಮಗು ನಿದ್ರೆಗೆ ಜಾರಿತು. ಅಷ್ಟೇ ಅಲ್ಲ ಇವಳ ಹಾಡು ಕೇಳುತ್ತಾ ಅರ್ಜುನ್ ಕೂಡ ನಿದ್ರೆಗೆ ಶರಣಾದ.
ಡಾಕ್ಟರ್ ಗುರುದಾಸ್ ಅವರು ಬಂದು ಎಚ್ಚರಿಸಿದಾಗ ಗಾಬರಿಯಿಂದ ಮೇಲೆದ್ದ ಅರ್ಜುನ್, ವಾಸ್ತವ ನೆನಪಾಗಿ ಮಗುವನ್ನ ಹುಡುಕಿದ. ಚಂದನೆಯ ನಿದ್ದೆಯಲ್ಲಿ ಅಮೃತಾ ಮಡಿಲಲ್ಲಿ ಮಲಗಿತ್ತು ಕಂದಮ್ಮ.
"ಅರ್ಜುನ್ ಇದೇನಿದು?"
"ಡಾಕ್ಟರ್ ಅದು... ಪಾಪುಗೆ"
ತಡವರಿಸುತ್ತಾ ಹೇಳಿದ.
"ಈಗ ಜ್ವರ ಕಡಿಮೆ ಆಗಿದೆ"
ಮಗುವನ್ನ ಅರ್ಜುನ್ ಗೆ ನೀಡಿದಳು ಅಮೃತಾ.
"ಸ್ವಲ್ಪ ಹುಷಾರಾಗೀ ನೋಡ್ಕೊಳ್ಳಿ. ಟ್ಯಾಬ್ಲೆಟ್, ಸಿರಪ್ ಟೈಮ್ ಗೆ ಕರೆಕ್ಟ್ ಆಗಿ ಕೊಡಿ. ಟೂ ಡೇಸ್ ಬಿಟ್ಟು ಕರ್ಕೊಂಡು ಬನ್ನಿ"
ಎಂದೇಳಿದಾಗ ಅವಳಿಂದ ಚೀಟಿ ಪಡೆದು ತಲೆ ಆಡಿಸಿದ.
"ನೋಡಿ, ನಾನು ಆಗ್ಲೇ ಸ್ವಲ್ಪ ರೇಗಾಡಿದೆ ಸಾರೀ. ನೀವು ಮಗುನ ರೇಗಿದ್ದು ನನಗೆ ಇಷ್ಟ ಆಗ್ಲಿಲ್ಲ. ಇಂತ ಟೈಮ್ ನಲ್ಲಿ ಮಕ್ಕಳು ತುಂಬಾನೇ ಅಳ್ತಾರೆ. ನಾವು ಆಗ ಹೇಗೆ ಮಕ್ಕಳನ್ನ ಸಮಾಧಾನ ಮಾಡ್ತೀವಿ ಅನ್ನೋದು ಮುಖ್ಯ. ಆ ಕೆಲಸ ತಾಯಿಗೆ ಗೊತ್ತಿದ್ದೆ. ತಾಳ್ಮೆಯಿಂದ ಎಲ್ಲವನ್ನ ನಿಭಾಯಿಸ್ತಾಳೆ ಆಕೆ. ನೆಕ್ಸ್ಟ್ ಬರೋವಾಗ ನಿಮ್ಮ ಮಿಸೆಸ್ನ ಕರ್ಕೊಂಡ್ ಬನ್ನಿ. ಆಗ ಈ ತೊಂದ್ರೆ ನಿಮಗೆ ಇರೋದಿಲ್ಲ"
ಮಗುವಿನ ತಲೆ ಸವರಿದಳು. ಅವಳ ಮಾತಿಗೆ ಹೃದಯದಲ್ಲಿ ಅಡಗಿದ್ದ ಅನಘ ನೆನಪಾದಳು. ದುಃಖ ಉಕ್ಕಿ ಬಂತು. ಏನೊಂದೂ ಮಾತನಾಡದೆ ನಡೆದು ಹೋದ. ಡಾಕ್ಟರ್ ಗುರುದಾಸ್ ಎಲ್ಲವನ್ನ ಗಮನಿಸಿದರು. ಅಮೃತ ಮುಂದಿನ ಕೆಲಸದ ಕಡೆಗೆ ಗಮನ ನೀಡಿದಳು.
*********************
ಮುಂದುವರೆಯುತ್ತದೆ......