ಸರ್ದಾರ್ ಜೀ ಗತಿ ಅಧೋಗತಿ
ಸರ್ದಾರ್ ಜೀ ಗತಿ ಅಧೋಗತಿ
ಸರ್ದಾರ್ ಜೀ ಗತಿ ಅಧೋಗತಿ
ಸರ್ದಾರ್ ಜೀ ಯವರ 'ಪ್ಯಾರಡೈಸ್ ಗಿಫ್ಟ್ ಅಂಡ್ ಫ್ಯಾನ್ಸಿ ಸೆಂಟರ್' ರಾಘವಪುರ ನಗರದಲ್ಲಿ ಮಹಿಳೆಯರಿಗಾಗಿ ಇರುವ ಏಕೈಕ ಅಂಗಡಿ. ಅಂದು ಸೋಮವಾರ ಅಂಗಡಿ ಬೆಳಗ್ಗೆ ಎಂಟು ಗಂಟೆಗೆ ತೆರೆಯುವದು ಸಾಯಂಕಾಲ ಐದು ಗಂಟೆ ಆದರೂ ತೆಗೆಯಲಿಲ್ಲ. ಇದರಿಂದ ಕೆಲವು ಗ್ರಾಹಕರಿಗೆ ಅನುಮಾನ ಬಂದು ಸರ್ದಾರ್ ಜೀ ಮನೆ ಕಡೆ ಹೋಗಿದ್ದಾರೆ. ಅವನ ಮನೆ ಲಾಕ್ ಆಗಿದೆ. ಅಕ್ಕ ಪಕ್ಕದವರಿಗೆ ವಿಚಾರಿಸಿದರೆ ಅವರು ತಮಗೆ ಏನೂ ಗೊತ್ತಿಲ್ಲ ಎಂದರು. ಅಲ್ಲಿಯೇ ಓಡಾಡುತ್ತಿದ್ದ ಒಬ್ಬ ಹುಡುಗ ಮಧ್ಯ ರಾತ್ರಿ ಎಲ್ಲರೂ ಕಾರಿನಲ್ಲಿ ಹೋದ ವರು ವಾಪಸ್ ಬಂದಿಲ್ಲ ಎಂದ. ಅಷ್ಟರಲ್ಲಿ ಶಾಪ್ ಮುಂದೆ ಮಹಿಳೆಯರ ಒಂದು ಗುಂಪು ಅಂಗಡಿ ಮಾಲಕನ ವಿರುದ್ದ "ಸರ್ದಾರ್ ಜೀ ಕಳ್ಳ ಮೋಸಗಾರ" ಎಂದು ಕೂಗುತ್ತಿರುವದನ್ನು ನೋಡಿ ಅಲ್ಲಿ ರಸ್ತೆ ಮೇಲೆ ಓಡಾಡುವವರಿಗೆ ಎಲ್ಲಿಲ್ಲದ ಆಶ್ಚರ್ಯ. ಆಗ ಸಮಯ ಸಾಯಂಕಾಲ ಐದು ಗಂಟೆ ಮೂವತ್ತು ನಿಮಿಷ. ಅಲ್ಲಿಯೇ ಇದ್ದ ಒಬ್ಬ ಯುವಕ ಮಹಿಳೆಯರು ಪ್ರತಿಭಟನೆ ಮಾಡುವ ಸ್ಥಳಕ್ಕೆ ಹೋಗಿ ಅವರಿಗೆ ಕೇಳಿದ,
"ಮ್ಯಾಡಮ್, ಯಾಕೆ ಕೂಗುತ್ತ ಇದ್ದೀರಿ?"
"ಈ ಶಾಪ್ ನಡೆಸುತ್ತಿರುವ ಸರ್ದಾರ್ ಜೀ ನಮ್ಮೆಲ್ಲರ ಹಣ ಲಪಟಾಯಿಸಿ ಮೋಸ ಮಾಡಿ ಪರಾರಿ ಆಗಿದ್ದಾನೆ."
"ಇಲ್ಲಿ ಕೂಗಿದರೆ ಏನೂ ಆಗುವದಿಲ್ಲ. ಎಲ್ಲರೂ ಬೇಗ ಪೊಲೀಸ್ ಸ್ಟೇಷನ್ ಹೋಗಿ ದೂರು ಕೊಡಿ."
ಅವನ ಮಾತು ಸರಿ ಎನಿಸಿ ಎಲ್ಲಮಹಿಳೆಯರು ಪೊಲೀಸ್ ಸ್ಟೇಷನ್ ಗೆ ಹೋದರು. ಅಲ್ಲಿ ಹೋದಾಗ ಅವರೆಲ್ಲರಿಗೂ ಆಶ್ಚರ್ಯ.
ಪೊಲೀಸ್ ಇನ್ಸ್ಪೆಕ್ಟರ್ ಆಸನದ ಮೇಲೆ ಕುಳಿತ ವ್ಯಕ್ತಿ ಬೇರೆ ಯಾರೂ ಆಗಿರದೇ ಐದು ನಿಮಿಷದ ಹಿಂದೆ ದೂರು ಕೊಡಲು ಸಲಹೆ ಮಾಡಿದ ಯುವಕ. ಆತನ ಯೂನಿಫಾರ್ಮ್ ನೋಡಿ ಹೆಸರು ವಿಕ್ರಮ್ ಎಂದು ಗೊತ್ತಾಯಿತು. ಅರ್ಧ ಗಂಟೆಯಲ್ಲಿ ಅವರೆಲ್ಲರೂ ಎಫ್ ಐ ಆರ್ ಬರೆದು ಕೊಟ್ಟರು. ಅವುಗಳನ್ನು ಪರಿಶೀಲಿಸುವಾಗ ವಿಕ್ರಮ್ ಗೆ ಆಶ್ಚರ್ಯ. ದೂರು ಕೊಡುವವರಲ್ಲಿ ಒಬ್ಬಳು ಸಂಗೀತಾ ಆತನ ಪತ್ನಿ. ಗ್ರಾಹಕರು ರೂಪಾಯಿ ಹತ್ತು ಸಾವಿರ ದಿಂದ ಐವತ್ತು ಸಾವಿರ ರೂಪಾಯಿ ಕೈ ಸುಟ್ಟು ಕೊಂಡಿದ್ದಾರೆ.
ವಿಕ್ರಮ್ ಮೊದಲು ಮಹಿಳೆಯರನ್ನು ಭೇಟಿ ಆದಾಗ ಆತನ ಪತ್ನಿ ಸಂಗೀತಾ ಅಲ್ಲಿ ಇರಲಿಲ್ಲ. ಈ ವ್ಯವಹಾರ ಗಂಡಂದಿರಿಗೆ ಹೇಳದೇ ಪ್ರತಿ ತಿಂಗಳು ವಿವಿಧ ಸ್ಕೀಮ್ ಗಳಲ್ಲಿ ಹಣ ಪಾವತಿ ಮಾಡುತ್ತ ಇರುವ ಈ ಮಹಿಳೆ ಯರಿಗೆ ಹಣ ಕಳೆದುಕೊಳ್ಳುವ ಚಿಂತೆ. ಸರ್ದಾರ್ ಜೀ ಪರಿಶ್ರಮ ಇಲ್ಲದೆ ಶ್ರೀಮಂತ ಆಗಿ ಪರಾರಿ ಆದ. ಇವರೆಲ್ಲರಿಗೂ ಪಾಸ್ ಬುಕ್ ಕೊಟ್ಟಿದ್ದಾನೆ. ಪ್ರತಿ ತಿಂಗಳು ಹಣ ಪಾವತಿ ಆದಮೇಲೆ ಅದರಲ್ಲಿ ಎಂಟ್ರಿ ಮಾಡಿ ಸಹಿ ಮಾಡಿ ಕೊಡುವನು. ಅದಲ್ಲದೆ ಸ್ಟ್ಯಾಂಪ್ ಪೇಪರ್ ಮೇಲೆ ಒಪ್ಪಂದ ಮಾಡಿಕೊಂಡಿದ್ದಾನೆ.
ಹಣ ಕಳೆದು ಕೊಳ್ಳುವವರಲ್ಲಿ ರಲ್ಲಿ ಒಬ್ಬಳು ರಾಘವಪುರ ಅಸಿಸ್ಟಂಟ್ ಕಮಿಷನರ್ ಹೆಂಡತಿ ನಿರ್ಮಲಾ.ಇನ್ನೊಬ್ಬಳು ಸಹ್ಯಾದ್ರಿ ಕಾಲೇಜ್ ನ ಪ್ರಾ೦ಶುಪಾಲರ ಮಡದಿ ಇಂದೂಮತಿ. ಮತ್ತೊಬ್ಬಳು ಪ್ರಗತಿ ಬ್ಯಾಂಕ್ ಮ್ಯಾನೇಜರ್ ಪತ್ನಿ ಆವಂತಿಕಾ, ವಕೀಲರ ಪತ್ನಿ ಸುಲಭಾ ಹಾಗೂ ನಗರದ ಪ್ರಸಿದ್ಧ ವ್ಯಾಪಾರಿ ಪತ್ನಿ ಮನೋರಮ. ಬರದೇ ಇರುವ ಅನೇಕ ಮಹಿಳೆಯರು ಉದ್ಯೋಗಿಗಳು, ಗೃಹಿಣಿಯರು ಹಾಗೂ ಚಿಕ್ಕ ಪುಟ್ಟ ತರಕಾರಿ ಹಣ್ಣು ವ್ಯಾಪಾರಿಗಳು. ಇವರೆಲ್ಲರೂ ಹಣ ಕಳೆದುಕೊಳ್ಳುವ ಚಿಂತೆಯಲ್ಲಿ ಇದ್ದಾರೆ.
ಅಂಗಡಿ ಮಾಲೀಕ ಮಂಜೋಗ್ ಸಿಂಗ್ ಅಹ್ಲುವಾಲಿಯಾ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದರು, ಸರ್ದಾರ್ ಜೀ, ಪತ್ನಿ ಅಮೃತಪ್ರೀತ್ ಮತ್ತು ಮಗಳು ಅನುರೀತ್ ಅವರೊಂದಿಗೆ ರೂಪಾಯಿ ಮೂವತ್ತು ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿ ಮಧ್ಯ ರಾತ್ರಿ ಕುಟುಂಬ ಸಮೇತ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಬಂದಿತು.
ಪ್ಯಾರಡೈಸ್ ಗಿಫ್ಟ್ ಅಂಡ್ ಫ್ಯಾನ್ಸಿ ಸೆಂಟರ್ ಐದು ವರ್ಷಗಳ ಹಿಂದೆ ಪ್ರಾರಂಭ ವಾಗಿತ್ತು. ಸರ್ದಾರ್ ಜೀ ಅವರ ವ್ಯಾಪಾರದ ವಿಶೇಷ ವೆಂದರೆ ಮಹಿಳೆಯರಿಗೆ ಆಕರ್ಷಕ ಸ್ಕೀಮ್ ಗಳು, ಸಾಮಾನುಗಳನ್ನು ಮನೆ ಬಾಗಿಲಿಗೆ ಮುಟ್ಟಿಸುವದು.
ಸರ್ದಾರ್ ಜೀ ಕುಟುಂಬದ ಸದಸ್ಯರ ನೆರವಿನಿಂದ ಅಂಗಡಿಯನ್ನು ನಿರ್ವಹಿಸುತ್ತಿದ್ದ. ಅಂಗಡಿಯು ಜನಪ್ರಿಯವಾದಮೇಲೆ ಸದಸ್ಯತ್ವವು ದಿನದಿಂದ ದಿನಕ್ಕೆ ವೃದ್ಧಿ ಆಯಿತು. ೩೦೦, ೫00, ೧000 ಮತ್ತು ೧೫00 ರೂ.ಗಳ ೨೪ ಮಾಸಿಕ ಕಂತುಗಳ ನಾಲ್ಕು ಗುಂಪು. ಸರ್ದಾರ್ ಜೀ ವಿನ್ಯಾಸಗೊಳಿಸಿದ ಯೋಜನೆ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಯಿತು. ಪ್ರತಿ ತಿಂಗಳ ಐದನೇ ದಿನಾ೦ಕ ವರೆಗೆ ಕಂತು ಪಾವತಿಸಬೇಕಾಗಿತ್ತು. ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಕಾಫಿ ಮೇಕರ್, ಮಿಕ್ಸರ್, ಮೈಕ್ರೋವೇವ್, ರೈಸ್ ಕುಕರ್ ಹಾಗೂ ಪ್ರೆಶರ್ ಕುಕರ್ ಅರ್ಧ ಬೆಲೆಗೆ ಬಹಳಷ್ಟು ಗ್ರಾಹಕರಿಗೆ ವಿತರಣೆ ಮಾಡಿ ವಿಶ್ವಾಸ ಗಳಿಸಿದ.
ನಂತರ ಕಂತು ತುಂಬಲು ಗ್ರಾಹಕರ ದೊಡ್ಡದಾದ ಕ್ಯೂ. ಗ್ರಾಹಕರ ಚಿಕ್ಕ ಮಕ್ಕಳಿಗಾಗಿ ಸುಂದರವಾದ ತೆರೆದ ದೊಡ್ಡ ಜಾರ್ನಲ್ಲಿ ಉಚಿತವಾಗಿ ಚಾಕ್ಲೆಟ್, ಆಟ ಆಡುವಡಕ್ಕೆ ವಿವಿಧ ಉಪಕರಣಗಳು ವ್ಯವಸ್ಥೆ ಮಾಡಿದ್ದ. ಸರ್ದಾರ್ ಜೀಯನ್ನು ಅರ್ಥಮಾಡಿಕೊಳ್ಳುವಲ್ಲಿ ಸದಸ್ಯರು ವಿಫಲರಾದರು.
ಸರ್ದಾರ್ ಜೀ ಪರಾರಿ ಆಗಿ ಒಂದು ವಾರದ ನಂತರ ಎಲ್ಲಾ ಗಂಡ೦ದಿರು ಒಂದು ಮೀಟಿಂಗ್ ಮಾಡಿದರು. ತಮ್ಮ ಮಡದಿಯರು ಮಾಡಿದ ಘನ ಕಾರ್ಯದ ಬಗ್ಗೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ವಿಚಾರಿಸಿದರು.
ಪತ್ನಿಯರು ಕೂಡಾ ಮೀಟಿಂಗ್ ನಲ್ಲಿ ಭಾಗವಹಿಸಿದರು.
'ನಾವು ತಪ್ಪು ಮಾಡಿದ್ದೇವೆ. ಮುಂದೆ ಹೀಗೆ ಮಾಡುವ
ದಿಲ್ಲ ಎಂದು ಪ್ರಮಾಣ ಮಾಡುತ್ತೇವೆ. ಸಧ್ಯ ನಮ್ಮೆಲ್ಲರ ಹಣ ವಾಪಸ್ ಬರಲು ಕ್ರಮ ತೆಗೆದು ಕೊಳ್ಳಿ. ನಮಗೆ ಕ್ಷಮಿಸಿ," ಎಂದು ಎಲ್ಲರ ಪರವಾಗಿ ನಿರ್ಮಲಾ ಕೈ ಜೋಡಿಸಿ ವಿನಂತಿ ಮಾಡಿದಳು.
ಎಲ್ಲಾ ಪತಿ ಮಹಾಶಯರು ತಮ್ಮ ಪತ್ನಿಯರಿಗೆ ಕ್ಷಮಿಸಿದರು. ಮುಂದೆ ಹೀಗೆ ಮಾಡದಂತೆ ವಾರ್ನ್ ಮಾಡಿದರು. ಮೀಟಿಂಗ್ ನಲ್ಲಿ ಉಪಸ್ಥಿತ ಇದ್ದ ಪೊಲೀಸ್ ಅಧಿಕಾರಿ ವಿಕ್ರಮ್ ಆಗಲೇ ಸರ್ದಾರ್ ಜೀ ಯನ್ನು ಹುಡುಕಲು ವ್ಯವಸ್ಥಿತ ಯೋಜನೆ ಮಾಡಿದೆ. ಪೊಲೀಸ್ ತಂಡ ಆಗಲೇ ಕರ್ತವ್ಯದ ಲ್ಲಿ ನಿರತ ರಾಗಿರುವದಾಗಿ ಹೇಳಿದ.
ಒಂದು ವಾರದ ನಂತರ ಬಂದ ಸಮಾಚಾರ ಆಘಾತಕಾರಿ ಆಗಿತ್ತು. ಮಂಜೋಗ್ ಸಿಂಗ್ ಮತ್ತು ಅವನ ಕುಟುಂಬ ದವರು ಸಂಗರೂರ್ ಟೌನ್ ಪಂಜಾಬ್ ನಲ್ಲಿ ಕಾರು ಚಾಲನೆ ಮಾಡುವ ಸಮಯದಲ್ಲಿ ಎದುರಿಗೆ ವೇಗ ವಾಗಿ ಬರುತ್ತಿದ್ದ ಟ್ರಕ್ ನೋಡಿ ಗಾಬರಿ ಆದ ಸರದಾರ್ ಜೀ ಟರ್ನ್ ಮಾಡುವಾಗ ಬ್ರೇಕ್ ಮೇಲೆ ನಿಯಂತ್ರಣ ತಪ್ಪಿರುವದರಿಂದ ಕಾರ್ ಪಲ್ಟಿ ಆಗಿದೆ. ಆಗ ಸಮಯ ರಾತ್ರಿ ಹತ್ತು ಗಂಟೆ. ಕಾರಿನಲ್ಲಿ ಇದ್ದ ಎಲ್ಲರ ಸ್ಪಾಟ್ ಡೆತ್ ಆಗಿದೆ. ಪೊಲೀಸರು ಮೃತ ದೇಹಗಳ ಮಹಜರು ಮಾಡಿ ಶವಗಳನ್ನು ಅವರ ಸಂಭಂಧಿಕರಿಗೆ ಒಪ್ಪಿಸಿದರು.
ಮರುದಿವಸ ಸ್ಥಳೀಯ ಪತ್ರಿಕೆ ರಾಘವಪುರ ಸುದ್ದಿ ಸಮಾಚಾರ ಪತ್ರಿಕೆಯಲ್ಲಿ ಇದು ಪ್ರಕಟ ವಾಯಿತು.
ಮೋಸ ಮಾಡಿದ ಸರ್ದಾಜಿ ಹಾಗೂ ಅವನ ಕುಟುಂಬ ಜೀವ ಕಳೆದುಕೊಂಡರೆ, ಹಣ ಕಳೆದುಕೊಂಡವರು ಜೀವನದಲ್ಲಿ ಉತ್ತಮ ಪಾಠ ಕಲಿತರು.