ಲೆಜೆಂಡ್ ಮತ್ತು ಭೀಮಾ
ಲೆಜೆಂಡ್ ಮತ್ತು ಭೀಮಾ
ಡಾಕ್ಟರ್ ಮತ್ತು ನಾಯಿ
ಒಬ್ಬ ಶ್ರೀಮಂತ ವೈದ್ಯ Dr ರಾಮಸ್ವಾಮಿ ಯವರ ಭವ್ಯವಾದ ಕಟ್ಟಡ. ಮೊದಲ ಮೂರು ಮಹಡಿ ಆಸ್ಪತ್ರೆ .ನಾಲ್ಕನೇ ಮಹಡಿ ಅವರ ಮನೆ .ಇವರ ಕಟ್ಟಡದ ಪಕ್ಕದಲ್ಲಿ ಒಂದು ಕಬ್ಬಿನ ತೋಟ. ಅದನ್ನು ನೋಡಿ ಕೊಳ್ಳಲು ಗೋವಿಂದ ಮತ್ತು ಅವನ ಹೆಂಡತಿ ರತ್ನ ಳ ಸಂಸಾರ . ಇವರೊಂದಿಗೆ ಒಂದು ನಾಯಿ ಅದರ ಹೆಸರು ಭೀಮ. ವೈದ್ಯರ ಬಳಿಯೂ ಒಂದು ನಾಯಿ. ನಾಲ್ಕು ಲಕ್ಷ ರೂಪಾಯಿ ಬೆಲೆಯ ನಾಯಿ. ಹೆಸರು ಲೆಜೆಂಡ್. ವಿದೇಶಿ ತಳಿಯ ನಾಯಿ ಎಂದು ಎಲ್ಲರಿಗೂ ಹೇಳಿಕೊಳ್ಳುವುದು ಅವರಿಗೆ ಹೆಮ್ಮೆಯ ವಿಷಯ. ಭಾನುವಾರ ಬಂದರೆ ಕಾರಿನಲ್ಲಿ ಹಿಂದೆ ಕೂಡಿಸಿಕೊಂಡು ಹೋಗುವುದು, ಪ್ರತಿದಿನ ಬೆಳಗ್ಗೆ ವಾಕಿಂಗ್ ಕರೆದು ಕೊಂಡು ಹೋಗುವುದು ಅವರ ದಿನಚರಿ .ಆಗ ನಾಯಿ ಬೇರೆಲ್ಲೂ ಗಲೀಜು ಮಾಡದೆ ಗೋವಿಂದನ ತೋಟದಲ್ಲೇ ಮಾಡುವ ಅಭ್ಯಾಸ. ಇದು ವೈದ್ಯರಿಗೆ ಇಷ್ಟವಿಲ್ಲದಿದ್ದರೂ ಅದು ಅಲ್ಲೇ ಮಾಡುತ್ತಿತ್ತು. ಗೋವಿಂದನ ನಾಯಿ ಭೀಮ , ಲೆಜೆಂಡ್ ಬಂದಾಗ ಬೊಗಳಲು ಶುರುಮಾಡಿದರೆ ಅಲ್ಲಿಂದ ಅದು ಹೊರಗೆ ಹೋಗುವವರೆಗೂ ಬೋಗಳುತ್ತಲೆ ಇರುತ್ತೆ.. ಇದು ವೈದ್ಯರಿಗೆ ಬಹಳ ಮುಜುಗರ. ಪಕ್ಕದಲ್ಲೇ ಗೋವಿಂದ ಮತ್ತು ರತ್ನ ನಿಂತಿದ್ದರೂ ಒಂದು ದಿನವೂ ವೈದ್ಯರು ಅವರನ್ನ ಮಾತನಾಡಿಸಿದ್ದಿಲ್ಲ. ಕೊನೇಪಕ್ಷ ಅವರ ಕಡೆ ನೋಡಿ ನಕ್ಕರೂ ಸಾಕು , ಆದರೆ ಆ ವೈದ್ಯರು ಮಾತ್ರ ಹಾಗೆ ಎಂದೂ ಮಾಡರು. ಪಕ್ಕದಲ್ಲೇ ನಾವು ಇದ್ದರೂ ನಮ್ಮ ಕಡೆ ನೋಡುವುದಿಲ್ಲ ಎನ್ನುವುದು ಅವನ ಮನದಾಳದ ನೋವು . ಆದರೆ ಅದನ್ನ ಹೇಳಿಕೊಳ್ಳದ ಮುಗ್ದರು. ಗೋವಿಂದನಿಗೆ ತಾನು ಭಾರೀ ಶ್ರೀಮಂತ ವೈದ್ಯರ ಮನೆ ಪಕ್ಕದಲ್ಲಿ ಇರುವುದೇ ಒಂದು ಸಂತೋಷ. ಎಂದಾದರೂ ಅವರಿಗೆ ಏನಾದರೂ ಸಣ್ಣಪುಟ್ಟ ಸಹಾಯ ಮಾಡಿ ಅವರನ್ನ ಮಾತನಾಡಿಸಬೇಕು ಎನ್ನುವ ಹಂಬಲ. ಯಾರಾದರೂ ತಮ್ಮವರು ಹುಷಾರಿಲ್ಲದ ಸ್ಥಿತಿಯಲ್ಲಿ ಹಳ್ಳಿಯಿಂದ ಬಂದರೆ ಇಲ್ಲಿಗೆ ಕರೆದುಕೊಂಡು ಬರಬೇಕು ಅವರಿಗೆ ಹೇಳಿ ಒಳ್ಳೆಯ ಔಷಧಿ ಕೊಡಿಸಬೇಕು. ಇದಕ್ಕಾಗಿ ಹಳ್ಳಿಯಿಂದ ಎಲ್ಲರೂ ನನ್ನನ್ನ ಹುಡುಕಿ ಕೊಂಡು ಬರಬೇಕು ಅಂತ ಬಹಳ ದಿನಗಳ ಆಸೆ. ಹೊರಗೆ ನೂರು ಜನ ಇದ್ದರೂ ನಮ್ಮವರನ್ನು ಸೀದಾ ಒಳಗೆ ಕರೆದು ಕೊಂಡು ಹೋಗಿ ವೈದ್ಯರಿಗೆ ಸಾರ್ ಇವನು ನಮ್ಮ ಹಳ್ಳಿಯವನು ಒಳ್ಳೆ ಔಷಧಿ ಕೊಡಿ ಬೇಗ ಗುಣ ಆಗ್ಬೇಕು ಪಾಪ ಇವರ ಹತ್ತಿರ ಹೆಚ್ಚು ಹಣ ಇಲ್ಲ ಅಂತ ಹೇಳ್ಬೇಕು .ಆಗ ಅವರು ನಿಮ್ಮಹಳ್ಳಿ ಅಂದ ಮೇಲೆ ನಾನೇಕೆ ಹಣ ಕೇಳ್ತೀನಿ ಅನ್ನಬೇಕು , ಅಂತ ಏನೇನೋ ನೂರೆಂಟು ಕನಸು. ಆದರೆ ಒಂದು ದಿನವೂ ನಿನ್ನ ಹೆಸರು ಏನು ,ಯಾವ ಹಳ್ಳಿ ಒಂದೂ ಕೇಳಲ್ಲ. ಪತ್ನಿ ರತ್ನ ಹೀಗೆಲ್ಲಾ ಯೋಚನೆ ಮಾಡಲ್ಲ . ಆದರೆ ಗಂಡನನ್ನ ಪಕ್ಕದಲ್ಲಿದ್ದರೂ ಅವರು ಮಾತನಾಡುವುದಿಲ್ಲ ಅನ್ನೋದು ಸ್ವಲ್ಪ ಅವಳಿಗೂ ಬೇಜಾರು ಅಷ್ಟೇ.
ಒಂದು ದಿನ ಅಡುಗೆಯವನು ಏನೋ ಮಾಡಕ್ಕೆ ಹೋಗಿ ವೈದ್ಯರ ಮನೆಯಲ್ಲಿ ಗ್ಯಾಸ್ ಲೀಕ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಅವನು ಹೆದರಿ ಕೆಳಗೆ ಬಂದು ಕೂಗಾಡಿದ . ಮೊದಲೇ ಅದು ಆಸ್ಪತ್ರೆ ಎಲ್ಲರಿಗೂ ಆತಂಕ . ಕೆಲವರು ರೋಗಿಗಳನ್ನು ಹೇಗೋ ಹೊರಗೆ ಕಳುಹಿಸಿದ್ದಾರೆ . ಯಾರೋ ಕೆಲವು ಸಾಮಾನುಗಳನ್ನು ಪಕ್ಕದ ಖಾಲಿ ಜಮೀನಿನಲ್ಲಿ ಎಸೆಯುತ್ತಿ ದ್ದಾರೆ. ವೈದ್ಯರ ಮನೆಯವರು ಹೆದರಿ ಹೊರಗೆ ನಿಂತು ಫೈರ್ ಬ್ರಿಗೇಡ್ ಗೆ ಫೋನ್ ಮಾಡ್ತಿದ್ದಾರೆ. ಅಲ್ಲಿ ಎಲ್ಲರೂ ಸಲಹೆ ಕೊಡುವವರೆ ಹೊರತು ಧೈರ್ಯವಾಗಿ ಒಳಹೋಗಿ ಬೆಂಕಿ ಅರಿಸುವರು ಯಾರೂ ಇಲ್ಲ. ಫೈರ್ ಬ್ರಿಗೆಡ್ ಬೇರೆಯ ಊರಿಂದ ಬರಬೇಕು ಎಂದು ತಿಳಿದಾಗ ಅದರ ಆಸೆ ಬಿಟ್ಟಾಯ್ತು. ವೈದ್ಯರ ಕುಟುಂಬ ಕಂಗಾಲಾಗಿ ಹೆದರಿ ನಿಂತಿದೆ. ಎಲ್ಲರೂ ಮೇಲೆ ಹತ್ತಿ ಉರಿಯುತ್ತಿರುವ ಬೆಂಕಿ ಕಡೆಯೇ ನೋಡಿ ಸಧ್ಯ ಆಸ್ಪತ್ರೆ ಗೆ ಬೆಂಕಿ ಹರಡದಿದ್ದರೆ ಸಾಕೆಂದು ದೇವರಲ್ಲಿ ಮೊರೆ ಇಟ್ಟುಮಾತನಾಡುತ್ತ ಇರೋವಾಗ ಮೈಯ್ಯೆಲ್ಲಾ ಕಪ್ಪಗಾಗಿರೋ ಒಬ್ಬವ್ಯಕ್ತಿ ಮೇಲಿಂದಲೇ ಕೂಗಿ ಹೇಳ್ತಾ ಇದಾನೆ ಬೆಂಕಿ ಎಲ್ಲಾ ಆರಿದೆ ಬರೀ ಅಡುಗೆ ಮನೇಲಿ ಇರೋ ವಸ್ತುಗಳು ಮಾತ್ರಾನೆ ಸುಟ್ಟಿದೆ . ಪರವಾಗಿಲ್ಲ ಮೇಲೆ ಬನ್ನಿ . ಆ ವ್ಯಕ್ತಿ ಯಾರಂತಾನೆ ಗೊತ್ತಾಗ್ತಿಲ್ಲ. ಎಲ್ಲರೂ ಹತ್ತಿ ಮೇಲೆ ಹೋದರು. ಸಧ್ಯಕ್ಕೆ ಹೆಚ್ಚು ಬೆಂಕಿ ಹರಡಿಲ್ಲ. ಇಲ್ಲದಿದ್ದರೆ ಮನೇಲಿರೋ ಸಾಮಾನೆಲ್ಲಾ ಸುಟ್ಟು ಹೋಗ್ತಿತ್ತು. ಅಂತ ಅವರ ಹೆಂಡತಿ ಹೇಳಿದ್ರು. ಅಲ್ಲೇ ಇದ್ದ ಅಡುಗೆಯವನು ಪಕ್ಕದಲ್ಲಿ ನಿಂತಿದ್ದ ಗೋವಿಂದನನ್ನ ನೀನು ಧೈರ್ಯ ವಾಗಿ ಒಳಗೆ ಬಂದು ಬೆಂಕಿ ಆರಿಸದಿದ್ದರೆ ಬಹಳ ಕಷ್ಟ ಆಗ್ತಿತ್ತು. ನಿನ್ನ ಧೈರ್ಯ ಮೆಚ್ಚಲೇ ಬೇಕಪ್ಪ ಅಂದಾಗಲೇ ಎಲ್ಲರ ಗಮನ ಗೋವಿಂದನ ಕಡೆ ಹೋಗಿದ್ದು. ಅದುವರೆಗೂ ಎಂದೂ ಮಾತನಾಡದ ವೈದ್ಯರು ಅವರ ಹೆಂಡತಿ, ಮಗಳು ನೀನು ಯಾವಾಗ ಮೇಲೆ ಬಂದಿಯೋ ಗೊತ್ತಾಗಲೇ ಇಲ್ಲ ಒಳ್ಳೇ ಕೆಲಸ ಮಾಡಿದಿ. ತೊಗೊ ಅಂತ ಜೇಬಿಂದ ನೂರು ರೂಪಾಯಿ ತೆಗೆದು ಕೊಡಲು ಮುಂದಾದರು . ಆಗ ಬೇಡ ಸಾರ್, ಅಂತ ಇಳಿದು ಹೊರಟು ಹೋದ. ವೈದ್ಯರಿಗೆ ಸಹಾಯ ಮಾಡಲು ಒಂದು ಅವಕಾಶ ದೊರೆತಿದ್ದು ಗೋವಿಂದನಿಗೆ ಸಂತೋಷವಾಗಿತ್ತು. ಆದರೆ ಅದು ಅವರು ನೂರು ರೂಪಾಯಿ ಕೊಡಲು ಬಂದಾಗ ಮಾಯವಾಗಿ ಹೋಯ್ತು. ನನ್ನನ್ನ ನೂರು ರೂಪಾಯಿ ನಿಂದ ಅಳೆದು ಬಿಟ್ಟರಲ್ಲ ಅಂತ ಬಹಳವಾಗಿ ನೊಂದ. ಈ ಘಟನೆ ಆದ ಮೇಲೆ ಮತ್ತೆ ಮಾತನಾಡಿಸಿದ್ದರೂ ಹಳೆಯದೆಲ್ಲವನ್ನ ಮರೆಯುತ್ತಿದ್ದನೇನೋ ಗೋವಿಂದ. ಆದರೆ ಅದು ಹಾಗೆ ಆಗಲೇ ಇಲ್ಲ. ಒಂದು ದಿನ ಬೆಳಗ್ಗೆ ಲೆಜೆಂಡ್ ನ , ಇವನ ತೋಟದಲ್ಲಿ ಮಾಮೂಲಿನಂತೆ ಬಿಟ್ಟಾಗ ಬಾಗಿಲ ಹತ್ತಿರ ನಿಂತು ಗೋವಿಂದ ರತ್ನ ಇಬ್ಬರೂ ಅವರ ಬೆಲೆಬಾಳುವ ನಾಯಿಯನ್ನೇ ನೋಡ್ತಾ ನಿಂತಿದ್ದರು. ವೈದ್ಯರು ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು . ಎಲ್ಲಿತ್ತೋ ಏನೋ ಭೀಮ ವೈದ್ಯರ ಮೇಲೆರಗಿ ಕೈಯ್ಯಿ ಕಚ್ಚಿಬಿಟ್ಟಿತು. ಹೆದರಿದ ಲೆಜೆಂಡ್ ಮನೆಗೆ ಓಡಿ ಹೋಯಿತು. ವೈದ್ಯರು ಲೆಜೆಂಡ್ ಹಿಂದೇನೆ ಬಯ್ಯುತ್ತಾ ಓಡಿದರು. ಒಂದು ದಪ್ಪ ಕಡ್ಡಿಯನ್ನ ತಂದು , ಗೋವಿಂದ ಭೀಮನಿಗೆ ಚೆನ್ನಾಗಿ ತಳಿಸಬೇಕೆಂದು ಕೈ ಎತ್ತಿದಾಗ ರತ್ನ ಕಡ್ಡಿಯನ್ನ ಕಸಿದುಕೊಂಡು ಮುರಿದು ಬಿಸಾಡಿದಳು.ಒಳಗೆ ಹೋಗಿ ಎರಡು ದೋಸೆ ತಂದು ಭೀಮನಿಗೆ ಕೊಟ್ಟಳು. ನಿಧಾನವಾಗಿ ತಿನ್ನು ತ್ತಿದ್ದ ಭೀಮನನ್ನು ನೋಡುತ್ತಾ ಅಲ್ಲೇ ಕಂಭಕ್ಕೆ ಒರಗಿ ನಿಂತ ಗೋವಿಂದ.