ಲಕ್ಷ್ಮಿ ಪಟಾಕಿ
ಲಕ್ಷ್ಮಿ ಪಟಾಕಿ
ನಾನ್ಸ್ಟಾಪ್ ನವೆಂಬರ್ ಆವೃತ್ತಿ 3
ದಿನ 4
ವಿಷಯ: ದೀಪಾವಳಿ ಹಬ್ಬ
ದೀಪಾವಳಿ ಹಬ್ಬವೆಂದರೆ ಪುಷ್ಕರ್ ಗೆ ಎಲ್ಲಿಲ್ಲದ ಸಂಭ್ರಮ.
ಹತ್ತು ವರ್ಷದ ಪುಷ್ಕರ್ ,ಹದಿನೈದು ದಿನಗಳಿಂದಲೇ ತನ್ನ ಅಪ್ಪನ ಹತ್ತಿರ ಪಟಾಕಿಗಳನ್ನು ಕೊಳ್ಳುವ ಬಗ್ಗೆ ಯೋಜನೆ ಹಾಕಿದ್ದ. ಮುದ್ದಿನ ಮಗನ ಪಟಾಕಿಯ
ಸಂಭ್ರಮವನ್ನು ತಳ್ಳಿ ಹಾಕಲು ಆಗದೆ ಪುರುಷೋತ್ತಮ್ ಮತಾಪು,ಸುರುಸುರುಬತ್ತಿ,ಬಣ್ಣದ ಕಡ್ಡಿಗಳು, ಹೂಕುಂಡ, ಕುದುರೆ ಪಟಾಕಿ,ರಾಕೆಟ್, ಲಕ್ಶ್ಮೀ ಪಟಾಕಿ, ಎಲ್ಲವನ್ನೂ
ಶಿವಕಾಶಿ ಪಟಾಕಿ ಕಾರ್ಖಾನೆಯಿಂದಲೇ ಆರ್ಡರ್ ಮಾಡಿದ್ದ. ಹಬ್ಬದ ಎರಡು ದಿನಗಳ ಮುಂಚೆ ಪುಷ್ಕರ್ ನ ಆಸೆಯಂತೆ ಪಟಾಕಿ ಪ್ಯಾಕೇಟ್ ಮನೆಗೆ ಬಂದಾಗ ಖುಷಿಯಿಂದ ಕುಣಿದಾಡಿದ. ಅಂದು ರಾತ್ರಿ ಪುರುಷೋತ್ತಮ್ ಮಗನಿಗೆ ಪಟಾಕಿ ಹೊಡೆಯುವ ಬಗ್ಗೆ ಎಲ್ಲಾ ಎಚ್ಚರಿಕೆಗಳನ್ನೂ ಹೇಳಿಕೊಟ್ಟ. ಅಪ್ಪನ ಮಾತುಗಳನ್ನು ಚೆನ್ಣಾಗಿ ಕೇಳಿಸಿಕೊಂಡ ಪುನೀತ್, ತನ್ನ ಮಂಚದ ಬುಡದಲ್ಲೇ ಪಟಾಕಿಯ ಪ್ಯಾಕೆಟ್ ಇಟ್ಟುಕೊಂಡು ಮಲಗಿದ. ಆದರೆ ಅವನಿಗೆ ನಿದ್ರೆ ದೂರವಾಯಿತು. ಈ ರಾತ್ರಿ ಕಳೆದು ಎಷ್ಟು ಬೇಗ ಬೆಳಗಾಗುವುದೋ? ಎಷ್ಟು ಬೇಗ ತಾನು ಪಟಾಕಿ ಹೊದೆಯುತ್ತೇನೋ? ಅತಿಯಾದ ಸಂತೋಷಕ್ಕೆ ಅವನಿಗೆ ಬಹಳ ಹೊತ್ತು ನಿದ್ರೆಯೇ ಬರಲಿಲ್ಲ.
ನರಕಚತುರ್ದಶಿ ಯ ಬೆಳಗಿನ ಜಾವ ಅವನ ಅಮ್ಮ ಅವನನ್ನು ಬೇಗ ಎಬ್ಬಿಸಿ,ತಲೆಗೆ ಎಣ್ಣೆ ಹಚ್ಚಿ, ಬಿಸಿನೀರಿನಿಂದ ಸ್ನಾನ ಮಾಡಿಸಿದ ನಂತರ ,ದೇವರ ಮುಂದೆ ದೀಪ ಬೆಳಗಿಸಿ ಪೂಜೆ ಮಾಡುವ ವೇಳೆಗೆ ಬೆಳಗ್ಗೆ ಏಳುವರೆಯಾಗಿತ್ತು. ಆಷ್ಟರೊಳಗೆ ಪುಷ್ಕರ್ ನ ಅಕ್ಕಪಕ್ಕದ ಮನೆಯ ಸ್ನೇಹಿತರೆಲ್ಲರೂ ಇವನನ್ನು ಹುಡಿಕಿಕೊಂಡು ಬಂದರು. ಚಿನಕುರಳಿ, ಕುದುರೆ ಪಟಾಕಿಗಳನ್ನು ತೆಗೆದುಕೊಂಡು ಮನೆಯ ಮುಂದಿನಅಂಗಳಕ್ಕೆ ಓಡಿದರು. ಅಂದೆಲ್ಲಾ ಪಟಾಕಿ ಹೊಡದಿದ್ದೇ ಹೊಡದದ್ದು. ಊಟ ತಿಂಡಿಗಳ ಕಡೆಗೂ ಮಕ್ಕಳಿಗೆ ಲಕ್ಷವಿರಲಿಲ್ಲ. ಮಾರನೇದಿನ ಲಕ್ಷ್ಮೀ ಪೂಜೆಯದಿನವೂ ಸ್ವಲ್ಪ ಪಟಾಕಿ ಹೊಡೆದು ಮುಗಿಸಿದರು.
ಕಡೆಯ ದಿನ ದೀಪಾವಳಿಯಂದು ಬಲೀಂದ್ರನ ಪೂಜೆಯ ನಂತರ, ಪುರುಷೋತ್ತಮ್ ನ ಮಾರ್ಗದರ್ಶನದಂತೆ
ಪುಷ್ಕರ್ ದೊಡ್ಡ ದೊಡ್ಡ ಪಟಾಕಿಗಳನ್ನು ಅತ್ಯಂತ ಎಚ್ಚರಿಕೆಯಿಂದ ಹತ್ತಿಸುತ್ತಿದ್ದ. ಕಡೆಯದಾಗಿ ಮನೆಯ ಮುಂದೆ ಲಕ್ಷ್ಮೀ ಪಟಾಕಿಯೊಂದನ್ನು ಹಚ್ಚಿಸುವಾಗ,
ಅದು ಆರಿ ಹೋಗಿದೆಯೆಂದು ತಿಳಿದು ಮತ್ತೊಮ್ಮೆ ಅದನ್ನು ಹಚ್ಚಿಸಲು ಮುಖವನ್ನು ಅದರ ಹತ್ತಿರಕ್ಕೆ ತೆಗೆದುಕೊಂಡು ಹೋದಾಗ, ಇದ್ದಕ್ಕಿದ್ದಂತೆ ಡಬ್ ಎಂದು ಜೋರಾಗಿ ಶಬ್ದ ಮಾಡಿ ಪಟಾಕಿಯ ಕಿಡಿ ಪುಷ್ಕರ್ ಕೈಗೆ ಹೊಡೆದೇ ಬಿಟ್ಟಿತು. ಪುಣ್ಯಕ್ಕೆ ಕಣ್ಣಿಗೇನೂ ಅಪಾಯವಾಗಲಿಲ್ಲ. ಬಲ ಅಂಗೈ ಪೂರ್ತಿ ಸುಟ್ಟು ಕಪ್ಪಗಾಗಿ ಹೋಯಿತು. ಪಾಪ ಪುಷ್ಕರ್ ನೋವಿನಿಂದ ಚೀರ ತೋಡಗಿದಾಗ, ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಬೆಳಕಿನ ಹಬ್ಬವು ಬೆಂಕಿಯ ಕಿಡಿಯಲ್ಲಿ ಪುಷ್ಕರ್ ನನ್ನು ಅಪಾಯಕ್ಕೆ ಸಿಲುಕಿಸಿತು.
ಸಂತೋಷವಾಗಿ ಸಂಭ್ರಮಿಸಿದ ಹಬ್ಬದ ದಿನ ಕಡೆಗೆ ನೋವಿನಿಂದ ನರಳುವಂತಾಯಿತು.
ಪುರುಷೋತ್ತಮ್ ಮತ್ತು ಅವನ ಪತ್ನಿ ಇಬ್ಬರೂ ಸೇರಿ
"ಮುಂದಿನ ದೀಪಾವಳಿಯಿಂದ ಲಕ್ಷ್ಮೀ ಪಟಾಕಿ,ಆಟಂಬಾಂಬ್ ನಂತಹ ಪಟಾಕಿಗಳನ್ನು ತರಲೇಬಾರದೆಂದು ತೀರ್ಮಾನಿಸಿದರು.