ಮಾನಸಿಕ ಖಿನ್ನತೆಯತ್ತ ಪ್ರಯಾಣ.ಭಾಗ2
ಮಾನಸಿಕ ಖಿನ್ನತೆಯತ್ತ ಪ್ರಯಾಣ.ಭಾಗ2
ರಮೇಶ್ , ಲತಾ ದಂಪತಿಗಳು ತಾವು ಅಪ್ಪ ಅಮ್ಮ ಆಗುತ್ತಿರುವುದಕ್ಕೆ ತುಂಬಾ ಖುಷಿ ಪಟ್ಟರು. ಜೀವನದಲ್ಲಿ ಒಂದು ಹೆಣ್ಣಿಗೆ ಈ ಒಂದು ತಾಯ್ತನದ ಸೌಭಾಗ್ಯಕ್ಕಿಂತ ಹೆಚ್ಚಿನ ಸಂತೋಷ ಮತ್ತೆಲ್ಲಿದೆ. ಗಂಡ ಎಷ್ಟೇ ಪ್ರೀತಿ ಮಾಡಿದರೂ ಸಹ ಆ ಹೆಂಡತಿಗೆ ತಾನು ಒಂದು ಮಗುವಿಗೆ ಜನ್ಮ ಕೊಟ್ಟು , ಅಮ್ಮನಾಗಿ , ತಾನು ಮೆಟ್ಟಿದ ಮನೆಯ ವಂಶ ಬೆಳಗಿದರೆ ತನ್ನ ಜನ್ಮ ಸಾರ್ಥಕವಾಯ್ತು ಎನ್ನುವುದೇ ಅವಳ ಆಶಯ . ಇಲ್ಲಿ ಲತಾ ಸಹ ಅದೇ ತರಹದವಳೇ. ತನ್ನ ಗಂಡ ತನ್ನನ್ನು ಅತೀಯಾಗಿ ಪ್ರೀತಿಸುತ್ತಾರೆ , ಹೂವಿನ ತೂಗು ಮಂಚದ ಮೇಲೆ ತೂಗಿ ಒಂದು ಮಗುವಿನಂತೆ ನನ್ನನ್ನು ಕಾಳಜಿ ಮಾಡುತ್ತಾರೆ. ಮಗು ಆಗಿಲ್ಲವೆಂದು ಒಂದು ದಿನವೂ ಏನನ್ನು ಅಂದವರಲ್ಲ. ನನಗೆ ನೀನು ಮಗು , ನಿನಗೆ ನಾನು ಮಗು ಎನ್ನುತ್ತಾ , ನನಗೆ ಬೇಸರವಾಗಿ ನಿದ್ದೆ ಬಾರದೆ ಇದ್ದಾಗ ಹಿತವಾಗಿ ಜೋಗುಳ ಹಾಡಿ ಮಲಗಿಸುತ್ತಿದ್ದ ಒಳ್ಳೆಯ ಹೃದಯವಂತರು. ಅಂತವರಿಗೆ ನಾನು ಒಂದು ಮಗು ಹೆತ್ತು ಕೊಡಲು ಆಗಲಿಲ್ಲ ಎನ್ನುವ ಕೊರಗಿತ್ತು. ಆದರೆ ಮನೆದೇವಿ ಶ್ರೀ ಬನಶಂಕರಿ ಅಮ್ಮ ಆ ಕೊರಗನ್ನು ನಿವಾರಿಸಿ , ವಂಶೋದ್ಧಾರಕನನ್ನು ನನ್ನ ಒಡಲೊಳಗೆ ಕರುಣಿಸಿದ್ದಾಳೆ ಎಂದು ತುಂಬಾ ಖುಷಿಯಾದಳು ಲತಾ.
ಲತಾಳ ಆರೋಗ್ಯದ ವಿಷಯದಲ್ಲಿ ರಮೇಶ ತುಂಬಾ ಜಾಗರೂಕನಾಗಿದ್ದನು. ಒಂದು ಕೆಲಸವನ್ನು ಸಹ ಮಾಡಿಸುತ್ತಿರಲಿಲ್ಲ. ಎಲ್ಲದಕ್ಕೂ ಆಳನ್ನಿಟ್ಟನು. ತವರಿಗೂ ಸಹ ಕಳುಹಿಸಲಿಲ್ಲ. ತಾನೇ ಆಕೆಯ ಊಟ , ಟಿಫನ್ , ಮಾತ್ರೆ ಕೊಡುವುದು , ಒಳ್ಳೆಯ ಪುಸ್ತಕಗಳನ್ನು ಓದಿ ಹೇಳುವುದು ಮಾಡುತ್ತಿದ್ದನು. ಸೀಮಂತವನ್ನು ಸಹ ಅವಳ ಇಚ್ಛೆಯಂತೆ ಮಾಡಿದನು.
ಮನಸ್ಸಿಲ್ಲದ ಮನಸ್ಸಿನಿಂದ ಲತಾಳನ್ನು ಹೆರಿಗೆಗೆಂದು ತವರಿಗೆ ಕಳುಹಿಸಿದನು. ತವರಿಗೆ ಹೋಗಿ ಹದಿನೈದು ದಿನ ಕಳೆಯುವುದರೊಳಗಾಗಿ ಗಂಡು ಮಗುವಿಗೆ ಜನ್ಮವಿತ್ತಳು. ಅಂದು ಆಕೆ ಸಂಭ್ರಮಿಸಿದ ಆ ಸಂತಸದ ಕ್ಷಣಗಳು ಆಕೆಯ ಪಾಲಿಗೆ ಅತ್ಯಮೂಲ್ಯವಾದದ್ದವು. ರಮೇಶನಿಗೆ ಹೆಂಡತಿಯಾಗಿ , ಆ ಮನೆಗೆ ಸೊಸೆಯಾಗಿ ಹೋದವಳು ಇಂದು ತಾಯಿಯಾಗಿ ಬಡ್ತಿ ಹೊಂದಿದ್ದಳು. ಮುದ್ದು ಮಗನ ಮುಖವನ್ನು ಮತ್ತೆ ಮತ್ತೇ ನೋಡಿ ನಲಿದಳು.
ಈ ಆಕೆ ರೀತಿಯಾಗಿ ಹೆರಿಗೆ ಮುಗಿಸಿಕೊಂಡು ಗಂಡನ ಮನೆಗೆ ಬಂದಳು. ಮಗನೊಡನೆ ಆಡುತ್ತಾ , ಮಗನ ಲಾಲನೆ ಪಾಲನೆಯಲ್ಲಿ ದಿನಕಳೆಯುತ್ತಿದ್ದದ್ದೇ ಗೊತ್ತಾಗದಂತೆ ಜಾರಿದ್ದವು. ಅಷ್ಟು ಬೇಗ ಮಗ ಅದ್ವೈತನಿಗೆ ವರುಷ ತುಂಬಿತ್ತು. ಮಗನ ವರುಷದ ಹುಟ್ಟು ಹಬ್ಬದ ಕಾಣಿಕೆಯಾಗಿ ಲತಾ , ರಮೇಶನಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದ್ದಳು. ಅದೇ ಅದ್ವೈತನಿಗೆ ಪುಟ್ಟ ತಂಗಿ ಬರುತ್ತಿದ್ದಾಳೆ ಎಂದು ಹೇಳಿದ್ದಳು.
ಮೊದಲೆಲ್ಲ ಕಾಡಿದ ದೇವರು , ಈಗ ಮೊದಲ ಮಗುವಿಗೆ ವರುಷ ತುಂಬುವುದರೊಳಗೆ ಮತ್ತೊಂದು ಮಗುವನ್ನು ಕರುಣಿಸಿದ್ದ. ಖುಷಿಯ ಸಡಗರದಲ್ಲಿ ಮುಳುಗಿತ್ತು ಇಡೀ ಮನೆ. ಎಲ್ಲರೂ ಅದ್ವೈತ್ ನ ಕಾಲುಗುಣ ತುಂಬಾ ಚೆನ್ನಾಗಿದೆ , ಆತನ ಜನನದ ಸಮಯ ಕೂಡ ಬಹಳ ಒಳ್ಳೆಯದಿದೆ ಎಂದು ಎಲ್ಲರೂ ಹೇಳುತ್ತಿದ್ದರು. ಅದು ನಿಜವೇ ಆಗಿತ್ತು. ತಾ ಬರುವುದಲ್ಲದೇ ಜೊತೆಗೆ ಆಡಲು ತಮ್ಮನೊ ಅಥವಾ ತಂಗಿಯನ್ನೂ ಬರಮಾಡಿಕೊಳ್ಳಲು ಸಜ್ಜಾಗಿದ್ದ.
ಹೀಗೆ ಲತಾ ಎರಡನೆಯ ಬಾರಿಗೆ ಗರ್ಭಿಣಿಯಾದಾಗ ಎಂಟನೆಯ ತಿಂಗಳಿನಲ್ಲಿ ಚೆಕಪ್ ಗೆ ಅಂತ ಆಸ್ಪತ್ರೆಗೆ ಹೋದಾಗ ಸ್ಕ್ಯಾನಿಂಗ್ ಮಾಡಿಸಿ ರಿಪೋರ್ಟ್ ಪಡೆದು ಎಲ್ಲವೂ ಆರೋಗ್ಯವಾಗಿದೆಯೆಂದು ವೈದ್ಯರು ಹೇಳಿಯಾದ ಮೇಲೆ , ಒಂದು ಕಹಿ ಸುದ್ದಿಯನ್ನು ಹೇಳಿದ್ದರು. ಆ ಕಹಿಯಾದ ಸುದ್ದಿ ಗಂಡ ಹೆಂಡತಿಯ ಮನಸ್ಸನ್ನು ಘಾಸಿಗೊಳಿಸಿತ್ತು. ನೆಮ್ಮದಿ , ನಗುವಿನ ಮದ್ಯ ಈ ಒಂದು ಕಹಿ ಸುದ್ದಿ ಮನೆಯ ನಗುವನ್ನು ಹಿಸುಕಿ ಹಾಕಿತ್ತು. ಆದರೂ ರಮೇಶ್, ತನ್ನ ಪ್ರೀತಿಯ ಹೆಂಡತಿ ಲತಾಳಿಗೆ ಧೈರ್ಯ ಹೇಳಿ ಸಮಾಧಾನ ಮಾಡುತ್ತಿದ್ದ. ಏನು ಆಗಲ್ಲ ಎಂದು , ಜೊತೆಗೆ ತಾನಿದ್ದೇನೆ ಎಂದು ಧೈರ್ಯ ಕೊಡುತ್ತಿದ್ದ. ಆದರೂ ಲತಾ ಮಾತ್ರ ತುಂಬಾ ಚಿಂತೆ ಮಾಡುತ್ತಿದ್ದಳು.
ಹಾಗಾದರೆ ಆ ಚಿಂತೆಗೆ ಕಾರಣವಾದ ಆ ಕಹಿ ವಿಷಯ ಯಾವುದು? ಲತಾಳ ನೋವಿಗೆ ರಮೇಶನ ಮಾತುಗಳು ಔಷಧಿಯಾದವಾ?
ಮುಂದೇನಾಯ್ತು ಅಂತ ಭಾಗ ಮೂರರಲ್ಲಿ ನೋಡೋಣ.