ನಾನು ಕಂಡ ಮುಸ್ಸಂಜೆ ಸಮಯ.....!!
ನಾನು ಕಂಡ ಮುಸ್ಸಂಜೆ ಸಮಯ.....!!
ರವಿಯ ತೇಜಸ್ಸನ್ನೇ ನಾಚುವಂತಹ ಮೈಮಾಟ ನೋಡುಗರ ಕಣ್ಮನ ಸೆಳೆಯುವ ನೋಟ, ಕಲ ಕಲ ನಾದ ವಿನೋದವಾಗಿ ಹರಿಯುವ ತುಳುನಾಡ ಆಸ್ತಿ ಜೀವನಾಡಿ ನಮ್ಮ ನೇತ್ರಾವತಿ. ದಕ್ಷಿಣ ಕನ್ನಡ ಕಾಸರಗೋಡನ್ನು ಹಾದು ಹೋಗುವ ಮಾರ್ಗದಲ್ಲಿ ಏನದೇನು ಕಣ್ತುಂಬಿಕೊಳ್ಳಬಹುದು. ನಾನಿಂದು ನನ್ನ ರೈಲ್ವೆ ಪಯಣದಲ್ಲಿ ನಯನಗಳಿಗೆ ತಂಪನ್ನು ನೀಡುವ ಕಿವಿಗಳಿಗೆ ಕಂಪನ್ನು ಸೂಸುವ ಸೊಂಪಾಗಿ ಜುಳುಜುಳು ಹರಿಯುವ ಮಾಯಗಾತಿ ಈ ನೇತ್ರಾವತಿ. ನೇತ್ರಾವತಿ ನದಿಗೆ ಕಟ್ಟಲಾದ ರೈಲ್ವೆ ಸೇತುವೆ ಮಂಗಳೂರು ಪ್ರಯಾಣಿಸುವ ಪ್ರಯಾಣಿಕರ ಕೇಂದ್ರಬಿಂದು ಎಂದರೆ ತಪ್ಪಾಗದು.
ಸೇತುವೆಯು ಒಂದು ರೈಲಿನ ಉದ್ದಕ್ಕಿಂತಲೂ ಹೆಚ್ಚು ನೀವೇ ಊಹಿಸಿ ನೋಡಿ ಅದರ ಉದ್ದ ಎಷ್ಟಿರಬಹುದೆಂದು. ರೈಲು ಅದರ ಮೂಲಕ ಹಾದುಹೋಗುವಾಗ ಹೃದಯ ಡಬ್ ಡಬ್ ಅಂತ ಶಬ್ಧ ಬರುವಂತೆ ಜೋರಾಗಿ ಬಡಿಯ ತೊಡಗುತ್ತದೆ. ಜೋರಾಗಿ ಅರಬ್ಬೀ ಸಮುದ್ರದಿಂದ ಬೀಸುವ ಮಧುರ ಮಾರುತದ ಸ್ಪರ್ಶ ಒಮ್ಮೆ ಕಿಟಕಿಯಿಂದ ನೋಡಿದರೆ ದುಮ್ಮಿಕ್ಕಿ ಹರಿಯುವ ಹೊಳೆ ಅಬ್ಬಾ ನೋಡುವಾಗ ನಾನು ಆಗಸದಲ್ಲಿ ನೀರು ಪಾತಾಳದಲ್ಲಿ ಹರಿಯುವಂತೆ ಕಾಣುತ್ತದೆ. ಎರಡು ಟ್ರಾಕ್ಗಳ ಮಧ್ಯೆ ಸಾಗುವ ರೈಲು ಗಾಡಿ ಒಮ್ಮೆ ಬಲಕ್ಕೆ ಒಮ್ಮೆ ಇನ್ನೊಮ್ಮೆ ಎಡಕ್ಕೆ ಬಾಗಿದಂತೆ ಭಾಸವಾಗುತ್ತದೆ. ಇನ್ನು ನದಿಯ ನಡುಭಾಗ ತಲುಪುತ್ತಿದ್ದಂತೆಯೇ ಭಯ ಒಮ್ಮೆಗೆ ಆವರಿಸಿಬಿಡುತ್ತದೆ . ಸುತ್ತಮುತ್ತಲು ನೋಡುವಾಗ ಬರೀ ನೀರು. ಇನ್ನು ಸ್ವಲ್ಪ ದೂರಕ್ಕೆ ಕಣ್ಣುಹಾಯಿಸಿದಾಗ ಚಿಕ್ಕ ಆಕೃತಿಯಂತೆ ಕಾಣುವ ದೋಣಿಯ ಸಾಲುಗಳು , ಆರಂಭದಲ್ಲಿಯೇ ನೋಡಲು ಸಿಗುವ ಮರದ ಮಿಲ್ ಕಟ್ಟಡಗಳನ್ನು ಸರದಿ ಸಾಲುಗಳು . ಅಲ್ಲಿ ನೋಡಲು ಸಿಗುತ್ತದೆ. ಇನ್ನು ಮೈ ಬೆಚ್ಚಗಿದ್ದರು ಸಾಗರ ದಿಂದ ಬರುವ ತಂಗಾಳಿಯ ಮೈಮಾಟಕ್ಕೆ ಮರುಳಾಗದವರು ಯಾರು.
ಮಳೆಗಾಲದಲ್ಲಂತೂ ನೇತ್ರಾವತಿ ಸೇತುವೆಯ ಮೂಲಕ ರೈಲ್ವೆ ಪಯಣ ಸಾಮಾನ್ಯ ದಿನಗಳಿಗಿಂತಲೂ ಹೆಚ್ಚು ಭಯವನ್ನು ಹುಟ್ಟಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ನಾನು ಚಿಕ್ಕವನಾಗಿದ್ದಾಗ ಈ ಸೇತುವೆ ಬಂತೆಂದರೆ ಸಾಕಿತ್ತು ಕಿಟಕಿಗಳನ್ನು ಮುಚ್ಚುತ್ತಿದ್ದೆ. ಅಕ್ಕನನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಿದ್ದೆ. ಕಣ್ಣನ್ನು ಸೇತುವೆ ದಾಟುವವರೆಗೂ ಬಿಡುತ್ತಿರಲಿಲ್ಲ. ಅಬ್ಬಾ ದೇವರೇ ಈ ಸೇತುವೆಯನ್ನು ದಾಟಿಸಿ ಬಿಡು ಅಂತ ಒಂದೇಸಮನೆ ಬೇಡಿಕೊಳ್ಳುತ್ತಿದ್ದೆ. ಆದರೂ ಇಂದು ಕೂಡ ಈ ಮಾರ್ಗದ ಮೂಲಕ ಹಾದುಹೋಗುವಾಗ ಮನಸಲ್ಲಿ ಒಂದು ರೀತಿಯ ಸಣ್ಣ ಕಂಪನದ ಅನುಭವವಾಗುತ್ತದೆ. ಆ ಭಯ ಸಂಪೂರ್ಣವಾಗಿ ಇಂದು ಕೂಡ ಮಾಸಿಲ್ಲ.
ಗೆಳೆಯರೇ ಒಂದು ಬಾರಿಯಾದರೂ ಈ ದಾರಿಯ ಮೂಲಕ ಹಾದುಹೋಗಿ . ಇಲ್ಲಿ ದಿನದ 24 ಗಂಟೆಯೂ ಮಧುರ ತಂಗಾಳಿಯ ಸ್ಪರ್ಶ ನಿಮಗಾಗುತ್ತದೆ. ಅದರಲ್ಲಿ ಮುಸ್ಸಂಜೆಯ ಸಮಯ ಹೇಳಿಮಾಡಿಸಿದ್ದು . ಆ ಸಮಯದಲ್ಲಿ ಟ್ರೈನ್ ಪಯಣ ಕಣ್ಣಿಗೆ ರಸದೌತಣವನ್ನು ಕಟ್ಟಿಕೊಡುತ್ತದೆ. ಭೂಮಿ ಪಶ್ಚಿಮದ ಕಡೆ ಕಣ್ಣು ಹಾಯಿಸಿದರೆ ಮೂಡಣದಲ್ಲಿ ದಿನವೆಲ್ಲ ಸುತ್ತಿ ಆಯಾಸಗೊಂಡ ದಿನಕರ ಜಾರುವ ಸಮಯ ಅದನ್ನು ಸವಿದ ಮನವು ಸ್ವರ್ಗದ ಕಲ್ಪನೆ ಮನದಲ್ಲಿ ಮೂಡುವಂತೆ ಮಾಡುತ್ತದೆ. ಸುತ್ತಲಿನ ತೆಂಗಿನ ಮರಗಳು ತಲೆಬಾಗಿ ಸೂರ್ಯನನ್ನು ವಂದಿಸಿ ಬೀಳ್ಕೊಡುವಂತೆ, ಆಗಸದಲ್ಲಿ ಹಾರುವ ಹಕ್ಕಿಯು ರವಿಯ ಸೇವೆಯ ನೆನೆದು ಜೋಗುಳ ಹಾಡುತ್ತ ಗೂಡಿನತ್ತ ಓಡೋಡಿ ಹೋಗುವ ರೀತಿ ಅಲ್ಲಿ. ಇದನ್ನೆಲ್ಲವನ್ನು ನೋಡುವ ಸೂರ್ಯ ಕಡು ಕೆಂಪಾಗಿ ಮತ್ತೆ ನಾಳೆ ಬರುವೆ ಹೊಸ ಹರುಷವ ತರುವೆ ಎಂಬ ಸಂದೇಶವನ್ನು ಕೊಟ್ಟು ಜಾರುತ್ತಾನೆ. ಆಗಸದಲ್ಲಿ ತುಂಬಿದ ಬೆಳಕಿನ ಕಿರಣವು ಒಂದೊಂದಾಗಿ ಮರೆಯಾಗುತ್ತಾ ಹೋಗುತ್ತದೆ.
ನೀವು ಕೂಡ ಒಮ್ಮೆಯಾದರೂ ಈ ದೃಶ್ಯವನ್ನು ಕಣ್ತುಂಬಿಕೊಳ್ಳಿ. ನೇಸರನ ಬರುವಿಕೆಯನ್ನು ಕಾಯುವ ಪರಿಸರದಂತೆ ನಾಳೆ ಹೊಸ ದಿನದ ಬರುವಿಕೆಗಾಗಿ ನಾನು ಕಾಯುವೆ. ಇದಕ್ಕೆಲ್ಲ ಸಾಕ್ಷಿ ನೇತ್ರಾವತಿ ನಿನಗಿದು ಅಂತರಾಳದ ನಮಃ.