ರಂಗಿತರಂಗ
ರಂಗಿತರಂಗ
ನಾನ್ ಸ್ಟಾಪ್ ನವೆಂಬರ್ - ಮಧ್ಯಂತರ
ಕನ್ನಡದ ಅದ್ಭುತ ಚಿತ್ರಗಳ ಸಾಲಿನಲ್ಲಿ ರಂಗಿತರಂಗ ಚಿತ್ರ ಖಂಡಿತ ನಿಲ್ಲುತ್ತದೆ. ಮಂಗಳೂರಿನಲ್ಲಿ ಭೂತಾರಾಧನೆಯ ನಂಬಿಕೆ ಈ ಚಿತ್ರದಲ್ಲಿ ನೋಡುಗರ ಮನ ಸೆಳೆಯುತ್ತದೆ.
ಈ ಚಿತ್ರದಲ್ಲಿ, ಇಂದು (ನಾಯಕಿ ) ನಾಯಕ ಗೌತಮನನ್ನು ಮದುವೆಯಾಗುತ್ತಾಳೆ. ಈಗ ಪೂರ್ತಿ ಗರ್ಭಿಣಿ ಇಂದು. ಗೌತಮ್ ಈಗಾಗಲೇ ಸಂಧ್ಯಾ ಎನ್ನುವವಳನ್ನು ಇಷ್ಟ ಪಟ್ಟಿರುತ್ತಾನೆ, ಆದರೆ ಅಪಘಾತವಾಗಿ ಹಳೆಯದೆಲ್ಲ ಮರೆತು, ಹೊಸ ಹುಡುಗನಾಗಿ ಇಂದುವನ್ನು ಮದುವೆಯಾಗುತ್ತಾನೆ. ಬರುವ ಕಷ್ಟಗಳನ್ನೆಲ್ಲ ಎದುರಿಸಿ, ಗರ್ಭಿಣಿ ಹೆಂಡತಿಯನ್ನು ರಕ್ಷಿಸುತ್ತಾನೆ. ಈ ಚಿತ್ರವನ್ನು ನನ್ನ ದೃಷ್ಟಿಯಲ್ಲಿ ಬದಲಿಸುವುದಾದರೆ,
ಇಂದು : ಗೌತಮ್, ಇವತ್ತು ಮಂಗಳೂರಲ್ಲಿ ನಾಟಕ ಇದೆ, ಕರ್ಕೊಂಡ್ ಹೋಗ್ತೀನಿ ಅಂದಿದ್ರಿ. ಮಾರ್ತೋದ್ರಾ?
ಗೌತಮ್ : ಮಂಗಳೂರಿಗೆ ಅಂತ ಹೇಳಿದ್ನಾ?
ಇಂದು : ಹೌದು.
ಗೌತಮ್ : ಇಂದು ಎಷ್ಟ್ ಸಲ ಹೇಳೋದು. ಮಂಗಳೂರಿಗೆ ನಾನ್ ಬರಲ್ಲ ಅಂತ ನಿಂಗ್ ಗೊತ್ತಿಲ್ವಾ? ಯಾವ್ದೋ ಟೆನ್ಶನ್ ಅಲ್ಲಿ ಹೇಳಿದ್ದೆ ಅನ್ಸತ್ತೆ, ಪ್ಲೀಸ್ ಕ್ಯಾನ್ಸಲ್ ದಿ ಶೋ.
ಇಂದು : ಏನ್ ಹೀಗಂದ್ರೆ. ಮಂಗಳೂರು ನನ್ನ ತವರುಮನೆ ಅಂತ ತಾನೇ ನೀವು ಬರಲ್ಲಾ ಅನ್ನೋದು. ಅದೆಲ್ಲಾ ಗೊತ್ತಿಲ್ಲಾ ನಂಗೆ,ನಾವಿವತ್ತು ಮಂಗಳೂರಿಗೆ ಹೋಗ್ತಿದೀವಿ ಅಷ್ಟೇ.
ಗೌತಮ್ : ನೀನ್ ಬೇಕಿದ್ರೆ ಹೋಗು, ಡ್ರೈವರ್ಗೆ ಹೇಳ್ತಿನಿ.
ಇಂದು : ಏನಾಗಿದೆ ಗೌತಮ್ ನಿನಗೆ? ನಾಟಕಾ ಇಷ್ಟಾ ಅಂತ ಹೇಳ್ತಿದ್ದೆ ಅಲ್ವಾ ನೀನು? ಈಗ್ಯಾಕೆ ಹೀಗಂತೀಯಾ?
ಗೌತಮ್ : ಹಾಗಲ್ಲಾ ಕಣೆ, ಮಂಗಳೂರು ನಾಟಕ ಅಂದ್ರೆ ನನ್ನ ನೆನಪುಗಳಿವೆ. ಬೇಕಾದವರೊಬ್ರನ್ನ ಅಲ್ಲೇ ಕಳ್ಕೊಂಡಿದೀನಿ.
ಇಂದು : ಹೋದೋವ್ರು ಹೋದ್ರು. ಇವತ್ತು ನಾಟಕಾ ಇರೋದು ನನ್ನ ಫ್ರೆಂಡ್ದು . ಅವ್ಳಿಗೆ ನಾನ್ ಬರ್ತೀನಿ ಅಂತ ಪ್ರಾಮಿಸ್ ಮಾಡಿದೀನಿ ಬನ್ನಿ ಪ್ಲೀಸ್.
ಗೌತಮ್ : ಏನೇ ಹೋದೋವ್ರುಹೋಗ್ಲಿ ಅಂದ್ರೆ?
ಇಂದು : ಇನ್ನೇನ್ ಮತ್ತೇ, ಅವ್ಳ ಯಾವಳೋ ಇದಾಳೆ, ಅದೇ ಜಪಾ ನಿಮಗೆ. ಅವಳನ್ನ ಬಿಟ್ಟು ನನ್ನ ಕಡೆ ಸ್ವಲ್ಪ ಗಮನ ಕೊಟ್ಟಿದ್ದಿದ್ರೆ ಕಡೆ ಪಕ್ಷ ನಮಗೊಂದು ಮಗು ಆದ್ರೂ ಆಗಿರೋದು!
ಗೌತಮ್ : ಛಿ, ಇಷ್ಟೊಂದು ಕೀಳಾಗಿ ಮಾತಾಡ್ತೀಯಾ ಅಂತ ನಾನು ಭಾವಿಸಿರಲಿಲ್ಲ ಕಣೆ.
ಇಂದು : ಸರಿ, ಆ ದರಿದ್ರ ಹುಡುಗಿ ನೆನಪಲ್ಲೇ ಸಾಯ್ರಿ, ನಾನಂತೂ ಹೋಗ್ತೀನಿ. ಡ್ರೈವರ್, ಲೆಟ್ಸ್ ಗೋ.
ಇಂದು ಹೋದ ಬಳಿಕ ಗೌತಮ್, ತನ್ನ ಹಳೆ ಪ್ರೇಮಿಯ ಬಗ್ಗೆ ಯೋಚಿಸುತ್ತ ಕೂತಲ್ಲೇ ಕೂತುಬಿಟ್ಟ.