ನನಗೆ ನೀನು , ನಿನಗೆ ನಾನು .ಭಾಗ 2.
ನನಗೆ ನೀನು , ನಿನಗೆ ನಾನು .ಭಾಗ 2.
ಮುದ್ದಿನ ಮಡದಿ ಸುಮಂಗಲ ತನ್ನ ಬಾಳಿನ ಆಶಾಕಿರಣ ಎಂದು ತಿಳಿದಿದ್ದ ರಾಮಕೃಷ್ಣ , ಹೆಂಡತಿಯ ಪ್ರತಿಯೊಂದು ನೋವಿಗೂ , ನಲಿವಿಗೋ , ಸುಖ ದುಃಖ , ಅವಳ ನಗುವಿಗೆ ಆಸರೆಯಾಗಿ ನಿಂತಿದ್ದರು. ಇದೆಲ್ಲವೂ ಸೂಕ್ಷ್ಮವಾಗಿ ಅರ್ಥವಾಗುತ್ತಿದ್ದರೂ ಸುಮಂಗಲಾಳಿಗೆ ಆ ದೇವರ ಮೇಲೆ ಕಡುಕೋಪ. ತನ್ನನ್ನು ಅತೀಯಾಗಿ ಪ್ರೀತಿಸುವ , ಒಳ್ಳೆಯ , ಮಗುವಿನ ಮನಸ್ಸಿರುವ ತನ್ನ ಗಂಡನಿಗೆ ತಾನೊಂದು ವಂಶೋದ್ಧಾರಕನನ್ನು ಹೆತ್ತು ಕೊಡಲಿಲ್ಲವಲ್ಲ ಎಂದು ಗೊಳಿಡುತ್ತಿದ್ದಳು.
ಅವಳು ತನ್ನ ಗಂಡನಿಗೆ ಎರಡನೇ ಮದುವೆ ಮಾಡಲು ಅನೇಕ ಬಾರಿ ಪ್ರಯತ್ನ ಪಟ್ಟಿದ್ದಳು. ಸೋತಿದ್ದಳು ಕೂಡ.
ನಾನು ನಿನ್ನನ್ನು ಶಾಸ್ತ್ರೋಕ್ತವಾಗಿ , ಅಗ್ನಿಸಾಕ್ಷಿಯಾಗಿ ಮದುವೆಯಾಗಿ , ಸಪ್ತಪದಿ ತುಳಿದು , ಏಳೇಳು ಜನ್ಮಕ್ಕೂ ನಿನ್ನನ್ನೇ ಹೆಂಡತಿಯಾಗಿ ಪಡೆಯುವೆ ಎಂದು ನಿನ್ನ ಕೊರಳಿಗೆ ಮಂಗಳಸೂತ್ರ ಕಟ್ಟಿದ್ದೇನೆ. ಅಂತದ್ದರಲ್ಲಿ ಎರಡನೇ ಮದುವೆ ಮಾಡುವ ನಿನ್ನನ್ನು ಏನು ಮಾಡಲಿ ಎಂದು ಸಿಟ್ಟಲ್ಲಿ ಬೈದದ್ದೂ ಉಂಟು. ಮಕ್ಕಳಾಗದಿದ್ದರೆ ಇಲ್ಲ , ನನ್ನನ್ನೇ ನಂಬಿ ನಿನ್ನ ಮನೆಯವರನ್ನೆಲ್ಲ ಬಿಟ್ಟು ಬಂದ ನನ್ನ ಬಾಳ ಸಂಗಾತಿ ನೀನು. ನಿನ್ನನ್ನು ಒಂದು ದಿನವೂ ಬಿಟ್ಟಿರಲಾರೆ. ಅಂತದ್ದರಲ್ಲಿ ನೀನು ಹೇಗೆ ಎರಡನೇ ಮದುವೆ ಮಾಡುವ ವಿಚಾರ ಮಾಡಿದೆ ಸುಮ್ಮಿ ಎಂದು ಬೈಯ್ದಿದ್ದರು.
ಆಗಿಂದ ಬಾಯಿಮುಚ್ಚಿ ಕುಳಿತಿದ್ದಳು ಸುಮಂಗಲ.
ಆದರೆ ವಯಸ್ಸಾಗುತ್ತಿದ್ದಂತೆ , ತಮ್ಮಿಬ್ಬರ ಶಕ್ತಿ ಕ್ಷೀಣಿಸಲು ಶುರುವಾದಂತೆ ಸುಮಂಗಲಾಳಿಗೆ ಭಯ ಹೆಚ್ಚಿತ್ತು. ಗಂಡನಿಗೆ ಹೇಳಿದರೆ ಬೈಯುತ್ತಾರೆನೋ ಎನ್ನುವ ಭಯ. ಇದೇ ಒತ್ತಡದಲ್ಲಿ ಆಕೆಗೆ ಸಕ್ಕರೆ ಕಾಯಿಲೆ ಶುರುವಾಯಿತು. ಜೊತೆಗೆ ಅಧಿಕ ರಕ್ತದ ಒತ್ತಡ ಬೇರೆ. ಹೀಗಿರುತ್ತಿದ್ದಾಗ ರಾಮಕೃಷ್ಣರು ಚಿಂತಿತರಾದರು. ದಿನದಿಂದ ದಿನಕ್ಕೆ ಸುಮಂಗಲಾಳ ಆರೋಗ್ಯ ಅದೇಕೋ ಹದಗೆಟ್ಟಿತು.
ಆಗ ರಾಮಕೃಷ್ಣರು ಹೆಂಡತಿಯನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದರು. ಮನೆಯಲ್ಲಿ ನೋಡಿಕೊಳ್ಳುವವರೂ ಯಾರೂ ಇಲ್ಲ. ಅದಕ್ಕಾಗಿ ಒಂದೆರಡು ದಿನ ಅಡ್ಮಿಟ್ ಮಾಡಿದರು. ಹೀಗೆ ಅಡ್ಮಿಟ್ ಮಾಡಿದ ಮರುದಿನ ವೈದ್ಯರು ಬಂದು ಪರೀಕ್ಷೆ ಮಾಡಿ , ಒಂದೆರಡು ಔಷಧಿಗಳನ್ನು ತರಲು ಹೇಳಿದರು. ಅದೇನೋ ಟೆನ್ಷನಲ್ಲಿ ಹೋಗುತ್ತಿದ್ದಾಗ ರಾಮಕೃಷ್ಣರು ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದರು. ಆಗ ಆ ಕಾರ್ ಡ್ರೈವರ್ ಬೈಯಲು ಶುರು ಮಾಡಿದಾಗ , ಕಾರ್ ನಲ್ಲಿದ್ದ ಸುಂದರ್ ಯುವಕ ಇಳಿದು ಬಂದು ಬಹಳ ಪ್ರೀತಿಯಿಂದ ಮಾತನಾಡಿಸಿ , ರಾಮಕೃಷ್ಣನನ್ನು ಆಸ್ಪತ್ರೆಗೆ ತಂದು ಬಿಟ್ಟನು. ಹಾಗೆಯೇ ಮಾತನಾಡುತ್ತ ಅವರು ಆಸ್ಪತ್ರೆಗೆ ಬಂದ ಕಾರಣವನ್ನು ಕೇಳಿದನು. ಆಗ ರಾಮಕೃಷ್ಣರು ತಮ್ಮ ಎಲ್ಲ ಕತೆಯನ್ನು ಹೇಳಿದರು.
ಯಾಕೋ , ಆ ಕಾರಿನ ಯುವಕನಿಗೆ ಸುಮಂಗಲಾಳನ್ನು ನೋಡಲು ಕೇಳಿದನು. ಮಕ್ಕಳೇ ಇಲ್ಲದ ಅವರು ಖುಷಿಯಾಗಿ ಹೆಂಡತಿಯಿದ್ದ ವಾರ್ಡ್ ಗೆ ಕರೆದೊಯ್ದರು.
ಸುಮಂಗಲಾಳಿಗೆ ಪರಿಚಯಿಸಿದ ರಾಮಕೃಷ್ಣರು ಆಗಿದ್ದ ಘಟನೆ ಹೇಳಿದರು. ಆಗ ಸುಮಂಗಳಾ ಗಂಡನಿಗೆ ಏನಾಯಿತೋ ಎಂದು ಗಾಬರಿಯಿಂದ ಎದ್ದು ವಿಚಾರಿಸಲು ಬೆಡ್ ಬಿಟ್ಟು ಕೆಳಗಿದಳು. ರಾಮಕೃಷ್ಣರು ಹೆಂಡತಿಗೆ ಬೈಯುತ್ತ , ಸಮಾಧಾನಿಸುತ್ತ ಮತ್ತೆ ಮಲಗಿದರು. ಇದೆಲ್ಲವನ್ನೂ ನೋಡುತ್ತಾ ನಿಂತಿದ್ದ ಆ ಕಾರಿನ ಸುಂದರ ಯುವಕ ಭುವನ್ , ಭಾವನಾತ್ಮಕವಾಗಿ ಕಳೆದು ಹೋಗಿದ್ದ. ಅವನಿಗೆ ಗೊತ್ತಿಲ್ಲದಂತೆ ಅವನ ಕಣ್ಣುಗಳಿಂದ ಕಣ್ಣೀರು ಬೀಳತೊಡಗಿದ್ದವು.
ಆಗ ಸುಮಂಗಲ ಭುವನ್ ನನ್ನು ಹತ್ತಿರ ಕರೆದು ಪ್ರೀತಿಯಿಂದ ಕಣ್ಣೀರೊರೆಸಿ ಮಾತನಾಡಿಸಿದಾಗ ಗೊತ್ತಾಯಿತು ಆತನಿಗೆ ಅಪ್ಪ ಅಮ್ಮ ಇಲ್ಲದಿರುವುದು.
ಚಿಕ್ಕವನಿರುವಾಗ್ಲೇ ಅಪಘಾತದಲ್ಲಿ ತೀರಿ ಹೋಗಿರುವುದು. ಗಾರ್ಡಿಯನ್ ಅಂದರೆ ಸೋದರಮಾವನ ದೂರದ ಸಂಬಂಧಿಯೊಬ್ಬರು ಬೆಳೆಸಿದ್ದಾಗಿ , ಈಗ ಒಬ್ಬಂಟಿಯಾಗಿ ಇರುವುದಾಗಿ ಹೇಳಿದನು.
ಆಗ ಆಕೆ ಇನ್ಮುಂದೆ ನೀನು ಒಬ್ಬಂಟಿಯಲ್ಲ , ನಾವೇ ನಿನಗೆ ಎಲ್ಲ , ಯಾವಾಗ ಬೇಕಾದರೂ ಮನೆಗೆ ಬಂದು ಹೋಗು ಎಂದು ಹೇಳಿ ಹಣೆಗೆ ಮಮತೆಯ ಮುಟ್ಟನಿಟ್ಟಳು. ಆಗಂತೂ ಭುವನ್ ಕರಗಿಯೇ ಹೋಗಿದ್ದ.
ಮುಂದೆ ಭುವನ್ ರಾಮಕೃಷ್ಣ ಅವರಿಗೆ ತುಂಬಾ ಹತ್ತಿರವಾದನು. ಇವರೇ ಮುಂದೆ ನಿಂತು ಆತನ ಮದುವೆ ಮಾಡಿದರು. ಭುವನ್ ಅವರನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಿ ತನ್ನ ಮನೆಯಲ್ಲಿಯೇ ಇಟ್ಟುಕೊಂಡನು.
ಹೀಗೆ ದೇವರು ಅವರ ಕೊನೆಗಾಲಕ್ಕೆ ಆಸರೆಯಾಗಿ ಭುವನ್ ನನ್ನು ಕಳುಹಿಸಿದ್ದ. ಸುಮಂಗಲ , ರಾಮಕೃಷ್ಣರು , ಭುವನ್ ಮತ್ತು ಆತನ ಹೆಂಡತಿ ಎಲ್ಲರೂ ಖುಷಿಯಾಗಿ , ಸಂತೋಷವಾಗಿ ಕಾಲ ಕಳೆಯುತ್ತಿದ್ದರು.