ಉಳಿದವರು ಕಂಡಂತೆ
ಉಳಿದವರು ಕಂಡಂತೆ
ನಾನ್ ಸ್ಟಾಪ್ ನವೆಂಬರ್ - ಮಧ್ಯಂತರ
ಕನ್ನಡ ಚಿತ್ರಗಳು ಹೊಸ ಹೊಸ ಪ್ರಯೋಗಕ್ಕೆ ಎಂದೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತವೆ. ಒಂದು ವಿಭಿನ್ನ ಪ್ರಯತ್ನ "ಉಳಿದವರು ಕಂಡಂತೆ " ಚಿತ್ರದಲ್ಲಿ ಕಾಣಬಹುದು.
ಈ ಚಿತ್ರದಲ್ಲಿ ನಂಗಿಷ್ಟವಾದ ಒಂದು ಸನ್ನಿವೇಶವಿದೆ. ರತ್ನಕ್ಕಾ ಎನ್ನುವ ತಾಯಿ ಪಾತ್ರಧಾರಿಯಾಗಿ ತಾರಾ, ಹಾಗೂ ರಘು ಎನ್ನುವ ಮಗನ ಪಾತ್ರಧಾರಿಯಾಗಿ ರಿಷಭ್ ಅವರ ಒಂದು ಸನ್ನಿವೇಶ ಎಂತಹ ನೋಡುಗರನ್ನು ಅಳಿಸಿ ಬಿಡುತ್ತದೆ. ಚಿತ್ರದಲ್ಲಿ ಚಿಕ್ಕ ವಯಸ್ಸಿನಲ್ಲಿ ಮಗ ಮನೆ ಬಿಟ್ಟು ಹೋಗಿದ್ದರಿಂದ ಇಪ್ಪತ್ತೈದು ವರ್ಷಕ್ಕೂ ಹೆಚ್ಚು ಕಾಲ ತಾಯಿ ಮಗ ದೂರವಾಗುತ್ತಾರೆ. ಆದರೆ ರತ್ನಕ್ಕ ಮಾತ್ರ ತನ್ನ ಮಗು ರಘು ಇಂದಲ್ಲ ನಾಳೆ ಬರುತ್ತಾನೆ ಎಂದು ಕಾಯುತ್ತಿರುತ್ತಾಳೆ. ಅಂದುಕೊಂಡಂತೆ ಒಂದು ದಿನ ಮಗ ಬರುತ್ತಾನೆ, ಹಾಗೆ ಬಂದು ಹೀಗೆ ಹೋಗುವ ಮಗ "ಅಮ್ಮಾ ನಾಳೆ ಮೀನ್ ಸಾರು ಮಾಡು, ಊಟಕ್ಕೆ ಬರ್ತೀನಿ, ಈಗ ಕೆಲಸ ಇದೆ" ಅಂತ ಹೇಳಿ ಹೋಗುತ್ತಾನೆ. ತಾಯಿ ಖುಷಿಯಿಂದ ಮಸಾಲೆ ಅರಿದು ಅಡುಗೆ ಮಾಡಿ ಇತ್ತ ಮಗನ ದಾರಿ ಕಾಯುತ್ತಿದ್ದರೆ, ಅತ್ತ ಮಗ ಅವತ್ತೇ ಗುಂಡೇಟಿಗೆ ಬಲಿಯಾಗಿ ಹೆಣವಾಗುತ್ತಾನೆ. ಮತ್ತೇ ಅಮ್ಮ-ಮಗನ ಭೇಟಿ ಆಗಲೇ ಇಲ್ಲ. ಈಗ ಇದೇ ದೃಶ್ಯವನ್ನು ನನ್ನ ದೃಷ್ಟಿಕೋನದಂತೆ ಬದಲಾಯಿಸುವುದಾದರೆ,
ನೆರೆಹೊರೆ ಮನೆಯವಳು : ರತ್ನಕ್ಕಾ, ನೋಡು ಎಷ್ಟು ಕೆಮ್ಮತಿದಿಯಾ. ಯಾಕೀಷ್ಟು ಹಠ ಮಾಡ್ತಿದೀಯಾ? ನಡೀ ಮಂಗಳೂರಿಗೆ ಆಸ್ಪತ್ರೆಗೆ ಹೋಗೋಣಾ.
ರತ್ನಕ್ಕಾ : ಬೇಡಮ್ಮಾ, ನನ್ನ ಮಗಾ ಇಷ್ಟು ವರ್ಷದಿಂದ ಬಂದಿಲ್ಲ. ಒಂದ್ವೇಳೆ ನಾವು ಆಸ್ಪತ್ರೆಗೆ ಹೋದ ದಿನವೇ ಬಂದ್ರೆ ನಾನಿಲ್ಲ ಅಂತ ಬೇಸರ ಮಾಡ್ಕೋತಾನೆ. ಮತ್ತೇ ಅವನೆಂದೂ ಮನೆಗೆ ಬರೋದೇ ಇಲ್ಲಾ. ನಂದು ಒಂದೇ ಆಸೆ, ನನ್ನ ಮಗನ ಒಮ್ಮೆ ನೋಡ್ಬೇಕು, ಆಮೇಲೆ ಶಿವನ ಪಾದಾ ಸೇರಿದ್ರೂ ಆಯ್ತಲ್ಲ!
ನೆರೆ ಮನೆಯಾಕೆ : ಥೂ ಬಿಡ್ತು ಅನ್ನು ರತ್ನಕ್ಕಾ. ನಿನ್ನ ಮಗ ಎಲ್ಲಿದಾನೆ, ಏನ್ ಮಾಡ್ತಿದಾನೆ ಅದೂ ಹೋಗ್ಲಿ ನೋಡೋಕೆ ಹೇಗಿದಾನೆ ಅಂತನೂ ಗೊತ್ತಿಲ್ಲ. ಮತ್ತೆ ಹೇಗೆ ಅವನನ್ನ ಗುರ್ತಿಸೋದು?
ರತ್ನಕ್ಕಾ : ನನ್ನ ಕರುಳು ನಂಗ್ ಗೊತ್ತಾಗಲ್ವೇನೇ. ಅವನಿಗೆ ನಾನು ಗೊತ್ತಾಗ್ತಿನಿ.
Nere ಮನೆಯಾಕೆ : ಸರಿ ಕಣವ್ವ, ನಾ ಇನ್ ಬರ್ತೀನಿ.
--------------------------------
ರಘು : ಅಮ್ಮಾ, ಅಮ್ಮಾ.
ನೆರೆ ಮನೆಯಾಕೆ : ಯಾರಪ್ಪಾ ನೀನು, ಯಾರ್ ಬೇಕಿತ್ತು?
ರಘು : ನಾನ್ ರಘು. ರತ್ನಮ್ಮನ ಮಗ. ಅಮ್ಮ ಎಲ್ಲಿ?
ನೆರೆ ಮನೆಯಾಕೆ : ಯಾಕಪ್ಪಾ 2ಪ್ ವರ್ಷದಲ್ಲಿ ಒಂದಿನಾನೂ ನಿನಗೆ ರಜೆ ಸಿಗ್ಲಿಲ್ವಾ, ನಿಮ್ ಅಮ್ಮ ನನ್ನ ಮಗ ಇವತ್ ಬರ್ತಾನೆ, ನಾಳೆ ಬರ್ತಾನೆ ಅಂತ ಕೈಯಲ್ಲಿ ಉಸಿರು ಹಿಡಿದು ಕಾಯೋವಾಗ ನೀನು ಬರ್ಲಿಲ್ಲ. ನಿನ್ನೆ ರಾತ್ರಿ ಅಷ್ಟೇ ನಿಮ್ ಅಮ್ಮ ಉಸಿರು ನಿಲ್ಸಿದ್ರು. ಮಗ ಬಂದ್ರೆ ಮೀನು ಸಾರು ಮಾಡಬೇಕು ಅಂತ ಕನವರಿಸುತಿದ್ಲು ನಿಮ್ ಅಮ್ಮ. ನೀನ್ ನೋಡಿದ್ರೆ ನಿಮ್ ಅಮ್ಮನ ಹೆಣ ನೋಡೋಕೆ ಬಂದಿದೀಯಾ!
ರಘು : ಏನು? ಅಮ್ಮಾ ಹೋಗ್ಬಿಟ್ರ? ಅಯ್ಯೋ ನಾನೆಂತ ಪಾಪಿ. ಅಮ್ಮನ ನೋಡ್ಬೇಕು, ಅವಳ ಕಾಲಿಗೆ ಬಿದ್ದು ಕ್ಷಮೆ ಕೇಳ್ಬೇಕು, ಅವಳ ಕೈತುತ್ತು ತಿನ್ನಬೇಕು, ಅಂತೆಲ್ಲ ಎಷ್ಟೊಂದು ಆಸೆ ಇಟ್ಟುಕೊಂಡು ಬಂದೆ. ಅಮ್ಮನಿಗೊಂದು ರೇಷ್ಮೆ ಸೀರೆನೂ ತಂದೆ. ಈಗ ಅಮ್ಮಾನೆ ಇಲ್ಲಾ! ನಾನೊಬ್ಬ ಪಾಪಿ.
ನೆರೆ ಮನೆಯಾಕೆ : ಸಮಾಧಾನ ಮಾಡ್ಕೊಪಾ. ಈಗಷ್ಟೆ ನಿಮ್ಮ ಅಮ್ಮನ ಹೆಣ ಎತ್ಕೊಂಡ ಹೋಗಿದಾರೆ. ಹೋಗಿ ನಿಮ್ಮ ಅಮ್ಮನ ಶವದ ಮೇಲಾದ್ರೂ ನೀನು ತಂದ
ಸೀರೆ ಹಾಕು, ಮಗನ ಸೀರೆ ಉಟ್ಟೇ ಅಂತ ನಿಮ್ಮ ಅಮ್ಮನ ಆತ್ಮ ಶಾಂತವಾಗಿ ಮಣ್ಣಲ್ಲಿ ಮಣ್ಣಾಗತ್ತೆ.
ರಘು : ಸರಿಯಮ್ಮ.
(ಅಮ್ಮನ ಶವದ ಮೇಲೆ ತಾನು ತಂದಿದ್ದ ಸೀರೆ ಹೊದಿಸಿ, ಅಮ್ಮನಿಲ್ಲದ ನೋವನ್ನು ಅರಗಿಸಿಕೊಳ್ಳದೆ, ಬಿಟ್ಟ ಕಣ್ಣು ಬಿಟ್ಟಂತೆಯೇ ನಿಂತುಬಿಟ್ಟ ರಘು )