ಇದುವೇ ಜೀವನ
ಇದುವೇ ಜೀವನ
ಒಂದು ಮುದುಕಿ ಯಾವಾಗಲೂ ಬೆಂಗಳೂರು ಮಲ್ಲೇಶ್ವರಂ ರೈಲ್ವೆ ಸ್ಟೇಶನ್ ಹತ್ತಿರ ಇಂದಿಗೂ ಸಪ್ಪು ಮಾರುತ್ತಾಳೆ. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ನಡೆದುಕೊಂಡೇ ಹೋಗಿ ಯಶವಂತಪುರದ ಮಾರ್ಕೆಟ್ ನಿಂದ ಸಪ್ಪು ತಂದು. ಆರು ಗಂಟೆಯಿಂದ ಮಧ್ಯಾನ್ಹ ಹನ್ನೆರಡು ಅಥವ ಒಂದು ಗಂಟೆಯವರೆಗೂ ಬಿಸಿಲು ಮಳೆ ಲೆಕ್ಕಿಸದೆ ಒಂದು ಕಟ್ಟು ಸಪ್ಪಿಗೆ ಐವತ್ತು ಪೈಸೆ ಅಥವ ಒಂದು ರೂಪಾಯಿ ಲಾಭಕ್ಕೆ ಮಾರಿ ಅಂದಿನ ಊಟ ತಿಂಡಿಗೆ ಹಣ ಕೂಡಿಸಿಕೊಂಡು ಹೋಗುವುದು ಆ ಹೆಂಗಸಿನ ದಿನಚರಿ.
ಒಂದು ದಿನ ದೊಡ್ಡ ಕಾರಿನಿಂದ ಇಳಿದು ಬಂದ ಒಂದು ಹೆಂಗಸು ನಾಲ್ಕುಕಟ್ಟು ಸಪ್ಪು ತೆಗೆದುಕೊಂಡು ಎಷ್ಟು ಕೊಡಬೇಕೆಂದಾಗ ನಲವತ್ತು ರೂಪಾಯಿ ಕೊಡಿ ಅಂದಳು. ಆ ಹೆಂಗಸು ಆಗಲ್ಲ ಮೂವತ್ತು ಕೊಡ್ತೀನಿ ಅಂತ. ಹೀಗೆ ಚೌಕಾಸಿ ಮಾಡ್ತಾ ತೆಗೆದು ಕೊಳ್ಳೋದು ಇಲ್ಲ ಬಿಟ್ಟು ಹೋಗೋದು ಇಲ್ಲ ಅನ್ನೋ ಹಾಗೆ ಬಹಳ ಹೊತ್ತು ಉರಿಬಿಸಿಲಲ್ಲಿ ವಾದಿಸುತ್ತಾನೆ ಇದ್ದರು. (ಅದಕ್ಕೆ ಮತ್ತೊಂದು ಕಾರಣ ಇನ್ಯಾರಿಗೋ ಆ ಹೆಂಗಸು ಅಲ್ಲಿ ಕಾಯುತ್ತಲಿದ್ದುದು ) ಆ ಸಪ್ಪು ಮಾರೋ ಮುದುಕಿಗೆ ಏನಾಯ್ತೋ ಹಾಗೇ ನಿಂತಲ್ಲೇ ಕಣ್ಣುಗುಡ್ಡೆ ಮೇಲೆಮಾಡಿ ಬೀಳುವುದರಲ್ಲಿ ಇದ್ದಳು. ಅಷ್ಟರಲ್ಲಿ ಅದೇ ಹೆಂಗಸು ಅವಳ ಸೊಂಟಕ್ಕೆ ಕೈ ಹಾಕಿ ನಿಧಾನಕ್ಕೆ ಅಲ್ಲೇ ಕೂಡಿಸಲು ಪ್ರಯತ್ನ ಮಾಡ್ತಿದ್ದಾಗ ಇಬ್ಬರು ಯಾರೋ ಓಡಿಬಂದು ಮಲಗಿಸಿ ಅಲ್ಲೇ ಇದ್ದ ನೀರನ್ನ ಮುಖಕ್ಕೆಚುಮುಕಿಸಿದರು.
ಆಗ ಕಾರಿನಲ್ಲಿ ಬಂದ ಹೆಂಗಸು ನನ್ನದೇ ತಪ್ಪು ಪಾಪ ಅಷ್ಟೊಂದು ಈ ಬಿಸಿಲಲ್ಲಿ ನಿಲ್ಲಿಸಿ ಚೌಕಾಸಿ ಮಾಡಬಾರದಿತ್ತು ಎಂದು ಹೇಳುತ್ತಿದ್ದಾಗ , ನಿಧಾನಕ್ಕೆ ಕಣ್ಣು ತೆರೆದು, ಇವತ್ತು ಬೆಳಗ್ಗೆ ಯಿಂದ ಏನೂ ತಿನ್ನಕ್ಕೆ ಆಗಿಲಪ್ಪ. ಕಾಪಿನೂ ಕುಡ್ದಿಲ್ಲ. ಇನ್ನೂ ಅಸಲಲ್ಲೇ ಇದೀನಿ ಲಾಭದಲ್ಲಿ ತಾನೇ ತಿಂಡಿ ತಿನ್ನಬೇಕು ಅಂದಳು ಆ ಮುದುಕಿ. ಆ ಹೆಂಗಸು ಓಡಿಹೋಗಿ ಅಲ್ಲೇ ಪಕ್ಕದಲ್ಲೇ ಇದ್ದ ಹೋಟೆಲ್ ನಿಂದ ಇಡ್ಲಿ ಕಾಫಿ ತಂದು ಕೊಟ್ಟು.ಭುಜದಮೇಲೆ ಕೈಹಾಕಿ ಪಕ್ಕದಲ್ಲೇ ಕೂತರು. ಮುದುಕಿ ಇಪ್ಪತ್ತು ರೂಪಾಯಿ ಕೊಡಕ್ಕೆ ಹೋದರೆ ತೆಗೆದು ಕೊಳ್ಳದೆ ತಾನೇ ನೂರು ರೂಪಾಯಿ ಕೊಟ್ಟು ಆರೋಗ್ಯ ನೋಡ್ಕೊಳಮ್ಮ. ಅಂತ ಕಾರು ಹತ್ತಿ ಹೋದರು.ಅಲ್ಲಿದ್ದವರಿಗೆ ಏನೂ ಹೇಳಬೇಕೋ ತಿಳಿದಾಯ್ತು. ಅಂದಿನಿಂದ ನಾನು ತರಕಾರಿ, ಹೂವು ಮಾರುವವರ ಹತ್ತಿರ ಎಂದೂ ಚೌಕಾಸಿ ಮಾಡಲ್ಲ. ಮಾಲ್ ಗೆ ಹೋಗಿ ಕಂಡದ್ದೆಲ್ಲ trolly ಯಲ್ಲಿ ತುಂಬಿಸಿ ಕಾರ್ಡ್ ಉಜ್ಜಿ ಹೊರ ಬರೋ ನಾವು ಐವತ್ತು ಪೈಸೆ ಅಥವ ಒಂದು ರೂಪಾಯಿ ಲಾಭಕ್ಕೆ ರಸ್ತೆ ಪಕ್ಕ ಕೂತು ಮಾರುವವರ ಬಳಿ ಒಂದು ರೂಪಾಯಿಗೂ ಚೌಕಾಸಿ ಮಾಡೋದು ಎಷ್ಟು ಸರಿ !.ನೀವು ಯೋಚಿಸಿ.