Revati Patil

Tragedy Classics Inspirational

4.5  

Revati Patil

Tragedy Classics Inspirational

ನೀ ಸಿಗದೇ, ಬಾಳೊಂದು ಬಾಳೇ?

ನೀ ಸಿಗದೇ, ಬಾಳೊಂದು ಬಾಳೇ?

4 mins
1.4K


ಅವಳ ಕಣ್ಣುಗಳು ಸಮಾರು ಎರಡು ನಿಮಿಷದಿಂದಲೂ ಮಿಟುಕದೆ ಅದೇನನ್ನೋ ಕಣ್ಣಲ್ಲೇ ಕೊರೆಯಲು ಹುನ್ನಾರ ನಡೆಸುವಂತೆ ತದೇಕ ಚಿತ್ತವಾಗಿ ಕೆಂಪಾಗುತಿದ್ದ ದಿಗಂತವನ್ನೇ ನೋಡುತ್ತಿದ್ದವು. ಕಣ್ಣ ಮುಂದೆ ಪೂರ್ತಿ ಮಲೆನಾಡೇ ಚಿಕ್ಕ ಚಿಕ್ಕ ತುಂಡುಗಳಾಗಿ ಬಿಳುತ್ತಿರುವಂತೆ ಬಾಲ್ಕನಿಯ ಗೋಡೆಗೆ ಜೋತಾಡುತ್ತಿದ್ದ ಹಸಿರು ತುಂಬಿದ ಬಳ್ಳಿಗಳು, ಇವಳು ಕೂತ ಕುರ್ಚಿಯ ಮುಂದೆ ನಾವು ನಿನಗಿಂತ ಸುಂದರಿಯರು ಎನ್ನುವಂತೆ ಕಾಣುತ್ತಿದ್ದವು.  ಸಂಜೆಯಾಗುತ್ತಿದ್ದಂತೆ ಆಕಾಶದ ನೀಲಿ ಬಣ್ಣ ಕೊಂಚ ಕೊಂಚ ಕರಗುತ್ತ ಕೆಂಪಾದ ಹಾಗೇ ಇವಳ ನೋಟವಿನ್ನೂ ತೀಕ್ಷ್ಣವಾಗತೊಗತೊಡಗಿತು. ಇಳಿಬಿಟ್ಟ ಕೂದಲುಗಳು, ಕಣ್ಣಲ್ಲಿ ಏನೋ ರಹಸ್ಯ ಭೇದಿಸುವ ಚಡಪಡಿಕೆ.


(ಆಶ್ಲೇಷಾ.........)

ಯಾರೋ ಇವಳನ್ನು ಕರೆದಿದ್ದು ಇವಳ ಕಿವಿಗೆ ಕ್ಷೀಣವಾಗಿ ಕೇಳಿದರೂ, ಓಗೊಟ್ಟು ಏನೆಂದು ಕೇಳುವ ಮನಸ್ಸಾಗಲಿಲ್ಲ ಆಶ್ಲೇಷಾಳಿಗೆ. ರೇಡಿಯೋದಲ್ಲಿ ಬರುತ್ತಿದ್ದ ಲಕ್ಷ್ಮೀ ನಾರಾಯಣ ಭಟ್ಟರ ಭಾವಗೀತೆಗೆ ತನಗೇ ಗೊತ್ತಿಲ್ಲದಂತೆ ದನಿಗೂಡಿಸಿದಳು.



" ಎಲ್ಲಿ ಜಾರಿತೋ ಮನವು

ಎಲ್ಲಿ ಜಾರಿತೋ "


ಅವಳ ಮನಸ್ಸೆಲ್ಲೋ ಸಂಚಾರ ಹೊರಟಿತ್ತು.

ಒಂದೇ ಕ್ಷಣ ಬೆಚ್ಚಿದವಳಂತೆ ಒಮ್ಮೆ ಕಣ್ಣು ಮುಚ್ಚಿ, ಕಣ್ಣು ಬಿಟ್ಟಳು ಆಶ್ಲೇಷಾ. ಎದುರಿಗೆ ಅಮ್ಮ ನಿಂತಿದ್ದಳು.


"ಏನೇ ಆಗಿದೆ ನಿಂಗೆ? ಆವಾಗ್ಲಿಂದ ಕೂಗ್ತಿರೋದು ಕೇಳ್ತಿಲ್ವಾ? ಹಾಡಿನ ಹುಚ್ಚು ಬಿಟ್ಟು ಬೇರೆ ಪ್ರಪಂಚನೇ ಇಲ್ಲಾ ಈಗಿನ ಕಾಲದ ಮಕ್ಕಳಿಗೆ. ಸರಿ ಬಾ ಕೆಳಗೆ, ಅಪ್ಪಾ ಬಂದಿದಾರೆ. ಮದ್ಯಾಹ್ನ ಊಟ ಬೇರೆ ಮಾಡಿಲ್ಲ ನೀನು, ಏನಾದರೂ ಮಾಡಿ ಕೊಡ್ತೀನಿ"



ಮತ್ತೆ ಇವಳು ಮೌನಿ.



"ಆಶು ಪುಟ್ಟ, ಅಮ್ಮ ಆಶು ಪುಟ್ಟ, ಏನಮ್ಮ ಮಾಡ್ತಿದೀಯ? ಊಟ ಯಾಕೋ ಮಾಡಿಲ್ಲ ನೀನು ಮಧ್ಯಾಹ್ನ? ನನಗೆ ಮಂಡಿ ನೋವು ಕಣಮ್ಮ, ಇಷ್ಟು ಮೆಟ್ಟಿಲು ಹತ್ತಿ ಮೇಲೆ ಬರೋದು ಕಷ್ಟ ಕಣಮ್ಮ. ತಗೋ ನಿಮ್ಮಮ್ಮ ಟೀ, ಬಜ್ಜಿ ಮಾಡಿದಾಳೆ ಇಬ್ರಿಗೂ ಸೇರಿಸಿ ತಂದಿದೀನಿ. ಬೇಗ ತಿಂದ್ಬಿಡು. ಆರಿದ್ರೆ ರುಚಿಸಲ್ಲ"



"ಹೌದಪ್ಪ, ಆರಿದ ಮೇಲೆ ರುಚಿಸಲ್ಲ "



"ಆಶು ಪುಟ್ಟ, ಎಷ್ಟು ದಿನ ಈ ಮೌನ ಯುದ್ಧ? ಇಂದಲ್ಲ ನಾಳೆ ಬಂದಾನು, ಅವನು ಬಂದಾಗ ನೀನು ಆರೋಗ್ಯವಾಗಿ ಕಾಣಬೇಡವೇ? ಸುಂದರವಾಗಿ ಸ್ವಾಗತ ಕೋರಬೇಡವೇ? ಅದ್ವೈತ್ ಬಂದಾಗ ನೀನು ಹೇಗಿರಬೇಕು ಅಂದ್ರೆ....

(ತಂದೆಗೆ ಮಾತು ಹೊರಳದೆ ದುಃಖ ಒತ್ತರಿಸಿ ಬಂದು ಮನೆಯೊಳಗೆ ಹೊರಟರು )



"ಎಲ್ಲಿ ಜಾರಿತೋ ಮನವು ಎಲ್ಲಿ ಜಾರಿತೋ "

(ಮೊಬೈಲಿನಲ್ಲಿ ಅದೊಂದೇ ಹಾಡನ್ನು ಕೇಳಿಸಿಕೊಳ್ಳುತ್ತಾ ಕೂತಳು. ತನಗರಿವಿಲ್ಲದೆ ಬರುತ್ತಿದ್ದ ಕಣ್ಣೀರು ಎದೆಗಿಳಿಯಿತು. ಅವಳು ಮತ್ತದೇ ಮೌನಿ)


ಆಶ್ಲೇಷಾಳ ಮನಸ್ಸು ಈಗ ಅದ್ವೈತ್ ಬಗ್ಗೆ ಯೋಚಿಸತೊಡಗಿತು. ಆರು ವರ್ಷಗಳ ಗಟ್ಟಿ ಪ್ರೀತಿ ಅದು. ಕಾಲೇಜು ದಿನಗಳಿಂದಲೇ ಆಶ್ಲೇಷಾ, ಅದ್ವೈತ್ ಒಬ್ಬರನ್ನೊಬ್ಬರು ಇಷ್ಟ ಪಟ್ಟಿದ್ದರು. ಒಬ್ಬಳೇ ಮಗಳೆನ್ನುವ ಕಾರಣಕ್ಕೆ ಅವಳ ಹೆತ್ತವರು ಅದ್ವೈತ್ ಪಾಲಕರ ಜೊತೆ ಮಾತಾಡಿ ಮಕ್ಕಳ ನಿಶ್ಚಿತಾರ್ಥವನ್ನು ಸಹ ಮಾಡಿದ್ದರು. ಇನ್ನೊಂದಾರು ತಿಂಗಳಿಗೆ ಮದುವೆಯೆಂದು ನಿಶ್ಚಯವಾಗಿತ್ತು. ಅದ್ವೈತ್ ಹೆತ್ತವರು ಸಹ ಮುಂಬರುವ ಸೊಸೆಯನ್ನು ಬಹುವಾಗಿ ಇಷ್ಟಪಟ್ಟಿದ್ದರು. ಸರಳ, ನೇರ ವ್ಯಕ್ತಿತ್ವದ ಆಶ್ಲೇಷಾ ಅತ್ತೆ, ಮಾವನ ಪ್ರೀತಿಗೆ ಅದಾಗಲೇ ಅರ್ಥ ಕೊಟ್ಟಿದ್ದಳು.  ಅದ್ವೈತ್ RAW (ರಿಸರ್ಚ್ ಅನಾಲಿಸಿಸ್ ವಿಂಗ್ಸ್ ) ಗುಪ್ತಚರದಲ್ಲಿ ಕೆಲಸ ನಿರ್ವಹಿಸುತ್ತಿದ್ದ. ವರ್ಷ ಪೂರ್ತಿ ದೆಹಲಿಯಲ್ಲೇ ಇರಬೇಕಾಗುತ್ತಿತ್ತು. ರಜೆಯು ಅಷ್ಟಾಗಿ ಇರಲಿಲ್ಲ. ಹಾಗಾಗಿ ಮದುವೆಯು ಮುಂದೂಡುತ್ತಲೇ ಇತ್ತು. ಹೀಗೆ ಒಂದುಸಲ ರಜೆಗೆ ಬಂದಾಗ ಹಿರಿಯರೆಲ್ಲರೂ ಸೇರಿ ಅದ್ವೈತನಿಗೆ ಮದುವೆ ಮಾಡಿಕೊಂಡು ಹೆಂಡತಿ ಸಮೇತ ದೆಹಲಿಗೆ ಹೋಗುವಂತೆ ಹೇಳಿದಾಗ ಬಹಳ ಖುಷಿಯಿಂದಲೇ ಹುಂ ಗುಟ್ಟಿದ್ದ.



ಆಶ್ಲೇಷಾ ಅವನ ಕನಸು. ಅವಳನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ಆರಾಧಿಸುತ್ತಿದ್ದ. ಇಷ್ಟೊಂದು ಸಹನೆ ಇವಳಲ್ಲಿ ಹೇಗೆ ಎನ್ನುವುದೇ ಅವನಿಗೆ ಆಶ್ಚರ್ಯ. ಆರು ವರ್ಷದ ಪ್ರೀತಿಯಲ್ಲಿ ಒಮ್ಮೆಯೂ ಮಾತು ಬಿಟ್ಟವಳಲ್ಲ. ಕೆಲಸದ ಮಧ್ಯೆ ಅವಳ ಫೋನ್ ಕಾಲನ್ನು ಸ್ವೀಕರಿಸದೆ ಇದ್ದಾಗಲೂ ಯಾಕೆಂದು ಪ್ರಶ್ನಿಸಿದವಳಲ್ಲ. ಗಂಟೆಗಟ್ಟಲೆ ಫೋನ್ ಬ್ಯುಸಿ ಇದ್ದರೂ ಹೆಣ್ಣುಮಕ್ಕಳ ಸಹಜ ಸ್ವಭಾವ "ಯಾರದು?" ಎಂದೂ ಒಂದು ದಿನಕ್ಕೂ ತಮಾಷೆಗೂ ಕೇಳಿದವಳಲ್ಲ. ತನ್ನ ಕೆಲಸವನ್ನು ತನ್ನಷ್ಟೇ ಗೌರವಿಸುತ್ತಿದ್ದ ಆಶ್ಲೇಷಾ ಎಂದರೆ ಅದ್ವೈತ ಭಾವಪರವಶನಾಗುತ್ತಿದ್ದ. ಅವಳು ತನ್ನ ಅರ್ಧಾಂಗಿ ಆಗುತ್ತಿರುವುದು ತನ್ನ ಪುಣ್ಯವೇ ಎಂದುಕೊಂಡಿದ್ದ.



ಇತ್ತ ಆಶ್ಲೇಷಾ ಸಹ ಅದ್ವೈತನನ್ನು ಪ್ರಾಮಾಣಿಕವಾಗಿ ಪ್ರೀತಿಸಿದ್ದಳು. ತನ್ನವನ ಕೆಲಸದ ಆಸಕ್ತಿ, ಹೆತ್ತವರ ಮೇಲಿನ ಕಾಳಜಿ, ದೇಶಕ್ಕಾಗಿ ಎದೆಗೊಟ್ಟು ಹೊರಾಡುವ ಮನೋಭಾವ ಅವಳನ್ನು ಮೂಕವಿಸ್ಮಿತಳನ್ನಾಗಿ ಮಾಡಿತ್ತು. ಒಣ ಆಡಂಬರವಿಲ್ಲದ, ಹೆಣ್ಣಿನ ಮೇಲೆ ತನ್ನ ಪಾರುಪತ್ಯ ಸಾಧಿಸುವ ಅಲ್ಪಗುಣ ಗಂಡ ಅವನಾಗುತ್ತಿರಲಿಲ್ಲ ಎನ್ನುವ ಭರವಸೆ ಇವಳಿಗೆ ಇದ್ದೆ ಇತ್ತು. ಆರು ವರ್ಷದಲ್ಲಿ ಒಬ್ಬರನ್ನೊಬ್ಬರು ಸಂಪೂರ್ಣ ಅರಿತಿದ್ದರು. ಮದುವೆಯೊಂದು ಬಾಕಿ ಇತ್ತು.



ಅದೊಮ್ಮೆ ಅದ್ವೈತ್ ರಜೆಗೆಂದು ಬಂದಾಗ ಆಶ್ಲೇಷಾ ಜೊತೆ ಹೊರಗಡೆ ಸುತ್ತಾಡಲು ಹೊರಟರು. ಆರು ವರ್ಷಗಳಲ್ಲಿ ಒಮ್ಮೆಯೂ ಅವಳಿಗೆ ಮುತ್ತನ್ನು ನೀಡದ ಅದ್ವೈತ್ ಅವತ್ತೇಕೋ ಒಂದು ಹೆಜ್ಜೆ ಮುಂದಿಟ್ಟುಬಿಟ್ಟ. ಅವನನ್ನು ಧಿಕ್ಕರಿಸಲಾಗಲಿ, ತಿರಸ್ಕರಿಸಲಾಗಲಿ ಆಶ್ಲೇಷಾಳಿಗೂ ಮನಸ್ಸಾಗಲಿಲ್ಲ. ತಾನಾಗಲೇ ಅದ್ವೈತನ ಹೆಂಡತಿಯೆಂದೇ ಭಾವಿಸಿದ್ದಳು. ತನ್ನನ್ನೇ ತಾನು ಅವನಿಗರ್ಪಿಸಿಕೊಂಡಿದ್ದಳು. ಅವನು ಸಹ ಅವಳಿಗೆ ಮೋಸ ಮಾಡುವವನಲ್ಲ. ಆ ದಿನ ಕಳೆಯಿತು.


ಮದುವೆಗೆ ಇನ್ನೊಂದೇ ತಿಂಗಳಿತ್ತು. ಅದ್ವೈತ್ ಮತ್ತೆ ದೆಹಲಿಗೆ ಹೊರಟು ನಿಂತ. ಮದುವೆಗೆ 15 ದಿನ ಇದ್ದಾಗ ಬರುವುದಾಗಿ ತಿಳಿಸಿ ಹೆತ್ತವರ ಆಶೀರ್ವಾದ ಪಡೆದು, ಆಶ್ಲೇಷಾ ಮನೆಗೆ ಬಂದು ಅತ್ತೆ ಮಾವನ ಆಶೀರ್ವಾದ ಪಡೆದು ಕೊನೆಗೆ ಆಶ್ಲೇಷಾಳ ಬಳಿಗೆ ಬಂದ. ಅವಳಾಗಲೇ ನಾಚಿಕೊಂಡು ನಿಂತಿದ್ದಳು. ಅವನೇನು ಮಾತಾಡದೇ ಹಣೆಗೊಂದು ಮುತ್ತು ಕೊಟ್ಟು " ಬರಲೇ " ಎಂದ. ಮೌನವಾಗಿಯೇ ತಲೆಯಾಡಿಸಿದಳು. ಅದೇ ಕೊನೆ ಮತ್ತೆ ಅವರಿಬ್ಬರ ಭೇಟಿ ಆಗಲೇ ಇಲ್ಲ.



ತಾನು ಅದ್ವೈತನನ್ನು ನಂಬಿದ್ದೆ ತಪ್ಪಾಯಿತೇ? ಅವನಿಗಾಗಿ ತನ್ನ ಹೆಣ್ತನವನ್ನೇ ಅರ್ಪಿಸಿಕೊಂಡಿದ್ದು ತಪ್ಪಾ? ಅವನು ತನ್ನವನಲ್ಲವೇ? ಯಾಕೆ ಅವನ ಸುಳಿವಿಲ್ಲ? ಅತ್ತೆ ಮಾವ ಕೂಡ ತನ್ನಿಂದ ಏನೋ ಮುಚ್ಚಿಡುತ್ತಿದ್ದಾರೆ. ತನಗೆ ಗೊತ್ತಿಲ್ಲದೇ ಅದ್ವೈತನಿಗೆ ಮತ್ತೊಂದು ಮದುವೆ ಮಾಡುತ್ತಿರಬಹುದೇ? ತನ್ನನ್ನೇಕೆ ಅತ್ತೆ ಮಾವ ಮನೆಗೆ ಬರದಂತೆ ನಿಷೇಧಿಸಿದ್ದಾರೆ? ತನ್ನಲ್ಲಿ ಏನು ಕೊರತೆ ಕಂಡು ಇನ್ನೊಬ್ಬ ಸೊಸೆಯನ್ನು ತರಲು ಬಯಸಿರಬಹುದು. ಸರಿ ಇವತ್ತು ಅದ್ವೈತ್ ಮನೆಗೆ ಹೋಗಿಯೇ ಸಿದ್ಧ ಎಂದುಕೊಂಡವಳೇ ಸರಸರನೆ ಕೆಳಗಿಳಿದು ಬಂದಳು. ಸಮಯ ಆಗಲೇ ಎಂಟು ಗಂಟೆ ಆಗಿತ್ತು.


ಮಗಳು ಸ್ನಾನ ಮಾಡಿ ರೆಡಿ ಆಗಿ ಬಂದದ್ದು ನೋಡಿ ಆಶ್ಲೇಷಾಳ ತಂದೆ ತಾಯಿಗೆ ಸಮಾಧಾನವಾಯಿತು. ಮಗಳು ಎಷ್ಟೋ ದಿನಗಳ ಮೇಲೆ ಈ ತರ ರೆಡಿ ಆಗಿದ್ದು ಎಂದುಕೊಂಡು ಅಪ್ಪನಂತೂ ಮಗಳ ದೃಷ್ಟಿ ತೆಗೆದರು.


"ಅಮ್ಮ, ನಾನು ಅದ್ವೈತ್ ಮನೆಗೆ ಹೋಗುತ್ತಿದ್ದೇನೆ "


"ಏನು??

(ಆಶ್ಲೇಷಾಳ ಹೆತ್ತವರಿಬ್ಬರೂ ಅಚ್ಚರಿಪಟ್ಟರು. ಕೋಪವೂ ಬಂದಿತು. )


"ಹೌದು. ತನ್ನ ಮದುವೆ ಮುರಿದು ಬಿದ್ದಿತು. ತನ್ನಲ್ಲಿ ಏನು ಕೊರತೆ ಇತ್ತು ಎನ್ನುವುದು ತನಗೆ ತಿಳಿಯಬೇಕು. ಮಗಳು ಮಗಳು ಎನ್ನುತ್ತಿದ್ದ ಅತ್ತೆ ಮಾವ ನನ್ನ ಜಾಗದಲ್ಲಿ ಇನ್ನೊಬ್ಬ ಸೊಸೆಯನ್ನು ತರಲು ಕಾರಣವೇನಿರಬಹುದು ಎಂದು ನನಗೇ ತಿಳಿಯಲೇಬೇಕು. ನಾನು ಹೋಗಲೇ ಬೇಕು"


"ಆಶು ಪುಟ್ಟ ಅದ್ವೈತ್ ಮನೆಯವರು ನೀನು ಅವರ ಮನೆಗೆ ಬರಕೂಡದು ಎಂದು ಹೇಳಿದ್ದಾರೆ. ಅವರು ಏನಾದರೂ ಮಾಡಲಿ, ನಿನಗೆ ಅದ್ವೈತನಿಗಿಂತ ಉತ್ತಮ ಹುಡುಗನನ್ನು ನಾನು ನೋಡುತ್ತೇನೆ. ನೀನಲ್ಲಿ ಹೋಗದಿರು ತಾಯೆ "


"ಅಪ್ಪಾ, ಆ ಉತ್ತಮ ಹುಡುಗನು ಕೊನೆಗಾಲಕ್ಕೆ ನನ್ನನ್ನು ತೊರೆದರೆ ಮತ್ತೊಂದು ಉತ್ತಮ ವರನನ್ನು ತರುತ್ತೀರಾ? ನನಗೇ ಅದ್ವೈತ್ ಮಾತ್ರ ಸ್ವಂತ. ಇವತ್ತು ಏನಾದರೂ ಸರಿ, ನನ್ನ ತಡೆಯದಿರಿ, ಬರುವುದು ತಡವಾದರೂ ಭಯಪಡಬೇಡಿ, ಸಾಯುವಷ್ಟು ಹೇಡಿ ನಾನಲ್ಲ"


(ಹೆತ್ತವರ ಮಾತಿಗೂ ಕಾಯದೆ ಸ್ಕೂಟಿಯೇರಿ ಹೋಗಿಯೇ ಬಿಟ್ಟಳು. ಅಚಾತುರ್ಯವೊಂದು ಘಟಿಸುತ್ತಲಿದೆ ಎಂದು ಆಶ್ಲೇಷಾಳ ಹೆತ್ತವರು ಅವಳ ಹಿಂದೆಯೇ ಕಾರಲ್ಲಿ ಅದ್ವೈತ್ ಮನೆ ಹೊರಟರು).


‌(ಡೋರ್ ಬೆಲ್ ರಿಂಗಾಯಿತು. ಅದ್ವೈತ್ ತಾಯಿ ಬಾಗಿಲು ತೆರೆದರೆ ಎದುರಿಗೆ ಆಶ್ಲೇಷಾ ನಿಂತಿದ್ದಳು . ಕೊಂಚ ಗಲಿಬಿಲಿ ಆದರೂ ಸಾವರಿಸಿಕೊಳ್ಳುತ್ತ )

‌"ಏನಮ್ಮ ಇಷ್ಟೊತ್ತಲ್ಲಿ ಒಬ್ಬಳೇ? ಈ ಮನೆಗೆ ನೀನು ಬರಕೂಡದೆಂದು ಹೇಳಿದ್ದು ಮರೆತೆಯಾ? ಬೆಳಗ್ಗೆ ಮಾತಾಡುವ, ಈಗ ಹೋಗು ಎಂದು ಮಾತಾಡುತ್ತಿರುವಾಗಲೇ ಅವರನ್ನು ಧಿಕ್ಕರಿಸಿ ಮನೆಯೊಳಗೆ ಬಂದೇಬಿಟ್ಟಳು ಆಶ್ಲೇಷಾ.

‌ ನಿಂತಲ್ಲೇ ಕುಸಿದಳು ಆಶ್ಲೇಷಾ ಗೋಡೆ ಮೇಲಿನ ಅದ್ವೈತ್ ಫೋಟೋ ನೋಡಿ !!

‌ಅಷ್ಟ್ರಲ್ಲಿ ಅದ್ವೈತ್ ತಂದೆ ಬಂದು ಆಶ್ಲೇಷಾಳನ್ನು ಸಮಾಧಾನ ಮಾಡಲು ಬಂದರು. ಆಶು ಪುಟ್ಟ ನಮ್ಮನ್ನು ಕ್ಷಮಿಸು, ಇದೇ ನಿಜ. RAW ಕೆಲಸದ ಮೇಲೆ ವಿದೇಶಕ್ಕೆ ಹೋದಾಗ ಅವನು ರಾ ಏಜೆಂಟ್ ಎಂದು ಅವರಿಗೆ ಅನುಮಾನ ಬಂದು ಅವನನ್ನು ಕೊಲೆ ಮಾಡಿದ್ದಾರೆ. ಈ ವಿಷಯ ಆಚೆಬರದಂತೆ ದೆಹಲಿಯಿಂದ ನಮಗೆ ಕರೆ ಬಂದಿತ್ತು. ಮದುವೆಗಿನ್ನು ಇಪ್ಪತ್ತು ದಿನಗಳಷ್ಟೇ ಇತ್ತು. ಮಗನಂತೂ ಹೋದ, ಏನು ತಪ್ಪು ಮಾಡದ ನಿನ್ನ ಜೀವನ ಹಾಳಾಗದಿರಲಿ ಎಂದು ನಿನ್ನೊಂದಿಗೆ ಕಠೋರವಾಗಿ ವರ್ತಿಸುವಂತೆ ನಾಟಕ ಮಾಡಬೇಕಾಯಿತು. ಇದು ನಿನ್ನ ತಂದೆ ತಾಯಿಗೂ ತಿಳಿದಿತ್ತು. ನಮ್ಮ ಮೇಲಿನ ಕೋಪಕ್ಕೆ ನೀನು ಇನ್ನೊಂದು ಮದುವೆ ಆಗಲಿ ಎನ್ನುವುದಷ್ಟೆ ನಮ್ಮ ಆಶಯವಾಗಿತ್ತು."

‌ಅಷ್ಟರಲ್ಲಿ ಆಶ್ಲೇಷಾಳ ಹೆತ್ತವರು ಅಲ್ಲಿಗೆ ಬಂದಿದ್ದರು.  ಸುತ್ತಲೂ ಎಲ್ಲರೂ ಇದ್ದು ಒಬ್ಬಂಟಿಯಾದಂತೆ ಅನಿಸಿತು ಆಶ್ಲೇಷಾಳಿಗೆ. ಗೋಡೆ ಮೇಲಿನ ಅದ್ವೈತ್ ಫೋಟೋ ತನ್ನನ್ನು ಅವನ ಪಕ್ಕ ಬಾಯೆಂದು ಕರೆದಂತೆ ಭಾಸವಾಗತೊಡಗಿತು. ತನ್ನವನನ್ನು ತಪ್ಪಾಗಿ ತಿಳಿದಿದ್ದು ಅವಳನ್ನು ಇನ್ನಿಲ್ಲದಂತೆ ಕಾಡತೊಡಗಿತು. ಕಣ್ಣು ಕತ್ತಲುಗಟ್ಟಿತು ಆಶ್ಲೇಷಾಳಿಗೆ.

‌"ನೀ ಸಿಗದೇ, ಬಾಳೊಂದು ಬಾಳೇ "

(ಲಕ್ಷ್ಮೀ ನಾರಾಯಣ ಭಟ್ಟರ ಗೀತೆ ಕೇಳುತ್ತಿತ್ತು)


Rate this content
Log in

Similar kannada story from Tragedy