ಹಣ ನೆಮ್ಮದಿಯನ್ನು ಕೊಡುವುದೇ?
ಹಣ ನೆಮ್ಮದಿಯನ್ನು ಕೊಡುವುದೇ?
ನಾನ್ ಸ್ಟಾಪ್ ನವೆಂಬರ್ ಎಡಿಶನ್. ಆರಂಭಿಕ ಹಂತ- ಹಣ
ಹಣ ಹಣ ಎಂದು ಅತೀಯಾಗಿ ಹಣದ ಮೇಲೆ ಅವಲಂಭಿತರಾಗಿ ಇದ್ದರೆ ಒಮ್ಮೆ ಅದೇ ನಮಗೆ ಮುಳುವಾದರೂ ಆಗಬಹುದು ಎನ್ನುವುದು ಅಕ್ಷರಶಃ ಸತ್ಯಮಾತು. ಹಣ ಬೇಕು ನಿಜ. ಆದರೆ ಹಣ ನೆಮ್ಮದಿಯನ್ನು ಕೊಡುವುದೇ?
ಮನೆ ಕಟ್ಟಿಸಿ , ಸಾಧಾರಣವಾಗಿ ಗೃಹ ಪ್ರವೇಶ ಮಾಡಿ , ತನ್ನ ಅಪ್ಪ ಅಮ್ಮನೊಂದಿಗೆ , ಮುದ್ದಿನ ಮಡದಿ ಕಾವ್ಯಾಳೊಂದಿಗೆ ಹೊಸ ಮನೆಯಲ್ಲಿ ಹೊಸ ಬದುಕಿನ ಆಸೆ ಕನಸುಗಳನ್ನು ಹೊತ್ತು ಸೂರಜ್ ಹೊಸ ಮನೆಯ ಪ್ರವೇಶ ಮಾಡಿದ್ದ....
ಯಾರಾದ್ರೂ ಮನೆಯ ಪ್ಲಾನ್ ಹೇಳ್ತಾರೆ ಅಂತಾ ನಮ್ಮ ಬಡ್ಜೆಟ್ ಮೀರಿ ಮನೆ ಕಟ್ಟಲು ಶುರು ಮಾಡಬಾರದು, ನಮ್ಮಂತ ಮಿಡಲ್ ಕ್ಲಾಸ್ ಜನರಿಗೆ ಇಂತಹ ಸಿಟಿಯಲ್ಲಿ ಈ ತರ ಮನೆ ಕಟ್ಟುವುದು ಸುಲಭವಲ್ಲ. ತಲೆಯಲ್ಲಿ ಉಳಿದಿರುವ ಅಲ್ಪ ಸ್ವಲ್ಪ ಕೂದಲು ಸಹ ಕಿತ್ತು ಕೈಗೆ ಬರುವ ಪರಿಸ್ಥಿತಿ ನಮ್ಮದಾಗಿರುತ್ತೆ ಅಂತ ಆಪ್ತರಿಗೆ ಡಬಲ್ ಬೆಡ್ ರೂಮ್ ಮನೆ ಕಟ್ಟಿ ಸುಸ್ತಾಗಿ ತನ್ನ ಶ್ರಮದ ಕತೆ ಹೇಳುತ್ತಿರುವ ಈ ಸೂರಜ್ ವೃತ್ತಿಯಲ್ಲಿ ಇಂಜಿನಿಯರ್. ಸಂಬಳ ಪರವಾಗಿಲ್ಲ ತಕ್ಕ ಮಟ್ಟಿಗೆ ಇತ್ತು.ಆದರೆ ಬೆನ್ನಿಗೆ ಅಪ್ಪನ ಆಸ್ತಿ ಹೇಳುವಷ್ಟು ಇರಲಿಲ್ಲ. ಆದ್ದರಿಂದ ತನ್ನ ದುಡಿಮೆಯ ನಂಬಿ ಇರುವ ಕುಟುಂಬ ಸೂರಜನದ್ದು.
ಹೆಂಡತಿ ಕಾವ್ಯ ಕೂಡ ಎಂ.ಬಿ.ಎ ಪದವೀಧರೆ . ಅವಳೂ ಕೆಲಸಕ್ಕೆ ಪ್ರೈವೇಟ್ ಕಂಪನಿಯಲ್ಲಿ ಹೋಗುತ್ತಿದ್ದಳು.. ಇಬ್ಬರದೂ ಒಂದೇ ಕನಸು ಚೆಂದದ ತಮ್ಮದೊಂದು ಸೂರು ಕಟ್ಟಿಕೊಳ್ಳುವುದು. ಕಾಸಿಗೆ ಕಾಸು ಕೂಡಿಟ್ಟು , ಇಬ್ಬರೂ ಹಲ್ಲು ಕಚ್ಚಿ ದುಡಿಯುತ್ತಿದ್ದರು. ಅದರ ಪ್ರತಿಫಲವಾಗಿ ಒಂದು ಸುಂದರವಾದ ಮನೆಯಂತೂ ಸಿದ್ಧವಾಗಿತ್ತು. ತಮ್ಮ ಊಹೆಗೂ ಮೀರಿ ಖರ್ಚಾಗಿ , ಮೊದಲಿನ ಮನೆ ಪ್ಲಾನ್ ಚೇಂಜ್ ಆಗಿ ಕಟ್ಟುತ್ತ ಕಟ್ಟುತ್ತ , ಹೊಸ ರೂಪು ರೇಷೆ ಪಡೆಯುತ್ತಾ ಕೊನೆಗೆ ಸುಂದರವಾದ ಸೂರೊಂದು ಸಿದ್ಧವಾಗಿತ್ತು. ಆ ಕನಸಿನ ಸೂರು ನನಸಾಗುವುದರಲ್ಲಿ ಕೂಡಿಟ್ಟ ಹಣ ನೀರಿನಂತೆ ಖರ್ಚಾಗಿ, ಬಡ್ಡಿ ಸಾಲದ ಬಾಲ ಬೆಳೆದಿತ್ತು.
ಇಬ್ಬರೂ ದುಡಿಯುತ್ತೇವೆ, ಸಾಲ ತೀರಿಸಬಹುದೆಂದು ಮಾಡಿದ ವಿಚಾರ ಮುಂದೆ ಆರು ತಿಂಗಳಲ್ಲಿ ತಲೆ ಬುಡ ಕೆಳಗೆ ಮೇಲಾಗುತ್ತದೆ ಅಂತ ಅವರಿಬ್ಬರು ಕನಸೂ ಕಂಡಿರಲಿಲ್ಲ..
ಹೀಗೆ ಸೂರಜ್-ಕಾವ್ಯ ಬೆಳಗಿಂದ ರಾತ್ರಿಯ ತನಕ ಕೆಲಸ ಮಾಡುತ್ತಾ , ತಿಂಗಳ ಅಂತ್ಯಕ್ಕೆ ಆದಷ್ಟು ಬಡ್ಡಿ ಕಟ್ಟುತ್ತ ಇರಬೇಕಾದರೆ , ದಿಢೀರನೆ ಪ್ರಪಂಚಾದ್ಯಂತ ಹೊಸ ರೋಗವೊಂದು ತಲೆಯೆತ್ತಿ, ನೆಮ್ಮದಿಯ ಜೀವನಕ್ಕೆ ಎಳ್ಳು ನೀರು ಬಿಡಿಸಲು ಹೊಂಚು ಹಾಕಿ ಕಾದು ಕುಳಿತಿತ್ತು. ಈ ರೋಗ ಆರಂಭದಲ್ಲಿ ಅದೇನು ಬಿಡು ದೊಡ್ಡದಲ್ಲ ಅನ್ನುವಂತೆ ಇತ್ತಾದರೂ ಆಮೇಲೆ ತನ್ನ ವರಸೆಯನ್ನು ತೋರಿಸಲು ಶುರು ಮಾಡಿತು. ಈ ಮದ್ಯ ಮಿಡಲ್ ಕ್ಲಾಸ್ ಜನರಿಗೆ ಹೆಚ್ಚಾಗಿ ಹೊಡೆತ ಕೊಟ್ಟಿದ್ದಂತೂ ನಿಜ ಈ ಹೊಸ ರೋಗ ಕೊರೊನಾ ಎಂಬ ಮಹಾ ಮಾರಿ ಯಾರನ್ನು ಬಿಡದೆ ಕಾಡಿದ, ಸದ್ಯ ಕಾಡುತ್ತಿರುವ ಈ ರೋಗಕ್ಕೆ ಸೂರಜ್ ಫ್ಯಾಮಿಲಿ ಹೊರತಾಗಿರಲಿಲ್ಲ. ಕಾರಣ ಗರ್ಭಿಣಿ ಆದ ಕಾರಣಕ್ಕೆ ಲಕ್ಡೌನ್ಗಿಂತ ಸ್ವಲ್ಪ ಮುಂಚೆ ಕೆಲಸ ಬಿಟ್ಟ ಕಾವ್ಯ ಮನೆಯಲ್ಲಿ ಖಾಲಿಯಿದ್ದಳು. ಸಂಬಳವಿಲ್ಲದೆ ಕೆಲಸವಿಲ್ಲದೆ ತುಸು ಬೇಜಾರಲ್ಲೇ ಇದ್ದಳು. ಅತ್ತೆ ಮಾವ ಮೊದಲೊಂದು ಅಬಾರ್ಶನ್ ಆಗಿದ್ದಕ್ಕೆ ಈ ಸಲ ರಿಸ್ಕ್ ಬೇಡ ಅಂತ ಕೆಲಸ ಬಿಡಿಸಿದ್ದರು.
ಈಗಂತೂ ಎಲ್ಲ ಹೊರೆ ಸೂರಜ್ ಮೇಲೆಯೇ ಬಿದ್ದಿತ್ತು. ಅಷ್ಟರಲ್ಲಿ ಕೆಲವೊಂದು ಕಂಪನಿಗಳು ಬಂದಾಗಿ, ಕೆಲವೊಂದು ವರ್ಕ್ ಫ್ರಮ್ ಹೋಮ್ ಅಂತ ಅರ್ಧ ಸಂಬಳ ಕೊಟ್ಟು ಕೆಲಸ ಮಾಡಿಸಿಕೊಳ್ಳುವತ್ತ ಸಿದ್ಧವಾಗಿದ್ದವು. ಆಗ ಸೂರಜ್ ಕೆಲಸ ಮಾಡುತ್ತಿದ್ದ ಕಂಪನಿ ಸಹ ಅರ್ಧ ಸಂಬಳ ಕೊಟ್ಟು ಮನೆಯಿಂದ ಕೆಲಸ ಮಾಡಿ ಎಂದು ಹೇಳಿತ್ತು.
ಅರ್ಧ ಸಂಬಳ, ಮನೆ ನಿರ್ವಹಣೆ, ಸಾಲದ ಚಿಂತೆ ಜೊತೆಗೆ ಗರ್ಭಿಣಿ ಹೆಂಡತಿ ಬೇರೆ, ಏನು ಮಾಡುವುದೆಂದೂ ಯೋಚಿಸುತ್ತಾ ಸೂರಜ್ ಭವಿಷ್ಯದ ಕುರಿತು ಯೋಚಿಸುತ್ತಾ ಇರಲು ಮನೆಯ ಕಾಲಿಂಗ್ ಬೆಲ್ ಆಗಿದ್ದು ಕೇಳಿ ಹೊರಗೆ ಬಂದು ನೋಡಿದರೆ ಅದೇ ಸಾಲ ಕೊಟ್ಟ ಮಹಾನುಭಾವರು, ಒಂದನೇ ತಾರೀಖಿಗೆ ತಟ್ಟಂತೆ ಹಾಜರಾಗಿ ಬಡ್ಡಿ ವಸೂಲಿ ಮಾಡಿಕೊಂಡು ಹೋಗುತ್ತಿದ್ದರು. ಆದರೀಗ ಸೂರಜ್ ಇವತ್ತೇನೋ ಹೇಳಿ ಅವರನ್ನು ಸಾಗಿ ಹಾಕಿದ, ಮತ್ತೆ ಮುಂದಿನ ವಾರ ಅವರು ಬಂದೆ ಬರುತ್ತಾರಲ್ಲವೇ ಆಗೇನು ಮಾಡುವುದು, ಸಾಲ್ ಮಾಡಿದವರ ಬದುಕು ಮುಗಿಯದ ಕತೆ ಎನ್ನುತ್ತಾ ಮುಂದಿನ ದಾರಿ ಯಾವುದು ಎಂದು ಚಿಂತಿಸುತ್ತಾ ಕುಳಿತನು..
ಮತ್ತೆ ಮುಂದಿನವಾರ ಕಾಲಿಂಗ್ ಬೆಲ್ ಆಯಿತು, ಎದ್ದು ಹೋಗಿ ನೋಡಿದರೆ ಅದೇ ಸಾಲ ಕೊಟ್ಟ ಮಹಾನುಭಾವರು..
ಮುಗಿಯದ ಕತೆ ಅಂದರೆ ಇದೆ ಅನ್ಸುತ್ತೆ ಅಲ್ವಾ..?