ದುರಾಸೆ
ದುರಾಸೆ
ಅವನೊಬ್ಬ ಮರುಭೂಮಿಯಲ್ಲಿ ನಡೆಯುತ್ತಿದ್ದ. ಎಲ್ಲಿಗೋ ಹೋಗಬೇಕಾಗಿತ್ತು ಅಂತ ಕಾಣುತ್ತೆ. ಸುಮಾರು ದೂರ ನಡೆಯುತ್ತಿದ್ದಾಗ, ಎಡಬದಿಯಲ್ಲಿ ದೂರದಲ್ಲಿ ದಿಬ್ಬದ ಮೇಲೆ, ಏನೋ ಹೊಳೆಯುತ್ತಿದಂತೆ ಕಾಣಿಸಿತು. ಸಾಧಾರಣ ಒಂದು ಘಂಟೆ ನಡೆದಾಗ, ಅಲ್ಲಿ ಅವನಿಗೆ ಒಂದು ಕಳೇಬರದ ಮೇಲೆ ಬಂಗಾರದ ಒಡವೆ ಸಿಕ್ಕಿತು. ತುಂಬಾ ಖುಷಿಯಿಂದ ಅದನ್ನು ಮೈಮೇಲೆ ಕೈಗೆ ಎಲ್ಲ ಹಾಕಿಕೊಂಡ. ಅವನಿಗೆ ಅನ್ನಿಸಿತು, ಆಚೆ ಹೋದರೆ ಇನ್ನಷ್ಟು ಬಂಗಾರ ಸಿಗಬಹುದೆಂದು.
ಹೌದು... ಹಾಗೆ ಹೋಗುತ್ತ ಸಿಕ್ಕ ಬಂಗಾರ ಬಹಳಷ್ಟು ಆಯಿತು. ತಾನು ತಂದ ತತ್ರಾಣಿಯ ನೀರನ್ನು ಚೆಲ್ಲಿ ಕೂಡ ಅದರಲ್ಲಿ ಚಿನ್ನ ಹಾಕಿಕೊಂಡನು. ಇನ್ನೂ ಸ್ವಲ್ಪ ಮುಂದೆ ಹೋಗಿ, ಇನ್ನೊಂದು ಕಳೇಬರದ ಮೇಲಿದ್ದ ಚಿನ್ನ ತೆಗೆದು ಹಾಗೂ ಹೀಗೂ ತತ್ರಾಣಿಗೆ ತುಂಬಿಸುವಾಗ ನೀರಡಿಕೆಯಾಯಿತು. ಎಲ್ಲಿದೆ ನೀರು. ತಾನು ಮಧ್ಯಾಹ್ನದ ಹೊತ್ತಿಗೆ ಎಲ್ಲಿಯೂ ಹತ್ತಿರ ನೀರಿಲ್ಲದ ಜಾಗದಲ್ಲಿದ್ದ. ಜನರೂ ಇಲ್ಲ. ಈಗ ವಾಪಾಸು ಹೋಗಲು ಕಾಲೇ ಏಳಲಾರದಷ್ಟು ನಿಶಕ್ತನಾಗಿದ್ದನು. ಅಲ್ಲೇ ಕುಸಿದ, ಹಾಗೇ ತೆವಳಿದ. ಊಹುಂ... ಮುಂದೆ ಹಿಂದೆ ಎಲ್ಲೂ ಹೋಗಲಾಗಲಿಲ್ಲ.. ಮೇಲೆ ಪ್ರಖರ ಬಿಸಿಲು. ಮರುಭೂಮಿಯ ಬಿಸಿಲು. ಅವನ ಜೀವದಲ್ಲಿಯ ನೀರೂ ಒಣಗತೊಡಗಿತು. ಜೀವ ಹೋಗುವುದು ಗ್ಯಾರೆಂಟಿ ಅಂತ ಆಗತೊಡಗಿತು.
ಚಿನ್ನದೊಂದಿಗೆ ಇದ್ದ ಅವನ ಪ್ರಾಣಪಕ್ಷಿ ಸಂಜೆಯಾಗುತ್ತ ಹೊರಟುಹೋಯಿತು.
ಕೆಲವೊಮ್ಮೆ ಆಸೆಯ ಹಿಂದೆ ಬಿದ್ದು, ನಾವು ಏನು ಮಾಡುತ್ತಿದ್ದೇವೆ ಎನ್ನುವ ಪರಿವೆ ಇಲ್ಲದಿದ್ದರೆ, ಹೀಗೇ ಪ್ರಾಣ ಹೋಗುವ ಸಂದರ್ಭವೂ ಬರಬಹುದು.