ಹೊನ್ನೂರಿನ ಹೊನ್ನಮ್ಮ(ಸಣ್ಣ ಕತೆ
ಹೊನ್ನೂರಿನ ಹೊನ್ನಮ್ಮ(ಸಣ್ಣ ಕತೆ
ಬೆಳಗಿನ ಒಂಭತ್ತು ಗಂಟೆ ಸಮಯ. ಬೇಸಿಗೆ ಇದ್ದರೂ ಅಂದಿನ ವಾತಾವರಣ ಅಲ್ಹಾದಕಾರ ವಾಗಿರುವದು. ಗುಬ್ಬಚ್ಚಿಗಳು ಬೇವಿನ ಮರದ ಮೇಲೆ ತಮ್ಮದೇ ಆದ ಭಾಷೆ ಯಲ್ಲಿ ಚಿವ್ ಚಿವ್ ಮಾಡುತ್ತಾ ಇರುವಾಗ ನಾನು ಮನೆ ಮುಂದಿನ ಬಾಲ್ಕನಿಯಲ್ಲಿ ಚೇರ್ ಮೇಲೆ ಕುಳಿತು ಕಾಫಿ ಕುಡಿಯುತ್ತ ಅಂದಿನ ಪ್ರಜಾವಾಣಿ ಪತ್ರಿಕೆಯ ಮುಖ್ಯಾಂಶಗಳ ಮೇಲೆ ಕಣ್ಣಾಡಿ ಸುತ್ತಿರುವಾಗ ಗೇಟ್ ತೆಗೆದು ಒಬ್ಬ ವಯಸ್ಸಾದ ಮಹಿಳೆ ಒಳಗೆ ಪ್ರವೇಶಿಸಿದಳು.
"ಏನಾದರೂ ಕೊಡಿ," ಎಂದು ಕೈ ಮುಂದೆ ಚಾಚಿದಳು.
"ಯಾರು ನೀನು? ಒಳಗೆ ಏಕೆ ಬಂದೆ?"
ಎಂದು ಆಕೆಗೆ ಗದರಿಸಿದೆ.
ಆಕೆಯ ಕಣ್ಣಲ್ಲಿ ಒಂದೇ ಸಮನೆ ಕಣ್ಣೀರು ಬಂದು ಕೆಳಗೆ ಕುಸಿದು ಬಿದ್ದಳು. ನನಗೆ ಗಾಬರಿ ಆಗಿ ಆಕೆಯನ್ನು ಮೇಲೆ ಎಬ್ಬಿಸುವಾಗ ಅದೇ ಕ್ಷಣ ಅವಳು ಯಾರು ಎಂದು ತಿಳಿಯಿತು. ಅವಳು ಬೇರೆ ಯಾರೂ ಆಗಿರದೆ ಹೂ ಮಾರುವ ವೃದ್ಧೆ
ಹೊನ್ನೂರಿನ ಹೊನ್ನಮ್ಮ. ಸುಮಾರು ಮೂರು ವರ್ಷದ ನಂತರ ಬಂದ ಆಕೆಯ ದುಸ್ಥಿತಿ ನೋಡಿ ಮನಸ್ಸು ಕರಗಿತು. ಒಂದು ಲೋಟ ನೀರು, ಒಂದು ಬಾಳೆ ಹಣ್ಣು ತಂದು ಕೊಟ್ಟೆ.
"ಹೊನ್ನಮ್ಮ, ಭಿಕ್ಷೆ ಏಕೆ ಬೇಡುವೆ?"
"ಅದೊಂದು ದೊಡ್ಡ ಕತೆ. ಭಿಕ್ಷೆ ಜೊತೆಗೆ ಅನೇಕ ರೋಗಗಳು ಆಂಟಿ ಕೊಂಡಿವೆ. ಡಾಕ್ಟರ್ ಗೆ ತೋರಿಸಲು ಹಣ ಇಲ್ಲ. ಸಮಾಧಾನ ಇರುವಾಗ ಎಲ್ಲವನ್ನೂ ಹೇಳುವೆ," ಎಂದಳು.
ಅವಳ ಮೇಲೆ ಕನಿಕರ ಬಂದು ಹಣ ಕೊಟ್ಟು ಆರೋಗ್ಯ ಕಾಪಾಡಿ ಕೊಳ್ಳುವಂತೆ ಹೇಳಿದೆ. ಹೊರಡುವಾಗ ಆಕೆಯ ಮುಖದಲ್ಲಿ ಮಂದಹಾಸ ಗೋಚರವಾಯಿತು. ಸುಮಾರು ಹದಿನೈದು ವರ್ಷಗಳ ಹಿಂದಿನ ನೆನಪುಗಳು ಸ್ಮೃತಿ ಪಟಲದಮೇಲೆ ಬಂದವು.
ನಮ್ಮ ಮನೆಗೆ ಪ್ರತಿ ದಿವಸ ತಪ್ಪದೇ ಬೆಳಗಿನ ಆರು ಗಂಟೆಗೆ ಬಂದು ಹೂ ಕೊಡುವಳು. ಒಂದು ದಿವಸ ಆಕೆ ಬರದಿದ್ದರೆ ಯಾಕೆ ಬಂದಿಲ್ಲ ಎಂದು ಮನೆಯಲ್ಲಿ ಎಲ್ಲರೂ ಕೇಳುವರು. ಮುಂಜಾನೆ ರಸ್ತೆಯಲ್ಲಿ ನಡೆಯುತ್ತಾ ಹೂವು ತಕ್ಕೋಳ್ಳಿರಿ, ಹೂ ತಕ್ಕೋಳ್ಳಿರಿ ಎಂದು ಜೋರಾಗಿ ಕೂಗುವ ಆಕೆಯ ಧ್ವನಿ ಎಲ್ಲರಿಗೂ ಚಿರಪರಿಚಿತ. ಶ್ರಮ ಜೀವಿ ಯಾದ ಹೊನ್ನಮ್ಮ ಆ ಸಮಯದಲ್ಲಿ ಉತ್ತಮ ವಾದ ಆರೋಗ್ಯ ಕಾಪಾಡಿ ಕೊಂಡು ಕ್ರಿಯಾ ಶೀಲಳಾಗಿದ್ದಳು. ಅವಳು ತನ್ನ ತಲೆಯ ಮೇಲೆ ವಿವಿಧ ತರಹದ ಹೂವುಗಳಿಂದ ತುಂಬಿದ ದೊಡ್ಡ ಬಿದಿರಿನ ಬುಟ್ಟಿ, ದಾರದ ಕಟ್ಟು, ಪ್ಲಾಸ್ಟಿಕ್ ಬ್ಯಾಗ್ ಗಳು ಮತ್ತು ಬ್ಲೇಡ್ ಇಟ್ಟುಕೊಂಡು ತಲೆಗೆ ನೋವು ಆಗಬಾರದು ಎಂದು ಬಟ್ಟೆಯನ್ನು ಸುರಳಿ ಮಾಡಿ ಬುಟ್ಟಿಯ ಕೆಳಗೆ ಇಟ್ಟು ನಡೆದು ಹೋಗುವಳು. ಬುಟ್ಟಿ ಭಾರ ಇದ್ದಾಗ ಆಕೆ ಇನ್ನೊಬ್ಬರ ಸಹಾಯ ಕೇಳುವಳು. ಆಕೆಯ ಹೂ ಮಾರಾಟ ಮಾಡುವ ವಿಧಾನವು ತುಂಬಾ ವಿಶಿಷ್ಟ ವಾಗಿತ್ತು. ದಾರದಿಂದ ಪೋಣಿಸಿದ ಹೂಗಳನ್ನು ಮೊಣಕೈ ಕೈಯಿಂದ ಅಳತೆ ಮಾಡಿ ಒಂದು, ಎರಡು, ಮೂರು ಎಂದು ಎಣಿಸಿ ಅದನ್ನು ಬ್ಲೆಡ್ ನಿಂದ ಕಟ್ ಮಾಡಿ ಕೊಡುವಳು. ಪ್ರತಿಯೊಂದು ಅಳತೆಗೆ ದರ ನಿಗದಿ ಮಾಡುವಳು. ಬೇರೆ ಬೇರೆ ಹೂ ಗಳಿಗೆ ಬೇರೆ ಬೇರೆ ದರ. ವಾರಕ್ಕೆ ಎರಡು ಅಥವಾ ಮೂರು ಸಲ ಹೂ ಮಾರ್ಕೆಟ್ ಹೋಗಿ ತನಗೆ ಬೇಕಾಗುವಷ್ಟು ಹೂ ತರುವಳು. ಮುಂಜಾನೆ ರಸ್ತೆಯಲ್ಲಿ ವಾಹನ ಗಳ ಸಂಚಾರ ಇದ್ದರೂ ಸುರಕ್ಷತೆ ಕಾಪಾಡಿಕೊಂಡು ವೇಗವಾಗಿ ನಡೆಯುವಳು. ಸುಮಾರು ಎರಡು ಗಂಟೆ ಅವಧಿಯಲ್ಲಿ ವ್ಯಾಪಾರ ಮುಗಿಸಿ ರಸ್ತೆ ಬದಿ ಮಹಿಳೆ ನಡೆಸುತ್ತಿರುವ ಚಿಕ್ಕ ತಳ್ಳುವ ಗಾಡಿ ಹೋಟೆಲ್ ನಲ್ಲಿ ಚಹಾ ಕುಡಿದು ಜೊತೆಗೆ ಬಿಸ್ಕತ್ ತಿಂದು ಮರದ ಕೆಳಗೆ ಇರುವ ಕಟ್ಟೆ ಮೇಲೆ ಕುಳಿತು ಸಿಟಿ ಬಸ್ ದಾರಿ ಕಾಯುವಳು. ಬಸ್ ತಡ ಇದ್ದರೆ ಪಕ್ಕದಲ್ಲಿ ಕುಳಿತವರ ಜೊತೆಗೆ ಹರಟೆ. ನೂರೆಂಟು ಚಿಂತೆಗಳು ಇದ್ದರೂ ಆ ಸಮಯದಲ್ಲಿ ಅವೆಲ್ಲ ಆಕೆಗೆ ಮರೆತು ಹೋಗುವದು. ಬಸ್ ಚಾಲಕ ಹಾಗೂ ನಿರ್ವಾಕ, ಹೊನ್ನಮ್ಮ ಬಡವಿ ಇರುವದ ರಿಂದ ಆಕೆಯ ಬಸ್ ಚಾರ್ಜ್ ತಾವೇ ಭರಿಸುವರು. ಮನೆ ಮುಟ್ಟುವದಕ್ಕೆ ಆಕೆಗೆ ಮಧ್ಯಾಹ್ನ ಎರಡು ಗಂಟೆ.
ಹೊನ್ನೂರು ಗ್ರಾಮ ಪವನ್ ಪುರ ಟೌನ್ ನಿಂದ ಐದು ಕಿಲೋಮೀಟರ್ ದೂರ. ಪ್ರತಿ ತಿಂಗಳು ಕೊನೆಗೆ ಹೂ ಮಾರಿದ ಹಣ ಗ್ರಾಹಕರಿಂದ ತೆಗೆದು ಕೊಳ್ಳು ವಳು. ಅನಕ್ಷರಸ್ತೆ ಇದ್ದರೂ ಲೆಕ್ಕ ಮಾಡಿ ಒಂದು ಪೈಸೆ ಬಿಡುವದಿಲ್ಲ. ಕೆಲವೊಮ್ಮೆ ನಡುವೆ ಹಣ ಕೇಳಿದರೂ ಯಾರೂ ಇಲ್ಲ ಎಂದು ಹೇಳಿಲ್ಲ. ಹಬ್ಬ ಹರಿದಿನಗಳಲ್ಲಿ, ಆರೋಗ್ಯ ಸರಿ ಇಲ್ಲದಾಗ ಬಿಲ್ಗಿಂತ ಹೆಚ್ಚು ಹಣ ಬೇಡುವಳು.
ಅವಳು ನಮ್ಮ ಮನೆ ಗೇಟ್ ಗೇಟ್ ಮುಂದೆ ಬೆಳಗ್ಗೆ ಆರು ಗಂಟೆಗೆ ಬಂದ ಕೂಡಲೇ ಒಂದು ನಿಮಿಷವೂ ಕಾಯುವುದಿಲ್ಲ. ಕಾರಣ ಆಕೆಗೆ ಸ್ವಲ್ಪ ಸಮಯದಲ್ಲಿ ಬಹಳಷ್ಟು ಮನೆಗೆ ಹೋಗುವದು. ಒಂದು ದಿವಸ ನಾನು,
"ಯಾಕೆ ಆತುರ? ಕಾಯುವ ತಾಳ್ಮೆ ಇಲ್ಲವೇ." ಎಂದು ಕುತೂಹಲದಿಂದ ಕೇಳಿದೆ.
"ನಿನಗೆ ಗೊತ್ತಿದ್ದರೂ ಕೇಳುತ್ತಿ", ಎಂದು ನಗುತ್ತ ಮುಂದೆ ಹೋಗೇ ಬಿಡುವಳು.
ಆ ಸಮಯದಲ್ಲಿ ನನಗೆ ಹೊನ್ನಮ್ಮನ ಬಗ್ಗೆ ತಿಳಿದುಕೊಳ್ಳುವ ಉತ್ಸುಕತೆ ಆಯಿತು. ಉತ್ತರ ಕೊಡುವ ವರೆಗೆ ಹಾಗೆ ಆಕೆಗೆ ದಿನಾಲು ಕೇಳುತ್ತ ಇದ್ದೆ. ಆಗಾಗ ಬಿಡುವು ಮಾಡಿಕೊಂಡು ಸ್ವಲ್ಪ ಸ್ವಲ್ಪ ವಿವರಿಸಿದಳು.
ಹೊನ್ನಮ್ಮ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿರುವ
ದಕ್ಕೆ ಕಾರಣ ಆಕೆಯ ಸ್ವಂತ ಮಕ್ಕಳು. ಕೂಲಿ ಕೆಲಸ ಮಾಡುವ ಪುತ್ರ ಮಂಜು ಹಾಗೂ ಅವನಿಗಿಂತ ಒಂದು ವರ್ಷ ಚಿಕ್ಕವಳು ಪುತ್ರಿ ಗಿರಿಜ. ಈಕೆ ಬೇರೆಯವರ ಮನೆಯಲ್ಲಿ ಕೆಲಸ ಮಾಡಿ ಅಲ್ಪ ಸ್ವಲ್ಪ ಗಳಿಕೆ ಮಾಡುವಳು. ಲಾಲನೆ ಪೋಷಣೆ ಮಾಡಿ ಬೆಳೆಸಿದ ಹೊನ್ನಮ್ಮ ನಿಗೆ ಮಕ್ಕಳು ಮುಂದೆ ತನಗೆ ದಾರುಣ ಪರಿಸ್ಥಿತಿ ತರುವರು ಎಂದು ಆಕೆಗೆ ಏನು ಗೊತ್ತು?
ಯಾರೋ ಪುಣ್ಯಾತ್ಮರು ಒಂದು ಕೋಣೆ ಇರುವ ಚಿಕ್ಕ ಮನೆ ಬಾಡಿಗೆ ಇಲ್ಲದೆ ಕೊಟ್ಟರು.
ಗಿರಿಜ ಹುಟ್ಟಿದ ಒಂದು ವರ್ಷದ ಆದ ಮೇಲೆ ಹೊನ್ನಮ್ಮನ ಪತಿ ನರಸಪ್ಪ ಇಹಲೋಕ ತ್ಯಜಿಸಿದ. ಅವನಿಗೆ ಅತಿಯಾದ ಕುಡಿತವೇ ಮಾರಕ ವಾಯಿತು. ಪತಿ ವಿಯೋಗದ ನಂತರ ಹೊನ್ನಮ್ಮ ಹೂ ಮಾರುವ ವ್ಯಾಪಾರ ಮುಂದು ವರೆಸಿ ಮಕ್ಕಳ ಜೊತೆಗೆ ಸಂಸಾರ ನಡೆಸಿದಳು. ಇಬ್ಬರು ಮಕ್ಕಳು ದೊಡ್ಡವರಾಗುವ ವರೆಗೆ ತುಂಬಾ ವಿಧೇಯ ರಾಗಿದ್ದರು. ಅವರು ತಾಯಿಯ ಕಾಳಜಿ ಮಾಡುವದಲ್ಲದೆ ಹೂ ಮಾರಾಟ ನಿಲ್ಲಿಸಿ ವಿಶ್ರಾಂತಿ ತೆಗೆದುಕೋ ಎಂದು ಹೇಳಿದರು. ಆದರೆ ಅದೇ ಮಕ್ಕಳು ತಮ್ಮ ಮದುವೆ ಆದ ನಂತರ ಬದಲಾದರು. ಮಂಜು ಹೂ ಮಾರುವ ಹುಡುಗಿ ಕನಕಮ್ಮ ನ ಜೊತೆಗೆ ಜಗಳವಾಡಿ ಮದುವೆ ಆದ. ಗಿರಿಜ ಮಾರನೇ ವರ್ಷ ಗಾರೆ ಕೆಲಸ ಮಾಡುವ ತನಗಿಂತಲೂ ಒಂದು ವರ್ಷ ಚಿಕ್ಕವನಾದ ಮುರುಗೇಶ್ ನನ್ನು ಪ್ರೀತಿ ಮಾಡಿ ಹಿರಿಯರು ಸಂಭಂದ ಬೇಡ ಎಂದರೂ ಅವನ ಕೈ ಹಿಡಿದಳು. ಅವರಿಬ್ಬರಲ್ಲಿ ಮೊದಲಿನಿಂದಲೂ ಸರಸ ವಿರಸ ಆಗುವದು ಸಾಮಾನ್ಯ. ಬರು ಬರುತ್ತಾ ಹೊನ್ನಮ್ಮ ಕಷ್ಟ ಗಳನ್ನು ಎದುರಿಸುವ ಪರಿಸ್ಥಿತಿ ಉದ್ಭವ ವಾಗಿ ಬೇರೆ ದಾರಿ ಇಲ್ಲದೆ ಭಿಕ್ಷೆ ಬೇಡ ತೊಡಗಿದಳು. ಮಗ, ಸೊಸೆ, ಮಗಳು ಹಾಗೂ ಅಳಿಯ ಇವರಿಗೆ ಗಳಿಕೆ ಇದ್ದರೂ ಹೊನ್ನಮ್ಮ ನಿಗೆ ದುಡ್ಡು ಕೊಡು ಎಂದು ದುಂಬಾಲು ಬೀಳುವದಲ್ಲದೇ ಆಕೆ ಉಳಿತಾಯ ಮಾಡಿದ ಹಣ ಜಗಳ ವಾಡಿ ಕಸಿದು ಕೊಳ್ಳುವರು. ವಯಸ್ಸು ಆಗುತ್ತಾ ಓಡಾಡುವ ಶಕ್ತಿ ಹೊನ್ನಮ್ಮ ನಿಗೆ ಕಡಿಮೆ ಆಗಿ ರೋಗಗಳಿಂದ ಪೀಡಿತಳಾಗಿ ಮನೆಯಲ್ಲಿ ಕುಳಿತಳು. ಮಕ್ಕಳು ತಾಯಿಯನ್ನು ನಿರ್ಲಕ್ಷ್ಯ ಮಾಡಿದರು. ಹೊನ್ನಮ್ಮನಿಗೆ ಭಿಕ್ಷೆ ಬೇಡುವದನ್ನು ಬಿಟ್ಟರೆ ಅನ್ಯ ಮಾರ್ಗ ಇರದೇ ಕಷ್ಟಪಡ ಬೇಕಾದ ದಿನಗಳು ಬಂದಿರುವದು ಆಕೆಯ ದುರದೃಷ್ಟ . ಸರಕಾರ 'ಜೀವನ್ ಸಂಧ್ಯಾ' ಸ್ಕೀಮ್ ನಲ್ಲಿ ಆಕೆಗೆ ತಿಂಗಳಿಗೆ ರೂಪಾಯಿ 300 ಪಿಂಚಣಿ ಕೊಡುವರು. ಅದನ್ನು ತೆಗೆದು ಕೊಳ್ಳಲು ಆಕೆಗೆ ಆಫೀಸಿನಲ್ಲಿ ಪರದಾಟ.
ನಂತರ ಹೂಗಾರ ಹೊನ್ನಮ್ಮ ನನ್ನು ಕಾಣದೆ ಎಷ್ಟೋ ತಿಂಗಳು ಕಳೆದವು.
ಮೊಬೈಲ್ ರಿಂಗ್ ಆಗುತ್ತಾ ಇರುವದರಿಂದ ಹಳೆಯ ನೆನಪುಗಳಿಂದ ಹೊರಬಂದೆ.