ಅಮ್ಮ
ಅಮ್ಮ
ಒಂದು ಶಾಲೆಯಲ್ಲಿ ಒಮ್ಮೆ ಅಮ್ಮನ ಬಗ್ಗೆ ಐದು ಪುಟಗಳಷ್ಟು ಒಂದು ಪ್ರಬಂಧ ಬರೆಯಲು ಹೇಳಿ ,ಒಂದು ವಾರ ಸಮಯ ಕೊಟ್ಟಿದ್ದರು. ಒಂದು ವಾರ ಕಳೆದ ನಂತರ ತರಗತಿಯ ಎಲ್ಲಾ ಮಕ್ಕಳು ತಾವು ಬರೆದ ಪ್ರಬಂಧಗಳನ್ನ ತಂದು ಕೊಟ್ಟರು. ಮೇಷ್ಟ್ರು ತಮ್ಮ ಮನೆಗೆ ಎಲ್ಲವನ್ನೂ ತೆಗೆದುಕೊಂಡು ಹೋಗಿ ಓದಿ ಮಾರನೇ ದಿನ ತರುವುದಾಗಿ ಹೇಳಿದರು. ಮನೆಯಲ್ಲಿ ಓದುತ್ತಿರುವಾಗ ಯಾರೋ ಒಬ್ಬವಿದ್ಯಾರ್ಥಿ ಕೊಟ್ಟಿಲ್ಲವೆಂದು ತಿಳಿಯಿತು. ಅವರಿಗೆ ಆ ವಿದ್ಯಾರ್ಥಿ ಯಾರಿರಬಹುದೆಂದು ಕಂಡು ಹಿಡಿಯಲು ಕಷ್ಟವಾಗಲಿಲ್ಲ. ಅದು ಮೂರು ದಿನದಿಂದ ಶಾಲೆಗೆ ಬರದ ಒಬ್ಬ ಬಡ ವಿದ್ಯಾರ್ಥಿನಿ. ಮಾರನೇದಿನ ಆ ವಿದ್ಯಾರ್ಥಿನಿಯನ್ನ ಕರೆದು ನಿನ್ನೆದಿನ ನೀನು ಶಾಲೆಗೆ ಬಂದಿಲ್ಲ ಎಲ್ಲರೂ ಬರೆದು ಕೊಟ್ಟಿದ್ದಾರೆ. ನೀನೂ ಬರೆದಿದ್ದರೆ ತಂದು ಕೊಡು ಅಂತ ಹೇಳಿದರು. ಪೂರ್ತಿ ನೆಂದು ಒದ್ದೆಯಾಗಿ ಮುದುರಿದ್ದ ಬಿಳಿ ಹಾಳೆಯನ್ನ ಕೊಟ್ಟು ಅಳತೊಡಗಿದಳು. ಸಮಾಧಾನ ಮಾಡ್ಕೋ ಏನಾಯ್ತು. ಇದೇನಿದು ಎಲ್ಲರೂ ಹತ್ತು ಹದಿನೈದು ಪುಟಗಳಷ್ಟು ತಾಯಿಬಗ್ಗೆ ಬರೆದಿದ್ದಾರೆ. ಆದರೆ ನೀನು ಒದ್ದೆಯಾಗಿರುವ ಕಾಗದ ಉಂಡೆ ಕೊಟ್ಟು ಅಳುತ್ತಾ ಇದ್ದೀಯೆ. ಏಕೆ ಏನಾಯ್ತು ಅಂತ ಕೇಳಿದರು. ಆ ಹುಡುಗಿ ಸಾರ್ ನನ್ನ ಅಮ್ಮ ನನ್ನನ್ನ ಬಿಟ್ಟು ಹೋಗಿ ಹತ್ತು ವರ್ಷವಾಯ್ತು ನನ್ನ ತಾಯಿ ಹೆಣ ತೆಗೆದುಕೊಂಡು ಹೋಗುವಾಗ ನಾನು ಅಳುತ್ತಾ ಹಿಂದೆ ಹೋದೆ. ರುದ್ರಭೂಮಿಯಲ್ಲಿ ಯಾರಿಗೂ ಗೊತ್ತಿಲ್ಲದೇ ಅಮ್ಮನ ನೆನೆಪಿಗೆ ಅವಳ ಸೀರೆಯ ಅಂಚನ್ನೇ ಹರಿದು ಇಟ್ಟುಕೊಂಡೆ. ಈ ದಿನಕ್ಕೂ ಅದನ್ನ ನೋಡಿದಾಗೆಲ್ಲ ನನಗೆ ಅಳು ಬರುತ್ತೆ. ತಡೆಯಲಾಗಲ್ಲ. ನೀವು ಕೊಟ್ಟ ಪ್ರಬಂಧ ಬರೆಯಲು ಕೂತರೆ ಅಳು ಬಿಟ್ಟು ನನಗೆ ಏನೂ ಬರೆಯಲಾಗಲಿಲ್ಲ . ಕಣ್ಣೀರಿಂದ ಹಾಳೆ ಪೂರ್ತಿ ಒದ್ದೆಯಾಗಿದೆ. ನನಗೆ ಬರೆಯಕ್ಕೆ ಆಗ್ತಿಲ್ಲಾ ಸಾರ್ ಅಂತ ಮತ್ತೆ ಅಳಲು ಪ್ರಾರಂಭಿಸಿದಳು. ಸಮಾಧಾನ ಮಾಡಿದ ಮೇಷ್ಟ್ರು ಹತ್ತಕ್ಕೆ ಹತ್ತು ಮಾರ್ಕ್ಸ್ ಕೊಟ್ಟುಬಿಟ್ಟರು.
ಕೆಲವು ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಈ ವಿಷಯ ತಿಳಿಸಿ ಕಷ್ಟಪಟ್ಟು ಹತ್ತು ಹದಿನೈದು ಪುಟಗಳಷ್ಟು ಪ್ರಬಂಧ ಬರಿದಿದ್ದರೂ ಏನೂ ಬರೆಯದೆ ಅಳುತ್ತಾ ನಿಂತವಳಿಗೆ ಹತ್ತಕ್ಕೆ ಹತ್ತು ಮಾರ್ಕ್ಸ್ ಕೊಟ್ಟಿದ್ದಾರೆ ಇದು ಯಾವ ನ್ಯಾಯ ಅಂತದೂರಿದರು. ಕೆಲವು ಪೋಷಕರು ಮುಖ್ಯೋಪಾಧ್ಯಾಯರ ಬಳಿ ಬಂದು ವಿಷಯ ತಿಳಿಸಿದಾಗ ಆ ಉಪಾಧ್ಯಾಯರನ್ನ ಕರೆಸಿದರು. ಅವರು ಬರುವಾಗ ಮಕ್ಕಳು ಬರೆದಿದ್ದ
ಉತ್ತರಗಳನ್ನು ತಮ್ಮೊಂದಿಗೆ ತಂದು ಟೇಬಲ್ ಮೇಲಿಟ್ಟು ಸಾರ್ ಮೊದಲು ನೀವು ದಯವಿಟ್ಟು ಒಮ್ಮೆ ಈ ಎಲ್ಲ ಪ್ರಬಂಧಗಳನ್ನ ಮನೆಗೆ ತೆಗೆದುಕೊಂಡು ಹೋಗಿ ಓದಿ ನನ್ನ ತಪ್ಪುಇದ್ದರೆ ಹೇಳಿ ಅಂದು ಬಿಟ್ಟರು. ಅದಕ್ಕೆ ಒಪ್ಪಿ ಮಾರನೇ ದಿನ ಬರಲು ಅವರಿಗೆಲ್ಲಾ ಹೇಳಿದರು. ಮಾರನೇದಿನ ಮನೆಯಲ್ಲಿ ಎಲ್ಲ ಪ್ರಬಂಧಗಳನ್ನು ಓದಿ ಬಂದಿದ್ದ ಮುಖ್ಯೋಪಾಧ್ಯರು ಹೇಳಿದ್ದು , ಯಾರಿಗೂ ಹತ್ತಕ್ಕೆ ಹತ್ತು ಅಂಕ ಕೊಡಲು ಸಾಧ್ಯವಿಲ್ಲ. ಕಾರಣ ಅಮ್ಮನ ಬಗ್ಗೆ ವಿವರಣೆ ಕೊಡೋವಾಗ ಭಾವನಾತ್ಮಕ ಅಂಶವೇ ಯಾವುದರಲ್ಲೂ ನನಗೆ ಕಂಡಿಲ್ಲ. ಅಮ್ಮನ ಎತ್ತರ, ಅಮ್ಮನ ಇಷ್ಟವಾದ ತಿಂಡಿ ಬಣ್ಣ, ಅಮ್ಮನಿಗೆ ಕೋಪ ಬಂದರೆ ಅಪ್ಪನ ಮೇಲೆ ತೀರಿಸಿಕೊಳ್ಳುವ ಬಗ್ಗೆ, ಅಣ್ಣ ತಮ್ಮಂದಿರನ್ನ ಒಂದೇ ಭಾವನೆಯಿಂದ ನೋಡದೆ ತಾರತಮ್ಯ ಮಾಡುವ ಬಗ್ಗೆ, ಹೀಗೇ ಏನೇನೋ ನಾವು ನಿರೀಕ್ಷಿಸದೆ ಇರುವ ವಿಷಯಗಳೆಲ್ಲ ಬರೆದಿದ್ದಾರೆ.
ಅಮ್ಮ ಅನ್ನೋ ಪದವೇ ಭಾವನಾತ್ಮಕ ಅಂತ ಹೇಳಿ ಅವರ ತಾಯಿಯ ಬಗ್ಗೆ ಪುಟ್ಟ ಭಾಷಣ ಮಾಡಿದರು. ಆಗ ಸರಿ ಸಾರ್ ಹತ್ತು ಮಾರ್ಕ್ಸ್ ಬೇಡ ಆದರೆ ಏನೂ ಬರಿಯದೆ ಇರೋ ಹುಡುಗಿಗೆ ಹತ್ತುಮಾರ್ಕ್ಸ್ ಕೊಡಬಹುದೇ ಅಂತ ಅವರಲ್ಲಿ ಒಬ್ಬರು ಕೇಳಿದ್ದಕ್ಕೆ. ಉಪಾಧ್ಯಾಯರು ಹೇಳಿದ್ದು. ಆ ಹುಡುಗಿ ಏನೂ ಬರಿಯಬೇಕಿಲ್ಲ ಅವಳ ಮುಖಭಾವನೆ , ಅತ್ತು ಅತ್ತು ದಣಿದಿರುವ ಕಣ್ಣುಗಳು ತಾಯಿಯನ್ನ ಕಳೆದುಕೊಂಡು ಇಷ್ಟು ವರ್ಷ ಅನುಭವಿಸಿರುವ ಕಷ್ಟ, ಅದೆಲ್ಲ ನನ್ನ ಜೀವನದಲ್ಲಿ ಅನುಭವಿಸಿದ್ದೇನೆ. ಅದಕ್ಕೆ ನಾನು ಈ ಪ್ರಬಂಧ ಕೊಡಲು ಒಂದು ಕಾರಣವೂ ಸಹಾ ಆಗಿತ್ತು. ಈಗ ನೀವೇ ಹೇಳಿ ದುಃಖದಲ್ಲಿ ಆ ಮಗು ಏನು ಬರೆಯಕ್ಕೆ ಆಗುತ್ತೆ. ಅದೆಲ್ಲವನ್ನ ಅವಳ ಭಾವನೆ ನೋವುಗಳಿಂದಲೇ ಬರೆದು ಬಿಟ್ಟಿದ್ದಾಳೆ ಅಂದುಕೊಂಡು ಹತ್ತು ಮಾರ್ಕ್ಸ್ ಕೊಟ್ಟಿದ್ದು ತಪ್ಪಾಗಿದ್ದರೆ ಕ್ಷಮಿಸಿ ಅಂದರು. ಯಾರೂ ಮಾತನಾಡದೆ ಹೊರಗೆ ಹೋದರು. ಹೊರಗೆ ಬಂದವರಲ್ಲಿ ಅನೇಕರು ತಮ್ಮ ತಾಯಿಯ ನೆನೆದು ಭಾವನಾತ್ಮಕವಾಗಿ ಮಾತನಾಡಿಕೊಂಡರು.