ಬಯಸಿ ಬಂದ ಭಾಗ್ಯ
ಬಯಸಿ ಬಂದ ಭಾಗ್ಯ
ಟೌನ್ ಮುನ್ಸಿಪಲ್ ಕೌನ್ಸಿಲ್, ರಾಘವಪುರ ಕಚೇರಿಯಲ್ಲಿ ದ್ವಿತಿಯ ದರ್ಜೆ ಗುಮಾಸ್ತ ಎಂದು ಕೆಲಸ ಮಾಡುತ್ತಿದ್ದ ಇಪ್ಪತ್ತಾರು ವರ್ಷದ ಶಶಿಕಾಂತ ಕೆಲಸ ಮುಗಿಸಿ ಹೊರಗೆ ಬಂದಾಗ ಸಮಯ ಸಾಯಂಕಾಲ ಐದು ಗಂಟೆ ಮೂವತ್ತು ನಿಮಿಷ. ಸೂರ್ಯಾಸ್ತಕ್ಕೆ ಇನ್ನೂ ಸಮಯ ಇದ್ದು ಬಿಸಿಲು ಇದ್ದರೂ ತಾಪ ಇರಲಿಲ್ಲ. ಆಫೀಸ್ ಕಂಪೌಂಡ್ ಒಳಗೆ ಇರುವ ಬೆಂಚ್ ಮೇಲೆ ಅವನು ಕುಳಿತು ಮೊಬೈಲ್ ನಿಂದ ಮಾತನಾಡುವ ದರಲ್ಲಿ ನಿರತನಾದ. ಆಕಾಶದಲ್ಲಿ ಮೋಡಗಳು ಬಂದು ಭಾರಿ ಮಳೆ ಆಗುವ ಎಲ್ಲ ಲಕ್ಷಣಗಳು ಗೋಚರವಾಯಿತು. ಬೇಗ ಮನೆಗೆ ಹೋಗು ಎಂದು ಸಹೋದ್ಯೋಗಿ ಸತ್ಯನಾರಾಯಣ ಎಚ್ಚರಿಕೆ ಕೊಟ್ಟರೂ ಅವನ ಮಾತಿಗೆ ಕಿವಿ ಕೊಡದೇ ತನ್ನ ಮೊಬೈಲ್ ಸಂಭಾಷಣೆ ಮುಂದು ವರೆಸಿದ. ಅರ್ಧ ಗಂಟೆ ನಂತರ ನಿರೀಕ್ಷಿಸಿದಂತೆ ಭಾರಿ ಮಳೆ,ಸಿಡಿಲು ಹಾಗೂ ಗುಡುಗು ಆಗಿ ವಿದ್ಯುತ್ ಸರಬರಾಜು ನಿಂತು ಹೋಯಿತು. ಅಂದು ಅಮಾವಾಸ್ಯೆ ಇರುವದರಿಂದ ಎಲ್ಲ ಕಡೆ ಗಾಢಾಂಧಕಾರ. ಆಫೀಸ್ ಒಳಗೆ ಹೋಗಬೇಕು ಎಂದು ಶಶಿಕಾಂತ ನೋಡಿದಾಗ ಬಾಗಿಲು ಮುಚ್ಚಿತ್ತು. ಅವನಿಗೆ ತುಂಬಾ ಗಾಬರಿ ಆಯಿತು. ಕೊಡೆ, ರೇನ್ ಕೋಟ್ ಇರದೇ ಒದ್ದಾಡಿದ. ಸಮೀಪದದಲ್ಲಿ ನಿಲ್ಲಲು ಆಸರೆಗೆ ಏನೂ ಇರಲಿಲ್ಲ. ರಭಸದ ಮಳೆ ನೀರು ತಲೆ ಮೇಲೆ ಬೀಳುವ ದರಿಂದ ನಡುಕ ಬಂದು ಎಚ್ಚರ ತಪ್ಪಿ ಅಲ್ಲಿಯೇ ಕುಸಿದು ಬಿದ್ದ.
ಶಶಿಕಾಂತನ ಮನೆಯಲ್ಲಿ ಇರುವವರು ವೃದ್ಧ ತಂದೆ ತಾಯಿ. ರಾತ್ರಿ ಎಂಟು ಗಂಟೆ ಆದರೂ ಮಗ ಮನೆಗೆ ಬರದೇ ಇರುವದರಿಂದ ಶಶಿಕಾಂತ ನ ತಂದೆ ರಾಮರಾಜು ತಲೆ ಮೇಲೆ ಕೈ ಇಟ್ಟು ಕುಳಿತಿದ್ದನ್ನು ನೋಡಿದ ಪತ್ನಿ ವಸುಂಧರ ಪಕ್ಕದ ಮನೆ ಭಾಗ್ಯ ಅವರಿಗೆ ಹೇಳಿ ಎಂದಳು. ಇಬ್ಬರೂ ಆಕೆ ಮನೆಗೆ ಹೋದರು. ಇಪ್ಪತ್ತೈದು ವರ್ಷದ ಭಾಗ್ಯ ಆದೇ ನಗರದಲ್ಲಿ ಇರುವ ಸಂಜೀವಿನಿ ಆಸ್ಪತ್ರೆಯಲ್ಲಿ ನರ್ಸ್ ಎಂದು ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಳು.
"ಭಾಗ್ಯ, ನನ್ನ ಮಗ ಇನ್ನೂ ಮನೆಗೆ ಬಂದಿಲ್ಲ. ಭಾರಿ ಮಳೆಯಲ್ಲಿ ಸಿಕ್ಕಿ ಹಾಕಿಕೊಂಡು ಕಷ್ಟ ದಲ್ಲಿ ಇರಬಹುದು ಸಹಾಯ ಮಾಡುವಿರಾ? ಎಂದು ಆಕೆಗೆ ಇಬ್ಬರೂ ಕೈ ಜೋಡಿಸಿ ವಿನಂತಿ ಮಾಡಿದರು.
"ನೀವು ಹಿರಿಯರು. ಹೀಗೆಲ್ಲ ಕೈ ಜೋಡಿಸಬೇಡಿ. ನಿಮ್ಮ ಮಗನನ್ನು ಮನೆಗೆ ಕರೆದುಕೊಂಡು ಬರುವ ಜವಾಬ್ದಾರಿ ನನ್ನದು. ನೀವು ನಿಶ್ಚಿಂತೆಯಿಂದ ಮನೆಗೆ ಹೋಗಿ," ಎಂದಳು.
ಆಗ ವೃದ್ಧ ದಂಪತಿ ಆಕೆಗೆ ಆಶೀರ್ವಾದ ಮಾಡಿ ತಮ್ಮ ಮನೆಗೆ ಬಂದರು.
ಆ ಸಮಯದಲ್ಲಿ ಅದೇ ತಾನೆ ಮಳೆ ನಿಂತು ವಾತಾವರಣ ನಿರ್ಮಲವಾಗಿತ್ತು. ಭಾಗ್ಯ ಡ್ಯೂಟಿ ಮುಗಿಸಿ ಮನೆಗೆ ಬಂದು ಐದು ನಿಮಿಷ ಆಗಿತ್ತು. ಬೆಳಗ್ಗೆ ಒಂಭತ್ತು ಗಂಟೆಗೆ ಊಟ ಆಗಿತ್ತು. ಇನ್ನೇನು ಅಡುಗೆ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವದರಲ್ಲಿ ಜವಾಬ್ದಾರಿಯುತ ಕೆಲಸ ಒಪ್ಪಿಕೊಂಡಾಗಿದೆ. ಪರಿಸ್ಥಿತಿಯನ್ನು ಆರ್ಥ ಮಾಡಿಕೊಂಡು ಹಾಗೆ ಎಲ್ಲವನ್ನು ಬಿಟ್ಟು ಹೊರಗೆ ಬಂದಳು.
ರಾಘವಪುರ ಚಿಕ್ಕ ನಗರ ಇದ್ದರೂ ಶಶಿಕಾಂತ ಎಲ್ಲಿ ಇರುವನು ಎಂದು ಹೇಗೆ ಹುಡುಕಬೇಕು?
ಪಕ್ಕದ ಮನೆಯವರು ಇರುವದರಿಂದ ಭಾಗ್ಯಗೆ ಶಶಿಕಾಂತ ಯಾವಾಗಲೂ ಹೋಗುವ ಎರಡು, ಮೂರು ಕಡೆ ಮೊಬೈಲ್ ನಿಂದ ವಿಚಾರಿಸಿದಳು. ಇಲ್ಲಿ ಬಂದಿಲ್ಲ ಎಂದು ಉತ್ತರ ಬಂದಿತು. ಅಲ್ಲಿಯೇ ಇದ್ದ ಅಟೋದವನಿಗೆ ಭಾಗ್ಯ, ಟೌನ್ ಮುನ್ಸಿಪಲ್ ಆಫೀಸ್ ಗೆ ಹೋಗಲು ಹೇಳಿದಳು. ಐದು ನಿಮಿಷ ದಲ್ಲಿ ಅಲ್ಲಿ ಮುಟ್ಟದಳು. ಕಂಪೌಂಡ ಒಳಗೆ ಯಾರೂ ಕಾಣಲಿಲ್ಲ. ಗೇಟ್ ತೆಗೆದು ಒಳಗೆ ಹೋದಮೇಲೆ ಕಂಡ ದೃಶ್ಯ ಭಯಾನಕವಾಗಿತ್ತು. ಭಾಗ್ಯ ಧೈರ್ಯವಂತೆ ಇದ್ದರೂ ಶಶಿಕಾಂತನ ದುರವಸ್ಥೆ ನೋಡಿ ಹೌಹಾರಿದಳು. ನೆಲದ ಮೇಲೆ ಎಚ್ಚರ ತಪ್ಪಿ ಬಿದ್ದ ಶಶಿಕಾಂತನ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ಆಕೆ ತಡಮಾಡದೆ ಸಂಜೀವಿನಿ ಆಸ್ಪತ್ರೆಗೆ ಫೋನ್ ಮಾಡಿ ಅಂಬ್ಯುಲೆನ್ಸ ತರಿಸಿದಳು. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ (ICU) ದಲ್ಲಿ ಸೇರಿಸಿ ಚಿಕಿತ್ಸೆ ಬೇಗನೆ ಆಗುವ ವ್ಯವಸ್ಥೆ ಮಾಡಿದಳು. ಇದೆಲ್ಲ ಹತ್ತು ನಿಮಿಷಗಳಲ್ಲಿ ಆಯಿತು. ರಾಮರಾಜು ಅವರಿಗೆ ಆಗಿರುವದನ್ನು ತಿಳಿಸಿ ಗಾಬರಿ ಆಗಬೇಡಿ ಎಂದು ತಿಳಿಸಿದಳು. ಸ್ವಲ್ಪ ಹೊತ್ತು ನಿಂತು ನಂತರ ಮನೆಗೆ ಹೋದಳು. ಇಷ್ಟೆಲ್ಲಾ ಆಗುವದಕ್ಕೆ ರಾತ್ರಿ ಹತ್ತು ಗಂಟೆ.
ಒಂದು ವಾರದ ನಂತರ ಶಶಿಕಾಂತನ ಆರೋಗ್ಯ ಸಂಪೂರ್ಣವಾಗಿ ಸುಧಾರಿಸಿದ ಮೇಲೆ ಡಿಸ್ಛಾರ್ಜ ಮಾಡಿದರು. ಬಿಲ್ ರೂಪಾಯಿ ಎಪ್ಪತ್ತೈದು ಸಾವಿರ ನೋಡಿ ಶಶಿಕಾಂತನಿಗೆ ದಿಗ್ಭ್ರಮೆ ಹಾಗೂ ಚಿಂತೆ ಆಯಿತು. ಕಷ್ಟ ಪಟ್ಟು ಬಿಲ್ ಹಣದ ವ್ಯವಸ್ಥೆ ಮಾಡುವಲ್ಲಿ ಭಾಗ್ಯಸಹಾಯ ಮಾಡಿದಳು. ಬಿಲ್ ಪಾವತಿ ಮಾಡಿ ಮನೆಗೆ ಬಂದ.
ಭಾಗ್ಯ ಮಾಡಿದ ಉಪಕಾರ ಈ ಜನ್ಮದಲ್ಲಿ ಮರೆಯಲು ಆಗುವದಿಲ್ಲ ಎಂದು ಕೊಂಡಾಡಿದ ಶಶಿಕಾಂತ. ಮುಂದೆ ಭಾಗ್ಯ ಹಾಗೂ ಶಶಿಕಾಂತ ಅವರಿಬ್ಬರಲ್ಲಿ ಅನ್ಯೋನತೆ ಬೆಳೆದು ಪ್ರೀತಿ ಅಂಕುರಿಸಿತು. ಒಂದು ದಿವಸ ಶಶಿಕಾಂತ ನೇರವಾಗಿ ಭಾಗ್ಯಳನ್ನು ಕೇಳಿದ.
"ಭಾಗ್ಯ, ಅಂದು ನೀನು ಬಂದು ನನ್ನ ಜೀವ ಉಳಿಸಿದೆ. ನೀನಗೆ ಎಷ್ಟು ಕೊಂಡಾಡಿದರೂ ಕಡಿಮೆ. ನೀನು ಒಪ್ಪಿದರೆ ನಾವಿಬ್ಬರೂ ಬಾಳಸಂಗಾತಿ ಆಗೋಣವೇ?"
ಇದನ್ನು ಕೇಳಿದ ಭಾಗ್ಯಗೆ ಆಶ್ಚರ್ಯವಾಯಿತು.
"ಶಶಿ, ನಾನೊಬ್ಬ ಅನಾಥೆ. ಜಾತಿ, ಧರ್ಮ, ತಂದೆ ತಾಯಿ ಯಾವುದೂ ನನಗೆ ಗೊತ್ತಿಲ್ಲ. ನೀವು ಸಂಪ್ರದಾಯಸ್ಥರು. ಮಡಿ, ಮೈಲಿಗೆ, ಹಬ್ಬ ಹರಿದಿನಗಳಲ್ಲಿ ಪೂಜೆ ಪುನಸ್ಕಾರ ಮಾಡುವಿರಿ. ಮೇಲಾಗಿ ನನಗೆ ರೂಪ, ಲಾವಣ್ಯ ಇಲ್ಲ. ನಿಮ್ಮ ಜಾತಿಯ ಸುಂದರ ಹುಡುಗಿಯನ್ನು ಮದುವೆ ಆಗಿ ಸಂತೋಷದಿಂದ ಬಾಳು."
"ಭಾಗ್ಯ, ನಿನಗೆ ಮನಸಾರೆ ಪ್ರೀತಿಸಿದ್ದೇನೆ. ಬೇರೆ ಹುಡುಗಿ ನೋಡುವ ಪ್ರಶ್ನೆ ಬರುವದೇ ಇಲ್ಲ. ಒಂದುವೇಳೆ ನೀನು ನಿರಾಕರಿಸಿದರೆ ನಾನು ಜೀವಂತವಾಗಿ ಉಳಿಯುವದಿಲ್ಲ."
ಭಾಗ್ಯಗೆ ಧರ್ಮಸಂಕಟವಾಗಿ ಆಕೆಗೆ ಮಾತೇ ಬರಲಿಲ್ಲ.
ಅವರಿಬ್ಬರ ಸಂಭಾಷಣೆ ಕೇಳಿದ ರಾಮರಾಜು, ವಸುಂಧರ ಇವರಿಗೆ ಮಗನ ಮಾತು ಹಿಡಿಸಲಿಲ್ಲ. ಏಕೈಕ ಪುತ್ರ ಹೀಗೆ ಮಾಡಿದರೆ ಏನು ಮಾಡುಬೇಕು?
ಆಗ ವಸುಂಧರ, "ಭಾಗ್ಯ, ನಿನ್ನ ಬಗ್ಗೆ ಹೇಳಮ್ಮ?" ಎಂದು ಕೇಳಿದಳು.
"ಅಮ್ಮಾ, ನಾನು ಇಲ್ಲಿಂದ ಹದಿನೈದು ಕಿಲೋ ಮೀಟರ್ ದೂರ ಇರುವ ವೆಂಕಟಪುರ ಒಂದು ಚಿಕ್ಕ ಗ್ರಾಮದವಳು. ಅಲ್ಲಿ ಪುರಾತನ ವೇಂಕಟೇಶ್ವರ ದೇವಸ್ಥಾನ ಇರುವದರಿಂದ ಆ ಗ್ರಾಮಕ್ಕೆ ವೆಂಕಟಪುರ ಎನ್ನುವರು. ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಅಲ್ಲಿ ರಥೋತ್ಸವ ಹಾಗೂ ಜಾತ್ರೆ ಆಗುವದು. ಇಪ್ಪತ್ತೈದು ವರ್ಷದ ಹಿಂದೆ ಅಂದು ಗ್ರಾಮದ ಶಾನುಭೋಗ ಶಂಭುನಾಥ ಹಾಗೂ ಅವರ ಪತ್ನಿ ಚಾರುಮತಿ ಸಮಯಕ್ಕೆ ಸರಿಯಾಗಿ ಬಂದು ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬರುವಾಗ ಕಟ್ಟೆ ಮೇಲೆ ಅರು ತಿಂಗಳು ಮಗು ಒಂದೇ ಸಮನೆ ಅಳುತ್ತಾ ಇರುವದನ್ನು ನೋಡಿ ಅದು ಯಾರದು ಎಂದು ಕೇಳಿದರು. ಒಂದು ಗಂಟೆಯಿಂದ ಯಾರೂ ಮಗುವನ್ನು ತೆಗೆದುಕೊಳ್ಳಲು ಬರದೇ ಇರುವದರಿಂದ ಮಕ್ಕಳು ಇಲ್ಲದ ಅವರು ತಾವೇ ಮಗುವನ್ನು ದತ್ತು ತೆಗೆದುಕೊಂಡು ಭಾಗ್ಯ ಎಂದು ನಾಮಕರಣ ಮಾಡಿದರು. ಮುಂದೆ ಆ ಮಗುವಿನ ಲಾಲನೆ ಪಾಲನೆ ಮಾಡಿ ಬೆಳೆಸಿ ಕಾಲೇಜು ಬಿ ಎಸ್ಸಿ ನರ್ಸಿಂಗ್ ವರೆಗೆ ವಿದ್ಯಾಭ್ಯಾಸ ಮಾಡಿಸಿ ನಂತರ ರಾಘವಪುರದ ಸಂಜೀವಿನಿ ಆಸ್ಪತ್ರೆಯಲ್ಲಿ ಕೆಲಸ ಕೊಡಿಸಿದರು. ನಿಮ್ಮ ಮುಂದೆ ಇರುವ ನಾನು ಅದೇ ಭಾಗ್ಯ. ಆದರೆ ನನ್ನ ಮದುವೆ ನಿರ್ಧಾರ ತೆಗೆದುಕೊಳ್ಳುವವರು ನನ್ನ ತಂದೆ ತಾಯಿ ಸ್ಥಾನದಲ್ಲಿ ಇರುವ ಶಂಭುನಾಥ ಹಾಗೂ ಚಾರುಮತಿ."
ಇದನ್ನು ಕೇಳಿದ ರಾಮರಾಜು ಹಾಗೂ ವಸುಂಧರ ಸಂದಿಗ್ಧದಲ್ಲಿ ಸಿಕ್ಕಿ ಹಾಕಿಕೊಂಡರು. ಅಂತಿಮ ನಿರ್ಧಾರ ತೆಗೆದುಕೊಳ್ಳಲು ಮಗನಿಗೆ ಹೇಳಿದರು. ಶಶಿಕಾಂತ ತನ್ನ ಇಂಗಿತವನ್ನು ಹೇಳಿಯೇ ಬಿಟ್ಟ. ಅದರಂತೆ ಅವನು ಮದುವೆ ಆಗುವದಾದರೆ ಭಾಗ್ಯ ಜೊತೆಗೆ ಮಾತ್ರ ಎಂದ.
ಆದಷ್ಟು ಬೇಗನೆ ವೆಂಕಟಪುರ ಗ್ರಾಮಕ್ಕೆ ಹೋಗಿ ಶಾನುಭೋಗ ಶಂಭುನಾಥ ಹಾಗೂ ಚಾರುಮತಿ ಅವರನ್ನು ಭೇಟಿ ಆಗಿ ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂದ ಶಶಿಕಾಂತ. ಅದಕ್ಕೆ ಅವನ ತಂದೆ ತಾಯಿ ಒಪ್ಪದೇ ಅನ್ಯ ಮಾರ್ಗ ಇರಲಿಲ್ಲ. ರಾಮರಾಜು ಆವರು ಭಾಗ್ಯಗೆ ಯಾವಾಗ ಭೇಟಿ ಆಗಬೇಕು ಶಂಭುನಾಥ ಅವರಿಗೆ ಕೇಳು ಎಂದರು. ಅದರಂತೆ ಫೋನ ಮೂಲಕ ಆಕೆ ಕೇಳಿದಳು. ನಾಲ್ಕು ದಿವಸ ಆದಮೇಲೆ ಬರುವ ಭಾನುವಾರ ಬರಲು ಅವರು ತಿಳಿಸಿದರು.
ಆ ದಿವಸ ಬೆಳಗ್ಗೆ ಎಂಟು ಗಂಟೆಗೆ ಬಿಡುವ ಬಸ್ ಹಿಡಿದು ಎಲ್ಲರೂ ವೆಂಕಟಪುರ ಗ್ರಾಮಕ್ಕೆ ಪ್ರಯಾಣ ಬೆಳೆಸಿದರು. ಅವರು ಗಾಮ ಮುಟ್ಟಿದಾಗ ಬೆಳಗಿನ ಒಂಭತ್ತು ಗಂಟೆ. ಶಂಭುನಾಥ ಅವರು ಅತಿಥಿ ಗಳನ್ನು ಬರಮಾಡಿಕೊಂಡು ಅತಿಥಿ ಸತ್ಕಾರ ಮಾಡಿದರು. ಶಾನುಭೋಗರ ದೊಡ್ಡ ಮನೆ, ಅಳುಗಳು, ಬಾವಿ, ಪಂಪ್ ಸೆಟ್ , ಮನೆ ಹಿಂದೆ ಇರುವ ವಿಶಾಲವಾದ ಫಲವತ್ತಾದ ಜಮೀನು, ಧವಸ ಧಾನ್ಯ ಅಲ್ಲದೇ ದನಕರುಗಳನ್ನು ನೋಡಿದ ಶಶಿಕಾಂತನಿಗೆ ಆಶ್ಚರ್ಯದ ಜೊತೆಗೆ ಸಂತೋಷ ವಾಯಿತು. ಇದೆಲ್ಲ ಐಶ್ವರ್ಯ ನನಗೆ ಬಂದರೆ ಜೀವನ ಎಷ್ಟು ಸುಖಮಯವಾಗುವದು ಎನ್ನುವ ಕನಸು ಕಾಣುವಾಗ, ಭಾಗ್ಯ ಕಾಫಿ ಕೊಟ್ಟು ಅವನ ಮಂದಹಾಸ ಗಮನಿಸಿ, "ಶಶಿಕಾಂತ ಅವರೇ, ಈಗ ನೀವು ದ್ವಿತಿಯ ದರ್ಜೆ ಗುಮಾಸ್ತ ಅಷ್ಟೇ ಜಮೀನ್ದಾರ ಅಲ್ಲ," ಎಂದಳು ನಗುತ್ತಾ. ಇಬ್ಬರೂ ಬಿದ್ದು ಬಿದ್ದು ನಕ್ಕರು.
ಸ್ವಲ್ಪ ಸಮಯ ವಿಶ್ರಾಂತಿ ಆದ ಮೇಲೆ ಫಲಾಹಾರ ಮುಗಿದು ಪರಸ್ಪರ ಮಾತುಗಳು ಆದವು. ಹೆಚ್ಚಿಗೆ ಮಾತನಾಡಿದವರು ಭಾಗ್ಯ ಹಾಗೂ ಶಶಿಕಾಂತ. ಇವರಿಬ್ಬರ ಮಾತುಗಳನ್ನು ಗಮನಿಸಿದ ಶಂಭುನಾಥ ಅವರ ಪತ್ನಿ ಚಾರುಮತಿ ಅವರಿಗೆ ತುಂಬಾ ಸಮಾಧಾನವಾಯಿತು.
"ಶಶಿಕಾಂತ, ನಮ್ಮ ಮಗಳು ಭಾಗ್ಯ ನಿಮ್ಮ ಜೊತೆಗೆ ಮದುವೆ ಆಗಲು ಒಪ್ಪಿದರೆ ಕೆಲಸಕ್ಕೆ ಇಬ್ಬರೂ ರಾಜೀನಾಮೆ ಕೊಟ್ಟು ಇಲ್ಲಿನ ಎಲ್ಲ ವ್ಯವಹಾರವನ್ನು ನೋಡಿಕೊಳ್ಳಬೇಕು,"ಎಂದರು ಶಂಭುನಾಥ ನಗುತ್ತ.
"ಶಂಭುನಾಥ ಅವರೇ, ನನಗೆ ತಂದೆ ತಾಯಿ ಜವಾಬ್ದಾರಿ ಇದೆ."
"ಅವರೂ ನಮ್ಮ ಕುಟುಂಬದ ಸದಸ್ಯರಾಗುವರು," ಎಂದು ನಗುತ್ತಾ ಹೇಳಿದರು ಚಾರುಮತಿ.
ಮನೆಯಲ್ಲಿ ಅಂದು ನಗುವಿನ ಸಂಭ್ರಮ. ಮಧ್ಯಾಹ್ನ ಅತಿಥಿಗಳಿಗೆ ಸುಗ್ರಾಸ ಭೋಜನದ ವ್ಯವಸ್ಥೆ ಆಯಿತು. ಸಾಯಂಕಾಲ ಆರು ಗಂಟೆಗೆ ಇರುವ ಬಸ್ ಮೂಲಕ ರಾಘವಪುರಕ್ಕೆ ಬೆಳಗ್ಗೆ ಬಂದವರೆಲ್ಲ ವಾಪಸ್ ಹೋದರು. ಶುಭ ಮುಹೂರ್ತದಂದು ವೆಂಕಟಪುರ ಗ್ರಾಮದ ವೆಂಕಟೇಶ ದೇವಸ್ಥಾನದಲ್ಲಿ ಭಾಗ್ಯ ಹಾಗೂ ಶಶಿಕಾಂತ ಅವರ ಮದುವೆ ಕಾರ್ಯಕ್ರಮ ವಿಜೃಂಭಣೆಯಿಂದ ಮುಗಿಯಿತು.
ಶಶಿಕಾಂತನಿಗೆ ಬಯಸಿ ಬಂದ ಭಾಗ್ಯ ಬಾಳಸಂಗಾತಿ ಆಗುವದಲ್ಲದೇ ಭಾಗ್ಯ ಕೂಡಾ ತಂದಳು.