Vijaya Bharathi

Abstract Inspirational Others

4  

Vijaya Bharathi

Abstract Inspirational Others

ಹೋರಾಟ

ಹೋರಾಟ

2 mins
251



ಆಂದು ಆಫೀಸಿನಿಂದ ಬಂದ ಚಿರಂತನ್ ತುಂಬಾ ಸಪ್ಪಗಿರುವುದನ್ನು ಗಮನಿಸಿದ ಅವನ ಅಮ್ಮ ಗಿರಿಜ, ಮಗನ ಪಕ್ಕ ಕುಳಿತು ಭುಜ ಸವರುತ್ತ, ಏನಾಯಿತೆಂದು ಕೇಳಿದಾಗ, ತನ್ನನ್ನು ಇದ್ದಕ್ಕಿದ್ದಂತೆ ಕೆಲಸದಿಂದ ತೆಗೆದುಹಾಕಿರುವ ವಿಷಯವನ್ನು ಬಹಳ ಕಷ್ಟಪಟ್ಟು ಹೇಳಿದ ಚಿರಂತನ್. ಮಗನ ಬೇಸರದ ಕಾರಣ ತಿಳಿದ ಗಿರಿಜ ಅವನಿಗೆ ಸಮಾಧಾನ ಹೇಳಿ, ಮುಂದೆ ಏನಾದರೊಂದು ದಾರಿ ಕಾಣುತ್ತದೆ ಎಂದು ಅವನಿಗೆ ಧೈರ್ಯ ಹೇಳಿದಳು. ಕರೋನದ ಲಾಕ್ ಡೌನ್ ಪ್ರತಿಫಲವಾಗಿ ಸ್ಟಾರ್ಟ್ ಅಪ್ ಕಂಪನಿಗಳು ಆರ್ಥಿಕತೆಯ ಬಿಕ್ಕಟ್ಟಿನಿಂದ ಅನೇಕ ಉದ್ಯೋಗಿಗಳನ್ನು ವಿನಾಕಾರಣ ಕೆಲಸದಿಂದ ತೆಗೆದು ಹಾಕುತ್ತಿದ್ದುದರಿಂದ, ಚಿರಂತನ್ ಕೂಡ ಅಂತಹುದೇ ಒಂದು ಸ್ಟಾರ್ಟ ಅಪ್ ಕಂಪನಿಯಲ್ಲಿದ್ದುದರಿಂದ ಅದರ ಕರಿನೆರಳು ಅವನ ಮೇಲೂ ಬಿದ್ದಿತ್ತು. ಕರೋನದ ಕ್ಲಿಷ್ಟ ಸಮಯದಲ್ಲಿ ಮತ್ತೆ ಕೆಲಸ ಸಿಗುವ ಭರವಸೆ ಅವನಿಗಿರಲಿಲ್ಲ. ಡಿಪ್ಲೋಮಾ ಹೋಲ್ಡರ್ ಆಗಿದ್ದ ಚಿರಂತನ್,ಬಿ.ಇ. ಪದವೀಧರರ ಜೊತೆ ಸ್ಪರ್ಧೆಯಲ್ಲಿ ಮುಂದೆ ಬರುವುದು ಇನ್ನು ಮುಂದೆ ಕಷ್ಟವೇ. ಪುಣ್ಯಕ್ಕೆ ಅವನಿಗೆ ಇನ್ನೂ ಮದುವೆಯಾಗಿರಲಿಲ್ಲವೆಂಬುದೊಂದು ಸಮಾಧಾನದ ವಿಷಯವೇ ಆದರೂ, ವಯಸ್ಸಿಗೆ ಬಂದಿರುವ ಅವನು ತನ್ನ ತಂದೆಗೆ ಹೊರೆಯಾಗುವುದು ಅವನಿಗೆ ಇಷ್ಟವಿಲ್ಲ. ಮುಂದಿನ ದಾರಿ ಏನೆಂಬುದನ್ನು ಅವನು ಯೋಚಿಸುತ್ತಿದ್ದ.


ಚಿರಂತನ್ ತಂದೆ ಶಂಕರ್, ತಮ್ಮದೇ ಆದ ಒಂದು ಸಣ್ಣ ಅಂಗಡಿಯನ್ನಿಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಮಗನಿಗೆ ಏನೋ ಒಂದು ಒಳ್ಳೆಯ ಕೆಲಸವಿದೆ ಎಂದು ನೆಮ್ಮದಿಯಿಂದ ಇದ್ದವರಿಗೆ, ಈಗ ಮಗನಿಗೆ ಕೆಲಸ ಹೋದ ವಿಷಯ ತಿಳಿದು, ತುಂಬಾ ಬೇಸರವಾದರೂ, ಮಗನೆದುರು ಅದನ್ನು ತೋರಿಸಿಕೊಳ್ಳದೆ ಧೈರ್ಯ ತುಂಬುತ್ತಿದ್ದರು. 


ತಿಂಗಳೆರಡು ಕಳೆದರೂ, ಇಂದಿನ ಕರೋನಾದ ಆರ್ಥಿಕತೆಯ ಕುಸಿತದಿಂದ, ಚಿರಂತನಿಗೆ ಎಲ್ಲಿಯೂ ಕೆಲಸ ಸಿಗುವ ಭರವಸೆ ಇಲ್ಲವಾದಾಗ,ಅವನ ತಂದೆ ಶಂಕರ್, ತಮ್ಮ ಪುಟ್ಟ ಅಂಗಡಿಯ ಒಂದು ಕಡೆ ಸಣ್ಣದಾಗಿ "ಕೆಫ಼ೆಟೇರಿಯ"ವನ್ನು ತೆಗೆದು, ಬಿಸ್ನೆಸ್ ಪ್ರಾರಂಭಿಸುವಂತೆ ಮಗನಿಗೆ ಸಲಹೆ ನೀಡಿದರು. ಮೊದ ಮೊದಲು ಈ ಸಲಹೆಯಿಂದ ಚಿರಂತನಿಗೆ ಕೀಳರಮೆ ಕಾಡಿತ್ತಾದರೂ, ಸುದೀರ್ಘವಾದ ಆಲೋಚನೆಯ ನಂತರ ಅವನು ತಂದೆಯ ಮಾತನ್ನು ಸಕಾರಾತ್ಮಕವಾಗಿ ಪರಿಗಣಿಸಿ, "ಕೆಫ಼ಿಟೇರಿಯ" ತೆಗೆಯಲು ಒಪ್ಪಿದನು. ಕೆಲಸವಿಲ್ಲದೆ ಸುಮ್ಮನೆ ಕುಳಿತು, ತಲೆ ಕೆಡಿಸಿಕೊಳ್ಳುವುದರ ಬದಲು, "ಉದ್ಯೋಗಿನಂ ಪುರುಷಸಿಂಹಮುಪೈತಿ ಲಕ್ಷ್ಮೀ" ಎಂಬಂತೆ ಏನಾದರೂ ಉದ್ಯೋಗ ಮಾಡುವುದು ದೇಹ ಹಾಗೂ ಮನಸ್ಸಿಗೆ ಒಳ್ಳೆಯದೆಂದು ನಿರ್ಧರಿಸಿ, ಒಂದು ಶುಭ ದಿನದಂದು "ಗಿರಿಜಾ ಶಂಕರ್ ಕೆಫ಼ೆಟೇರಿಯ"ವನ್ನು ತೆರೆದೇ ಬಿಟ್ಟನು. ಇವನಂತೆಯೇ ಕೆಲಸ ಕಳೆದುಕೊಂಡಿದ್ದ ಅನೇಕ ಗೆಳೆಯರು ಚಿರಂತನಿಗೆ ಶುಭ ಹಾರೈಸಿದರು. 


ನಾಲ್ಕು ಪ್ಲಾಸ್ಟಿಕ್ ಟೇಬಲ್ ಮತ್ತು ಹದಿನಾರು ಪ್ಲಾಸ್ಟಿಕ್ ಚೇರನಿಂದ ಇವನ ಕಾಫ಼ಿ ಸೆಂಟರ್ ಉದ್ಯಮ ಪ್ರಾರಂಭವಾಯಿತು. ಉತ್ತಮ ಗುಣಮಟ್ಟದ ಕಾಫಿ, ಟೀ, ಜೊತೆಗೆ ಬೆಳಗಿನ ಟಿಫ಼ಿನಗಳನ್ನು ದೊರೆಯುವಂತೆ ಏರ್ಪಾಡು ಮಾಡಿಕೊಂಡಿದ್ದನು. ಇವನ ತಾಯಿ ಮನೆಯಿಂದಲೇ ಇಡ್ಲಿ, ವಡ, ಸಾಂಬಾರ್, ಚಿತ್ರಾನ್ನ, ಪೊಂಗಲ್, ದೋಸೆಗಳನ್ನು ತಯಾರಿಸಿ ಕಳುಹಿಸುತ್ತಿದ್ದರು. ಅತ್ಯಂತ ಕಡಿಮೆ ಬಂಡವಾಳದಲ್ಲಿ ವ್ಯಾಪಾರ ಪ್ರಾರಂಭವಾಯಿತು. ಹೊಸತನ್ನು ಬಯಸುವ ಬೆಂಗಳೂರಿನವರು, ಬೆಳಗಿನ ತಿಂಡಿ ಮತ್ತು ಕಾಫ಼ಿ, ಟೀಗಳಿಗಾಗಿ ಇವನ ಕೆಫ಼ೆಟೇರಿಯಾಗೆ ಬರಲು ಪ್ರಾರಂಭಿಸಿದರು. ಮೊದಲನೇ ತಿಂಗಳಿನಲ್ಲಿ ವ್ಯಾಪಾರ ಲಾಭದೊಂದಿಗೆ ಕುದುರಿದಾಗ, ಚಿರಂತನ್ ಮುಖದಲ್ಲಿ ಗೆಲುವಿನ ನಗೆ ಚಿಮ್ಮಿತು. ಹೀಗೆ ಪ್ರಾರಂಭವಾದ ವ್ಯಾಪಾರ, ಒಂದೆರಡು ತಿಂಗಳು ತಲೆಯೆತ್ತಿ ನಿಲ್ಲುವ ಸಮಯದಲ್ಲೇ, ಮತ್ತೊಮ್ಮೆ ಲಾಕ್ ಡೌನ್ ಆಗಿ, ಮತ್ತೆ ಇವನ ಉದ್ಯಮ ಮಂದಗತಿಯಲ್ಲಿಸಾಗಿ ಕಡೆಗೆ ನಿಂತೇ ಹೋಗುವಂತಾಯಿತು . ಚಿರಂತನ್, ಅವನ ತಂದೆ ಹಾಗೂ ತಾಯಿಗೆ ಇದರಿಂದ ತುಂಬಾ ಚಿಂತೆಯಾಗಿ, "ಅಬ್ಬ, ಈ ಕರೋನ, ಲಾಕ್ ಡೌನ್ ಮುಗಿದರೆ ಸಾಕಾಗಿದೆ, ನಮ್ಮಂತಹ ದಿನ ನಿತ್ಯದ ವ್ಯಾಪಾರಿಗಳಿಗೆ ಇದರ ಬಿಸಿ ತಡೆದುಕೊಳ್ಳುವುದು ಕಷ್ಟ,

ಹೇಗಾದರಾಗಲಿ, ಈ ಲಾಕ್ ಡೌನ್ ಮುಗಿದರೆ ಸಾಕೆನಿಸುತ್ತಿದೆ" ಎಂದು ಚಡಪಡಿಸತೊಡಗಿದರು. ಸಂಪಾದನೆ ಆಗಲಿ ಬಿಡಲಿ, ಅಂಗಡಿಯ ಬಾಡಿಗೆ ಕಟ್ಟುವುದು, ವಿದ್ಯುಚ್ಚಕ್ತಿ ಬಿಲ್ ಪಾವತಿಸುವುದು, ಕೆಫ಼ೆಟೆರಿಯದ ಕೂಲಿ ಕೆಲಸದವರಿಗೆ ಸಂಬಳ ನೀಡುವುದು ಎಲ್ಲವನ್ನೂ ನಿಭಾಯಿಸುವಷ್ಟರಲ್ಲಿ, ಅಲ್ಪ ಸ್ವಲ್ಪ ಕೂಡಿಟ್ಟ ಹಣವೆಲ್ಲಾ ಖಾಲಿಯಾಗಿ ಹೋಗಿತ್ತು. 


ಅಂತೂ ಇಂತೂ ಸರ್ಕಾರ ಅನ್ ಲಾಕ್ 3 ಅನ್ನು ಅನೌನ್ಸ್ ಮಾಡಿದಾಗ ಚಿರಂತನ್ ಮನೆಯಲ್ಲಿ ಗೆಲುವು ಮೂಡಿತು.



Rate this content
Log in

Similar kannada story from Abstract