Kalpana Nath

Tragedy Inspirational Others

3  

Kalpana Nath

Tragedy Inspirational Others

ಪಾಪದ ಫಲ

ಪಾಪದ ಫಲ

2 mins
10



ನಿನ್ನೆಯದಿನ ಆಟೋ ಡ್ರೈವರ್ ಒಬ್ಬರು ಪ್ರಯಾಣ ಮಾಡೋವಾಗ ಹೇಳಿದ್ದು. ಸುಮಾರು ಒಂದು ವರ್ಷದ ಹಿಂದೆ ಒಬ್ಬ ಹುಡುಗ ಕೈ ಅಡ್ಡ ಹಾಕಿ ಆಟೋ ನಿಲ್ಲಿಸಿದ. ಕೇಳಿದ್ದಕ್ಕೆ ಆಟೋದಲ್ಲಿ ನಮ್ಮ ತಾತ ಕೋರಮಂಗಲದ ಪೊಲೀಸ್ ಕ್ವಾರ್ಟರ್ಸ್ ಗೆ ಹೋಗ್ಬೇಕು ಅವರಿಗೆ ನಡೆಯಕ್ಕೆ ಆಗಲ್ಲ ಸ್ವಲ್ಪ ಸಹಾಯಮಾಡಿ ಅಂತ ಕೇಳಿಕೊಂಡ . ಅದಕ್ಕೆ ಆಗಲಿ ಬಾ ಅಂತ ಆ ಹುಡುಗನನ್ನ ಕೂಡಿಸಿಕೊಂಡು ಸಮೀಪದಲ್ಲೇ ಇದ್ದ ಪೊಲೀಸ್ ಕ್ವಾರ್ಟರ್ಸ್ ಗೆ ಹೋದ್ರೆ , ಮಹಡಿಮೇಲಿಂದ ಯಾರೋ ಒಬ್ಬ ವ್ಯಕ್ತಿ ಮೇಲೆ ಬನ್ನಿ ಅಂತ ಕೂಗ್ತಾ ಇದ್ದದ್ದು ನೋಡಿ ಮೆಟ್ಟಲು ಹತ್ತಿ ಹೋದೆ. ಅಲ್ಲಿ ಎರಡೂ ಕಾಲು ಬಹಳ ದಪ್ಪ ಆಗಿದ್ದು ಅವರು ಒಂದು ಹೆಜ್ಜೆಯೂ ಇಡಕ್ಕಾಗದ ಪರಿಸ್ಥಿತಿ ಕಂಡು ಬೇಜಾರಾಯ್ತು,. ಹಾಗೇ ಅಲ್ಲಿಂದ ಅವರನ್ನ ಕೆಳಗೆ ಇಳಿಸುವುದೂ ಅಷ್ಟು ಸುಲಭವಾಗಿರಲಿಲ್ಲ. ಯಾರೂ ಇವರ ಸಹಾಯಮಾಡಲು ಕೂಡ ಬರಲಿಲ್ಲ. 

ಬಹಳ ಕಷ್ಟ ಪಟ್ಟು ಹೇಗೋ ಒಬ್ಬನೇ ಅವರನ್ನ ಆ ಕಿರಿದಾದ ಮೆಟ್ಟಲುಗಳಿಂದ ಇಳಿಸಿಕೊಂಡು ಬಂದೆ. ಆಟೋವರೆಗೂ ನಡೆಯಲು ಸಹಾ ಅವರಿಗೆ ಶಕ್ತಿ ಇರಲಿಲ್ಲ. ಏನು ಒಬ್ಬರೇ ಮನೇಲಿ ಇರ್ತೀರ ಈ ಹುಡುಗ ಬಿಟ್ಟರೆ ಯಾರೂ ಇಲ್ವಾ ಅಂತ ಕೇಳ್ದೆ ನಾನು ಎಲ್ಲಾ ಕಥೆ ಹೇಳ್ತೀನಿ ಹೋಗ್ತಾ ಹೋಗ್ತಾ ಮಾತಾಡೋಣ ಬನ್ನಿ ನನ್ನ ತಂಗಿ ಮನೆಗೆ ಹೋಗ್ಬೇಕು ಅಲ್ಲೇ ನಾನು ಪೆನ್ಷನ್ ಹಣ ತೊಗೊಂಡು ಎರಡು ದಿನ ಅಲ್ಲೇ ಇದ್ದು ಬರ್ತೀನಿ ಅಂದರು. 

 

ಸ್ವಲ್ಪ ದೂರ ಹೋದಮೇಲೆ ಅವರು ಅಳ್ತಾ ಇದ್ದದ್ದನ್ನ ಗಮನಿಸಿ ಕೇಳ್ದೆ ಏನಾಯ್ತು ಅಂತ . ದೇವರಂತಹ ಮನುಷ್ಯರು ಈ ಭೂಮಿ ಮೇಲೆ ಇದಾರೆ ಅನ್ನೋದಕ್ಕೆ ನೀವೇ ಸಾಕ್ಷಿ ಅಂತ ಮತ್ತೆ ಕಣ್ಣೀರು ಹಾಕಿದ್ರು. ಬೇಡ ಮೊದಲು ನೀವು ಅಳೋದನ್ನ ನಿಲ್ಲಿಸಿ ಅಂತ ಹೇಳಿದ ಮೇಲೆ ಅವರ ಕಥೆ ಹೇಳಕ್ಕೆ ಶುರುಮಾಡಿದ್ರು. ನಾನು ಟೀ ಕುಡಿಬೇಕಿತ್ತು ಗಾಡಿ ಪಕ್ಕಕ್ಕೆ ನಿಲ್ಲಿಸಿ ತಿಂಡಿ ತಿಂತಿರಾ ಅಂತ ಕೇಳಿ ಎರಡು ಇಡ್ಲಿ ತಂದು ಕೊಟ್ಟೆ. ಅವರು ಬೆಳಗ್ಗೆಯಿಂದ ಏನೂ ತಿಂದೇ ಇರಲಿಲ್ಲವಂತೆ. ಪೋಲಿಸ್ ಹೆಡ್ ಕಾನ್ಸ್ಟೇಬಲ್ ಆಗಿದ್ದಾಗ ಎಷ್ಟೋ ಜನನ್ನ ಬೂಟ್ ಕಾಲಲ್ಲಿ ಒದ್ದು, ಇಂದು ಈ ಕಷ್ಟ 

ಅನುಭವಿಸುತ್ತಿದ್ದೇನೆ. ಆಗ ಬಿಸಿ ರಕ್ತ ಮಾಡ ಬಾರದ್ದೆಲ್ಲ ಮಾಡಿದೀನಿ. ಬೇಕಾದಷ್ಟು ಲಂಚ ತೊಗೊಂಡೆ. ಅದಕ್ಕಿಂತಲೂ ಹೆಚ್ಚು ಹಣ ಕಳೆದೆ. ನನಗೆ ಇಬ್ಬರು ಹೆಂಡತಿಯರು. ಸುಮಾರು ವರ್ಷ ನನ್ನ ಎರಡನೇ ಮದುವೆ ನನ್ನ ಮೊದಲ ಹೆಂಡತಿಗೆ ಗೊತ್ತಿರಲಿಲ್ಲ. ಒಂದು ದಿನ ಗೊತ್ತಾಯ್ತು. ಆದರೆ ಅವಳು ದೇವತೆ. ಏನೂ ಗಲಾಟೆ ಮಾಡ್ಲಿಲ್ಲ. ನನಗೆ ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀರಿ ನೀವು ಇನ್ನೊಂದು ಮದುವೆ ಮಾಡ್ಕೊಂಡಿದ್ದಕ್ಕೆ ನನಗೆ ಕೋಪ ಇಲ್ಲ ಆದರೆ ಅವಳಿಗೆ ಮೋಸ ಮಾಡ ಬೇಡಿ. ಅವಳಿಗೆ ಮಕ್ಕಳಿದ್ದರೆ ಅವರನ್ನ ಚೆನ್ನಾಗಿ ಓದಿಸಿ. ನಾವು ಒಟ್ಟಿಗೆ ಇದ್ದರೆ ನಿಮ್ಮಕೆಲಸ ಹೋಗುತ್ತೆ ಅದಕ್ಕೆ ಅವಳು ಎಲ್ಲಿದ್ದಾಳೋ ಅಲ್ಲೇ ಇರಲಿ. ಚೆನ್ನಾಗಿ ಇರಲಿ ಅಂತ ಹೇಳಿದ ದೇವತೆ ಅವಳು. ನನ್ನ ದುರಾದೃಷ್ಟ ಅವಳು ಕ್ಯಾನ್ಸರ್ ಆಗಿ ಒಂದೇ ತಿಂಗಳಲ್ಲಿ ಹೋಗಿಬಿಟ್ಟಳು. ಅವಳಿಗೆ ಒಬ್ಬನೇ ಮಗ. ಎರಡನಯವಳಿಗೆ ಒಬ್ಬ ಮಗಳು ಇದಾಳೆ . ನೀವು ನೋಡಿದ ಹುಡುಗ ನನ್ನ ಮಗಳ ಮಗ. ಮಗಳು ಅಳಿಯ ಇಬ್ಬರೂ ಬೆಳಗ್ಗೆ ಕೆಲಸಕ್ಕೆ ಹೋದರೆ ರಾತ್ರಿ ಬರ್ತಾರೆ. ಈ ಮೊಮ್ಮಗನಿಂದಲೇ ಇವತ್ತು ನಾನು ಬದುಕಿರೋದು ಅಂತ ಹೇಳಿ ಮತ್ತೆ ಕಣ್ಣೀರು ಹಾಕಿದರು. ನನಗೆ ಒಂದು ಸಿನಿಮಾ ಕಥೆ ಕೇಳಿದಂತೆ ಇತ್ತು ಇವರ ಕಥೆ . ಅವರು ಸರ್ವಿಸ್ ನಲ್ಲಿದ್ದಾಗ ಆದ ಇನ್ನೊಂದು ಸನ್ನಿವೇಶ ಹೇಳಿದ್ರು . ಅದೇನೆಂದರೆ ಒಬ್ಬ ಸುಮಾರು ಇಪ್ಪತ್ತೈದು ವರ್ಷದ ಹುಡುಗನ್ನ ಯಾವುದೋ ಕೇಸ್ ನಲ್ಲಿ ಫಿಟ್ ಮಾಡಿ ಲಾಕಪ್ ನಲ್ಲಿ ರಾತ್ರಿ ಇಟ್ಟಿದ್ದರಂತೆ ಇವರದೇ ಅವತ್ತು ಸೆಂಟ್ರಿ ಡ್ಯೂಟಿ. ಮಧ್ಯ ರಾತ್ರಿ ಐದಾರು ಜನಬಂದು ನಾಲ್ಕು ಜನಕ್ಕೆ ಹತ್ತು ಹತ್ತು ಸಾವಿರ ಕೊಟ್ಟು ಅವರೊಂದಿಗೆ ಬೇರೊಬ್ಬನನ್ನ ಕರೆದುಕೊಂಡು ಬಂದು ಲಾಕಪ್ ನಲ್ಲಿದ್ದವನ್ನ ಹೊರಗಡೆ ಕರೆದು ಅವನನ್ನ ಒಳಗೆ ಹಾಕಿಸಿ, ಲಾಕಪ್ ನಲ್ಲಿದ್ದವನನ್ನ ಕರೆದು ಕೊಂಡು ಹೋದರಂತೆ . ಆಮೇಲೆ ಗೊತ್ತಾಯ್ತು ಅವರು ಒಬ್ಬ ಪ್ರಭಾವಿ ರಾಜಕೀಯ ವ್ಯಕ್ತಿಯ ಕಡೆಯವರು ಅಂತ. ಹೀಗೇ ಒಂದಲ್ಲ ಎರಡಲ್ಲ ನನ್ನ ಸರ್ವಿಸ್ ಪೂರ್ತಿ ನ್ಯಾಯ ಅನ್ಯಾಯ ಒಂದೂ ಯೋಚಿಸದೆ ದರ್ಪ ಅಹಂಕಾರದಲ್ಲೇ ಕೆಲಸ ಮಾಡಿದ್ದರ ಫಲ ಇಂದು ಅನುಭವಿಸುತ್ತಿದ್ದೇನೆ ಅಂತ ಅವರ ಕಥೆ ಮುಗಿಸುವ ಹೊತ್ತಿಗೆ ಅವರ ಪೊಲೀಸ್ ಕ್ವಾರ್ಟರ್ಸ್ ಬಂದಿತ್ತು. ಕಷ್ಟ ಪಟ್ಟು ಇಳಿಸಿದೆ . ನೂರು ರುಪಾಯಿ ಹೆಚ್ಚಾಗಿ ಕೊಡಕ್ಕೆ ಬಂದರು ನಾನು ಬೇಡ ಅಂತ ಹೇಳಿ ಬಂದೆ ಅಂತ ಹೇಳಿದರು. ಅಷ್ಟೊತ್ತಿಗೆ ಇಲ್ಲಿ ನನ್ನಮನೆ ಬಂದಿತ್ತು . ಮರೆತು ಬಿಡ್ತೀನಿ ಅಂತ ಮನೆಗೆ ಬಂದು ತಕ್ಷಣ ಬರೆದ ಕಥೆ ಇದು.


Rate this content
Log in

Similar kannada story from Tragedy