ಬಂಗಾರದ ಚೂರಿ
ಬಂಗಾರದ ಚೂರಿ
ಬೆಂಗಳೂರಿಗೆ ಸಮೀಪದ ನಂದಿಬೆಟ್ಟದಲ್ಲಿ ಟಿಪ್ಪು ಡ್ರಾಪ್ ಅಂತ ಇದೆ . ಇಲ್ಲಿ ಸಾಯಲು ಸುಲಭ ಮಾರ್ಗವೆಂದು ಬಹಳ ಜನ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರಿನ ದೊಡ್ಡ ಉದ್ಯಮಿಯೊಬ್ಬರು ತಮ್ಮ ಕಾರಿನಲ್ಲಿ ಒಂದು ಭಾನುವಾರ ಸಂಜೆ ಅಲ್ಲಿ ಬರುತಿದ್ದಾಗ ದೂರದಿಂದಲೇ ಅವರು ಒಬ್ಬ ಯುವಕ ಅಲ್ಲಿರುವ ಒಂದು ಮರಕ್ಕ ನೇಣುಹಾಕಿಕೊಳ್ಳನು ಪ್ರಯತ್ನಿಸುತ್ತಿರುವುದನ್ನ ನೋಡಿ ಹತ್ತಿರಬಂದು ಕಾರಿನಿಂದ ಇಳಿದು ಅವನ ಕಪಾಳಕ್ಕೆ ಹೊಡೆದು ಬುದ್ಧಿ ಹೇಳಿದರು. ಹಾಗೇ ಅವನ ಈ ಪರಿಸ್ಥಿತಿಗೆ ಕಾರಣ ಕೇಳಿದರು. ಅದಕ್ಕೆ ಅವನು ಜೀವನದಲ್ಲಿ ಬಹಳ ನೊಂದಿರುವುದಾಗಿ ಹೇಳಿ ಓದಿದರೂ ಸರಿಯಾದ ಕೆಲಸವಿಲ್ಲದೇ ಇತ್ತೀಚಿಗೆ ತಂದೆಯನ್ನು ಕಳೆದುಕೊಂಡು ಮದುವೆಗಿರುವ ತಂಗಿಯರಿಬ್ಬರ ಜವಾಬ್ದಾರಿಯನ್ನು ಹೊರಲು ಕಷ್ಟವೆಂದು ವಿವರಿಸಿದ.
ಆ ಉಧ್ಯಮಿ ಸಹಾಯಮಾಡುವುದಾಗಿ ಒಪ್ಪಿ ಅವನಿಗೆ ಉದ್ಯೋಗ ಹಾಗೂ ತಂಗಿಯರ ಮದುವೆ ಜವಾಬ್ದಾರಿಯನ್ನ ತಾವೇ ತೆಗೆದುಕೊಳ್ಳುವುದಾಗಿ ಹೇಳಿ ಅದಕ್ಕೆ ಒಂದು ನಿಬಂಧನೆ ಹಾಕಿದರು. ಅದು ಏನೆಂದರೆ ಒಂದು ವರ್ಷವಾದ ಮೇಲೆ ಇಲ್ಲಿಗೇ ಬಂದು ಮತ್ತೆ ಇಂದಿನಂತೆ ನೀನು ನೇಣು ಹಾಕಿಕೊಳ್ಳಬೇಕು. ಇದಕ್ಕೆ ಸಹಮತವಿದ್ದರೆ ಬರೆದು ಕೊಡಬೇಕು ಇಲ್ಲದಿದ್ದರೆ ನಿನಗೆ ಮನಸ್ಸು ಬಂದಹಾಗೆ ಮಾಡಿಕೊ. ಈಗಲೇ ಸಾಯಲು ನಾನು ನಿನ್ನ ತಡೆಯೊಲ್ಲ ಎಂದು ಹೇಳಿ ಹತ್ತು ನಿಮಿಷ ದಲ್ಲಿ ನಿರ್ಧಾರ ತಿಳಿಸಲು ಹೇಳಿದರು.
ಸಾಯಲು ಬಂದ ಆ ಯುವಕ ಈಗ ನಿಜಕ್ಕೂ ಸಂಧಿಗ್ಧ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡ. ಕ್ಷಣಕಾಲ ಸಂತೋಷಪಟ್ಟರೂ ಸಂಭ್ರಮವಿಲ್ಲದಂತಾಯ್ತು. ಕೆಲಸ ಸಿಕ್ಕಿ ತಂಗಿಯರ ಮದುವೆ ಆದರೆ ಒಂದು ವರ್ಷದ ಸಮಯ ಇರುತ್ತೆ ಆಮೇಲೆ ಯೋಚನೆ ಮಾಡಬಹುದೆಂದು ಒಪ್ಪಿಕೊಂಡ. ಅವರ ಕಾರಿನಲ್ಲೇ ಅವನನ್ನ ಜೊತೆಗೆ ಕರೆದೊಯ್ದು , ಹೇಳಿದಂತೆ ಅವರ ಕಚೇರಿಯಲ್ಲೇ ಅವನಿಗೆ ಕೆಲಸ ಕೊಟ್ಟು ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆ ಮಾಡಿದರು. ಜೊತೆಗೆ ಪತ್ರದಲ್ಲಿ ಇಬ್ಬರು ಸಾಕ್ಷಿಗಳೊಂದಿಗೆ ಅವನ ಸಹಿ ಪಡೆಯಲು ಮರೆಯಲಿಲ್ಲ.
ದಿನ ಕಳೆದಂತೆ ಸುಖವಾಗಿ ಜೀವನ ಸಾಗುತ್ತಿರುವಾಗ ಆಗಾಗ ಭಯ ಕಾಡುತ್ತಿತ್ತು. ಈ ವಿಷಯ ಇಬ್ಬರು ತಂಗಿಯರಿಗೆ ತಿಳಿದಿರಲಿಲ್ಲ. ಕೊನೆಗೂ ಆ ದಿನ ಬಂದೇ ಬಿಟ್ಟಿತು. ಹಿಂದಿನ ದಿನವೇ ಅವರು ಸಿದ್ಧರಾಗಿರಲು ಬೇರೆ ಹೇಳಿದ್ದು ಇಡೀ ರಾತ್ರಿ ನಿದ್ದೆ ಮಾಡಿರಲಿಲ್ಲ . ತಂಗಿಯರಿಗೆ ಹೇಳಬಾರದು ಎಂದು ಇಬ್ಬರೂ ಒಪ್ಪಿಕೊಂಡಿದ್ದರಿಂದ ಅವರಿಗೆ ಹೇಳುವ ಹಾಗಿಲ್ಲ. ಜೀವದಾನಕ್ಕೆ ಅಂಗಲಾಚಿ ಬೇಡಿಕೊಂಡ ಅವರ ಕೈಲಿದ್ದ ಪತ್ರ ತೋರಿಸಿ ನೀನೇ ಬರೆದ ಕರಾರುಪತ್ರ ಎಂದರು. ದಾರಿಯುದ್ದಕ್ಕೂ ಅಳುತ್ತಲೇ ಆ ಜಾಗಕ್ಕೆ ಬಂದಾಯ್ತು. ಉದ್ಯಮಿ ಮಾತ್ರ ಒಂದು ಮಾತೂ ಆಡಲಿಲ್ಲ. ಎಂತಹ ನಿರ್ಧಯಿ ನೀವು. ನೀವು ಮನುಷ್ಯರೇ ಅಲ್ಲ. ನಿಮ್ಮ ಹೃದಯ ಕಲ್ಲು ಅಂತ ಎಲ್ಲಾ ಹೇಳಿದರೂ ಒಂದು ಮಾತೂ ಅವರ ಬಾಯಿಂದ ಬರಲಿಲ್ಲ. ಕಾರಿನಿಂದ ಇಳಿದು ಹಗ್ಗ ಕೊಟ್ಟರು. ಅವನ ರೋಧನೆ ಹೆಚ್ಚಾಗಿ ಜನ ಸೇರಿದರು. ಈಗ ಯುವಕನಿಗೆ ಧೈರ್ಯ ಬಂತು. ಆದರೆ ವಿಷಯ ತಿಳಿಸಿದರೆ ಕೆಲಸ ಹೋಗುವುದೆಂಬ ಭೀತಿ. ಕೆಲಸ ಹೋದರು ಪ್ರಾಣ ಉಳಿದೀತೆಂಬ ಆಸೆ. ಅಲ್ಲಿದ್ದವರಿಗೆ ಆ ಉದ್ಯಮಿಯೇ ಪರಿಸ್ಥಿತಿಯ ಬಗ್ಗೆ ಹೇಳಲು ಮುಂದಾದರು. ಈ ಯುವಕ ಒಂದು ವರ್ಷದ ಹಿಂದೆ ಇಲ್ಲಿ ಸಾಯಲು ಬಂದಿದ್ದ. ಆದರೆ ಕಾರಣಾಂತರದಿಂದ ಸಾಯುವುದನ್ನ ಒಂದು ವರ್ಷ ಮುಂದೂಡಿದ್ದಾನೆ . ನಿಜವಾಗಿ ಸಾಯಲು ಇವನಿಗೆ ಇರುವ ಧೈರ್ಯ ನೋಡಲು ಬಂದಿದ್ದೇನೆ. ನೀವೇ ಕೇಳಿ ಅವನು ಈಗ ಸಾಯಲು ಸಿದ್ದನಾಗಿದ್ದಾನೋ ಅಥವಾ ಸಾವಿಗೆ ಹೆದರಿ ಓಡಿಹೋಗುತ್ತಾನೋ ನೋಡೋಣ ಅಂದರು. ಎಲ್ಲರೂ ಆ ತರುಣನನ್ನೇ ಬಾಯಿಗೆ ಬಂದಹಾಗೆ ಬೈದು. ಜೀವನ ಎಂದರೇನು. ಸಾಯುವುದು ಎಲ್ಲದಕ್ಕೂ ಪರಿಹಾರವಲ್ಲ ಎಂದು ಹೇಳಿ ಹೊರಟು ಹೋದರು. ನಗುತ್ತಾ ಉದ್ಯಮಿ ಹೇಳಿದರು ನನಗೆ ನಿನ್ನ ಸಾವಿನಿಂದ ಸಂತೋಷ ಅಥವಾ ಲಾಭವಿಲ್ಲ ಆದರೆ ನಿಮ್ಮಂತಹ ಯುವಕರಿಗೆ ಪಾಠ ಕಲಿಸಬೇಕೆಂಬ ಉದ್ದೇಶ ಮಾತ್ರನನ್ನದಾಗಿತ್ತು ನಡಿ ಮನೆಗೆ ಹೋಗೋಣ ಅಂತ ಹೇಳಿ ಕರಾರು ಪಾತ್ರವನ್ನ ನೀನೇ ಹರಿದು ಹಾಕೆಂದು ಕೊಟ್ಟರು. ಅಲ್ಲಿಯವರೆಗೆ ಸಾವಿನ ದವಡೆಯಲ್ಲಿದ್ದವನು ತನ್ನ ಕೋಪವನ್ನ ಪತ್ರ ಹರಿಯುವ ಮೂಲಕ ತೀರಿಸಿಕೊಂಡು ಕಾರು ಹತ್ತಿದ.