*ವಿಶ್ವ ಕಂಡ ಸಂತ
*ವಿಶ್ವ ಕಂಡ ಸಂತ
ಹುಟ್ಟಿ, ಸಾಮಾನ್ಯರಂತೆ ಬೆಳೆದು ಅಸಾಮಾನ್ಯನಾಗುವವನೇ ನಿಜವಾದ ಸಾಧಕ. ಆತನಿಗೆ ಸಾಧನೆಯ ಹಸಿವಿರುತ್ತದೆ. ಛಲ ಬಿಡದೆ ಯುಕ್ತಿಬಲದಿಂದ ತೊಂದರೆಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯವಿರುತ್ತದೆ. ಇಷ್ಟಿದ್ದರೆ ಸನ್ಯಾಸಿಯೂ ಇಡೀ ಪ್ರಪಂಚ ತನ್ನತ್ತ ನೋಡುವಂತೆ ಮಾಡಬಲ್ಲ ಎಂಬುದಕ್ಕೆ ಸ್ವಾಮಿ ವಿವೇಕಾನಂದರೇ ಅತ್ಯುತ್ತಮ ಉದಾಹರಣೆ.
ಯುವಜನರ ಬಾಳಲ್ಲಿ ಜ್ಞಾನದ ನಂದಾದೀಪ ಹಚ್ಚಿ, ಯುವ ಕನಸುಗಳಿಗೆ, ಚಂಚಲ ಮನಸ್ಸುಗಳಿಗೆ ಮಾರ್ಗದರ್ಶನ ನೀಡಿ, ಅಜ್ಞಾನದ ಅಂಧಕಾರದಲ್ಲಿ ತೇಲುತ್ತಿದ್ದ ಭಾರತವನ್ನು ಸುಜ್ಞಾನದ ಪಥದತ್ತ ಮುನ್ನಡೆಸಿ ನವಭಾರತವನ್ನು ಕಟ್ಟುವಲ್ಲಿ ಸಫಲರಾಗಿ ಭಾರತೀಯರ ಮನದಲ್ಲಿ ಅಜರಾಮರರಾದವರು ವಿವೇಕಾನಂದರು. ಬದುಕನ್ನು ಬಂಗಾರ ಗೊಳಿಸುವ ಶಿಲ್ಪಿಗಳು ನೀವಾಗಬೇಕೆಂದು ಅಂಧಕಾರದಲ್ಲಿದ್ದ ದುರ್ಬಲ ಮನಸ್ಸುಗಳನ್ನು ಎಚ್ಚರಿಸಿ ಅರಿವಿನ ಜ್ಞಾನವನ್ನು ಉಣಪಡಿಸಿ ಜೀವನದ ನಿಜತತ್ವ, ಸಿದ್ದಾಂತ, ಗುಣಗಳನ್ನು ಬೋಧಿಸಿದರು. ನೀವು ಎಚ್ಚರಗೊಳ್ಳಿ, ಇತರರನ್ನೂ ಎಚ್ಚರಿಸಿ, ಇದುವೇ ಮಾನವನಲ್ಲಿ ಇರಬೇಕಾದ ಸದ್ಗುಣ, ಎಂದವರು ವಿವೇಕಾನಂದರು.
ಭಾರತಾಂಬೆಯ ಕೀರ್ತಿಪತಾಕೆ ಮುಗಿಲ ತನಕ ಏರಿಸಿದ ಸಿಡಿಲ ಸಂತ, ಎಲ್ಲಾ ಧರ್ಮಗಳೂ ಒಂದೇ ಎಂದು ಸಾರಿದ ವೀರ ಸನ್ಯಾಸಿ ಭರತ ದೇಶದಲ್ಲಿ ಉದಯಿಸಿದ ದಿನವನ್ನು ಯುವ ದಿನವೆಂದು ಆಚರಿಸುತ್ತೇವೆ. ವಿವೇಕರ ವಿವೇಕವಾಣಿ ಇಂದು ಕೂಡ ಪ್ರಜ್ವಲಿಸುತ್ತಿದೆ. ಕಾಲ ಕೆಡುವುದಿಲ್ಲ ಕೆಡುವುದು ಜನರ ನಡೆ ಮತ್ತು ಆಚಾರ ವಿಚಾರ ಎಂಬ ಸತ್ಯ, ವಿವೇಕಾನಂದರ ಸತ್ಯದ ಹುಡುಕಾಟದ ಫಲಿತಾಂಶ ಇಂದಿಗೂ ಸಮಾಜಕ್ಕೆ ಅನ್ವಯಿಸುವಂಥದ್ದು. ಜೀವ ಮತ್ತು ಜೀವನದ ನಿಜಾಂಶವನ್ನು ಮನವರಿಕೆ ಮಾಡಿಸಿದ್ದ ಜ್ಞಾನ ಭಂಡಾರ ಅವರು.
ಯಾರೂ ಕೂಡ ಶ್ರೇಷ್ಠರಲ್ಲ. ಅವರವರ ಕಾಯಕ, ಸಮಯಪ್ರಜ್ಞೆ, ನಿರಂತರ ಪರಿಶ್ರಮ ಎನ್ನುವ ನದಿಗಳು ಕೊನೆಗೆ ಯಶಸ್ಸೆಂಬ ಸಾಗರವನ್ನು ಸೇರುವಂತೆ ಮಾಡುತ್ತವೆ. ಅದು ಜ್ಞಾನದ ಜ್ಯೋತಿಯನ್ನು ವಿಶ್ವಕ್ಕೇ ಪರಿಚಯಿಸುತ್ತದೆ. ಸನಾತನಧರ್ಮದ ಏಳ್ಗೆಗೆ ದುಡಿದ ಭಾರತಾಂಬೆಯ ವೀರ ಕುವರನಿಗೆ ಮನದಾಳದ ನಮನ.