ಭಟ್ಟಂಗಿ ಪುರಾಣ!!
ಭಟ್ಟಂಗಿ ಪುರಾಣ!!
ನನಗೆ ಕವಿ ಪುಂಗವನಾಗಬೇಕೆಂಬ ಬಯಕೆ ಮೊದಲಿನಿಂದಲೂ ಇತ್ತು. ಕಾಲೇಜು ಕನ್ಯಾಮಣಿಗಳನ್ನು ನೋಡುವಾಗ ಮತ್ತಷ್ಟೂ ಪುಷ್ಟಿ ಸಿಗುತ್ತಿತ್ತು. ಸಮಯ ಸಿಕ್ಕಾಗ ಬರೆದಿಡುವ ಅಭ್ಯಾಸ. ಮದುವೆ ನಂತರ ನಾನು ಬರೆದ ಕವನ ಸಂಗ್ರಹ ಮೂಲೆಯೊಂದರಲ್ಲಿ ಜಾಗ ಪಡೆದು ಜಿರಲೆಗಳಿಗೆ ಆಹಾರವಾಯಿತು! ಬರೆದಿದ್ದಕ್ಕೂ ಸಾರ್ಥಕವಾಯಿತು ಎಂದು ತೃಪ್ತಿ ಪಟ್ಟೆ.
ಮನದಾಳದ ಬಯಕೆ ಇತ್ತೀಚೆಗೆ ಕೈ ಗೂಡಿತು. ಕವನಗಳನ್ನು ಬರೆದೆ. ಓದಿದೆ. ಸರಸ್ವತಿ ಸಮ್ಮಾನ್ ಗೌರವದ ಕನಸೂ ಕಂಡೆ. ಈ ನನ್ನ ಕನಸಿಗೆ ನೀರೆರದವರು ಸ್ನೇಹಿತ ಜೋಗಿ ಗಿರೀಶ್. ನನ್ನ ಕವನ ಓದಿ ಸುವರ್ಣಾಕ್ಷರದಲ್ಲಿ ದಪ್ಪವಾಗಿ ಬರೆದ. ಅದು ನನ್ನ ಪಾಲಿಗೆ ತಾಮ್ರ ಪತ್ರ! " ಮಿತ್ರ ರಾಸೋ ರಚಿಸುರುವ ಕವನಗಳು ಅದ್ಬುತ. ಮೇರು ಕವಿಗಳ ಸಾಲಿನಲ್ಲಿ ನಿಲ್ಲುವ ಸಾಹಿತಿ. ಇವರ ಕವನ ಓದುವಾಗ ಮತ್ತೊಬ್ಬ ಬೇಂದ್ರೆ, ಕುವೆಂಪು, ನರಸಿಂಹ ಸ್ವಾಮಿಯವರು ಸಿಕ್ಕಿದಂತಾಗಿದೆ ಎಂಬ ಭಾವನೆ ಮೂಡಿತು"
ಪದೇ ಪದೇ ಓದಿದೆ. ಓದಿದಷ್ಟೂ ತಣಿಯದು. ನನ್ನ ಕವನದ ತೂಕವನ್ನು ನನ್ನ ಸ್ನೇಹಿತ ಮಾತ್ರ ಗ್ರಹಿಸಬಲ್ಲ. ಮುಖದ ಮೇಲೆ ಮೂಗಿರುವ ಪರಿಚಿತರಿಗೆ ಕವನ ಮತ್ತು ಸ್ನೇಹಿತನ ತಾಮ್ರ ಪತ್ರ ರವಾನಿಸಿದೆ!
ಕನಸ್ಸಿನಲ್ಲೂ ತಾಮ್ರ ಪತ್ರ! ನಾನೇ ಬೇಂದ್ರೆ! ನಾನೇ ಕುವೆಂಪು! ನಾನೇ....
ನನ್ನ ಹುಚ್ಚಾಟ ಅತಿಯಾಯಿತೆಂದು ಗ್ರಹಿಸಿದ ಧರ್ಮ ಪತ್ನಿ ತಾಯತ ಕಟ್ಟಿಸಿದಳು! ಪ್ರಯೋಜನವಾಗಲಿಲ್ಲ. ಟಿ.ವಿ.ಯಲ್ಲಿ ಬ್ರಹ್ಮಾಂಡ ಗುರೂಜಿ ಕಾರ್ಯಕ್ರಮ ನೋಡಿ, ಫೋನ್ ಮಾಡಿ ಪರಿಹಾರ ಕೋರಿದಳು.
"ಮುಂಡಾ ಮೋಚ್ತು. ಇದು *ಭಟ್ಟಂಗಿ* *ದೃಷ್ಟಿ ದೋಷ* ಬೇಗ ಪರಿಹಾರ ಮಾಡ್ಕೋ. ತಾಳಿ ಭಾಗ್ಯದ ಪ್ರಶ್ನೆ! ೫೦೧ ಕಳುಸು ಪರಿಹಾರ ಹೇಳ್ತೀನಿ."
ಬ್ರಹ್ಮಾಂಡರ ಗುರೂಜಿ ವಾಣಿಗೆ ಬೆದರಿದಳು. ಹಾಗೂ ಹೀಗೂ ಚೌಕಾಸಿ ಮಾಡಿ ೧೦೧ ರೂಪಾಯಿ ಕೊಡಲು ಒಪ್ಪಿದಳು. ಗುರೂಜಿ ಪರಿಹಾರ ಸೂಚಿಸಿದರು.
" ಭಟ್ಟಂಗಿ ಪರಿಹಾರವಾಗಬೇಕಾದರೆ ೫ ನಿಂಬೆ ಹಣ್ಣನ್ನು ನಿನ್ನ ಗಂಡನ ತಲೇ ಮೇಲಿಟ್ಟು, ಭಟ್ಟಂಗಿ ದೋಷ ಪರಿಹಾರವಾಗಲಿ ಅಂತ ಐದು ಬಾರಿ ಗುದ್ದಬೇಕು"
ಗುರೂಜಿ ಸೂಚನೆ ಮೇರೆಗೆ ನಿಂಬೆಹಣ್ಣು ಸ್ಪೆಷಲಿಸ್ಟ್ ರೇವಣ್ಣನವರಿಂದ ಐದು ನಿಂಬೆ ಹಣ್ಣು ತರಿಸಿ, ಬ್ರಹ್ಮಾಂಡ ಗುರೂಜಿ ಹೇಳಿದಂತೆ ತಲೆ ಮೇಲಿಟ್ಟು ಗುದ್ದಿದಳು! ಆ ಒಂದೊಂದು ಗುದ್ದಿಗೂ ಅಮ್ಮಾ ಎಂದು ಚೀರಿದೆ! ಅತ್ತಿತ್ತ ನೋಡಿದೆ. ನಿಂಬೆ ಹಣ್ಣು ಕಾಣಲಿಲ್ಲ! ಧರ್ಮ ಪತ್ನಿ ಮಲಗಿದ್ದಳು!
ಗಡಿಯಾರ ನೋಡಿದೆ. ಮಧ್ಯರಾತ್ರಿ! ಕನಸು !?
ಜೋಗಿ ಜೋಗೇಶನ ತಾಮ್ರ ಪತ್ರ ನನ್ನ ಕೆಡಿಸಿತ್ತು. ವಾಸ್ತವದ ಅರಿವು ನನಗಾಗಿತ್ತು! 'ನಾನು ನಾನೇ... ಬೇಂದ್ರೆ, ಕುವೆಂಪು ಅವರಂತಾಗಲು ಜೀವನ ಪೂರ್ತಿ ರಾಗಿ ಬೀಸಬೇಕು'
ಹೌದು ಪ್ರಯತ್ನ ಸಾಗಿದೆ. ಅರಿವು ಮೂಡಿದೆ... ದಪ್ಪಕ್ಷರದ ತಾಮ್ರ ಪತ್ರ ನೀಡುವವರಿಂದ ದೂರವಿರಬೇಕು !! ಕನಸೂ ನನಸಾಗಬಹುದು.