4- ಹೆಜ್ಜೆಗೊಂದು ಹೆಜ್ಜೆ
4- ಹೆಜ್ಜೆಗೊಂದು ಹೆಜ್ಜೆ
ಹೊರಗಡೆ ನಿಂತಿದ್ದ ಕಾರನ್ನು ನೋಡಿದ ಮಹಿಮಾಳ ಮುಖವರಳಿತ್ತು. ತಕ್ಷಣ ಖುಷಿಯಿಂದ ಮನೆಯ ಒಳಗೆ ಓಡಿದ್ದಳು.
ಹಾಲಿನಲ್ಲಿ ಇಬ್ಬರು ಮಧ್ಯವಯಸ್ಕ ದಂಪತಿಗಳು ಮತ್ತು ಒಬ್ಬಳು ಮಹಿಮಾಳ ವಯಸ್ಸಿನ ಹುಡುಗಿ ಕುಳಿತು ಜಾನಕಮ್ಮನವರಲ್ಲಿ ಮಾತನಾಡುತ್ತಿದ್ದರು. ಅವರಲ್ಲಿ ನಗು, ಹರಟೆ ಜೋರಾಗಿಯೇ ನಡೆಯುತ್ತಿತ್ತು.
ಹೊರಗಿನಿಂದ ಓಡಿ ಬಂದ ಮಹಿಮಾ ಅವರನ್ನು ನೋಡಿ ಅತ್ತೆ ಅಂತ ಕೂಗಿ ಅವರ ಹತ್ತಿರ ಓಡಿದ್ದಳು. ಅವರಿಗೂ ಕೂಡ ತಮ್ಮ ಸೊಸೆಯನ್ನು ನೋಡಿ ತುಂಬಾನೇ ಖುಷಿಯಾಗಿತ್ತು. ಹೋಗಿ ಅವರನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದಳು ಮಹಿಮಾ. ಅವಳಿಗೆ ಖುಷಿಯಲ್ಲಿ ಕಣ್ಣಿನಿಂದ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ಇಷ್ಟು ದಿನ ಈ ಮನೆಯಲ್ಲಿ ಒಂಟಿಯಾಗಿ ಬೆಂದು ಹೋಗಿದ್ದ ಮಹಿಮಾಗೆ ಇಂದು ಅವರೆಲ್ಲರ ಆಗಮನ ಮನಸ್ಸಿಗೆ ತಂಪೆರೆದಿತ್ತು. ಕೆಲ ಕ್ಷಣಗಳ ಕಾಲ ಹಾಗೆ ಇದ್ದ ಅತ್ತೆ ಸೊಸೆಗೆ 'ಹೆಲೋ ಬಡ್ಡಿ' ಎಂಬ ಮಾತು ವಾಸ್ತವಕ್ಕೆ ಕರೆತಂದಿತ್ತು.
ತಿರುಗಿ ನೋಡಿದಾಗ ಕೃತಿ...ತನ್ನ ಅತ್ತೆಯ ಮಗಳು. ತನ್ನ ನಾದಿನಿ!! ತನ್ನ ಜೀವನದ ಏಕೈಕ ಗೆಳತಿ. ಏಕೈಕ... ಯಾಕೋ ಏಕೈಕ ಅನ್ನೋ ಪದವನ್ನು ಬಳಸಲು ಇಷ್ಟವಾಗಲಿಲ್ಲ ಮಹಿಮಾಗೆ! ಎದುರಿಗೆ ರಜನಿ ಬಂದು ನಿಂತು 'ನಾನು ಮಹಿ?' ಎಂದು ಮುಗ್ಧವಾಗಿ ಕೇಳಿದಂತಾಯಿತು. ತಕ್ಷಣವೇ ತನ್ನ ಯೋಚನಾಲಹರಿಗೆ ಬ್ರೇಕ್ ಹಾಕಿ ಎದುರಿಗಿರುವ ಕೃತಿಯನ್ನು ಪ್ರೀತಿಯಿಂದ ಆಲಿಂಗಿಸಿಕೊಂಡಿದ್ದಳು. ನಂತರ ಮಾವನ ಹತ್ತಿರ ಹೋಗಿ ಅವರ ಕಾಲಿಗೆ ನಮಸ್ಕಾರ ಮಾಡಲು ಹೊರಟಾಗ ಅವರು ಅದನ್ನು ತಡೆದು ಪ್ರೀತಿಯಿಂದ ಅವಳ ತಲೆ ಸವರಿದ್ದರು. ಇವರೆಲ್ಲರ ಪ್ರೀತಿಗೆ ಕಣ್ಣು ತುಂಬಿ ಬಂದಿತ್ತು ಮಹಿಮಾಗೆ.
"ಅತ್ತೆ ಯಾವಾಗ ಬಂದ್ರಿ? ನಂಗೆ ಏನೂ ಹೇಳಲೇ ಇಲ್ವಲ್ಲಾ? ಮೊದಲೇ ನೀವೆಲ್ಲ ಬರೋದು ಗೊತ್ತಿದ್ದಿದ್ರೆ ನಾನು ಇವತ್ತು ಕಾಲೇಜಿಗೆ ಹೋಗ್ತಾನೆ ಇರಲಿಲ್ಲ." "ಇಲ್ಲ ಮಗಳೇ...ಇದು ಸಡನ್ನಾಗಿ ಫಿಕ್ಸ್ ಆದ ಪ್ರೋಗ್ರಾಮ್...ಅದಕ್ಕೆ ಹೇಳಲಿಲ್ಲ. ಬೆಳಿಗ್ಗೇ ಅಷ್ಟೇ ಡಿಸೈಡ್ ಮಾಡಿದ್ವಿ ಇಲ್ಲಿಗೆ ಬರೋದು ಅಂತ...ಜೊತೆಗೆ ಕೃತಿ ಮತ್ತೆ ನಿನ್ನ ಮಾವನೂ ಕೂಡ ಸ್ವಲ್ಪ ಫ್ರೀ ಇದ್ದಿದ್ರು ಈ ವಾರ...ಅದಕ್ಕೆ ಈಗ್ಲೇ ಹೋಗೋಣ ಅಂತ ಕರ್ಕೊಂಡ್ ಬಂದೆ...ನಿಂಗೆ ಹೇಳೋಣ ಅಂತಾನೆ ಇದ್ದೆ ಆದ್ರೆ ಕೃತಿ ಬೇಡ ಹೇಗೂ ಹೋಗ್ತಾ ಇದ್ದಿವಲ್ಲ, ಸರ್ಪ್ರೈಸ್ ಕೊಡೋಣ ಅಂತ ಅಂದ್ಲು" ನೇತ್ರಾ ಅವರು ತಮ್ಮ ಸೊಸೆಗೆ ಸಮಜಾಯಿಷಿ ಕೊಡಲು ಪ್ರಯತ್ನಿಸುತ್ತಿದ್ದರು. "ಸರಿ ಅತ್ತೆ...ನನಗೇನೂ ಬೇಜಾರಿಲ್ಲ. ನೀವೆಲ್ಲಾ ನಂಗೆ ಹೇಳ್ದೆ ಬಂದಿದ್ದೀರಿ ಅನ್ನೋ ಬೇಜಾರಿಗಿಂತ ನೀವೆಲ್ಲ ನನ್ನ ನೋಡೋಕೆ ಬಂದಿದ್ದಿರ ಅನ್ನೋ ಖುಷಿನೆ ನಂಗೆ ದೊಡ್ಡದು ಅತ್ತೆ. ನನಗೀಗ ಅದೆಷ್ಟು ಖುಷಿಯಾಗ್ತಿದೆ ಅಂತ ವಿವರಿಸೋಕ್ಕೂ ಕೂಡ ನಂಗೆ ಸಾಧ್ಯ ಇಲ್ಲ" ಅಂತ ಹೇಳಿದಳು. ಅವಳ ಗಂಟಲು ಕಟ್ಟುತ್ತಿತ್ತು.
ಮನಸ್ಸು ಭಾರವಾಗಿತ್ತು, ಆದರೆ ಅದು ಈ ಬಾರಿ ದುಃಖಕ್ಕಲ್ಲ...ಖುಷಿಗೆ!! ನಂತರ ಸಾವರಿಸಿಕೊಂಡು ಕೃತಿಯೆಡೆ ತಿರುಗಿ "ಕೃತಿ...ಯು ನೋ...ಐ ಮಿಸ್ಸ್ಡ್ ಯು ವೆರಿ ಬ್ಯಾಡ್ಲಿ ಡಿಯರ್ ಪ್ರತಿದಿನ ಕೂಡ ನಾನು ನಿನ್ನ ಮಿಸ್ ಮಾಡ್ಕೊಳ್ತಾ ಇದ್ದೆ. ಥ್ಯಾಂಕ್ ಯು ಫಾರ್ ಕಮಿಂಗ್" ಅಂತ ಹೇಳಿದ್ದಳು. "ನಾನೂ ಕೂಡ ನಿನ್ನ ತುಂಬಾ ಮಿಸ್ ಮಾಡ್ಕೊಂಡೆ ಗೊತ್ತಾ...ಆದ್ರೆ ಕೆಲಸದ ಟೆನ್ಷನ್ನಲ್ಲಿ ನನಗೆ ಬರೋಕೆ ಆಗ್ಲಿಲ್ಲ ಕಣೆ...ಸಾರಿ. ನಿಂಗೊತ್ತಲ್ವಾ? ನಿನ್ನ ಮಾವ ಕೆಲಸದ ವಿಷಯದಲ್ಲಿ ಎಷ್ಟು ಸ್ಟ್ರಿಕ್ಟ್ ಅಂತ! ಅದರಲ್ಲೂ ನಾನು ಅವರ ಅಸಿಸ್ಟೆಂಟ್ ಆಗಿ ಸೇರಿದ್ಮೇಲೆ ಮುಗಿದುಹೋಯ್ತು ನನ್ನ ಕಥೆ...ಎಷ್ಟು ಕೆಲಸ ಮಾಡಿಸ್ತಾರೆ ಗೊತ್ತಾ! ಪ್ರತಿಯೊಂದು ಕೇಸ್ ಗು ಸಾಕ್ಷಿಗಳನ್ನ ಕಲೆಕ್ಟ್ ಮಾಡೋಕೆ ನಾನೇ ಹೋಗಬೇಕು ಗೊತ್ತಾ" ಅಂತ ಮುಖವೂದಿಸಿ ನುಡಿದಿದ್ದಳು ಕೃತಿ.
"ಮತ್ತೆ ...ಲಾಯರ್ ಆಗೋದು ಅಂದ್ರೆ ಸುಮ್ನೇನ? ನಮಗೆ ಬರೋ ಕೇಸ್ಗಳಿಗೆ ಸರಿಯಾಗಿ ಸಾಕ್ಷಿ ಹುಡುಕಿದರೆ ಮಾತ್ರ ಅಲ್ಲಿ ಕೋರ್ಟಲ್ಲಿ ವಾದ ಮಾಡೋಕೆ ಆಗೋದು...ನೀನೇನೋ ಲಾ ಓದಬೇಕಾದ್ರೆ ಕ್ಲಾಸ್ಗೆ ಟಾಪರ್ ಆದೇ ಅಂತ ನಿನ್ ಕೈಗೆ ಡೈರೆಕ್ಟಾಗಿ ಕೇಸ್ ಕೊಡೋಕಾಗುತ್ತ" ಗಂಭೀರವಾಗಿ ನಟಿಸುತ್ತಾ ಪ್ರಶ್ನಿಸಿದ್ದರು ಕೃತಿ ತಂದೆ ಅಡ್ವೊಕೇಟ್ ದಿವಾಕರ್.
"ಆಯ್ತು ಅಡ್ವೊಕೇಟ್ ಸಾಹೇಬ್ರೆ... ಕ್ಷಮಿಸಿಬಿಡಿ ನನ್ನ...ನಿಮ್ ಹತ್ರ ವಾದ ಮಾಡೋ ಅಷ್ಟು ಧೈರ್ಯ ನನಗಂತೂ ಇಲ್ಲ...ಈಗ ನಾನು ಮಹಿ ಜೊತೆ ಫುಲ್ ಟೈಮ್ ಸ್ಪೆನ್ಡ್ ಮಾಡ್ಬೇಕು...ಸೋ ಡೋಂಟ್ ಡಿಸ್ಟರ್ಬ್ ಅಸ್" ಅಂತ ಹೇಳಿ ಮಹಿಮಾ ಹೆಗಲ ಮೇಲೆ ಕೈ ಹಾಕಿ ಅವಳ ರೂಮ್ ಕಡೆ ಹೊರಟಿದ್ದಳು. "ನೀನು ನಿನ್ನ ಮಹಿ ಜೊತೆ ಮಾತಾಡೋಕೆ ಇನ್ನು ತುಂಬಾ ಸಮಯ ಇದೆ ಕೃತಿ...ಈಗ ಮೊದ್ಲು ಅವಳಿಗೆ ಊಟ ಮಾಡೋಕೆ ಬಿಡು" ಎಂದು ಮಹಿಯ ಕಡೆ ತಿರುಗಿ "ಹೋಗು ಮಗಳೇ...ಫ್ರೆಶಾಗಿ ಬಾ...ಊಟ ಮಾಡುವಂತೆ" ಎಂದಿದ್ದರು. "ಸರಿ ಅತ್ತೆ" ಎಂದು ತಲೆಯಾಡಿಸಿ ಮಹಿಮಾ ಹೊರಟರೆ ಅವಳ ಹಿಂದೆ ಕೃತಿಯೂ ಕೂಡ "ಮಹಿ ನಾನೂ ಬರ್ತೀನಿ" ಅಂತ ಓಡಿದ್ದಳು.
ಮಹಿಮಾಳ ಖುಷಿಯನ್ನು ನೋಡಿದ ಜಾನಕಮ್ಮನವರು ನೇತ್ರಾ ಅವರಲ್ಲಿ" ಅಮ್ಮ ಮಹಿಮಾ ಇಷ್ಟು ಖುಷಿಯಲ್ಲಿ ನೀವು ಹಿಂದಿನ ಸಲಾ ಬಂದಾಗ ಇದ್ದಿದ್ಲು. ಅದನ್ನ ಬಿಟ್ಟರೆ ಅವಳ ಮುಖದಲ್ಲಿ ಇವತ್ತೇ ನಾನು ಖುಷಿ ನೋಡುತ್ತಿರುವುದು" ಎಂದಿದ್ದರು. ಅದನ್ನ ಕೇಳಿ ನೇತ್ರಾ ಮತ್ತು ದಿವಾಕರ್ ಗೆ ಸಂಕಟವಾಗಿತ್ತು. "ನಾವು ತಪ್ಪು ಮಾಡಿದ್ವಿ ಅನ್ನಿಸುತ್ತೆ ರೀ...ಅವಳು ನಮ್ಮ ಮನೆಯಲ್ಲಿ ಇರೋಕೆ ನಿರಾಕರಿಸಿದಾಗ ನಾವೇ ಹಠ ಮಾಡಿ ಅವಳು ಈ ಮನೆಯಲ್ಲಿ ಇರುವಂತೆ ಕೇಳಿಕೊಂಡಿದ್ದೆವು. ಆದರೆ ಈಗ ಅನ್ನಿಸುತ್ತಿದೆ...ಅವಳು ಹೇಳಿದಂತೆ ಅವಳನ್ನ ಯಾವುದಾದರೂ ಪಿಜಿಗೆ ಸೇರಲು ಬಿಟ್ಟಿದ್ದರೂ ಸ್ವಲ್ಪ ನೆಮ್ಮದಿಯಿಂದ ಇರುತ್ತಿದ್ದಳೇನೋ?" ಎಂದು ತಮ್ಮ ಗಂಡನಲ್ಲಿ ಹೇಳಿಕೊಂಡಿದ್ದರು ನೇತ್ರಾ.
ಇದನ್ನು ಕೇಳಿ ದಿವಾಕರ್ ಸುಮ್ಮನೆ ಒಂದು ನಿಟ್ಟುಸಿರು ಹೊರದಬ್ಬಿದ್ದರಷ್ಟೇ.
ನೇತ್ರಾ ಅವರು ಮಹಿಯ ಸೋದರತ್ತೆ. ಅಂದರೆ ನಾರಾಯಣ್ ಶರ್ಮಾ ಅವರ ಸ್ವಂತ ತಂಗಿ. ಆದರೆ ಗುಣದಲ್ಲಿ ಅಣ್ಣ ಉತ್ತರ ಧ್ರುವವಾದರೆ ತಂಗಿ ದಕ್ಷಿಣ ಧ್ರುವ. ನಾರಾಯಣ್ ಅವರಿಗೆ ಅಹಂಕಾರ, ದರ್ಪ, ಹಣ, ಐಶ್ವರ್ಯ ಇವುಗಳೇ ಮುಖ್ಯವಾದರೆ ನೇತ್ರಾಗೆ ಪ್ರೀತಿ, ವಾತ್ಸಲ್ಯಕ್ಕೆ ಹೆಚ್ಚು ಪ್ರಾಮುಖ್ಯತೆ. ತನ್ನ ಅಣ್ಣನ ಸ್ವಭಾವ ಸ್ವಲ್ಪವೂ ಇಷ್ಟವಿಲ್ಲದಿದ್ದರೂ ಕೂಡ ಅವರನ್ನು ಕಂಡರೆ ತುಂಬಾ ಪ್ರೀತಿ ನೇತ್ರಾಗೆ. ನಾರಾಯಣ್ ಅವರಿಗೂ ಕೂಡ ತಂಗಿಯೆಂದರೆ ತುಂಬಾ ಇಷ್ಟ. ಆದರೆ ತನ್ನ ಎಲ್ಲಾ ನಿರ್ಧಾರಕ್ಕೂ ಪ್ರಶ್ನೆ ಮಾಡುತ್ತಾಳೆಂಬ ಸಿಟ್ಟಿತ್ತು. ಅದಕ್ಕೆ ತುಪ್ಪ ಸುರಿದಿದ್ದು 30 ವರ್ಷಗಳ ಹಿಂದೆ ನೇತ್ರಾ ಅವರು ದಿವಾಕರ್ ಅವರನ್ನು ಮದುವೆಯಾಗುತ್ತೇನೆಂದು ಹೇಳಿದಾಗ.
ಪ್ರತಿಯೊಂದರಲ್ಲೂ ನೇತ್ರಾಗೆ ಸಮನಾಗಿದ್ದ ದಿವಾಕರ್ ಒಂದು ವಿಷಯದಲ್ಲಿ ಮಾತ್ರ ಹೊಂದಾಣಿಕೆಯಾಗುತ್ತಿರಲಿಲ್ಲ. ಆದರೆ ಅದು ನೇತ್ರಾಗೇನೂ ಸಮಸ್ಯೆಯಾಗಿರಲಿಲ್ಲವಾದರೂ ನಾರಾಯಣ್ಗೆ ಅದೇ ದೊಡ್ಡ ಸಮಸ್ಯೆ. ಅದೇ ದುಡ್ಡು...ದಿವಾಕರ್ ಆಗಷ್ಟೇ ತಮ್ಮ ಲಾ ಪ್ರ್ಯಾಕ್ಟೀಸ್ ಶುರು ಮಾಡಿದ್ದರಿಂದ ಸಂಬಳವೂ ಕಡಿಮೆಯಿತ್ತು. ಮನೆಯಲ್ಲಿ ಆಸ್ತಿಯೂ ಇರಲಿಲ್ಲ. ಇದನ್ನೇ ದೊಡ್ಡ ವಿಷಯವಾಗಿ ಪರಿಗಣಿಸಿದ್ದ ನಾರಾಯಣ್ ಈ ಮದುವೆ ಸಾಧ್ಯವಿಲ್ಲವೆಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದರು.
ಮರುದಿನ ನಾರಾಯಣ್ ಅವರ ಹೆಂಡತಿ ಮಮತಾ ಅವರು ಬೆಳಿಗ್ಗೆ ಜೋರಾಗಿ ಕೂಗಿದ ಸದ್ದು ಕೇಳಿ ಬಂದು ನೋಡಿದರೆ ನೇತ್ರಾ ಮತ್ತು ದಿವಾಕರ್ ಇಬ್ಬರು ಬಾಗಿಲಲ್ಲಿ ನಿಂತಿದ್ದರು. ಅವರ ಅವತಾರ ನೋಡಿಯೇ ಹೇಳಬಹುದಿತ್ತು ಅವರಿಬ್ಬರ ಮದುವೆ ಅದಾಗಲೇ ನಡೆದುಹೋಗಿದೆಯೆಂದು! ಅಲ್ಲಿಗೆ ಅಣ್ಣ ತಂಗಿಯ ಸಂಬಂಧ ಕಡಿದುಹೋಗಿತ್ತು. ನೇತ್ರಾ ಅವರ ಪಾಲಿಗೆ ತವರು ಮನೆಯ ಬಾಗಿಲು ಮುಚ್ಚಿತ್ತು.
ಆದರೆ ಮಮತಾ ಮತ್ತು ನೇತ್ರಾ ಆಗಾಗ ದೇವಸ್ಥಾನದಲ್ಲಿ ನಾರಾಯಣ್ಗೆ ಗೊತ್ತಾಗದಂತೆ ಭೇಟಿಯಾಗುತ್ತಿದ್ದರು. ಅತ್ತಿಗೆ ನಾದಿನಿಯರಲ್ಲಿ ತುಂಬಾ ಪ್ರೀತಿ ಮತ್ತು ಗೌರವವಿತ್ತು. ನಾರಾಯಣ್ ಅವರು ತಮ್ಮ ಮನೆಗೆ ಯಾವುದೋ ಆಧುನಿಕ ಹೆಸರಿಡಬೇಕೆಂದು ಹೊರಟಾಗ ಅದನ್ನು ವಿರೋಧಿಸಿ, ಅವರನ್ನು ಒಪ್ಪಿಸಿ ಅದಕ್ಕೆ ಮಮತಾರ ಹೆಸರಿಡುವಂತೆ ಮಾಡಿದ್ದೆ ನೇತ್ರಾ.
ಒಂದು ವರ್ಷದ ನಂತರ ನೇತ್ರಾ ಮತ್ತು ದಿವಾಕರ್ಗೆ ಗಂಡು ಮಗುವಾದ ಮೇಲೆ ಸ್ವಲ್ಪ ಮೆತ್ತಗಾಗಿದ್ದರು ನಾರಾಯಣ್. ಅವರಿಗೆ ಗಂಡು ಮಕ್ಕಳ ವ್ಯಾಮೋಹ ತುಂಬಾ ಇತ್ತು. ಹೆಣ್ಣು ಮಕ್ಕಳನ್ನು ಕಂಡರೆ ನಿರ್ಲಕ್ಷ ಮಾಡುತ್ತಿದ್ದರು. ಆ ಸಮಯದಲ್ಲಿ ದಿವಾಕರ್ ಅವರಿಗೆ ನಗರದಲ್ಲಿ ಒಳ್ಳೆ ಹೆಸರೂ ಕೂಡ ಬಂದಿದ್ದರಿಂದ, ಹಾಗೂ ಸಾಕಷ್ಟು ಹಣವೂ ಮಾಡಿದ್ದರಿಂದ ಮತ್ತೆ ಅಣ್ಣ ತಂಗಿಯಲ್ಲಿ ಸಂಬಂಧವು ನಿಧಾನವಾಗಿ ಸರಿಯಾಗತೊಡಗಿತ್ತು.
ರಾತ್ರಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದರು. ಆದರೆ ಮಹಿಮಾ ಕಣ್ಣು ಮಾತ್ರ ಪದೇ ಪದೇ ಬಾಗಿಲಿನ ಕಡೆಗೆ ಹೋಗುತ್ತಿತ್ತು. ಅವಳಿಗೆ ಮಿ. ಶರ್ಮಾರದ್ದೇ ಯೋಚನೆ. ಅವರು ಬರುವಷ್ಟರಲ್ಲಿ ತಾನು ಊಟ ಮಾಡಿ ರೂಮು ಸೇರಬೇಕು ಅಂದುಕೊಳ್ಳುತ್ತಿದ್ದಳು. ಅಷ್ಟರಲ್ಲಿ ನೇತ್ರಾ ಅವಳನ್ನು ಮಾತನಾಡಿಸಿದ್ದರು.
"ಮಹಿ ನಾಳೆ ಹೇಗೂ ಸಂಡೇ ಅಲ್ವಾ...ನಿನಗೂ ಕೂಡ ರಜೆ ಇರುತ್ತೆ. ಒಂದು ಕೆಲಸ ಮಾಡೋಣ...ನಾಳೆ ಎಲ್ರೂ ಸೇರಿ ದೇವಸ್ಥಾನಕ್ಕೆ ಹೋಗಿಬರೋಣ ಸರೀನಾ?"
ಮಹಿಮಾಗೆ ಭಯವಾಗುತ್ತಿತ್ತು. ಮಿ. ಶರ್ಮ ಏನಾದರೂ ಹೇಳಿದ್ರೆ? ಅಂತ...ಮತ್ತೆ ಮತ್ತೆ ಬಾಗಿಲಿನ ಕಡೆಗೆ ನೋಡಿದ್ದಳು. ಅವಳ ನೋಟವನ್ನ ಅರಿತ ಕೃತಿ ತಾನೇ ಮಾತನಾಡಿದ್ದಳು. "ಮಹಿ...ಯಾಕಷ್ಟು ಯೋಚ್ನೆ ಮಾಡ್ತಾ ಇದಿಯಾ... ನಿನಗೆ ವಿಷ್ಯ ಗೊತ್ತಿಲ್ಲ ಅಲ್ವಾ...ಮಾವ ಇವತ್ತು ಮನೆಗೆ ಬರೋಲ್ಲ!! ಅವರು ಡೆಲ್ಲಿಗೆ ಹೋಗಿದ್ದಾರೆ. ಬರೋದು ಇನ್ನು 4 ದಿನ ಆಗುತ್ತಂತೆ...ಅಲ್ಲಿ ತನಕ ನೀನು ಫ್ರೀ ಬಿಡು...ಆರಾಮಾಗಿ ಮನೆಯೆಲ್ಲ ಓಡಾಡಿಕೊಂಡಿರು." ಇದನ್ನು ಕೇಳಿ ಮಹಿಗೆ ತುಂಬಾನೆ ಖುಷಿಯಾಗಿತ್ತು. "ನಿಜಾನಾ?" ಅಂತ ಕೇಳಿದ್ದಳು. "ಹೌದು ಮಗಳೇ...ನಮಗೂ ಇವತ್ತು ಬೆಳಿಗ್ಗೆ ಅಷ್ಟೇ ಗೊತ್ತಾಯ್ತು...ಅದಕ್ಕೆ ತಕ್ಷಣವೇ ಹೊರಟು ಬಂದ್ವಿ...ಬೇರೆ ದಿನ ಬಂದ್ರೆ ನಿನ್ನನ್ನ ಹೀಗೆ ಮನೆ ತುಂಬಾ ಓಡಾಡೋದನ್ನ ಹೇಗೆ ನೋಡೋಕಾಗುತ್ತೆ...ಎನಿದ್ರೂ ನಿನ್ ರೂಮಿಗೆ ಬರಬೇಕು" ತಮ್ಮ ಸರ್ಪ್ರೈಸ್ ವಿಸಿಟ್ ಹಿಂದಿನ ನಿಜವಾದ ಕಾರಣವನ್ನು ಹೇಳಿದ್ದರು ನೇತ್ರಾ. ಅದೆಲ್ಲಾ ಏನಾದ್ರು ಆಗ್ಲಿ, ಮಿ. ಶರ್ಮ ಅವರನ್ನ ಇನ್ನು ನಾಲ್ಕು ದಿನ ನೋಡದೆ ಇರಬಹುದಲ್ಲ ಅಂತ ಖುಷಿಯಾಗಿತ್ತು ಮಹಿಮಾಗೆ.