ಬ್ರಹ್ಮ ಬರಹ!
ಬ್ರಹ್ಮ ಬರಹ!
ಭಗವಂತನ ನಿಯಮ ಮೀರಿ ಯಾವುದೂ ನಡೆಯುವುದಿಲ್ಲ. ಗೊತ್ತಿದ್ದರೂ ನಾನೇ ಎಲ್ಲಾ, ನನ್ನಿಂದಲೇ ಎಂಬ ಅಹಂ ಮನುಷ್ಯನನ್ನು ಆವರಿಸಿ ವ್ಯಕ್ತಿತ್ವನ್ನು ಕೊಲ್ಲುತ್ತದೆ!
ಬ್ರಹ್ಮ ಲಿಖಿತ ಅಳಿಸಲಾಗದು. ಹಾಗೆಂದು ಕೈಕಟ್ಟಿ ಕುಳಿತು ಕೊಳ್ಳಬಾರದು. ಇದೂ ಸಹ ಭಗವಂತನ ಆಜ್ಞೆ.
ದೇವ ಋಷಿ ನಾರದರಿಗೆ ಅಹಂ ಆವರಿಸುತ್ತದೆ. ಅಪ್ಪ ಬರೆದಿರುವುದೆಲ್ಲಾ ಸತ್ಯವಲ್ಲ. ಈ ಸತ್ಯವನ್ನು ಬ್ರಹ್ಮನಿಗೆ ತಿಳಿಸಬೇಕೆಂಬ ತವಕ ನಾರದರಿಗೆ. ಇದೇ ಗುಂಗಿನಲ್ಲಿ ಭೂ ಲೋಕದತ್ತ ಪಯಣ ಮಾಡುತ್ತಾರೆ. ನಾನಾ ಜನರನ್ನು ಸಂಪರ್ಕಿಸಿ ಅವಲೋಕನ ಮಾಡುತ್ತಾರೆ.
ಬ್ರಹ್ಮನ ಬರಹದಂತೆಯೇ ನಡೆಯುತ್ತಿದೆ! ಅಪ್ಪನ ಬರಹ ಮೀರಿ ಏನೂ ನಡೆಯುತ್ತಿಲ್ಲ!!
ಬೇಸರದಿಂದ ಸಮುದ್ರ ತೀರದಲ್ಲಿ ನಡೆದುಕೊಂಡು ಹೋಗುವಾಗ ಕಾಲಿಗೆ ಏನೋ ತಗಲಿ ಮುಗ್ಗರಿಸುತ್ತಾರೆ. ಹಿಂತಿರುಗಿ ನೋಡುತ್ತಾರೆ. ಮನುಷ್ಯನ ತಲೆ! ಬಿಸಿಲಿಗೆ ಒಣಗಿ ಬರೀ ಮೂಳೆ! ಕೈಯಲ್ಲಿ ಹಿಡಿದುಕೊಂಡು ನೋಡುತ್ತಾರೆ. ಹಣೆಯ ಭಾಗದಲ್ಲಿ ಬ್ರಹ್ಮನ ಬರಹ! ದಿಟ್ಟಿಸಿ ನೋಡುತ್ತಾರೆ. ಹೌದು
ಬ್ರಹ್ಮ ಬರಹವೇ! ಓದುತ್ತಾರೆ.
" ಜನ್ಮ ಪ್ರಭೃತಿ ದಾರಿದ್ರ್ಯಂ
ದಶ ವರ್ಷಾಣಿ ಬಂಧನಮ್
ಸಮುದ್ರ ತೀರೇ ಮರಣಂ
ಕಿಂಚಿಂತ್ ಭೋಗಂ ನ ಪಶ್ಯತಿ"
ಅಪ್ಪನ ಬರಹ ಓದಿದ ನಾರದರಿಗೆ ನಗು ಬರುತ್ತದೆ. ಬ್ರಹ್ಮ ಬರಹ ತಪ್ಪಿದೆ. ಅಪ್ಪನ ತಪ್ಪು ಲೆಕ್ಕಾಚಾರವನ್ನು ಪತ್ತೆ ಹಚ್ಚಿದ ಗೆಲುವಿನ ನಗೆ ಬೀರುತ್ತಾರೆ. ಬ್ರಹ್ಮನಿಗೆ ಮನದಟ್ಟು ಮಾಡಲು ತಲೆ ಬುರುಡೆಯನ್ನು ಜೋಪಾನವಾಗಿ ಜೋಳಿಗೆಯಲ್ಲಿರಿಸಿಕೊಂಡು ಬ್ರಹ್ಮ ಲೋಕಕ್ಕೆ ಹೊರಡುತ್ತಾರೆ. ಬ್ರಹ್ಮನ ಬಳಿ ಬಂದು ನಕ್ಕು ಹೇಳುತ್ತಾರೆ.
" ಪಿತನೆ, ನಿಮ್ಮ ಬರಹೇ ಅಂತಿಮವಲ್ಲ. ಅದು ಮೀರಿ ನಡೆಯುತ್ತದೆ" ಎಂದು ತಲೆ ಬುರುಡೆಯನ್ನು ಕೊಟ್ಟು ಓದಲು ತಿಳಿಸುತ್ತಾರೆ. ಬ್ರಹ್ಮ ಓದಿ, "ವತ್ಸ ನನ್ನ ಬರಹದಂತೆಯೇ ಆಗಿದೆ " ಎನ್ನುತ್ತಾನೆ.
ನಾರದರಿಗೆ ನಗು ತಡೆಯಲಾರದೆ ನಕ್ಕು ಕೇಳುತ್ತಾರೆ.
" ಜೀವನಪೂರ್ತಿ ದರಿದ್ರತೆ, ಹತ್ತು ವರ್ಷಗಳ ಬಂಧನ, ಸಮುದ್ರ ತೀರದಲ್ಲಿ ಮರಣ, ಅತ್ಯಲ್ಪ ಭೋಗವನ್ನು ನೋಡುವ ಭಾಗ್ಯವಿಲ್ಲ" ಇದು ತಮಾಷೆಯಲ್ಲವೇ ??
ಬ್ರಹ್ಮ ಹೇಳುತ್ತಾನೆ. ಈ ಪಾಪಿಯ ಶಿರವನ್ನು ಸ್ವಯಂ ಬ್ರಹ್ಮರ್ಷಿ ನಾರದರೇ ಬ್ರಹ್ಮ ಲೋಕಕ್ಕೆ ತಂದಿರುವುದು ಸಾಮಾನ್ಯ ಭಾಗ್ಯವೇ ? ಬ್ರಹ್ಮರ್ಷಿ ನಾರದರಿಂದಲೇ ಶಾಶ್ವತ ಬ್ರಹ್ಮ ಲೋಕ ಸೇರಿದರೂ, ನೋಡಲು ಆತನಿಲ್ಲ! ಇದು ಸತ್ಯವಲ್ಲವೇ?
ಬ್ರಹ್ಮನ ಮಾತು ಕೇಳಿ, ನಾರದರಿಗೆ ನಾಚಿಕೆಯಾಗುತ್ತದೆ. *ಅಹಂ* ಎಂಬ ಮಾಯೆ ಆವರಿಸಿದ ಪರಿಣಾಮ ಅಪ್ಪನನ್ನು ಅವಮಾನಿಸಿದೆನೆಂದು ಪಶ್ಚಾತ್ತಾಪ ಪಡುತ್ತಾರೆ. ಅಹಂ ಮನುಷ್ಯನ ವ್ಯಕ್ತಿತ್ವನ್ನು ಸುಡುತ್ತದೆ ಎಂಬ ಸತ್ಯವನ್ನು ಅರಿಯುತ್ತಾರೆ.