ಅಂದು ಇಡೀ ಬೀದಿಯಲ್ಲಿ ಹೋಲಿಯ ಸಡಗರ ಸಂಭ್ರಮ. ಬಿಳಿಯ ಬಟ್ಟೆಗಳನ್ನು ಧರಿಸಿ,ತಟ್ಟೆಯಲ್ಲಿ ಬಣ್ಣ ಬಣ್ಣಗಳನ್ನು ಹಿಡಿದು ಬೀದಿಯಲ್ಲಿ ಬರುವವರೆಲ್ಲರಿಗೂ ಬಣ್ಣ ಎರೆಚುತ್ತಿದ್ದ ಆಬಾಲ ವೃದ್ಧರು. ಆದರೆ ಆ ಬೀದಿಯಲ್ಲಿದ್ದ ಚಾರುಲತಳಿಗೆ ಮಾತ್ರ ಹೋಲಿಯ ಸಡಗರ ಸಂಭ್ರಮಗಳಲ್ಲಿ ಭಾಗವಹಿಸುವ ಮನಸ್ಸಿರಲಿಲ್ಲ ಹಾಗೂ ಭಾದ್ಯತೆ ಇರಲಿಲ್ಲ. ಅವಳ ಜೀವನವೇ ಬಣ್ಣಗೆಟ್ಟು ಹೋಗಿ ಸುಮಾರು ಐದು ವರ್ಷಗಳಾಗಿದ್ದವು. ಮದುವೆಯಾಗಿ ಗಂಡನಿದ್ದರೂ, ಗಂಡ ಅವಳನ್ನು ಬಿಟ್ಟು ಬೇರೆಯವಳೊಂದಿಗೆ ಮದುವೆಯಾಗಿ ಬಿಟ್ಟು ಅವನು ಅವಳ ಬಣ್ಣಗಳನ್ನೂ ಕಾಮನೆಗಳನ್ನೂ ಕನಸುಗಳನ್ನೂ ಕಿತ್ತುಕೊಂಡು ಹೊರಟು ಹೋಗಿದ್ದ. ಅವಳದು ಮುಗಿದು ಹೋದ ಬಣ್ಣದ ಬದುಕಾಗಿತ್ತು. ರಸವಿರದ ನೀರಸ ಜೀವನವಾಗಿತ್ತು. ಅವರ ಬೀದಿಯಲ್ಲಿ ಕಾಮದಹನವಾಗುತ್ತಿತ್ತು.ಅವಳು ಕಿಟಕಿಯಿಂದಲೇ ನೋಡುತ್ತಾ ನಿಟ್ಟುಸಿರು ಬಿಡುತ್ತಿದ್ದ ಅವಳ ಮನಸ್ಸಿನೊಳಗಿನ ಕಾಮನೆಗಳು ಬುಗಿಲ್ ಎನ್ನುತ್ತಾ ಹೊಡೆದಾಡುತ್ತಿದ್ದವು. ಮೈಯೆಲ್ಲಾ ಬಣ್ಣ ಬಣ್ಣ ಮೆತ್ತಿಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ಮನೆಯ ಗೇಟ್ ತೆಗೆದು ಬರುತ್ತಿರುವುದನ್ನು ನೋಡಿದ ಅವಳು ಅವನು ಯಾರಿರಬಹುದು? ಎಂದುಕೊಳ್ಳುತ್ತ, ರೂಮಿನಿಂದ ಹೊರಗೆ ಬಂದು ತೆರೆದೇ ಇಟ್ಟಿದ್ದ ಬಾಗಿಲನ್ನು ಹಾಕಲು ಓಡೋಡಿ ಬಂದಳು. ಅವಳು ಹೊರಗೆ ಬಂದು ಬಾಗಿಲನ್ನು ಹಾಕುವ ಮೊದಲೇ ಆ ವ್ಯಕ್ತಿ ಹೊಸಿಲು ದಾಟಿ ಒಳಗೆ ಬಂದು ಅವಳ ಕೆನ್ನೆಗಳಿಗೆ ತನ್ನ ಕೈಯಲ್ಲಿದ್ದ ಬಣ್ಣವನ್ನು ಮೆತ್ತಿಯೇ ಬಿಟ್ಟಾಗ,ಅವಳು ಗಾಬರಿಯಿಂದ ಕಿರುಚಿಕೊಂಡಾಗ, ಅವನು ಜೋರಾಗಿ ನಗುತ್ತಾ
"ಚಾರುಲತ ಜಿ, ನಾನು ಚೇತನ್ ನಿಮಗೆ ಗೊತ್ತಾಗಲೇ ಇಲ್ಲವಾ? ಇಂದು ಹೋಲಿ, ನೀವೊಬ್ಬರೇ ಇಲ್ಲಿ ಏನು ಮಾಡುತ್ತಿದ್ದೀರಿ?ಕಮಾನ್, ಹೊರಗೆ ಬನ್ನಿ, ಲೆಟ್ ಅಸ್ ಎಂಜಾಯ್ " ಅನ್ನುತ್ತಾ ಅವಳ ಕೈ ಹಿಡಿದು ಹೊರಗೆ ಕರೆದುಕೊಂಡು ಹೊರಟೆ ಬಿಟ್ಟಾಗ ಅವಳು ಅಸಹಾಯಕಳಾಗಿ ಅವನ ಹಿಂದೆಯೇ ಹೋಗಲೇ ಬೇಕಾಯಿತು.
ನಂತರ ಚೇತನ್ ಚಾರುಲತಾಳ ಮೇಲೆ ಬಣ್ಣಗಳನ್ನು ಎರಚಾಡುತ್ತಾ ಖುಷಿಯಿಂದ ಕುಣಿದಾಡಿದ.
ಇನ್ನೂ ಮೂವತ್ತೂ ದಾಟಿರದ ಚಾರುಲತಾ ಗಂಡನಿದ್ದರೂ ವಿಧವೆಯಂತೆ ಬಾಳುತ್ತಿದ್ದಳು. ಅವಳ ಬಣ್ಣಗೆಟ್ಟ ಬಾಳಿನಲ್ಲಿ ಬಣ್ಣ ಬಣ್ಣದ ರಂಗೇರಿಸಿ,ಇಂದ್ರಚಾಪ ಮೂಡಿಸಿಯೇ ಬಿಟ್ಟ ಅವನ ಸಹೋದ್ಯೋಗಿ ಚೇತನ್,
ವಿಜಯಭಾರತೀ ,ಎ.ಎಸ್.