Gireesh pm Giree

Abstract Action Inspirational

4.5  

Gireesh pm Giree

Abstract Action Inspirational

ಮುಖವಾಡ

ಮುಖವಾಡ

3 mins
417


ಹುಟ್ಟುವ ಸೂರ್ಯ ಪ್ರತಿದಿನವೂ ಹುಟ್ಟಿ ಕತ್ತಲನ್ನು ಸರಿಸಿ ಬೆಳಕನ್ನು ನೀಡಿ ಸಂಧ್ಯಾಕಾಲದಲ್ಲಿ ಕಣ್ಮರೆಯಾಗುವಂತೆ ಅಲ್ಲ ನಿಜವಾದ ಪ್ರೀತಿ. ನಿಜವಾದ ಪ್ರೀತಿಯೆಂದರೆ ಹಗಲಲ್ಲು ಇರುಳಲ್ಲು, ನೋವಲ್ಲೂ ನಲಿವಲ್ಲು, ನಕ್ಕಾಗ ಅತ್ತಾಗ, ಗೆದ್ದಾಗ ಸೋತಾಗ, ಯಾರು ನಮ್ಮ ಜೊತೆ ಇರುತ್ತಾರೋ ಅದುವೇ ನಿಜವಾದ ಪ್ರೀತಿ.

   ನಾನು ಹಾಗೆ ಯೋಚನೆಯಲ್ಲಿ ತಲ್ಲೀನನಾಗಿರುವಾಗ ನನ್ನ ಗೆಳೆಯನ ಜೀವನದಲ್ಲಿ ನಡೆದ ಘಟನೆಯೊಂದು ಪಕ್ಕನೆ ನೆನಪಿಗೆ ಬಂತು. ಆತ ನೋಡಲು ಸುಂದರನಾಗಿದ್ದ ಓದಲು ತುಂಬಾ ಜಾಣನಾಗಿದ್ದ . ಆಕೆ ಬರುವವರೆಗೆ ಅವನ ಮೇಲೆ ಅವನಿಗೆ ಮನೆಯವರ ಮೇಲೆ ತುಂಬಿದ ಪ್ರೀತಿಯ ಸೆಲೆ, ಬಾಂಧವ್ಯದ ನೆಲೆ ಗಟ್ಟಿಯಾಗಿತ್ತು. ಹೇಗೂ ನನ್ನ ಜೊತೆಗೆನೇ ಕಾಲೇಜಿಗೆ ಬರುತ್ತಿದ್ದ. ಯಾರೊಂದಿಗೂ ಬೇಗನೆ ಬೇರೆತುಕೊಳ್ಳುವವನಲ್ಲ. ಆದರೆ ಒಮ್ಮೆ ಯಾರನ್ನಾದರೂ ಮನಸಾರೆ ಮೆಚ್ಚಿಕೊಂಡರೆ ಅವರ ಕಷ್ಟಕ್ಕೆ ನೆರಳಾಗಿ ನೋವಿಗೆ ಔಷಧಿ ಆಗುತ್ತಿದ್ದ.

    ಒಂದು ದಿನ ಕಾಲೇಜು ಬಿಟ್ಟು ಹೇಗೋ ಊರಿಗೆ ರೈಲು ಏರದೆ ವಿಧಿ ಇಲ್ಲ. ಅಲ್ಲಿಂದ ನಮ್ಮ ಊರಿಗೆ ಹೊರಡುವ ಮೂರ್ನಾಲ್ಕು ಎಕ್ಸ್ಪ್ರೆಸ್ ರೈಲುಗಳಿದ್ದರೂ ಅದಕ್ಕೆ ಹೋಗುವ ಮನಸ್ಸಿಲ್ಲ. ಯಾಕೆಂದರೆ ಪ್ಯಾಸೆಂಜರ್ ರೈಲಿನಲ್ಲಿ ನಮ್ಮಂತಹ ನೂರಾರು ವಿದ್ಯಾರ್ಥಿಗಳ ಸಮೂಹ ಅಲ್ಲಿ ಹಾರಾಡುತ್ತಿತ್ತು. ಹೀಗಿರುವಾಗ ನನ್ನ ಗೆಳೆಯನಿಗೆ ಒಬ್ಬಳ ಪರಿಚಯವಾಯಿತು. ಅದು ಅವನ ಜೀವನದ ತಿರುವಿಗೆ ಕಾರಣವಾಯಿತು. ಆಕೆಯು ನೋಡಲು ಸುಂದರಿಯಾಗಿದ್ದಳು. ಮಾತು ಹೆಚ್ಚಾಯಿತು ಪರಿಚಯ ಪರಸ್ಪರ ಆಯಿತು ಕೊನೆಗೆ ಪ್ರೀತಿ ನಮ್ಮ ಹುಡುಗನ ಬಾಳಲ್ಲಿ ಉದಯಿಸಿತು. ಆದರೆ ಆಕೆಯ ಬಾಹ್ಯ ಸೌಂದರ್ಯದಂತೆ ಅಂತರಂಗವು ಶುದ್ಧವಾಗಿರಲಿಲ್ಲ . ಅವಳ ಮಾತು ಕೂಡ ಮೃದುವಾಗಿ ಕಂಡರು ಅದರೊಳಗಿನ ಮರ್ಮ ಬೇರೆಯಾಗಿತ್ತು. ಆದರೆ ಇದನ್ನೆಲ್ಲ ಅರಿಯದೇ ಗೆಳೆಯ ಮೋಸ ಹೋಗಿಯೇಬಿಟ್ಟ. ನನ್ನೊಂದಿಗೆ ಮಾತನಾಡುವುದು ಅಷ್ಟಕಷ್ಟೇ ಎಂಬ ನಿರ್ಧಾರಕ್ಕೆ ಆಕೆ ಸಿಕ್ಕ ಮರುಕ್ಷಣವೇ ಬಂದನು. ಅವನೊಂದಿಗಿನ ಮಧುರ ಸ್ನೇಹ ಬಾಂಧವ್ಯ ನಿಧಾನವಾಗಿ ಬಿರುಕು ಬಿಡಲಾರಂಭಿಸಿತು ಕೊನೆಗೆ ಹಾಯ್ ಬಾಯಿಗೆ ಮಾತ್ರ ಸೀಮಿತವಾಯಿತು.

   ಗೆಳೆಯ ತನ್ನ ಓದುವ ಸಮಯವನ್ನು ಕೂಡ ಅವಳೊಂದಿಗೆ ವ್ಯಯ ಮಾಡಿದ. ಸಿನಿಮಾ ಮಾಲ್ ಅಂತ ಸುತ್ತಾಡುವುದು, ಸಂಜೆಯಾದರೆ ಪಾನಿಪುರಿ ಮಸಾಲ ತಿಂಡಿಯನ್ನು ತೆಗೆದುಕೊಳ್ಳುವುದು ಕೊನೆಗೆ ರಾತ್ರಿಯಾಗುವಷ್ಟರಲ್ಲಿ ಜೇಬಲ್ಲಿ ನಯಾಪೈಸೆನೂ ಉಳಿಸಿಕೊಳ್ಳುತ್ತಿರಲಿಲ್ಲ. ಅವಳ ಸುತ್ತ ಪೃಥ್ವಿ ರವಿಯ ಸುತ್ತಿದಂತೆ ಈತ ಸುತ್ತುತ್ತಿದ್ದ. ಹೀಗೆ ಅವನ ಮನಸ್ಸಿನಲ್ಲಿ ಆಕೆ ಚಂದದ ಗೊಂಬೆ ಚಂದನದ ರಂಬೆ ಆದರೆ ಆಕೆಯ ಮನಸ್ಸಿನಲ್ಲಿ ಈತ ಕೇವಲ ಟೈಮ್ ಪಾಸ್ಗಾಗಿ ಸಿಕ್ಕ ಜೋಕರ್ ಹಾಳು ಕೊಂಬೆ ಎಂದು ಅವನಿಗೆ ತಿಳಿಯದೇ ಹೋಯಿತು.ಈ ವಿಚಾರವನ್ನು ಅವನಲ್ಲಿ ಹೇಳುವ ಪ್ರಯತ್ನವನ್ನು ಮಾಡಿದರು ಅದು ನೀರಲ್ಲಿ ಹೋಮ ಮಾಡಿದ ಹಾಗೆ ಎಲ್ಲವೂ ವ್ಯರ್ಥವಾಗಿ ಬಿಡುತ್ತಿತ್ತು.

   ಇತ್ತ ಮನೆಯವರಿಗೂ ತನ್ನ ಮಗನ ಮೇಲೆ ಸಾವಿರ ಅನುಮಾನಗಳು ಮೂಡಲಾರಂಭಿಸಿತು. ಅವನ ವರ್ತನೆಯಲ್ಲಿ ಅದಾಗಲೇ ಬದಲಾವಣೆಯ ಗಾಳಿ ಬೀಸತೊಡಗಿತ್ತು. ಓದುವುದೆಂದರೆ ಪಂಚಪ್ರಾಣ ತರಗತಿಗೆ ಫಸ್ಟ್ ಆದರೆ ಈಗ ಓದುವುದಿರಲ್ಲಿ ಸರಿಯಾಗಿ ಕ್ಲಾಸ್ಗೆ ಹೋಗುತ್ತಿರಲಿಲ್ಲ. ಇದನ್ನೆಲ್ಲಾ ನೋಡಿದ ನನಗೆ ಕಣ್ಣೆದುರು ಗೆಳೆಯನ ಜೀವನ ಹಾಳಾಗುತ್ತಿದೆ ಎಂದು ಮನಸಾರೆ ವ್ಯಥೆಪಡುತ್ತಿದ್ದೆ.

    ಅಂತೂ ಅವಳ ಅಸಲಿ ಮುಖ ದರ್ಶನ ಅಂದು ಗೆಳೆಯನಿಗೆ ಆಯ್ತು. ಸುಮ್ನೆ ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ ನಡೆಯುವಾಗ ಒಂದು ಮೂಲೆಯಲ್ಲಿ ಜೋರಾಗಿ ಅಳುತ್ತಿರುವ ಭಂಗಿಯಲ್ಲಿದ್ದ ಒಬ್ಬ ಯುವಕನನ್ನು ನೋಡಿದೆ. ಅವನ ನೋಡಿ ಮನದ ತುಂಬಾ ಮರುಕ ಹುಟ್ಟಿತು. ಇನ್ನು ಸಮೀಪ ಹೋಗಿ ನೋಡುವಾಗ ಆತ ಬೇರೆ ಯಾರೂ ಅಲ್ಲ ನನ್ನ ಪ್ರೀತಿಯ ಗೆಳೆಯ. ಆತ ಬಿಗಿಯಾಗಿ ನನ್ನ ಅಪ್ಪಿಕೊಂಡು ಅವನಲ್ಲಿ ತುಂಬಿದ್ದ ನೋವನ್ನು ಸರಸರನೆ ಹೇಳಿದ. ಆಕೆಯ ಮೋಸದ ಪಗಡೆಯಾಟದ ಅಸಲಿ ಕತೆಯ ಹೇಳಿ ಬಿಕ್ಕಿ ಬಿಕ್ಕಿ ಅತ್ತ.  ಆ ಕ್ಷಣ ನಾನು ಹೇಳಿದ್ದು ಇಷ್ಟೆ "ನೋಡು ಗೆಳೆಯ ನಿನ್ನನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸೋ ಮನೆಯವರ ಮುಂದೆ ನಿನ್ನೆಮೊನ್ನೆ ಬಂದು ಪ್ರೀತಿಗೆ ಕಳಂಕ ತರುವ ಆಕೆಯ ಹಿಂದೆ ನೀನು ಹೋಗಿ ತುಂಬಾನೇ ದೊಡ್ಡ ತಪ್ಪು ಮಾಡಿದೆ. ನಾನು ಸಾರಿ ಹೇಳಿದರು ನಿನ್ನ ನಿಲುವು ಬದಲಾಗಲಿಲ್ಲ. ಅವಳ ಮೇಲಿನ ಒಲವು ನಿನ್ನನ್ನು ಹಾಗೆ ಮಾಡಿಸಿದೆ. ಮೋಸದ ರಂಗಿನಾಟಕದಲ್ಲಿ ಪಾತ್ರದಾರಿ ನೀನಾದೆ ಸೂತ್ರಧಾರಿ ಅವಳಾದಳು. ಕೊನೆಗೆ ನಿನಗೆ ಸಿಕ್ಕಿದ್ದೇನು ಪ್ರೀತಿಯು ಸಿಗಲಿಲ್ಲ ಕಾಲೇಜು ಪೂರ್ತಿ ಮಾಡಲಿಲ್ಲ ಮನೆಯವರ ನೋವಿಗೂ ಮುನ್ನುಡಿ ಬರೆದೆ. ನೋಡು ತಪ್ಪು ಪ್ರತಿಯೊಬ್ಬನು ಮಾಡುತ್ತಾನೆ ಆದರೆ ಅದನ್ನು ತಿದ್ದಿ ನಡೆಯಬೇಕು . ಮೋಸ ಮಾಡಿ ಹೋದವಳ ಚಿಂತೆ ಬಿಟ್ಟು ಬಿಡು. ಮುಂದಿನ ಜೀವನದ ದಾರಿಯನ್ನು ನೀನು ಸರಿಪಡಿಸು. ಹಣ ನೋಡಿ ಹುಟ್ಟೋ ಪ್ರೀತಿ ನೀರ ಮೇಲೆ ಗುಳ್ಳೆ ತರ ಅವನ ಹಣ ಕರಗಿದ ಮೇಲೆ ರೈಲುಗಾಡಿಗೆ ಹಸಿರು ಸಿಗ್ನಲ್ ಕಂಡ ಮರುಕ್ಷಣವೇ ಆ ಜಾಗ ಬಿಟ್ಟು ಹೊರಡುವಂತೆ ನಮ್ಮ ಜೀವನದಿಂದ ಕೂಡ ಹಾಗೆ ಸೀದಾ ಹೋಗಿಬಿಡುತ್ತಾರೆ. 

     ಗೆಳೆಯರೇ ಪ್ರೀತಿ ಸುಳ್ಳೆಂದು ನಾನೆಂದು ಹೇಳಲಾರೆ. ಆದರೆ ಸುಳ್ಳು ಪ್ರೀತಿಯು ಇರುವುದಂತೂ ಖಂಡಿತ. ಪ್ರೀತಿಸುವ ಮುನ್ನ ಒಂದೆರಡು ಬಾರಿ ಯೋಚಿಸಿ. ಟೈಮ್ ಪಾಸ್ ಗಾಗಿ ಮತ್ತೊಬ್ಬ ಯುವಕ ಅಥವಾ ಯುವತಿಯ ಟೈಮ್ ವೇಸ್ಟ್ ಮಾಡಬೇಡಿ ಅವರ ಜೀವನದಲ್ಲಿ ಆಡಬೇಡಿ. ಪ್ರೀತಿಯೆಂಬುದು ಆಟಿಕೆಯ ವಸ್ತುವಲ್ಲ ಅದು ವಜ್ರದಂತೆ ಕಠಿಣ ನೀರಿನಂತೆ ಅಮೂಲ್ಯ.


Rate this content
Log in

Similar kannada story from Abstract