ಅದಲು ಬದಲು
ಅದಲು ಬದಲು
ಮಧುಮತಿ ಮತ್ತು ಮಹೇಶ್ ಮದುವೆಯಾಗಿ ಅದಾಗಲೆ ಹಲವು ವರುಷಗಳು ಕಳೆದಿತ್ತು .ಮಕ್ಕಳು ಬೆಳೆದು ನಿಂತು ಕಾಲೇಜಿಗೆ ಹೋಗುತ್ತಿದ್ದರು.ಚಿಕ್ಕ ಕುಟುಂಬ.ಮನೆಯೆಂದ ಮೇಲೆ ಮನಸ್ಥಾಪ ಸಹಜ.ಗಂಡ ಹೆಂಡತಿ ಎಂದ ಮೇಲೆ ಕೋಪ ಜಗಳ ಮುನಿಸು ರಮಿಸು ಎಲ್ಲಾ ಇರುವುದೇ ಎಂಬಂತೆ ಈ ಸಂಸಾರದಲ್ಲಿಯು ಆಗಾಗ ಚರ್ಚೆ ನೆಡೆಯುತ್ತಿತ್ತು.ಮಾತನಾಡಿ ಸ್ವಲ್ಪ ಸಮಯ ಮುನಿಕೊಂಡರೂ ರಾತ್ರಿಯ ಊಟ ಒಟ್ಟಿಗೆ ಮಾಡುತ್ತಿದ್ದರು.ಮಕ್ಕಳ ಎದುರು ಎಂದಿಗೂ ತಮ್ಮ ಕೋಪ ತಾಪಗಳನ್ನು ತೋರಿಸಿದೆ ಬಗೆಹರಿಸಿಕೊಂಡು ನಗುನಗುತ್ತಿದ್ದರು.ಮಕ್ಕಳೂ ಕೂಡ ಅಪ್ಪ ಅಮ್ಮ ಜಗಳ ಮಾಡುವುದನ್ನು ನೋಡಿದ್ದು ಬಹಳಾ ಕಡಿಮೆಯೆಂದರೆ ತಪ್ಪಾಗಲಾರದು.ಅಂತು ಒಂದು ಮಾಧ್ಯಮ ವರ್ಗದ ಸುಖಿ ಕುಟುಂಬ.ಏನೇ ಕೆಲಸದ ಒತ್ತಡವಿದ್ದರೂ ಊಟದ ಹೊತ್ತಿಗೆ ಮನೆಗೆ ಬರುತ್ತಿದ್ದ ಮಹೇಶ್ ಗೆ ಹೆಂಡತಿ ಮಕ್ಕಳೊಡನೆ ಕಾಲ ಕಳೆಯುವುದೆಂದರೆ ಬಲು ಪ್ರೀತಿ.ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವಾಗ ಪಕ್ಕದ ಮನೆಯ ಟೀ ವಿ ಯಲ್ಲಿ ಪ್ರಸಾರವಾಗುತ್ತಿದ್ದ ಹಾಡು"ದೇವರು ವರವನು ಕೊಟ್ರೆ ನಾ ನಿನ್ನೆ ಕೋರುವೆ ಚೆಲುವೆ " ಎಂಬ ಹಾಡು ಕಿವಿಗೆ ಬೀಳುತ್ತಿದ್ದಂತೆ ಮಹೇಶ್ ಮಧು ಕಡೆ ತಿರುಗಿ ಕೈ ತೋರಿಸಿ ಅದೇ ಹಾಡನ್ನು ಹೇಳಲಾರಂಭಿಸಿದ..ಎಲ್ಲರೂ ನಗುತ್ತಾ ಕುಳಿತಿರುವಾಗ ಇಬ್ಬರ ಮುದ್ದಿನ ಮಗಳು ಮಹತಿ "ಅಮ್ಮ ಒಂದು ವೇಳೆ ದೇವರು ಪ್ರತ್ಯಕ್ಷ ಆಗಿ ಏನು ವರ ಬೇಕು ಕೇಳಿದರೆ ಏನ್ ಕೇಳ್ತಿ?" ಎಂದಾಗ ಯೋಚಿಸದಯೆ "ನಿಮ್ಮ ಅಪ್ಪ ಮುಂದಿನ ಜನುಮದಲ್ಲೂ ನನಗೇ ಸಿಗಬೇಕು. ಆದರೆ ನಾನು ಅವರಾಗಬೇಕು ಅವರು ನಾನಾಗಬೇಕು.ಅಂದರೆ ಈ ಜನುಮದ ರೋಲ್ ರಿರ್ವಸ್ ಆಗಬೇಕು..ಈ ಜನುಮದ ಎಲ್ಲಾ ಘಟನೆಗಳು ಇಬ್ಬರಿಗೂ ನೆನಪಿರಬೇಕು"ಎಂದು ನಿಲ್ಲಸದಂತೆ ಹೇಳುತ್ತಿದ್ದ ಅಮ್ಮನ್ನನ್ನು ತಡೆದ ಮಗ ಮಧುಸೂದನ"ಹಾಗಾದರೆ ನಾನು ಹಾಗೆ ಬೇಡಿಕೊಳ್ಳುವೆ ನಾವು ನಾಲ್ಕು ಜನ ಮತ್ತೆ ಒಂದೇ ಮನೆಯಲ್ಲಿ ಆದರೆ ರೋಲ್ ರಿರ್ವಸ್ ಆಗಬೇಕು ಎಷ್ಟು ಮಜಾ ಇರಬಹುದಲ್ಲವೇ "ಎಂದು ಮಾತನಾಡುತ್ತಾ ಊಟ ಮುಗಿಸಿ ಮಲಗಿದರು..ಇವರ ಮಾತುಗಳನ್ನು ಕೇಳಿ ದೇವರು ಅಸ್ತು ಎಂದಂತೆ ಮುಂಜಾನೆ ಎದ್ದಾಗ ಎಲ್ಲವು ಅಯೋಮಯವೆನಿಸಲು ಪ್ರಾರಂಭವಾಯಿತು.ಅಪ್ಪ ಅಮ್ಮನಾಗಿ ಅಮ್ಮ ಅಪ್ಪನಾಗಿ ತಂಗಿ ಅಣ್ಣನಾಗಿ ಅಣ್ಣ ತಂಗಿಯಾಗಿ ಬದಲಾಗಿದ್ದರು.ಹೋದ ಜನುಮದ ನೆನಪುಗಳು ಹಸಿಯಾಗಿದ್ದವು.ಮುಂಜಾನೆ ಬೇಗ ಎದ್ದ ಮಧುವಾಗಿ ಬದಲಾದ ಮಹೇಶ್ ಗೆ ಮನೆ ಕೆಲಸ ಮಾಡಿ ಮಾಡಿ ರೋಸಿಹೋಗಿತ್ತು.ಎಷ್ಟು ಮಾಡಿದರು ಕೆಲಸ ಮುಗಿಯುವುದಿಲ್ಲ ಹೋದ ಜನುಮದಲ್ಲಿ ಕೆಲಸಕ್ಕೆ ನಿಗಧಿತ ಅವಧಿ ಇತ್ತು.ಈ ಹೆಣ್ಣು ಜನುಮದಲ್ಲಿ ಬಿಡುವೇ ಸಿಗುತ್ತಿಲ್ಲ ಎಂದು ನೆನೆದು "ಹೆಣ್ಣಿಗೆ ಹೆಣ್ಣೇ ಸಾಟಿ "ಎಂದನಿಸಿತು..ಇನ್ನು ಮಹೇಶ್ ಆಗಿ ಬದಲಾದ ಮಧುವಿಗೆ ಹೊರಗಿನ ಒತ್ತಡ ಜೊತೆಗೆ ಮನೆಯವರಿಗೆ ಸಮಯ ಕೊಡಬೇಕು ಎಂಬ ಒತ್ತಡ ಮಕ್ಕಳ ಭವಿಷ್ಯದ ಒತ್ತಡಗಳ ನೆನೆದು ಏನು ತೋಚದೆ " ಅಬ್ಬಾ ಅದೆಷ್ಟೋ ಕಡೆ ತಂದೆ ತಾಯಿ ಎರಡೂ ಆಗಿ ಬೆಳೆಸುವ ತಾಯಂದಿರಿದ್ದಾರೆ. ಎರಡನ್ನು ನಿಭಾಯಿಸುವ ಅವರ ಪರಿಶ್ರಮಕ್ಕೆ ಸಾಟಿ ಇದೆಯೇ ಎನಿಸಿತು.
ಹುಡುಗಿಯರನ್ನು ರೇಗಿಸುವ ತನ್ನ ಸ್ನೇಹಿತರಿಗೆ ಅವರ ಕಷ್ಟವನ್ನು ಅರ್ಥ ಮಾಡಿಸಬೇಕೆಂದು ನಿರ್ಧರಿಸಿದ ಮಹತಿಯಾಗಿ ಬದಲಾದ ಮಧುಸೂದನ.ಬೇಕೆಂದಾಗ ಅತ್ತು ಹಠ ಮಾಡಿ ಗಿಟ್ಟಿಸಿಕೊಳ್ಳುತ್ತಿದ್ದ ಮಹತಿಗೆ ಮಧುಸೂದನ ಆಗಿ ಬದಲಾದಾಗ ಅಳುವಂತಿರಲ್ಲಿಲ್ಲ.. ಭಾವನೆಗಳನ್ನು ಬಂಧಿಸಿ ಇಟ್ಟುಕೊಳ್ಳುವುದು ಕಷ್ಟ ಎನಿಸಿತು.
ನಾಲ್ಕು ಜನರ ಅಭಿಪ್ರಾಯ ಬದಲಾಗುತ್ತಿದ್ದಂತೆ ಬಾಗಿಲು ಬಡಿಯುವ ಸದ್ದಾಗಿ ನಿದ್ದೆಯಿಂದ ಎಚ್ಚರವಾಯಿತು.ಎದ್ದು ಸುತ್ತಮುತ್ತ ನೋಡಿದರು.ಕನಸಿನಲಿ ಕಂಡಿದ್ದನ್ನು ನೆನೆದರು.ಒಬ್ಬರನ್ನೊಬ್ಬರು ಅರಿಯಲು ಕನಸು ಇನಷ್ಟು ಸಹಕಾರಿಯಾದಂತೆ ಅನಿಸಿತು..ಕನಸು ಬೀಳುವವರೆಗೂ ಅವರವರ ಕೆಲಸವೇ ದೊಡ್ಡದು ಎಂದು ನಡೆದುಕೊಳುತ್ತಿದ್ದವರು ಒಬ್ಬರ ಮೇಲಿನ ಒಬ್ಬರ ಅಭಿಪ್ರಾಯ ಬದಲಾಯಿಸಿಕೊಳ್ಳಲು ಸಹಕಾರಿಯಾಯಿತು.ಒಬ್ಬರ ಭಾವನೆಗಳ ಬಗ್ಗೆ ಒಬ್ಬರ ಸ್ವಭಾವದ ಬಗ್ಗೆ ಒಬ್ಬರ ಕೆಲಸದ ಬಗ್ಗೆ ಗೌರವ ಹೆಚ್ಚಿಸಿತು.
ಒಟ್ಟಾರೆ ತಮಾಷೆಗಾಗಿ ಆಡಿದ ಮಾತು ಬೇಡಿದ ವರ ಮಹೇಶ್ ಸಂಸಾರಕ್ಕೆ ಕನಸಿನ ರೂಪದಲ್ಲಿ ವಾಸ್ತವದ ಅರಿವು ಮೂಡಿಸಲು ಸಹಕರಿಸಿತು..ಹೀಗೊಂದು ವರ ಸಿಕ್ಕಿದರೆ ಆದ ಘಟನೆ ನೆನಪಿದ್ದರೇ ಹೇಗಿರುತ್ತದೆ??ಕನಸು ಕಾಣಲು ತಯಾರಾಗಿ... ನಿಜವಾದರೂ ಆಗಬಹುದು .