Vijaya Bharathi

Abstract Inspirational Others

4.8  

Vijaya Bharathi

Abstract Inspirational Others

ನಾನು ಮತ್ತು ಕುಟ್ಟಿ

ನಾನು ಮತ್ತು ಕುಟ್ಟಿ

3 mins
526



ಬೆಳಗಿನ ಸುಪ್ರಭಾತದ ಸಮಯದಲ್ಲಿ, ಕಾಲಿಂಗ್ ಬೆಲ್ ಸದ್ದಾದಾಗ,ಎಚ್ಚರಗೊಂಡ ನಾನು,ಕಣ್ಣುಜ್ಜುತ್ತಲೇ ಬಾಗಿಲನ್ನು ತೆಗೆದು ನೋಡಿದಾಗ,ಎದುರಿಗೆ ನನ್ನ ಮಗಳು ನಿಂತಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಒಂದೇ ಊರಿನಲ್ಲಿರುವ ಮಗಳು ನಮ್ಮ ಮನೆಗೆ ಆಗ್ಗಾಗ್ಗೆ ಬರುವುದು ಆಶ್ಚರ್ಯವಲ್ಲದಿದ್ದರೂ, ಈ ನಸುಕಿನಲ್ಲೇ

ಬಂದಿರುವುದನ್ನು ಕಂಡು ಆಶ್ಚರ್ಯವಾಯಿತು.

"ಹಾಯ್ ಕುಟ್ಟೀ,ಗುಡ್ಮಾರ್ನಿಂಗ್" ಮಗಳನ್ನು ಒಳಗೆ ಕರೆದು,ಬಾಗಿಲನ್ನು ಭದ್ರಪಡಿಸಿ, ಅಡುಗೆ ಮನೆಯತ್ತ ಹೊರಟಾಗ,ಕುಟ್ಟಿಯೂ ನನ್ನ ಹಿಂದೆಯೇ ಬಂದಾಗ,"ಏನ ಸಮಾಚಾರಾ,ಇಷ್ಟು ಬೆಳಗ್ಗೆಯೇ ಬಂದಿದ್ದೀಯ.ಗುಡ್ಡಿ ಎಲ್ಲಿ?(ನನ್ನ ಮೊಮ್ಮಗಳು) ಎನಿ ಪ್ರಾಬ್ಲಂ?" ಸಹಜವಾದ ಕುತೂಹಲದಿಂದ ಕೇಳಿದಾಗ,

"ಏನೂ ಪ್ರಾಬ್ಲಮ್ ಇಲ್ಲ, ಇಂದು ನಾನು ಒಂದು ದಿನ ಆಫಿಸಿಗೆ ರಜ ಹಾಕಿದ್ದೇನೆ.ಆದರೆ ನಮ್ಮಮನೆಯಲ್ಲಿ ಈ ವಿಷಯ ಹೇಳದೆ, ವೈಟ್ ಫೀಲ್ಡ್ ಗೆ ಹೋಗಬೇಕೂಂತ ಹೇಳಿ ,ಬೇಗ ಮನೆ ಬಿಟ್ಟೆ. ಅವರೇನಾದರೂ ನಿನಗೆ ಫೋನ್ ಮಾಡಿ ಕೇಳಿದರೆ.ನೀನೂ ಸಹ ಇದನ್ನೇ ಹೇಳು" ಅವಳ ಉತ್ತರವನ್ನು ಕೇಳಿ,ನನ್ನ ಹುಬ್ಬು ಮೇಲೇರಿತು.

" ಕುಟ್ಟಿ ನೀನು ಹೀಗ್ಯಾಕೆ ಮಾಡ್ತೀ ಅಂತ ನನಗೆ ಗೊತ್ತಾಗಲ್ಲ. ಒಂದು ದಿನ ರಜ ಹಾಕಿರುವುದನ್ನು ಮನೆಯವರಿಗೆ ತಿಳಿಸಿದರೆ ಏನಾಗುತ್ತೆ? ಏನಾದರೊಂದು ಸುಳ್ಳು ಹೇಳಿ, ಅದನ್ನು ಸಮರ್ಥಿಸಿಕೊಳ್ಳುವುದಕ್ಕೆ ಸರ್ಕಸ್ ಮಾಡುತ್ತಾ, ನನ್ನನ್ನೂ ಸಂಧಿಗ್ಧಕ್ಕೆ ಸಿಕ್ಕಿ ಹಾಕಿಸ್ತೀಯಲ್ಲ, 

ಮೊದಲೇ ನಿಮ್ಮ ಮನೆಯವರದು ಅನುಮಾನ ಸ್ವಭಾವ, ಈಗಾಗಲೇ ಬೇಕಾದಷ್ಟು ಸಲ ಇದೇ ರೀತಿ ಸಿಕ್ಕಿ ಹಾಕಿಕೊಂಡಿದ್ದೀಯ. ರಜ ಹಾಕಿದ 

ದಿನ ಆ ಮನೆಯಲ್ಲಿ ಇರುವುದು ಕಷ್ಟವಾ? ಇರುವ ವಿಷಯವನ್ನು ನೇರವಾಗಿ ತಿಳಿಸಿದರೆ ಯಾವ ಸಮಸ್ಯೆಯೂ ಬರುವುದಿಲ್ಲ".

ಬೇಸರದಿಂದಲೇ ಅಲವತ್ತುಕೊಂಡಾಗ, ನನ್ನ ಅಸಮಾಧಾನವನ್ನು ಗುರುತಿಸಿದ ಕುಟ್ಟಿ, ತನ್ನದೇ ಸಮಝಾಯಿಷಿ ನೀಡಿದಳು.

"ಮಮ್ಮಿ, ನೀನೇನೋ ಎಲ್ಲವನ್ನೂ ನೇರವಾಗಿ ತಿಳಿಸಿಬಿಡೂಂತ ಸುಲಭವಾಗಿ ಹೇಳಿಬಿಡ್ತೀಯ, ಆದರೆ ಈ ಹಿಂದೆ ನಾನು ಇದೇ ಕೆಲಸ ಮಾಡಿ, ನಮ್ಮ ಮನೆಯವರ ಅಸಮಾಧಾನಕ್ಕೆ ಗುರಿಯಾಗಿರುವುದು ನಿನಗೆ 

ಗೊತ್ತಿಲ್ಲವಾ? ಮುಳ್ಳನ್ನು ಮುಳ್ಳಿನಿಂದಲೇ ತೆಗೆಯ ಬೇಕಮ್ಮ. ನನಗೆ ಮದುವೆಯಾದ ಹೊಸತರಲ್ಲಿ, ಇದ್ದುದ್ದನ್ನು ಇದ್ದ ಹಾಗೆ ಹೇಳಿ, ಎಲ್ಲರ ಆಗ್ರಹಕ್ಕೂ ಗುರಿಯಾಗುತ್ತಿದ್ದೆ. ಆದರೆ ಈಗ ನನಗೆ ಅವರನ್ನು ಹೇಗೆ ಸಂಭಾಳಿಸಬೇಕೆಂದು ಗೊತ್ತಾಗಿದೆ. ಅದಕ್ಕೆ ಈಗ ಈ ದಾರಿ ಹಿಡೀದಿದ್ದೇನೆ. ಡೋಂಟ್ ವರಿ ಮಾಮ್, ಐ ವಿಲ್ ಮ್ಯಾನೆಜ್".

ತನ್ನದೇ ಧೋರಣೆಯಲ್ಲಿ ಹೇಳಿ, ಅಡುಗೆಮನೆಯಿಂದ ಹೊರಗೆ ನಡೆದ 

ಮಗಳನ್ನು ನೋಡುತ್ತಾ ನಿಟ್ಟುಸಿರು ಬಿಟ್ಟೆ.

ಕುಟ್ಟಿಯೇನೋ ನೇರಮಾತಿನವಳು,ಆದರೆ ಅದರಿಂದ ಅವಳು ತುಂಬಾ 

ಅನುಭವಿಸಿಬಿಟ್ಟಿದ್ದಾಳೆ. ಹಾಗಂತ, ಈ ರೀತಿ ಸುಳ್ಳು ಹೇಳಿದರೂ ಅವಳು ಸಿಕ್ಕಿಹಾಕಿಕೊಳ್ಳಬಹುದು. ಈ ಹಿಂದೆ ಇವಳ ನೇರ ಮಾತುಗಳಿಂದ ಮಗಳು ಅಳಿಯನ ನಡುವೆ ಸಂಬಂಧಗಳ ಕೊಂಡಿ ಸಡಿಲವಾಗಿತ್ತು. ಅವರ ಮನೆಯಲ್ಲಿ ಯಾರೂ ಸೀದಾಸಾದ ಅಲ್ಲ. ಹೊರಗೆ ಸೋಗಿನ ಮಾತು,ಒಳಗೆ ಬೆಂಕಿ. ಈಗ ಇವರ ನಡುವೆ ಗುಡ್ಡಿ (ನನ್ನ ಮೊಮ್ಮಗಳು)ಬೇರೆ ಬಂದಿದ್ದಾಳೆ. ಒಬ್ಬರಿಗೊಬ್ಬರು ಕಣ್ಣಮುಚ್ಚಾಲೆ ಯಾಡುತ್ತಾರೆ.ಪರಸ್ಪರ ನೇರ ಮಾತುಗಳಿಂದ ತಮ್ಮ ನಡುವಿನ ಸಮಸ್ಯೆಗಳನ್ನು 

ಬಗೆಹರಿಸಿಕೊಳ್ಳುವುದೇ ಇಲ್ಲ. ಇವರಿಬ್ಬರ ನಡುವೆ ನನ್ನನ್ನು ಸಂಧಿಗ್ಧದಲ್ಲಿ ಸಿಲುಕಿಸುತ್ತಾರೆ.

ಯೋಚನೆಯ ಸುಳಿಯಲ್ಲಿದ್ದ ನನಗೆ ಹಾಲು ಉಕ್ಕಿ ಒಲೆಯ ಮೇಲೆ ಹರಿದಿದ್ದೇ ತಿಳಿಯಲಿಲ್ಲ. ಮೂಗಿಗೆ ವಾಸನೆ ಬಂದಾಗ, ತಕ್ಷಣ ಒಲೆಯನ್ನು 

ಆರಿಸಿದೆ.ಎರಡು ಕಪ್ ಗಳಲ್ಲಿ ಕಾಫಿ ಹಿಡಿದು,ಮಗಳ ಬಳಿಗೆ ಬಂದು,ಅವಳಿಗೊಂದು ಕಪ್ ನೀಡಿ, ನಾನೂ ಅಲ್ಲೇ ಕುಳಿತೆ. ಕಾಫಿಯ ಸಿಪ್ ನೊಂದಿಗೆ ಮಗಳೊಂದಿಗೆ ಮಾತಿಗಿಳಿದೆ.

"ಕುಟ್ಟಿ, ಪಾಪುನ ಬಿಟ್ಟು ಬೆಳಗ್ಗೆ ಬೆಳಗ್ಗೆನೇ ಬಂದಿದ್ಯಲ್ಲಾ, ಪಾಪು ಅಳುವುದಿಲ್ಲವೇನೆ? ನನಗೆ ನೀನು ಹೀಗೆ ಮಾಡುತ್ತಿರುವುದು ಸರಿ ಕಾಣ್ತಿಲ್ಲ"’ಪೇಪರ್ ಸಂಧಿಯಿಂದ ಅವಳನ್ನೇ ಗಮನಿಸಿದೆ.

"ಮಾಮ್, ನೀನು ಅನಗತ್ಯವಾಗಿ ಯೋಚನೆ ಮಾಡ್ತಿದ್ದೀಯ. ಇದೊಂದು ಸಣ್ಣ ವಿಷಯ. ನಾನೇನಾದರೂ ನಿಜ ಹೇಳಿದರೆ,ನನಗೇ ಕಷ್ಟ. ನಾನು ಮನೆಯಲ್ಲಿದ್ದರೇ ಎಲ್ಲಾ ಕೆಲಸವನ್ನೂ ನನಗೇ ವಹಿಸುತ್ತಾರೆ. ಅದಕ್ಕೆ ಅವರ ಕಣ್ಣಿಗೆ ಮಣ್ಣೆರೆಚುವುದು. ಇನ್ನು ಗುಡ್ಡಿಯನ್ನು ನೋಡಿಕೊಳ್ಳಕ್ಕೆ ಅವರ ಅಜ್ಜಿ ತಾತ ಇದ್ದಾರಲ್ಲ, ಬಿಡು,ನನಗೂ ರೆಸ್ಟ್ ಬೇಡವಾ? ಹೇಳು?.

ನೀನು ಸುಮ್ಮನಿರು ಮಾಮ್" ಮಾಮೂಲಾಗಿಅವಳ ಧೋರಣೆಯಲ್ಲೇ 

ಹೇಳಿ, ಮತ್ತೆ ಪೇಪರ್ನಲ್ಲಿ ಕಣ್ಣಾಡಿಸುತ್ತಾ ಕುಳಿತಳು.

ಕುಟ್ಟಿಯನ್ನು ನೋಡಿ ನನಗೆ ಒಂದು ಕಡೆ ಬೇಸರವೆನಿಸಿದರೂ,ಮತ್ತೊಂದು ಕಡೆ ಅನುಕಂಪವೂ ಮೂಡಿತು. ಆದರೂ ಅವಳ ತಾಯಿಯಾಗಿ ಅವಳಿಗೆ ಎರಡು ವಿವೇಕದ ಮಾತುಗಳನ್ನು ಹೇಳದಿದ್ದರೆ ತಪ್ಪಾಗುತ್ತದೆ ಎನಿಸಿತು. ಮತ್ತೆ ಮಾತಿಗಿಳಿದೆ.

"ನೋಡು ಕುಟ್ಟಿ, ನಿನಗೇನೋ ನೀನು ಮಾಡುತ್ತಿರುವುದು ಸರಿ ಎನಿಸಿರಬಹುದು. ನಿನ್ನ ಮನೆಯ ವಾತಾವರಣ ನನಗೂ ಗೊತ್ತು. ಹಾಗಂತ, ನಿನ್ನ ತಾಯಿಯಾಗಿ ನಿನಗೆ ನಾನು 

ತಿಳುವ ಳಿಕೆಗಳನ್ನು ಹೇಳದಿದ್ದರೆ ತಪ್ಪಾಗುತ್ತದೆ. ನೋಡು ಮಗಳೆ, ಈ ಮಾನವ ಸಂಬಂಧಗಳಲ್ಲಿ ಒಂದು ರೀತಿಯ ಸಂಕೀರ್ಣತೆ ಇದೆ. ಸಂಬಂಧಗಳ 

ಪಾರದರ್ಶಕತೆಗೆ ನೇರ ನಡೆ ನುಡಿಗಳು ಅತ್ಯಂತ ಅವಶ್ಯಕ.ಅದರಲ್ಲೂ ಪತಿಪತ್ನಿಯರ ನಡುವಿನ ಸಂಬಂಧಗಳ ಕೊಂಡಿಯ ಬಿಗಿಭದ್ರತೆಗೆ,

ಪರಸ್ಪರ ಬಿಚ್ಚು ನುಡಿಗಳು ಸಹಕಾರಿಯಾಗುತ್ತದೆ.ಪತಿಪತ್ನಿಯರ 

ನಡುವೆ ಸಂಬಂಧಗಳ ಪಾರದರ್ಶಕತೆ ಇದ್ದಾಗ,ಸಂಸಾರ ಸುಗಮವಾಗಿ ನಡೆಯುತ್ತದೆ. ಒಂದು ಸಣ್ಣ ಅನುಮಾನ, ಸುಳ್ಳಿನ ಕಿಡಿ, ಬರಬರುತ್ತಾ ಸಂಬಂಧಗಳನ್ನೇ ಸುಟ್ಟೀಹಾಕಿಬಿಡಬಹುದು.ಸುಳ್ಳು,ವಂಚನೆ,ಸೋಗಲಾಡಿತನ, ಇಬ್ಬರ ನಡುವಿನ ಬಂಧನದ ಕೊಂಡಿಗಳನ್ನು ಸಡಿಲಗೊಳಿಸಬಹುದು.ಆದ್ದರಿಂದ ಇನ್ನು ಮುಂದೆ ನಿಮ್ಮ ಮನೆಯಲ್ಲಿ ಹೀಗೆ ಸುಳ್ಳು ಹೇಳಿ ಸಂಧಿಗ್ಧತೆಯಲ್ಲಿ ಸಿಲುಕಿ ಹಾಕಿಕೊಳ್ಳುವ ಬದಲು ಇರುವ ವಿಷಯವನ್ನು ನೇರವಾಗಿ ತಿಳಿಸಿಬಿಡು. "’ಖಂಡಿತವಾದಿ ಲೋಕವಿರೋಧಿ" ಎಂಬ ಮಾತು ನಿಜ. ಆದರೆ ನೇರ ಮಾತುಗಳಿಂದ 

ಮನಸ್ಸುಗಳು ಹಗುರವಾಗುವುದೂ ಸಹ ಅಷ್ಟೆ ಸತ್ಯ. ನಾವಾಡುವ ನೇರವಾದ ಮಾತುಗಳು ತಕ್ಷಣದಲ್ಲಿ,ಬೇವಿನಂತೆ ಕಹಿಯಾದರೂ,ಅಂತ್ಯದಲ್ಲಿ ಬೆಲ್ಲದಂತೆ ಒಳ್ಳೆಯ ಸಿಹಿಯನ್ನೇ ಕೊಡುತ್ತದೆ. ಸಂಬಂಧಗಳ ನಡುವೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು "ನೇರ ಮಾತು" ಗಳು "ಸೀದಿ ಸಾದ ಬಾತ್" ಗಳು ಅತ್ಯಂತ ಅವಶ್ಯಕ. ಇನ್ನು ಮುಂದೆ ಎಂದೂ ನಿನ್ನ ಗಂಡನ ಮನೆಯವರಿಗೆ ಸುಳ್ಳು ಹೇಳಿ, ಸಿಕ್ಕಿಹಾಕಿಕೊಳ್ಳಬೇಡ. 

ಗೊತ್ತಾಯಿತಾ ?"


ನಾನು ಹೇಳುವುದನ್ನೆಲ್ಲಾ ಕೇಳಿಸಿಕೊಂಡ ನನ್ನ ಕುಟ್ಟಿ, ಧಿಗ್ಗನೆ ಎದ್ದು ಬಂದು ನನ್ನನ್ನು ಅಪ್ಪಿಕೊಂಡು,

"ಥ್ಯಾಂಕ್ಯು ಮಾಮ್, ಯು ಆರ್ ದ ಬೆಸ್ಟ್ ಮಮ್ ಇನ್ ದ ವರ್ಲ್ಡ್"ಎಂದಾಗ, ಅವಳ ಹಣೆಗೆ ಹೂಮುತ್ತನ್ನಿತ್ತು, ಅಲ್ಲಿಂದ ಎದ್ದೆ.





Rate this content
Log in

Similar kannada story from Abstract