99 ರ ಮರ್ಮ
99 ರ ಮರ್ಮ
ಇದೊಂದು ನಮ್ಮ ಬದುಕಿಗೆ ಹತ್ತಿರವಾದ ಕಥೆ. ಅದು ರಾಜರುಗಳ ಕಾಲ. ಪ್ರಜೆಗಳೆಲ್ಲಾ ಸುಖವಾಗಿರಬೇಕೆಂದು ರಾಜನ ಪ್ರಮುಖ ಉದ್ದೇಶ. ಒಮ್ಮೆ ರಾಜ ಮಾರುವೇಷ ದಲ್ಲಿ ಮಂತ್ರಿಯ ಜೊತೆ ನಡೆದು ಹೋಗುವಾಗ ಒಂದುಮನೆಯಲ್ಲಿ ಎಲ್ಲರೂ ಹಾಡುತ್ತಾ ಕುಣಿಯುತ್ತಾ ಬಹಳ ಸಂತೋಷವಾಗಿರುವುದು ರಾಜನ ಗಮನಕ್ಕೆ ಬಂದು ಮಂತ್ರಿಯನ್ನು ಕೇಳಿದ, ಇವರು ಎಲ್ಲರಿಗಿಂತಲೂ ಇಷ್ಟು ಸಂತೋಷ ವಾಗಿರುವುದಕ್ಕೆ ಏನಾದರೂ ಪ್ರತ್ಯೇಕ ಕಾರಣವಿದೆಯೇ. ಮಂತ್ರಿ ಹೇಳಿದ ಏನಿಲ್ಲ ಸ್ವಾಮಿ ಇವರು 99ರ ಪ್ರಭಾವಕ್ಕೆ ಒಳಗಾಗದೆ ಇರುವುದೇ ಕಾರಣ ವಷ್ಟೇ. ರಾಜನಿಗೆ ಕುತೂಹಲ. ಏನಿದು 99 ಎಂದ. ಅದನ್ನ ತಿಳಿಯಲು ನನಗೆ ನೀವು 99 ಚಿನ್ನದ ನಾಣ್ಯ ಕೊಡಬೇಕಾಗುತ್ತೆ ಮತ್ತು ಆರು ತಿಂಗಳು ಸಮಯ ಬೇಕಾಗುತ್ತೆ. ರಾಜ ಒಪ್ಪಿದ 99 ಚಿನ್ನದ ನಾಣ್ಯ ಗಳನ್ನ ಒಂದು ಚೀಲದಲ್ಲಿ ಹಾಕಿ ಕೊಟ್ಟ. ಮಂತ್ರಿ ಆ ಚೀಲವನ್ನು ತೆಗೆದು ಕೊಂಡು ಬಂದು ಒಂದು ದಿನ ಸೂರ್ಯೋದಯದ ಸಮಯಕ್ಕೆ ಆ ಮನೆಯ ಬಾಗಿಲಲ್ಲಿ ಇಟ್ಟು ಬಂದ. ಆ ಮನೆಯ ಒಡೆಯ ಬಾಗಿಲು ತೆಗೆದ ತಕ್ಷಣ ಕಂಡದ್ದು ಚೀಲ. ತೆಗೆದು ಅದರಲ್ಲಿದ್ದ ನಾಣ್ಯವನ್ನೆಲ್ಲ ನೆಲದ ಮೇಲೆ ಸುರಿದಾಗ ತನ್ನ ಕಣ್ಣ ತಾನೇ ನಂಬದಾದ. ಇಷ್ಟೊಂದು ನಾಣ್ಯಗಳು ಅವನ ಜೀವಿತದಲ್ಲಿ ಕಂಡಿರಲಿಲ್ಲ ಬಾಗಿಲು ಹಾಕಿ ಹೆಂಡತಿಯನ್ನು ಕರೆದು ಎಣಿಸಲು ಕೂತ. 99 ಇದೆ. ಮತ್ತೆ ಎಣಿಸಿದರೆ 9 ಮಾತ್ರ. ಇವನಿಗೆ ತಲೆ ಕೆಟ್ಟು ಹೋಗಿ ಮಗನನ್ನು ಕರೆದು ಮತ್ತೆ ಎಣಿಸಲು ಹೇಳಿದ. ಮೂರು ಜನವೂ ಎಷ್ಟು ಎಣಿಸಿದರೂ 99 ಮಾತ್ರ ಇದೆ. ಆಗ ಯೋಚನೆಮಾಡಿದ ಹೇಗಾದರೂ ಮಾಡಿ ಒಂದು ನಾಣ್ಯ ಸಂಪಾದನೆ ಮಾಡಲೇ ಬೇಕು. ಕಷ್ಟ ಪಟ್ಟು ಹಗಲೆಲ್ಲ ಹೊರಗೆ ಹೋಗಿ ದುಡಿದು ಹಣ ಕೂಡಿಡಲು ಪ್ರಯತ್ನಮಾಡಿದ . ದಿನವೂ ಎಷ್ಟು ಹಣಒಟ್ಟುಗೂಡಿದೆ ಎಂದು ಎಣಿಸಿ ಮಲಗುತ್ತಿದ್ದ. ಒಂದು ದಿನ ಇನ್ನೇನು ಮತ್ತೊಂದು ನಾಣ್ಯ ಖರೀದಿ ಮಾಡಲು ಹಣ ಇದೆ ಎನ್ನುವಾಗ, ಹೆಂಡತಿ ಹೇಳಿದಳು ಅದರಲ್ಲಿ ನಾನು ಎರಡು ನಾಣ್ಯ ತೆಗೆದು ಕೆಲವು ಸಾಮಾನು ಖರೀದಿ ಮಾಡಿದ್ದೇನೆ. ಅವನಗೆ ಕೋಪ ತಡೆಯಲಾಗಲಿಲ್ಲ ಎಂದೂ ಕೈ ಮಾಡದವನು ಮಡದಿಯ ಮೇಲೆ ಅಂದು ಕೈ ಎತ್ತಿ ಹೊಡೆದು ಬಿಟ್ಟ. ನಂತರ ಬಹಳ ನೊಂದು ಹೋಗಲಿ ಸ್ವಲ್ಪ ದಿನ ಮತ್ತೆ ದುಡಿದು ಸಂಪಾದಿಸಿ ಎರಡು ನಾಣ್ಯ ತೆಗೆದು ಕೊಳ್ಳೋಣ ಎಂದು ಸಮಾಧಾನ ಮಾಡುವಷ್ಟರಲ್ಲಿ ಮಗ ಬಂದುಹೇಳಿದ. ಅಪ್ಪ ನಾನೂ ಒಂದುನಾಣ್ಯ ತೆಗೆದುಕೊಂಡಿದ್ದೇನೆ ಕ್ಷಮಿಸು ಎಂದ. ಈಗ ಇವನ ಕೋಪ ನೆತ್ತಿಗೇರಿತು. ಮನೆಯಲ್ಲಿ ಮೊದಲಿದ್ದ ನೆಮ್ಮದಿ ಹಾಳಾಯ್ತು. ಸಾಕಷ್ಟು ಹಣ ಇದ್ದರೂ ಸುಖಪಡದ ಸ್ಥಿತಿ. ಇದ್ದ ಮೂವರಲ್ಲಿಯೇ ಮನಸ್ಥಾಪ.
ಒಂದು ನಾಣ್ಯಕ್ಕಾಗಿ ಉಳಿದ ನಾಣ್ಯಗಳನ್ನೂ ಉಪಯೋಗಿಸಲಾಗದೆ ನೆಮ್ಮದಿಹಾಳುಮಾಡಿಕೊಳ್ಳುವ ಮನುಷ್ಯನ ಗುಣ ಅಂದು ಆ ಮನೆಯನ್ನು ಈ ಸ್ಥಿತಿಗೆ ತಂದಿದ್ದು ರಾಜನಿಗೆ ತೋರಿಸಬೇಕಿತ್ತು. ಮಂತ್ರಿ ರಾಜನನ್ನ ಅಲ್ಲಿಗೆ ಕರೆದು ತಂದಾಗ ಆ ಮನೆಯವನಿಗೆ ಆಶ್ಚರ್ಯ. ಅಂದು ಅಷ್ಟು ಸುಖ ಮತ್ತು ನೆಮ್ಮದಿ ಇದ್ದ ಮನೆಯಲ್ಲೀಗ 99ರ ಕದನದಿಂದ ಹೀಗಾಗಿದೆ ನೋಡಿ ಎಂದುವಿಷಯವನ್ನೆಲ್ಲಾ ತಿಳಿಸಿ ನೀವು ಮೊದಲಿನಂತೆ ಸುಖವಾಗಿರ ಬೇಕಾದರೆ ನಿಮ್ಮಲ್ಲಿ ಎಷ್ಟು ನಾಣ್ಯ ಗಳು ಉಳಿದಿವೆಯೋ ಅಷ್ಟನ್ನ ತಂದುಕೊಡಿ ಎಂದ ಮಂತ್ರಿ. ಇದ್ದ 96 ನಾಣ್ಯ ವನ್ನ ಕೊಟ್ಟು ನೆಮ್ಮದಿಯಿಂದ ಇದ್ದರು. ಆಗ ರಾಜನಿಗೆ ಮಂತ್ರಿ ಹೇಳಿದ 99 ರ ಮರ್ಮ ಅರ್ಥವಾಯ್ತು.