ಗಂಡು ಮಗು ಎನ್ನುವ ಮೋಹ
ಗಂಡು ಮಗು ಎನ್ನುವ ಮೋಹ
ಮಹೇಶ ಮತ್ತು ಮಹಿಮಾ ಪಿಯುಸಿಯಿಂದ ಒಂದೇ ಕಾಲೇಜಿನಲ್ಲಿ ಓದಿದವರು. ಆತ್ಮೀಯ ಸ್ನೇಹಿತರು, ಸ್ನೇಹ ಪ್ರೇಮವಾಗಿ ತಿರುಗಿ ಮೂರುನಾಲ್ಕೂ ವರ್ಷಗಳೇ ಆಗಿತ್ತು. ಕಷ್ಟಪಟ್ಟು ಮನೆಯವರೆಲ್ಲರನ್ನು ಒಪ್ಪಿಸಿ ಹಿರಿಯರ ಸಮ್ಮುಖದಲ್ಲಿ ಮದುವೆಯಾದರು.
ಮದು,ವೆಯಾಗಿ ಎರಡು ವರ್ಷಗಳಾದವು ಇನ್ನೂ ಮಕ್ಕಳಾಗಿಲ್ಲಾ ನಿಮ್ಮ ಪ್ಲಾನ್ ಎಲ್ಲಾ ಪಕ್ಕಕ್ಕೆ ಇಡಿ ಎಂದು ಅತ್ತೆಯವರು ಆಗಾಗ ಹೇಳುತ್ತಿದ್ದರು. ನಾವು ಗಟ್ಟಿಯಾಗಿ ಇರುವಾಗಲೇ ಒಂದು ಗಂಡು ಮಗು ಹೆತ್ತು ಕೊಡಮ್ಮಾ ಸಾಕು ಎಂದು ಹೇಳುತ್ತಿದ್ದರು. ಅವರು ಹೇಳುವ ಹಾಗೆ ಮಹಿಮಾ ಕೆಲವೇ ತಿಂಗಳಲ್ಲಿ ತಾಯಿಯಾದಳು ಮನೆಯಲ್ಲಿ ಎಲ್ಲರಿಗೂ ಸಂತೋಷ, ಸಡಗರ ತುಂಬಿತ್ತು.
ಮಡಿಲು ತುಂಬವ ಕಾರ್ಯವನ್ನು ಅವರು ಸುಂದರವಾಗಿ ಮಾಡಿದ್ದರು. ಊರಿಗೆ ಶ್ರೀಮಂತರಾಗಿದ್ದ ಅವರು ಗಂಡು ಮಗುವೇ ಬೇಕು, ನಮ್ಮ ಆಸ್ತಿ ಅಂತಸ್ತು ನೋಡಿಕೊಂಡು ಹೋಗಲು ಒಬ್ಬ ಯುವರಾಜ ಬೇಕೇಬೇಕು ಎನ್ನುವ ಮಾತುಗಳು ಅವಳಿಗೆ ಕಿರಿ ಕಿರಿ ಅನಿಸುತ್ತಿತ್ತು.
ಅವಳನ್ನು ತವರು ಮನೆಗೆ ಬಾಣಂತನಕ್ಕೆ ಕಳುಹಿಸದರು
9 ತಿಂಗಳು ಮುಗಿದು ಅವಳಿಗೆ ಸಹಜ ಹೆರಿಗೆಯಾಯಿತು,
ಶುಕ್ರವಾರ ಇವತ್ತು, ಮಹಾಲಕ್ಷಿ ಜನಿಸಿದಳು ನಿಮಗೆ ನೋಡಿ ಅಂತ ವೈದ್ಯರು ಹೇಳಿದಾಗ ಹೆತ್ತವಳಿಗೆ ಮೊದಲ ಹೆರಿಗೆಯ ಖುಷಿ ಒಂದು ಕಡೆಯಾದರೆ, ಗಂಡನ ಮನೆಯಲ್ಲಿ ಗಂಡು ಮಗು ಹುಟ್ಟಿಲ್ಲಾ ಅಂತ ಏನು ಅಂದುಕೊಳ್ಳುವರೋ ಅಂತ ಮನದಲ್ಲಿ ಚಿಂತೆ ಇನ್ನೊಂದು ಕಡೆ. ಅವಳ ಅಪ್ಪಾ ಅಮ್ಮಾ ಇಡೀ ಆಸ್ಪತ್ರೆಗೆ ಸಿಹಿ ಹಂಚಿ ಸಂಭ್ರಮ ಪಟ್ಟರು.
ಗಂಡನು ಕೂಡ ಮಹಿಮಾಗೆ 'ನೀನು, ಮಗು ಆರೋಗ್ಯದಿಂದ ಇರಿ. ನಾನು ಇದೀನಿ ನಿಮ್ಮ ಜೊತೆ' ಅಂತ ಹೇಳಿ ಸಮಾಧಾನ ಮಾಡಿದರು. ಅತ್ತೆ ಒಳಗೆ ಗಂಡು ಬೇಕು ಎನ್ನುವ ಆಸೆ ಇದ್ದರು ಮೇಲ್ನೋಟಕ್ಕೆ ಸಣ್ಣ ಮುಗುಳುನಗೆ ಬೀರಿ ಮಗುಗೆ ಚಿನ್ನದ ಉಂಗುರ ಹಾಕಿ ಮಾತಾಡಿಸಿ, ಇನ್ನೊಂದು ಗಂಡು ಮಗು ಆಗಲೇಬೇಕು ಅಂತ ಒಂದು ಮಾತನ್ನು ಅವರು ಹೇಳಿಯೇ ಹೊರಟಿದ್ದರು. ಮಗುವಿನ ಜೊತೆ ಅವಳು ಒಂದು ವರ್ಷ ತವರ ಮನೆಯಲ್ಲಿ ಇದ್ದು ಗಂಡನ ಮನೆಗೆ ಹೋದಳು.
ಒಂದರ ಮೇಲೊಂದು ಅವಳು ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಎರಡನೇ ಮಗುವು ತೂಕ ಜಾಸ್ತಿ ಇದ್ದು ತಲೆಮೇಲೆ ಕಾಲು ಕೆಳಗೆ ಇದೆ ಅಂತಾ ಸಿಜೆರಿಯನ್ ಮಾಡಿ ಅವಳಿಗೆ ಆಪರೇಷನ್ ಮಾಡಿ ಕಳುಹಿಸಿದರು. ಅತ್ತೆಗೆ ಎರಡೇ ಮಕ್ಕಳಿಗೆ ಯಾಕೆ ನೀನು ಆಪರೇಷನ್ ಮಾಡಿಸಿಕೊಂಡೆ ಅಂತ ಬಯ್ಯುವುದರ ಮೂಲಕ ಎರಡನೇ ಮಗುವನು ನೋಡಿ ಹೋಗಿದ್ದರು.
ಮಹಿಮಾಗೆ ಸ್ವಲ್ಪಇದು ಚಿಕ್ಕ ವಿಷಯ ಎನಿಸಿ ಹಿರಿಯರು ಬೈದು ಆಮೇಲೆ ಸುಮ್ಮನಾಗಿ ಬಿಡ್ತಾರೆ ಅಂತ ಸುಮ್ಮನಾಗಿದ್ದಳು.
ಅವರು ಐದು ವರ್ಷದ ನಂತರ ನಿನಗೆ ಎರಡನೇ ಹೆರಿಗೆಯ ನೋವು ಎಲ್ಲವೂ ಹೋಗಿದ್ಯಾ ಮಹಿಮಾ ಅಂತಾ ಅತ್ತೆ ಕೇಳಿದರು. ಹಾ ಅತ್ತೆ ತುಂಬಾ ಆರಾಮಾಗಿ ಇದ್ದೇನೆ. ಹಾಗಿದ್ದರೆ ನಾನು ಒಬ್ಬರ ಹತ್ತಿರ ನಿನ್ನನ್ನು ಕರೆದುಕೊಂಡು ಹೋಗುವೆ ಬರುತ್ತೀಯಾ ಅಂತಾ ಕೇಳಿದರು. ಮಹಿಮಾ ಒಪ್ಪಿದಳು. ಅವರು ತಮಗೆ ಗೊತ್ತಿರುವ ಒಬ್ಬ ಡಾಕ್ಟರ ಹತ್ರ ಹೋಗಿ ಮತ್ತೊಮ್ಮೆ ರೀ-ಆಪರೇಷನ್ ಮಾಡಿಸಿಕೊಳ್ಳಿ. ಅದೇನು ಚಿಕ್ಕ ಆಪರೇಷನ್ ಅಂತಾ ಹೇಳಿದರು ಗಂಡನಿಗೂ ಕೂಡಾ ಗಂಡು ಮಗು ಬೇಕು ಎನ್ನುವ ಹಂಬಲ ಶುರುವಾಗಿತ್ತು ಒಪ್ಪಿಕೋ ಮಹಿಮಾ ನಾನು ಇದೀನಿ ಅಂತ ಗಂಡ ಹೇಳಿದ. ತವರ ಮನೆಗೆ ಸತ್ಯ ಹೇಳದೇ 'ನಾನು ಮತ್ತೆ ಮಹೇಶ ಕೆಲಸದ ಮೇಲೆ ಬೇರೇಕಡೆ ಹೊರಟಿದ್ದೇವೆ ನಾನು ಫೋನ್ ಮಾಡುತ್ತಾ ಇರುತ್ತೇನೆ ನೀವು ಇಲ್ಲಿ ಬರಬೇಡಿ' ಅಂತ
ತನ್ನ ಹೆತ್ತವರಿಗೆ ಮಹಿಮಾ ಹೇಳಿದಳು. ಗಂಡನ ಮನೆಯವರು ಹೇಳುವ ಹಾಗೆ ಕೇಳುವ ಗೊಂಬೆಯಾದಳು ಮಹಿಮಾ. ಅಷ್ಟೆಲ್ಲಾ ಆದಮೇಲೆ ಅವಳು ಮಾನಸಿಕವಾಗಿ ಕುಗ್ಗಿದ್ದಳು ದೈಹಿಕವಾಗಿ ಸತ್ತಿದ್ದಳು.
ಇದರ ಮಧ್ಯೆ ಅವಳ ಮೂರನೇ ಮಗುವಿನ ಆಗಮನ ಆಯ್ತು.
ಅವರ ಅಂದುಕೊಂಡ ಹಾಗೆ ಗಂಡು ಮಗು ಆಗಿರಲಿಲ್ಲಾ ಹೆಣ್ಣು ಮಗುವಾಯ್ತು. ಆ ಮಗುವನ್ನು ನೋಡಿ ಅವಳು ಒಂದೇ ಸಮ ಜೋರಾಗಿ ಅಳಲಾರಂಭಿಸಿದಳು. ಗಂಡನಿಗೂ ಅವಳ ಮೇಲಿನ ವ್ಯಾಮೋಹ ಕಡಿಮೆ ಆಗುತ್ತಾ ಬಂದಿತು.
ಗಂಡನ ಬಗ್ಗೆ ಇದ್ದ ಗೌರವ ಅವಳಿಗೂ ಕೊಂಚ ಕಡಿಮೆ ಆಯಿತು ಜಗಳಗಳ ಮಧ್ಯೆ ಅವರು ಜೀವನ ನಡೆಸಲು ಶುರು ಮಾಡಿದರು.
ಮೂರು ಮಕ್ಕಳಿಗೆ ಸಾಕಾಗುವಷ್ಟು ಆಸ್ತಿ-ಅಂತಸ್ತು ಇದ್ದರೂ ಅವಳ ಪಾಲಿಗೆ ಅದುವೇ ಮುಳುವಾಗಿ ಕಾಡತೊಡಗಿತು.
ಅದೇ ಚಿಂತೆಯಲ್ಲಿ ಅವಳು ಕೊರಗುತ ಸಾವಿನ ಮನೆ ಬಾಗಿಲು ತಟ್ಟಿದಳು. ಗಂಡು ಮಗು ಗಂಡು ಮಗು ಎನ್ನುವುದರ ಮೂಲಕ ಒಬ್ಬ ತಾಯಿಯನ್ನು, ಒಬ್ಬ ಹೆಂಡತಿಯನ್ನು, ಒಬ್ಬ ಮಗಳನ್ನು ಕಳೆದುಕೊಳ್ಳುವ ಹಾಗೆ ಮಾಡಿದ ಆ ಹೆಣ್ಣಿನ ಶಾಪ ಆ ಮನೆಗೆ ತಟ್ಟದೇ ಬಿಡುತ್ತಾ? ಮಹೇಶಗೆ ಆಗ ಅಮ್ಮನ ಬಗ್ಗೆ ಬೇಸರವಾಗತ್ತದೆ. ಮಕ್ಕಳನ್ನು ಕರೆದುಕೊಂಡು ಬೇರೆ ಮನೆ ಮಾಡಿಕೊಂಡು ಮಹಿಮಳ ತಾಯಿಯ ಹತ್ತಿರ ಮಕ್ಕಳನ್ನು ಬಿಟ್ಟು ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟನು. ಅವನು ಏನೇ ಮಾಡಿದರೂ ಅವನು ಮಾಡಿದ ಆ ತಪ್ಪು ತಿದ್ದಲು ಸಾಧ್ಯವಿಲ್ಲ. ಸತ್ತಮಗಳು ಮರಳಿ ಬರಲು ಸಾಧ್ಯವಿಲ್ಲ ಎನ್ನುತ್ತಾ ಮೊಮ್ಮಕ್ಕಳ ಹೊಣೆಗಾರಿಕೆ ಹೊತ್ತಳು ಅಜ್ಜಿ.