ಕೆಂಪು ಡಬ್ಬ
ಕೆಂಪು ಡಬ್ಬ
ಮೂರು ದಶಕಗಳ ಹಿಂದೆ, ಸುಧಾಮ, ಉತ್ತರ ಭಾರತದ ಯಾತ್ರೆಗೆ ತನ್ನ ಗೆಳೆಯರ ಜೊತೆಗೆ ಹೊರಟ. ಅವನ ಬಹಳ ವರ್ಷಗಳ ಕನಸು ನನಸಾಗಿತ್ತು. ಸಣ್ಣ ಉಳಿತಾಯ ಖಾತೆಯಿಂದ ಸ್ವಲ್ಪ ಹಣವನ್ನು ತೆಗೆದುಕೊಂಡು, ಮಿತವಾದ ಲಗ್ಗೇಜ್ ನೊಂದಿಗೆ ದೆಹಲಿಯ ರೈಲ್ ಹತ್ತಿದ. ಇನ್ನೂ ಬ್ರಹ್ಮಾಚಾರಿಯಾಗಿದ್ದ ಅವನಿಗೆ ಹೆಂಡತಿ ಮಕ್ಕಳ ಯೋಚನೆ ಇರಲಿಲ್ಲ. ಚಿಕ್ಕ ವಯಸ್ಸಿನಿಂದಲೂ ದೇಶ ಸುತ್ತಬೇಕೆಂಬ ಮಹದಾಸೆ ಅವನಿಗೆ. ಅದಕ್ಕೆ ತಕ್ಕ ಹಾಗೆ ಹದಿನೈದು ದಿನಗಳ ಉತ್ತರ ಭಾರತದ ಯಾತ್ರೆಗೆಂದು ಗೆಳೆಯರ ಜೊತೆ ಹೊರಟ. ಆಫಿಸ್ ಗೆ ಎರಡು ವಾರಗಳ ರಜ ಹಾಕಿದ.
ಸುಧನ್ವ, ಗಜೇಂದ್ರ, ರಾಕೇಶ್ ಇವನ ಆಪ್ತ ಗೆಳೆಯರು. ನಾಲ್ಕು ಜನರೂ ಒಟ್ಟಿಗೆ ಹೊರಟಿದ್ದರು. ಆಗಿನ ದಶಕಗಳಲ್ಲಿ ಮೊಬೈಲ್ ಬಳಕೆ ಹೆಚ್ಚು ಇರಲಿಲ್ಲ. ಕೆಲವರ ಮನೆಯಲ್ಲಿ ಲ್ಯಾಂಡ್ ಲೈನ್ ಫೋನ್ ಕೂಡ ಇರುತ್ತಿರಲಿಲ್ಲ. ಈ ಹುಡುಗರ ತಂದೆ ತಾಯಿಯರು ಆಗಾಗ ಮನೆಗೆ ಪತ್ರ ಬರೆಯುವಂತೆ ಹೇಳಿದ್ದರು. ಇವರೆಲ್ಲರೂ ಹೊರಡುವ ಮೊದಲು ತಮ್ಮ ಊರಿನ ಅಂಚೆ ಕಛೇರಿಗೆ ಹೋಗಿ ಪೋಸ್ಟ್ ಕಾರ್ಡ್ಗಳು, ಕವರ್ ಗಳು, ಇನ್ಲ್ಯಾಂಡ್ ಲೆಟರ್ ಗಳನ್ನು ತೆಗೆದುಕೊಂಡು ಹೋಗಿದ್ದರು.
ಪ್ರವಾಸದ ಭರದಲ್ಲಿ ಅವರಿಗೆ ತಮ್ಮ ತಮ್ಮ ಮನೆಗೆ ಪತ್ರ ಬರೆಯುವುದು ಮರೆತೇ ಹೋಯಿತು. ಕಡೆಗೆ ಎಲ್ಲಾ ಸ್ಥಳಗಳನ್ನು ನೋಡಿ ಚೆನ್ನಾಗಿ ಎಂಜಾಯ್ ಮಾಡಿದ ನಂತರ, ಅವರು ಒಂದೆರಡು ದಿವಸ, ಹರಿದ್ವಾರದ ಹತ್ತಿರದ ರ್ಯಾಫ಼್ಟಿಂಗ್ ಗಾಗಿ ಒಂದು ರೆಸಾರ್ಟ್ ನಲ್ಲಿ ಉಳಿದರು. ಆ ಸಮಯದಲ್ಲಿ ಅವರಿಗೆ ಸ್ವಲ್ಪ ಟೈಮ್ ಸಿಕ್ಕಿದಾಗ, ಸುಧಾಮ ತನ್ನ ಮನೆಗೆ ಪ್ರವಾಸದ ಅನುಭವಗಳನ್ನು ವಿವರಿಸಿ ,ತನ್ನ ಯೋಗ ಕ್ಷೇಮವನ್ನೂ ತಿಳಿಸಿ ಪತ್ರ ಬರೆದು ಅದರ ಮೇಲೆ ವಿಳಾಸವನ್ನು ಬರೆದು, ಮುಗಿಸಿದ. ಮಿಕ್ಕ ಮೂವರೂ ಸಹ ತಮ್ಮ ತಮ್ಮ ಮನೆಗಳಿಗೆ ಪತ್ರ ಬರೆದು ಮುಗಿಸಿದರು.
ನಂತರ ಎಲ್ಲರೂ ಕೆಂಪು ಡಬ್ಬ(ಲೆಟರ್ ಬಾಕ್ಸ್) ಅನ್ನು ಹುಡುಕುತ್ತಾ ಹೊರಟರು. ಅವರಿದ್ದದ್ದು ಒಂದು ರಿಮೋಟ್ ಪ್ಲೇಸ್ ಆಗ್ಗಿದ್ದರಿಂದ ಎರಡು ಮೂರು ಕಿಮೀ ದೂರ ಬಂದರೂ ಅವರ ಕಣ್ಣಿಗೆ ಅಂಚೆ ಇಲಾಖೆಯ ಕೆಂಪು ಬಣ್ಣದ ಡಬ್ಬ ಕಣ್ಣಿಗೆ ಬೀಳಲೇ ಇಲ್ಲ. ಮತ್ತೆ ತಮ್ಮ ರೆಸಾರ್ಟ್ ಗೆ ಹಿಂದಿರುಗಿದರು. ಪತ್ರಗಳನ್ನು ತಮ್ಮ ಬ್ಯಾಗ್ ಗಳಲ್ಲಿ ಸೇರಿಸಿದರು.
ಎರಡು ದಿನಗಳು ಕಳೆದ ನಂತರ ಆ ನಾಲ್ವರು ತಮ್ಮ ಬಳಿಯಿದ್ದ ಪತ್ರಗಳನ್ನು ಪೋಸ್ಟ್ ಗೆ ಹಾಕಲು ಕೆಂಪು ಡಬ್ಬವನ್ನು ನೋಡುತ್ತಲೇ ಹೋದರು. ಅವರು ಬಸ್ ನಲ್ಲಿ ದೆಹಲಿಗೆ ವಾಪಸ್ ಹೋಗುತ್ತಿದ್ದಾಗ, ಮಾರ್ಗ ಮಧ್ಯದಲ್ಲಿ ಒಂದು ಮರಕ್ಕೆ ಚಿಕ್ಕದಾಗಿದ್ದ ಕೆಂಪು ಡಬ್ಬ ತಗುಲಿ ಹಾಕಿದ್ದುದು ಕಾಣಿಸಿದಾಗ, ಸುಧಾಮ ಮತ್ತು ಅವನ ಗೆಳೆಯರು ಡ್ರೈವರ್ ಹತ್ತಿರ ಬಂದು "ಸ್ಟಾಪ್ ಸ್ಟಾಪ್ ಸ್ಟಾಪ್" ಅಂತ ಕೂಗಿದಾಗ, ಆ ಡ್ರೈವರ್ ಏನಾಯಿತೆಂದು ಕೇಳಿದಾಗ, ಅವರೆಲ್ಲರೂ ಒಕ್ಕೊರಲಿನಿಂದ
"ಕೆಂಪು ಡಬ್ಬ, ಕೆಂಪು ಡಬ್ಬ ಕೆಂಪು ಡಬ್ಬ " ಅಂತ ಕೂಗಿದಾಗ, ಡ್ರೈವರ್ ಚಕ್ಕನೆ ಬ್ರೇಕ್ ಹಾಕಿ,
"ಓಯ್ ಹುಡುಗರಾ, ಕೆಂಪು ಡಬ್ಬ ಕ್ಕೂ ಬಸ್ ನಿಲ್ಲಿಸುವುದಕ್ಕೂ ಏನು ಸಂಬಂಧವಯ್ಯಾ? ಯಾಕೆ ಬಸ್ ನಿಲ್ಲಿಸಿದಿರಿ?" ಅಂತ ಜೋರು ಮಾಡಿದಾಗ, ಆ ನಾಲ್ಕೂ ಜನರು ತಮ್ಮ ಕೈಯ್ಯಲ್ಲಿದ್ದ ಪತ್ರಗಳನ್ನು ತೋರಿಸುತ್ತಾ,
’ನಾವು ನಮ್ಮ ಮನೆಗೆ ಬರೆದಿರುವ ಈ ಪತ್ರಗಳನ್ನು ಪೋಸ್ಟ್ ಬಾಕ್ಸ್ ಅದೇ ಕೆಂಪು ಡಬ್ಬಕ್ಕೆ ಹಾಕಿ ಬರುತ್ತೇವೆ "’
ಅಂತ ಹೇಳಿ ಎಲ್ಲರೂ ಕೆಳಗಿಳಿದು ತಮ್ಮ ಕೈಯ್ಯಲ್ಲಿದ್ದ ಪತ್ರಗಳನ್ನು ಆ ಡಬ್ಬದ ಕಿಟಕಿಯ ಒಳಗೆ ತೂರಿಸಿ ಬಸ್ ಹತ್ತಿದಾಗ್, ಬಸ್ ನಲ್ಲಿ ಇದ್ದವರೆಲ್ಲಾ ಈ ಹುಡುಗರನ್ನು ನೋಡಿ ನಕ್ಕಿದ್ದರು. ಆದರೆ ನಾವು ಭಾರತದ ಯಾವುದೇ ಮೂಲೆಯಲ್ಲಿದ್ದರೂ,ಈ ಕೆಂಪು ಬಣ್ಣದ ಅಂಚೆ ಡಬ್ಬ, ದೇಶದ ಮೂಲೆ ಮೂಲೆಗಳಿಂದ ಪರಸ್ಪರ ಸಂದೇಶ ರವಾನಿಸುತ್ತದೆಂಬುದು ಕೆಲವರಿಗೆ ಗೊತ್ತೇ ಇಲ್ಲ, ಅದರಲ್ಲೂ ನಾವು ಮನೆಯಿಂದ ಹೊರಗೆ ದೂರವಿದ್ದಾಗ ಈ ಕೆಂಪು ಡಬ್ಬಗಳು ಎಷ್ಟು ಮುಖ್ಯವೆಂಬುದು ಅವರಿಗೆ ಹೇಗೆ ಗೊತ್ತಾಗಬೇಕು ಅಂತ ಸುಧಾಮ ಮತ್ತು ಅವನ ಸ್ನೇಹಿತರು ಈ ಪೋಸ್ಟ್ ಡಬ್ಬಗಳ ಬಗ್ಗೆ ಅಲ್ಲಿದ್ದವರಿಗೆ ಅರಿವು ಮೂಡಿಸಿದರು.