ಹಸುವೆಂಬ ದೇವರು
ಹಸುವೆಂಬ ದೇವರು
“ಎಷ್ಟು ಸಲಿ ನಿಂಗೆ ಅಲ್ಲೆಲ್ಲಾ ಮೇಯಬೇಡ ಅಂತ ಹೇಳಿರೋದು, ನಿನ್ನಿಂದ ನನಗೆ ಬೈಗುಳ” ಎಂದು ಮಾದ ಗಂಗೆಗೆ ಛಟೀರ್ ಎಂದು ಚಾಟಿಯಿಂದ ಹೊಡೆದ. ಮುಗ್ಧ ಗಂಗೆ ಮಾತಿಲ್ಲದೆ ಅವನ ಹಿಂದೆ ನಡೆಯಿತು. ಗಂಗೆ ಮಾದ ಸಾಕಿದ ಹಸು. ಒಳ್ಳೆಯ ನಾಟಿ ತಳಿ. ನೋಡಲೂ ಸುಂದರ. ಚೆನ್ನಾಗಿ ಹಾಲು ಕೊಡುತ್ತಿತ್ತು. ಅದರಂತೆಯೇ ಅದಕ್ಕೊಂದು ಮುದ್ದಾದ ಕರು. ಯಾರು ನೋಡಿದರೂ ಓಡಿಬಂದು ಮುದ್ದು ಮಾಡುವಂತ ರೂಪ, ಅಮ್ಮನಂತೆಯೇ ಕಂದು ಬಣ್ಣ. ಅದಕ್ಕೆ ತುಂಗೆ ಎಂದು ಹೆಸರಿಟ್ಟಿದ್ದರು. ಈ ಗಂಗೆ ಮಾದನ ಮನೆಯ ಎಲ್ಲರಿಗೂ ಕಣ್ಮಣಿಗಳಾಗಿದ್ದವು. ಮಾದನ ಹೆಂಡತಿ ಮಾದೇವಿ, ಮಕ್ಕಳು ರಂಗ, ನಿಂಗಿ ಇವರುಗಳು ಗಂಗೆ, ತುಂಗೆಯನ್ನು ಎಷ್ಟು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರೋ ಅದಕ್ಕೆ ತದ್ವಿರುದ್ಧ ಈ ಮಾದ. ಸದಾ ಸಿಡುಕು, ಹೊಡಿ, ಬಡಿ. ಗಂಗೆಗೆ ಬಾಯಿದ್ದರೆ ಅವನನ್ನು ಅದೆಷ್ಟು ದಬಾಯಿಸುತ್ತಿತ್ತೋ ಏನೋ. ಮುದ್ದಾದ ತುಂಗೆ, ಅಕ್ಕರೆಯ ಮಾದೇವಿಯ ಇವರ ಪ್ರೀತಿಯ ಸಲುವಾಗಿ, ಅವನು ಮಾಡಿದ್ದನೆಲ್ಲ ಅನುಭವಿಸಿಕೊಂಡು ನೋವನ್ನು ನುಂಗಿಕೊಂಡು ಗಂಗೆ ಜೀವನ ಸವೆಸುತ್ತಿತ್ತು. ಮನೆಯೊಳಗ, ಮಾದ ಗಂಗೆಯನ್ನು ಪ್ರೀತಿಸಿದಂತೆ ನಟಿಸಿದರೂ, ಹೊರಗೆ ಮಹಾ ಕ್ರೂರಿ. ಅದು ಮಾದೇವಿಗೆ ಗೊತ್ತಿರಲಿಲ್ಲ. ಗಂಗೆಗೆ ಇದನ್ನು ಹೇಳಿಕೊಳ್ಳಲು ಆಗುತ್ತಿರಲಿಲ್ಲ.
ಮನೆಯಲ್ಲಿ ಯಾವುದೇ ಹಬ್ಬ ಬಂದರೂ ಗಂಗೆಗೆ, ತುಂಗೆಗೆ ಪೂಜೆ ನಡೆಯುತ್ತಿತ್ತು. ಮಾದೇವಿ, ರಂಗ, ನಿಂಗಿ ಸಹ ಅದರಲ್ಲಿ ಭಾಗಿಯಾಗಿ ಗಂಗೆಗೆ, ತುಂಗೆಗೆ ಬಹಳ ಆತ್ಮೀಯರಾಗಿದ್ದರು. ಗಂಗೆಗೆ ಮಾತು ಬರದಿದ್ದರೂ ಅವರು ಹೇಳಿದ್ದೆಲ್ಲವೂ ಅರ್ಥವಾಗುತ್ತಿತ್ತು. ಮೌನದಿಂದಲೇ, ತಲೆ, ಮೈಯನ್ನು ಅಲುಗಿಸಿ ಉತ್ತರ ನೀಡುತ್ತಿತ್ತು. ಹಳ್ಳಿಯ ಸ್ವಚ್ಛಂದ ವಾತಾವರಣದಲ್ಲಿ ಅದು ಸುಖಿಯಾಗಿ ಮಾದನ ಕ್ರೂರ ವರ್ತನೆಯನ್ನು ಮರೆಯುತ್ತಿತ್ತು.
ಈ ಮಾದನಿಗೆ ಅಸೆ ಹೆಚ್ಚು. ಹಳ್ಳಿಯನ್ನು ಬಿಟ್ಟು ನಗರಕ್ಕೆ ಹೋಗೋಣ ಎಂದು ಇದ್ದ ಮನೆಯನ್ನು ಮಾರಿಬಿಟ್ಟ. ಆಗ ಜಯನಗರ ಆದ ಹೊಸತು. ಅಲ್ಲಿ ಹಾಲುಮಾರಿ ಚೆನ್ನಾಗಿ ದುಡ್ಡು ಗಳಿಸಬಹುದು ಎಂಬುದು ಅವನ ಆಸೆ. ಅಂತೂ ಮಾದ, ಅವನ ಮನೆಯವರು ಗಂಗೆ, ತುಂಗೆಯೊಂದಿಗೆ ಹೊಸ ಮನೆಗೆ ಬಂದರು. ಗಂಗೆ ತುಂಗೆಗೆ ಈಗ ಹಿಂದಿನಂತೆ ಹೊರಗೆ ಮೇಯಲು ಕಷ್ಟವಾಗುತ್ತಿತ್ತು. ರಸ್ತೆ, ವಾಹನ, ಇವೆಲ್ಲವೂ ಅವಕ್ಕೆ ಗಾಬರಿ ಉಂಟುಮಾಡಿದ್ದವು. ಹೇಗೋ ಮಾಡಿ ಆಟದ ಮೈದಾನಕ್ಕೆ ಬಂದರೆ ಸಾಕು, ಅಲ್ಲಿ ಹೇಗೋ ಮೇಯ್ದುಕೊಂಡು ಇರಬಹುದಿತ್ತು. ಯಾವುದಾದರೂ ಮನೆಯ ಗಿಡಗಳನ್ನು ತಿಂದರೆ ಮಾದನಿಂದ ಏಟುಗಳನ್ನು ತಿನ್ನಬೇಕಿತ್ತು.
ಜಯನಗರ ಬೆಳೆದಂತೆಲ್ಲ ವಾಹನಗಳು ಹೆಚ್ಚಾಗತೊಡಗಿದವು. ಕಸಗಳು ತೊಟ್ಟಿಯನ್ನು ತುಂಬ ತೊಡಗಿದವು. ಆಟದ ಮೈದಾನದಲ್ಲಿ ಹುಡುಗರಿಗೇ ಸ್ಥಳ ಕಡಿಮೆಯಾಗಿ ಗಂಗೆ, ತುಂಗೆಯಂತ ಹಸುಗಳು ಬಂದರೆ ಅವರಿಂದ ಏಟುಗಳನ್ನು ತಿನ್ನ ಬೇಕಿತ್ತು. ಈಗ ಗಂಗೆ, ತುಂಗೆಗೆ ಹೊರಗೆ ಮೇಯುವುದೇ ಕಷ್ಟವಾಗಿತ್ತು. ಮಾದೇವಿಗೆ ಈ ಕಷ್ಟಗಳೆಲ್ಲ ಗೊತ್ತೇ ಇರಲಿಲ್ಲ. ಅವಳು ಅಕ್ಕರೆಯಿಂದ ಎಷ್ಟು ಪೂಜೆ ಮಾಡಿದರೇನು, ಅಕ್ಕರೆಯಿಂದ ಬೆನ್ನು ಸವರಿದರೇನು, ಗಂಗೆಗೆ, ತುಂಗೆಗೆ ಹೊಟ್ಟೆಗೆ ಸಾಕಾಗುತ್ತಿರಲಿಲ್ಲ. ಈಗ ಹೊರಗೆ ಓಡಾಡಲು ಮೊದಲಿನಂತೆ ಗಾಬರಿ ಇರಲಿಲ್ಲ. ಆದರೆ ಮೇಯಲು ಸ್ಥಳ ಇಲ್ಲದೇ, ಕಸದ ತೊಟ್ಟಿಯಲ್ಲೇ ಏನಾದರೂ ಹುಡುಕಬೇಕಾಗಿತ್ತು. ಮಾದನಿಗೆ, ಗಂಗೆಯ, ತುಂಗೆಯ ಹಾಲು ಬೇಕಿತ್ತೆ ಹೊರತು ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಜವಾಬ್ದಾರಿಯೇ ಇರಲಿಲ್ಲ.
ಗಂಗೆ, ತುಂಗೆ ಈಗ ಕಸದ ಜೊತೆಗೆ ಒಮ್ಮೊಮ್ಮೆ ಪ್ಲಾಸ್ಟಿಕ್ ಕವರು ಗಳನ್ನೂ ತಿಂದು ಬಿಡುತ್ತಿದ್ದವು. ಹಾಗೆಯೇ ಇನ್ನೂ ಏನೇನೋ ತ್ಯಾಜ್ಯ ವಸ್ತುಗಳು ಅವುಗಳ ಹೊಟ್ಟೆಯನ್ನು ಸೇರಿ ಹೊಟ್ಟೆನೋವನ್ನು ತಂದಿಟ್ಟಿದ್ದವು. ಅವು ಮನೆಯಲ್ಲಿ ನೋವಿಂದ ಮುಲುಗಿದರೆ, ಮಾದೇವಿಗೆ, ಹಸುಗಳಿಗೆ ಏನೋ ಆಗಿದೆ ಎಂದು ಸಂದೇಹ ಬಂದು ಮಾದನಿಗೆ ವೈದ್ಯರಿಗೆ ತೋರಿಸಲು ಹೇಳುತ್ತಿದ್ದಳು. ಆದರೆ ಮಾದ ಮಾತ್ರ ಕ್ಯಾರೇ ಅನ್ನುತ್ತಿರಲಿಲ್ಲ. ಗಂಗೆ, ತುಂಗೆಗೆ ಬಾಯಿದ್ದರೆ “ ನಮಗೆ ಇಷ್ಟೊಂದು ಅಕ್ಕರೆ, ಪೂಜೆ ಇವೆಲ್ಲಕ್ಕೂ ಬದಲು ಒಂದು ಒಳ್ಳೆಯ ಜಾಗದಲ್ಲಿ ಮೇಯಲು ಬಿಟ್ಟರೆ ಸಾಕು” ಎಂದು ಹೇಳುತ್ತಿದ್ದವೇನೋ. ಹೊಟ್ಟೆಗೆ ಹಿಟ್ಟಿಲ್ಲದೆ, ಹೊಟ್ಟೆನೋವು ತಾಳಲಾರದೆ ಗಂಗೆ, ತುಂಗೆ ಈಗ ಸೊರಗಿದ್ದವು. ಹಾಲೂ ಕಡಿಮೆಯಾಗಿ ಮಾದನಿಗೆ ಸಂಸಾರ ತೂಗಿಸಲು ಕಷ್ಟವಾಗತೊಡಗಿತು. ಮಾದೇವಿ, ಹಿಂತಿರುಗಿ ಹಳ್ಳಿಗೆ ಹೋಗೋಣ ಎಂದರೆ, ಮಾದ ಸುತರಾಂ ಒಪ್ಪಲಿಲ್ಲ. ಹಸುಗಳಿಗಿಂತ ಅವನಿಗೆ ನಗರ ಜೀವನ ಹೆಚ್ಚಾಯಿತು. ಕಡೆಗೆ ಅವನ್ನು ಮಾರಿಬಿಡುವೆ ಎಂದಾಗ ಮಾದೇವಿ ಹೌಹಾರಿದಳು.“ಹಾಲಿದ್ದಾಗ ಅವು ನಿನಗೆ ಬೇಕಿತ್ತು, ಈಗ ಬರಡಾದ ಕೂಡಲೇ ಮಾರಿಬಿಡುವುದಾ?” ಎಂದು ಜಗಳಕ್ಕೆ ನಿಂತಳು. ಅವಳ ಜಗಳವನ್ನು ಕೇಳುವರು ಯಾರು?
ಒಂದು ದಿನ ಯಾರೋ ಕೇರಳದ ಕಾಕಾ ಬಂದು ಮಾದನೊಂದಿಗೆ ಮಾತುಕತೆ ನಡೆಸಿದ ಗಂಗೆ, ತುಂಗೆಗೆ ಎಲ್ಲವೂ ಅರ್ಥವಾಯಿತು. ಆರ್ದ್ರ ಕಣ್ಣಿನಿಂದ ಮಾದೇವಿಯನ್ನು, ರಂಗ, ನಿಂಗಿಯರನ್ನು ನೋಡಿದವು, ಮಾದ ಕಟುಕನಂತೆ ಅವಕ್ಕೆ ಎರಡು ಬಾರಿಸಿ ಕಾಕನ ಬಳಿ ಬಿಟ್ಟ.
ಮಾದೇವಿಗೆ, ಅವುಗಳ ಹಣೆಗೆ ಇಟ್ಟಿದ್ದ ಕುಂಕುಮ ರಕ್ತದಂತೆ ಕಂಡು, ಅವಕ್ಕೆ ಕಟ್ಟಿದ್ದ ಮೂಗುದಾರ, ಹಗ್ಗ, ನೇಣಿನ ಕುಣಿಕೆಯಂತೆ ಕಂಡುಬಂದು, ಕಣ್ಣು ಕತ್ತಲಿಟ್ಟು ಬಂದವು.