ಪೊಲೀಸ್
ಪೊಲೀಸ್
ಸಿನೇಮಾ ನೋಡಿಕೊಂಡು ಹೊರಬಂದ ರಾಜು, ರವಿ ಬಹಳ ಗಂಭೀರರಾಗಿದ್ದರು. ಆ ಸಿನೆಮಾದ ಕ್ರೌರ್ಯ, ರೌದ್ರ, ಹೊಡೆದಾಟ, ರಕ್ತ, ಚಾಕು, ಚೂರಿ ಇವು ಅವರಿಬ್ಬರ ಮನದಲ್ಲಿ ಇನ್ನು ಹಸಿಯಾಗಿದ್ದವು. ಕಡೆಗೂ ರಾಜು ಬಾಯಿ ತೆಗೆದು “ಅಬ್ಬಾ ಆ ಪೋಲಿಸಿನವರು ಅಮಾಯಕರನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದನ್ನು ನೋಡಿದರೆ ಖೇದವಾಗುತ್ತದೆ” ಎಂದ. ಆಗ ರವಿ “ಈ ಪೋಲೀಸಿನವರೇ ಹಾಗೆ, ಒಂದು ಸ್ವಲ್ಪವೂ ಕರುಣೆ ಇಲ್ಲದವರು” ಎಂದ. ಅಂತೂ ಪೋಲೀಸಿನವರನ್ನು ಟೀಕಿಸುತ್ತಾ ಮನೆಗೆ ನಡೆದರು. ದಾರಿಯಲ್ಲಿ ಎದುರಿಗೆ ಸಿಕ್ಕಿದ ಪೋಲೀಸಿನವನೊಬ್ಬನ್ನು ಕಂಡಾಗ ಮನದಲ್ಲೇ ಕ್ಯಾಕರಿಸಿ ಉಗಿದರು.
ಇದೇ ರಾಜು, ರವಿ ಇಂದು ಮತ್ತೊಂದು ಸಿನೆಮಾ ನೋಡಿಕೊಂಡು ಬರುತ್ತಿದ್ದರು. ಅದು ಕಡೆಯ ಶೋ ಆಗಿದ್ದು ಇಬ್ಬರಿಗೂ ಮನೆಗೆ ಮನೆಗೆ ಹೋಗುವ ಧಾವಂತವಿತ್ತು. ಆ ಸಿನೆಮಾದಲ್ಲಿ ಪೋಲಿಸಿನವರನ್ನು ಬಫುನ್ ಗಳಂತೆ ತೋರಿಸಿದ್ದರು. ತಲೆಯಲ್ಲಿ ಒಂದು ಸ್ವಲ್ಪವೂ ಬುದ್ಧಿಯಿಲ್ಲದ, ಲಂಚಕ್ಕೆ ಬಾಯಿ ಬಿಟ್ಟುಕೊಂಡು ಪೆದ್ದುಗಳಂತಾಡುವ ಮಂಗಗಳಂತೆ ಬಿಂಬಿಸಿದ್ದರು. ಅವರಿಬ್ಬರೂ ತಮ್ಮ ಬಾಲ್ಯದ ದಿನಗಳಲ್ಲಿ ಪೊಲೀಸರನ್ನು ತಿಗಣೆ ಮರಿ ಎಂದು ಕರೆಯುತ್ತಿದ್ದುದನ್ನು ನೆನೆಸಿಕೊಂಡು ನಕ್ಕರು.
“ಈ ಪೋಲೀಸಿನವರ ಕೈಗೆ ಮಾತ್ರ ಸಿಕ್ಕಬಾರದು, ನಮ್ಮನ್ನು ಹೀರಿ ಬಿಡುತ್ತಾರೆ, ಪೊಲೀಸ್ ಠಾಣೆಗೆ ಅಲೆಯುವುದು ಎಂದರೆ ನರಕ” ಎಂದ ರಾಜು. ಹೌದು ಹೌದು ಎಂದು ಅನುಮೋದಿಸಿದ ರವಿ. ಸರಿ ಬೇಗ ಬಾ, ಕಡೆಯ ಬಸ್ಸು ಸಿಗದಿದ್ದರೆ ನಾವು ಪೋಲೀಸಿನವರ ಕೈಗೆ ಸಿಕ್ಕಿ ಕೊಳ್ಳಬೇಕಾಗುವುದು ಎಂದು ಬೇಗ ಬೇಗ ಹೆಜ್ಜೆ ಹಾಕತೊಡಗಿದರು.
ಅವರು ಬಸ್ ನಿಲ್ದಾಣವನ್ನು ವೇಳೆಗೆ ಕಡೆಯ ಬಸ್ ಹೊರಟು ಹೋಗಿತ್ತು. ಅಲ್ಲಿ ಬೇರೆ ಯಾರೂ ಇರಲಿಲ್ಲ, ಇವರಿಬ್ಬರೇ. ಏನು ಮಾಡುವುದು ಎಂದು ತೋಚದೆ ನಿಂತಿದ್ದರು. ಆಗ ಅಲ್ಲಿಗೆ ಬಂದ ಟೆಂಪೋದವನು,“ಎಲ್ಲಿಗೆ”ಎಂದ? “ಕೆಂಗೇರಿಗೆ” ಎಂದರು ರಾಜು, ರವಿ. ಸಧ್ಯ ಅಲ್ಲಿಂದ ಮನೆಗೆ ಹೇಗಾದರೂ ಹೋದರೆ ಸಾಕು ಎಂಬ ಭಾವನೆ ಅವರ ಮಾತಿನಲ್ಲಿ ಕಾಣುತ್ತಿತ್ತು. ಅವನು “ನಾನು ಬೆಂಗಳೂರು ವಿಶ್ವವಿದ್ಯಾಲಯದ ಒಳಗಿನಿಂದ ಹೋಗುತ್ತೇನೆ, ಅಲ್ಲಿ ಸ್ವಲ್ಪ ಕೆಲಸ ಇದೆ” ಎಂದ. ಕೆಂಗೇರಿಯಲ್ಲಿ ಬಿಡುತ್ತೀಯಲ್ಲ ಸಾಕು ಬಿಡು” ಎಂದು ಇಬ್ಬರೂ ಸಧ್ಯ ಬದುಕಿದೆವು ಎಂದು ಟೆಂಪೊದೊಳಗೆ ಹತ್ತಿ ಕುಳಿತರು. ಟೋರ್ರೆಂದು ಸಡ್ಡು ಮಾಡುತ್ತ ಅದು ಹೊರಟಿತು. ಬೆಂಗಳೂರು ವಿಶ್ವವಿದ್ಯಾಲಯದ ಒಳಗೆ ಬಂದಾಗ ಅದು ಗಬೋ ಎನ್ನುತ್ತಿತ್ತು. ಯಾರೂ ಜನರಿಲ್ಲ, ಕಗ್ಗತ್ತಲಲ್ಲಿ ಮರಗಳೆಲ್ಲ ದೆವ್ವಗಳಂತೆ ಕಾಣುತ್ತಿದ್ದವು. ಗಂಡಸರಾದರೂ ರಾಜು, ರವಿಯು ಅದನ್ನು ಕಂಡು ಅಧೀರರಾದರು. ಇದೆ ವೇಳೆಗೆ ಅದೆಲ್ಲಿಂದಲೋ ಎದುರಿಗೆ ಬಂದ ಆಟೋ ಒಂದು ಟೆಂಪೋಗೆ ಡಿಕ್ಕಿ ಹೊಡೆದು ಪಲ್ಟಿಹೊಡೆದು ಬಿದ್ದಿತು. ತಪ್ಪು ಆಟೋ ದವನದೇ ಏಕೆಂದರೆ ಅವನ ಆಟೋಗೆ ಹೆಡ್ ಲೈಟ್ಗಳೇ ಇರಲಿಲ್ಲ. ಈ ಧಾವಂತದಲ್ಲಿ ಅನಾಹುತಕ್ಕೆ ಹೆದರಿ ಟೆಂಪೋ ಚಾಲಕ ಎಲ್ಲೋ ಕತ್ತಲಲ್ಲಿ ಮಾಯವಾದ. ರಾಜು, ರವಿಯೇ ಆಟೋವನ್ನು ಸರಿಯಾಗಿ ನಿಲ್ಲಿಸಿ ಆ ಚಾಲಕನನ್ನು ಕೂಡಿಸಿದರು. ಅವನು ಟೆಂಪೋ ಚಾಲಕನ ಮೇಲೆ ಕೂಗಾಡಿ ಅವನು ಎಲ್ಲಿ ಎಂದು ಕೂಗಾಡಿದ. ಆದರೆ ಅವನಿಗೆ ಪೆಟ್ಟಾಗಿದ್ದುರಿಂದ ಹೆಚ್ಚು ಮಾತನಾಡದೆ ಹೊರಟು ಹೋದ. ಈಗ ಕಗ್ಗತ್ತಲಲ್ಲಿ ರಾಜು, ರವಿ ಇಬ್ಬರೇ ಪೆಚ್ಚು ಮುಖ ಮಾಡಿಕೊಂಡು ಬೆದರಿ ನಿಂತಿದ್ದರು. ಎಷ್ಟು ಕೂಗಿದರೂ ಆ ಟೆಂಪೋ ಚಾಲಕ ಬರಲೇ ಇಲ್ಲ. ಬೆಳಗಿನ ಹೊತ್ತು ಎಷ್ಟು ಚಂದ ಕಾಣುವ ಆ ಜಾಗ ಈಗ ಬೆಚ್ಚಿ ಬೀಳಿಸುವಂತಿತ್ತು. ಧೈರ್ಯ ಮಾಡಿ ಇಬ್ಬರೂ ನಡೆದುಕೊಂಡೇಹೊರಟರು.ಹಾಗೂ ಹೀಗೂ ಲೈಬ್ರರಿ ಹತ್ತಿರ ಬಂದಾಗ ಇದ್ದಕ್ಕಿದ್ದಹಾಗೆ ಯಾರೋ ಆಸಾಮಿ ಅವರ ಬಳಿ ಬಂದು, “ಈ ರಾತ್ರಿಯಲ್ಲಿ ಇಲ್ಲಿ ಏಕೆ ಬಂದಿರಿ, ಏನು ಮಾಡಲು ಬಂದಿರುವಿರಿ? ಎಂದು ಪ್ರಶ್ನಿಸಿದ. ಪೋಲೀಸಿನವನ್ನು ಕಂಡು ಅವರಿಬ್ಬರಿಗೂ ದಿಗ್ಬ್ರಮೆ ಯಾಯಿತು. ಇದ್ದುದನ್ನು ಇದ್ದಹಾಗೆ ಎಲ್ಲವನ್ನು ಒದರಿದರು. ಒಳಗೆ “ಈ ಪೋಲೀಸಿನವನ ಕೈಗೆ ಸಿಕ್ಕಿಕೊಂಡೆವಲ್ಲವಪ್ಪಾ” ಎಂದು ಹಿಡಿ ಶಾಪ ಹಾಕುತ್ತಿದ್ದರು. ಆಗ ಅವನು ಇವರ ವೇಷ ಭೂಷಣ, ಮಾತುಗಳನ್ನು ಕೇಳಿ, ಸಭ್ಯಸ್ಥರು ಎಂದು ಊಹೆ ಮಾಡಿ “ಈ ಸರಿ ರಾತ್ರಿಯಲ್ಲಿ ನೀವು ಮನೆಗೆ ಹೋಗಲು ಆಗುವುದಿಲ್ಲ, ಯಾವುದಾದರೂ ವಾಹನ ಸಿಕ್ಕಿದರೆ ನೋಡುವ, ಇಲ್ಲವಾದರೆ ಇಲ್ಲೇ ನನ್ನ ಜೊತೆ ಇರಿ, ಬೆಳಿಗ್ಗೆ ಬೇಗ ಎದ್ದು ಹೋದರಾಯಿತು” ಎಂದ. ಅವರಿಗೆ ಮತ್ತೆ ಯಾವ ವಾಹನವೂ ಸಿಗಲಿಲ್ಲ, ಬೇರೆ ದಾರಿಯೇ ಇಲ್ಲದೆ ಆ ಪೇದೆಯೊಂದಿಗೆ ಲೈಬ್ರರಿಯ ಲಾಬಿಯಲ್ಲಿ ಕುಳಿತರು. ಅವನು ಅವರಿಗೆ ತನ್ನ ಬಳಿ ಇಟ್ಟುಕೊಂಡಿದ್ದ ಬಿಸ್ಕತ್ ಪ್ಯಾಕೆಟ್ ತೆಗೆದು, ನಂತರ ಪ್ಲಾಸ್ಕಿನಿಂದ ಕಾಫಿ ಬಗ್ಗಿಸಿ ಕೊಟ್ಟು, ಕುಡಿಯಲು ಒಂದಷ್ಟು ನೀರನ್ನು ಕೊಟ್ಟ. ಇವರಿಬ್ಬರೂ “ಅವೆಲ್ಲ ಬೇಡ, ನೀವು ತೆಗೆದುಕೊಳ್ಳಿ,” ಎಂದು ಎಷ್ಟು ಹೇಳಿದರೂ ಕೇಳದೆ ಮನೆಗೆ ಬಂದ ಅತಿಥಿಗಳಿಗೆ ಮಾಡುವಂತೆ ಉಪಚಾರಮಾಡಿ ತನ್ನ ಬಳಿಯಿದ್ದ ಕಂಬಳಿಯನ್ನೇ ನೆಲದ ಮೇಲೆಹಾಕಿಕೊಟ್ಟು “ನಾನು ಹೊರಗೆ ಗಸ್ತು ತಿರುಗಿ ಬರುತ್ತೇನೆ, ಧೈರ್ಯವಾಗಿ ಮಲಗಿ” ಎಂದು ಹೇಳಿಹೋದ.