ಈಗ ನಾಲ್ಕು ದಶಕಗಳ ಹಿಂದೆ ,ಸರ್ಕಾರಿ ನೌಕರಿಯಲ್ಲಿದ್ದ ನಮ್ಮ ತಂದೆಗೆ ಕರ್ನಾಟಕದ ಒಂದು ಪುಟ್ಟ ಹಳ್ಳಿಗೆ ವರ್ಗವಾದಾಗ,ನಾವೆಲ್ಲರೂ ದೊಡ್ಡ ನಗರದಿಂದ ಹಳ್ಳಿಗೆ ಹೋಗಬೇಕಾಯಿತು. ಆಗ ನಾನು ಹಾಗೂ ನನ್ನ ಸಹೋದರಿಯರು ಇನ್ನೂ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದೆವು. ನಮಗೆ ಹಳ್ಳಿಗೆ ಹೋಗಿದ್ದು ತುಂಬಾ ಬೇಸರವೆನಿಸುತ್ತಿತ್ತು, ಏಕೆಂದರೆ ಆ ಹಳ್ಳಿಯಲ್ಲಿ ಮೂಲ ಸೌಕರ್ಯಗಳಾವುವೂ ಇರಲಿಲ್ಲ. ಬಾವಿಯಲ್ಲಿ ನೀರು ಸೇದಿ ತುಂಬಿಸುತ್ತಿದ್ದರು. ಅದೊಂದೇ ಹಳ್ಳಿಯ ಆ ಮನೆಯಲ್ಲಿ ವಿದ್ಯುತ್ ದೀಪಗಳಿಲ್ಲದೇ ರಾತ್ರಿಯಾದರೆ ಸೀಮೆ ಎಣ್ಣೆ ದೀಪಗಳನ್ನು ಸಿದ್ಧಪಡಿಸುತ್ತಿದ್ದರು ನನ್ನ ಅಮ್ಮ. ನಮಗೆಲ್ಲಾ ರಾತ್ರಿ ಯಾಯಿತೆಂದರೆ ಭಯ. ಹಾಗೂ ಬೇಸರ. ಅಯ್ಯೋ ನಮ್ಮ ಅಪ್ಪ ಇದೆಂತಹ ಊರಿಗೆ ಕರೆದುಕೊಂಡು ಬಂದರಲ್ಲ ಅಂತ ತುಂಬಾ ಬೇಸರವಾಗುತ್ತಿತ್ತು. ನಾವೆಲ್ಲರೂ ನಮ್ಮ ಅಪ್ಪನ ಹತ್ತಿರ ನಮ್ಮ ಕಷ್ಟಗಳನ್ನು ಹೇಳಿಕೊಂಡು "ಕರೆಂಟ್ ಬೇಕಪ್ಪ, ನಮಗೆ ಈ ಬುಡ್ಡಿ ದೀಪ ಬೇಡ" ಅಂತ ಗಲಾಟೆ ಮಾಡುತ್ತೆದ್ದೆವು. ಆದರೆ ನಮ್ಮ ತಂದೆಯವರು ಅವರೇ ಸ್ವತಂತ್ರವಾಗಿ ಏನು ಮಾಡಿಸಿಕೊಳ್ಳುವುದಕ್ಕೂ ಆಗುತ್ತಿರಲಿಲ್ಲ ಅವರು ಆ ಮನೆಯ ಓನರ್ ಹತ್ತಿರ ತಮ್ಮ ಅಹವಾಲುಗಳನ್ನು ಇಡುತ್ತಾ ಬಂದರು.
ಕಡೆಗೂ ನಮ್ಮ ತಂದೆಯ ಪ್ರಯತ್ನ ಸಫಲವಾಗಿ, ಆ ಮನೆಯ ಓನರ್ ವಿದ್ಯುದ್ದೀಪದ ವ್ಯವಸ್ಥೆ ಮಾಡಿಕೊಟ್ಟರು. ಆ ದಿನ ಸಾಯಂಕಾಲ ನಮ್ಮ ಮನೆಯಲ್ಲಿ ಎಲ್ಲಾ ಟಂಗ್ಸ್ಟನ್ ಬಲ್ಬ್ ಗಳು ಜಗಮಗಿಸಿದಾಗ, ನಮಗೆಲ್ಲಾ ಅದೆಷ್ಟು ಖುಷಿಯಾಯಿತೆಂದರೆ, ನಾವು ಸಹೋದರ ಸಹೋದರಿಯರು ಕೈ ಕೈ ಹಿಡಿದುಕೊಂಡು ಕುಣಿದಾಡಿದೆವು. ಅಂದು ರಾತ್ರಿ ಮನೆಯ ಎಲ್ಲಾ ಕಡೆಗಳಾ ದೀಪಗಳನ್ನು ಹಾಕುತ್ತಾ ಆರಿಸುತ್ತಾ, ಅದೇನೋ ಒಂದು ರೀತಿ ಖುಷಿಯಿಂದ ಆ ಬಲ್ಬ್ ಗಳನ್ನೇ ನೋಡುತ್ತಿದ್ದೆವು.
ನನ್ನ ಜೀವನದ ಈ ಖುಷಿ ಇಂದಿಗೂ ನನ್ನ ನೆನಪಿನ ಬುತ್ತಿಯಲ್ಲಿ ಹಸಿರಾಗಿದೆ. ಇಂದು ಹಲವು ವೈವಿದ್ಯದ ದೀಪಗಳನ್ನು ಮನೆಯಲ್ಲಿ ಇಟ್ಟ್ಕೊಂಡಿದ್ದರೂ, ಇಂದು ಪ್ರತಿದಿನ ಸಾಯಂಕಾಲ ಸ್ವಿಚ್ ಆನ್ ಮಾಡಿ, ಲೈಟ್ ಬೆಳಗಿಸುತ್ತಿದ್ದರೂ, ಆ ದಿನದ ಖುಷಿಯನ್ನು ನಾನು ಎಂದೂ ಮರೆಯಲಾರೆ. ಜೀವನದ ಇಂತಹ ಸಣ್ಣ ಸಣ್ಣ ಖುಷಿಗಳೂ ಸಹ ನಮ್ಮ ನೆನಪುಗಳಲ್ಲಿ ಸದಾ ಹಸಿರಾಗಿಯೇ ಇರುತ್ತವೆ. ಇದೇ ರೀತಿ ಪವರ್ ಕಟ್ ಆಗುತ್ತಿದ್ದಾಗ ಎರಡು ಗಂಟೆ ಕತ್ತಲೆಯಲ್ಲಿ ಇರುತ್ತಿದ್ದ ನಾವು ನಮ್ಮ ಮನೆಗೆ ಯು.ಪಿ.ಎಸ್. ಹಾಕಿಸಿಕೊಂಡಾಗಲೂ ತುಂಬಾ ಖುಷಿ ಪಟ್ಟಿದ್ದೆವು.
ವಿಜಯಭಾರತೀ.ಎ.ಎಸ್.