ನಿಗೂಢ ರಾತ್ರಿ
ನಿಗೂಢ ರಾತ್ರಿ
ಕತ್ತಲು ಮೂಡಿತ್ತು ಸುತ್ತಲೂ ಇನ್ನೇನು ಮಲಗುವ ಸರದಿ ಅಷ್ಟೊತ್ತಿಗೆ ಗೆಳೆಯನಿಂದ ಕರೆಯೊಂದು ಬಂದಿತ್ತು . ಏನೆಂದು ವಿಚಾರಿಸಲು ಶುರು ಮಾಡುವಾಗ ನನಗೊಂದು ವಿಚಾರ ನೆನಪಿಗೆ ಬಂತು ಅದು ನೆನಪಾದದ್ದೇ ತಡ ಮೈಯಮೇಲೆ ಅಂಗಿ ಹಾಕಿಕೊಂಡು ಅಮ್ಮನಲ್ಲಿ ಬಯಲ ಬಳಿ ಯಕ್ಷಗಾನ ಇರುವುದಾಗಿ ಹೇಳಿ ಏನೇನು ಸರ್ಕಸ್ ಮಾಡಿ ಅವರನ್ನು ಒಪ್ಪಿಸಿದೆ . ಆದರೆ ಅಮ್ಮನ ಅದೊಂದು ಮಾತು ಹೇಳಿದ್ದರು ಯಾವುದೇ ಕಾರಣಕ್ಕೂ ನೀನು ಆಟದ ನಡುವೆ ನಡುರಾತ್ರಿಯಲ್ಲಿ ಮನೆಗೆ ಮರುಳಬಾರದೆಂದು ಆ ಷರತ್ತಿಗೆ ಒಪ್ಪಿದೆ. ಹಾಗೆ ನಾನು ಪಕ್ಕದಮನೆಯ ಗೆಳೆಯರ ಜೊತೆಗೂಡಿ ಬಣ್ಣದ ಲೋಕದಲ್ಲಿ ಹಾರಾಡುವ ರಂಗುರಂಗಿನ ಚಿಟ್ಟೆಗಳ ನಾಟ್ಯ ವೈಭವ ಗಾನಗಂಧರ್ವ ಸಂಗೀತ ಸಂಗಮ ಅಲ್ಲಿ ಸಿಗುತ್ತಿದ್ದ ಚಟ್ಟಂಬಡೆ ಕಣ್ಣ ಮುಂದೆ ಸರಸರನೆ ಹಾದುಹೋಯಿತು. ಬಾಯನ್ನು ಒಮ್ಮೆ ಕಚಗುಳಿಸಿತು. ರಂಗಸ್ಥಳಕ್ಕೆ ನಡೆಯುವ ಮಾರ್ಗ ತುಂಬಾ ಇದರದ್ದೇ ನೆನಪುಗಳ ಸ್ಪರ್ಶ.
ಬಯಲಾಟ ಇರುವ ಜಾಗ ನಮ್ಮ ಊರಿನಿಂದ ಮೂರ್ನಾಲ್ಕು ಕಿಲೋ ಮೀಟರ್ ದೂರದಲ್ಲಿ ಇರಬಹುದು. ಆ ಜಾಗಕ್ಕೆ ಸಮೀಪಿಸುವಾಗಲೇ ಸ್ವರ್ಗದ ದ್ವಾರದ ಕಲ್ಪನೆ ಮನದಲ್ಲಿ ಮೂಡುವಂತಿತ್ತು . ರಂಗಸ್ಥಳಕ್ಕೆ ಹಾಕಿದ ಹೂವಿನ ಅಲಂಕಾರ ಆ ಹೂವಿನ ಸುಗಂಧವು ಅಲ್ಲಿ ಆವಾಗಲೇ ಪಸರಿಸಿ ನಾಸವನ್ನು ಅರಳಿಸಿತು ಅಲ್ಲಿ ಅತ್ತ ಇತ್ತ ನಲಿದಾಡುತಿದ್ದ ಮಾರುತದೊಂದಿಗೆ ಮಲ್ಲಿಗೆಯ ಪರಿಮಳವು ಎಲ್ಲೆಲ್ಲೂ ಗಮ್ಮೆಂದು ಆವರಿಸಿತ್ತು . ದಾರಿಯುದ್ದಕ್ಕೂ ವಿದ್ಯುತ್ ದೀಪಾಲಂಕಾರದ ಸೊಬಗು ಬಹುದೂರದವರೆಗೂ ಕೇಳುತ್ತಿದ್ದ ಚಂಡೆಯ ಸದ್ದು ರಂಗಸ್ಥಳದಲ್ಲಿ ಹೆಜ್ಜೆ ಹಾಕುತ್ತಿದ್ದ ಕಲಾವಿದರ ಕಲೆಯ ಅನಾವರಣದ ಸೊಗಡು ನನ್ನನ್ನು ಒಮ್ಮೆ ಮೂಕವಿಸ್ಮಯನಂತೆ ಮಾಡಿದ್ದಂತೂ ಸುಳ್ಳಲ್ಲ. ರಂಗಸ್ಥಳದ ಎದುರಿದ್ದ ಕುರ್ಚಿ ಅದಾಗಲೇ ಭರ್ತಿಯಾಗಿತ್ತು ಮುಂಭಾಗದಲ್ಲಿದ್ದ ಚಾಪೆ ಮಾತ್ರ ಅರ್ಧ ತುಂಬಿತ್ತು ಇನ್ನೇನು ಅಲ್ಲೇ ಕೂತು ಯಕ್ಷಗಾನ ನೋಡುವುದು ಅನಿವಾರ್ಯವಾಯಿತು. ಹೇಗೂ ಹತ್ತಿರವೇ ಆಯ್ತು. ಮುಂಜಾನೆವರೆಗೂ ಆಟ ಸಂಪೂರ್ಣವಾಗಿ ನೋಡಲು ಉತ್ಸಾಹದಿಂದ ಕೂತಿದ್ದೆ . ಭಾಗವತರು ಅದಾಗಲೆ ಭಾಗವತಿಕೆಯ ಮೋಡಿ ಆರಂಭಿಸಿದರು. ಬಣ್ಣದ ವೇಷಗಳು ರಂಗದಲ್ಲಿ ಮಿಂಚುತ್ತಿದ್ದವು. ಅಷ್ಟರಲ್ಲಿ ಗೆಳೆಯನ ಕರೆಯೊಂದು ಬಂತು ನಾನು ಅಂದುಕೊಂಡಿದ್ದ ಲೆಕ್ಕಾಚಾರಗಳೆಲ್ಲಾ ಬುಡಮೇಲಾಯಿತು. ಅವನ ಮಾತು ಕೇಳಿ ಒಮ್ಮೆಗೆ ಹೃದಯ ನಿಂತಂತಾಯಿತು . ಏಕೆಂದರೆ ಮರುದಿನ ಪರೀಕ್ಷೆ ಇದೆಯೆಂದು ಅತ್ತಕಡೆಯಿಂದ . ಮರುದಿನದ ಪರೀಕ್ಷೆಗೆ ಯಾವ ಪಾಠ ಇದೆ ಎಂಬುದಾಗಿ . ಏನು ತೋಚಲಿಲ್ಲ ಯಾವ ಪರೀಕ್ಷೆಯೆಂದು ಪಕ್ಕನೇ ಕಾಲ್ ಕಟ್ ಮಾಡಿ ಕ್ಲಾಸ್ ಗ್ರೂಪ್ ನೋಡಿದೆ ಅದರಲ್ಲಿ ನಾಳೆ ಎಕ್ಸಾಮ್ ಇದೆ ಎಂಬುದಾಗಿ ಮುಂಜಾನೆಯೆ ಸಂದೇಶ ಬಂದಿತ್ತು . ಇನ್ನೇನು ಮಾಡುವುದು ಪರೀಕ್ಷೆ ಬರೆಯದೆ ಹೋದಲ್ಲಿ ಅಪ್ಪ ಸರಿಯಾಗಿ ಬೈತಾರೆ . ಹೀಗೆ ಇಲ್ಲೇ ಕೂತರೆ ಆಗದೆಂದು ಅರ್ಧ ಮನಸ್ಸು ಮಾಡಿ ಅಲ್ಲಿಂದ ಹೊರಟೇ ಬಿಟ್ಟೆ ಮನೆಯತ್ತ. ಆದರೆ ನನ್ನೊಂದಿಗಿದ್ದ ಯಾವ ಗೆಳೆಯರನ್ನು ನಾನು ಕರೆಯಲಿಲ್ಲ. ಅವರು ಯಕ್ಷಗಾನ ಪೂರ್ತಿ ನೋಡುವುದೆಂದು ಮೊದಲೇ ಹೇಳಿದ್ದರು. ಗೆಳೆಯರ ಆಸೆಗೆ ಸುಮ್ಮನೆ ತಣ್ಣೀರು ಎರಚಬಾರದೆಂದು ನಾನೊಬ್ಬನೇ ಮನೆಯತ್ತ ಹೆಜ್ಜೆ ಹಾಕಲು ಶುರು ಮಾಡಿದೆ.
ನಡೆಯುವ ದಾರಿ ಸಂಪೂರ್ಣವಾಗಿ ವಾಹನ ಮುಕ್ತವಾಗಿತ್ತು. ಆ ಕಡೆ ಈ ಕಡೆ ವಿಶಾಲವಾಗಿ ಹಬ್ಬಿದ ಬಯಲು. ಯಾವುದೇ ಒಂದು ಗಾಡಿಯು ಅತ್ತ-ಇತ್ತ ಚಲಿಸುತ್ತಿರಲಿಲ್ಲ. ದೂರದಲ್ಲಿ ಒಂದು ದೊಡ್ಡ ಮರ ಮಾತ್ರ ಗೋಚರಿಸುತ್ತಿತ್ತು. ಮನದಲ್ಲಿ ಸಣ್ಣದೊಂದು ಕಂಪನಿ ಬೆವರಲು ಆರಂಭಿಸಿತು ಆಗಸದಲ್ಲಿ ಕತ್ತಲು ಆವರಿಸಿತ್ತು ನನ್ನೊಳಗೆ ಭಯದ ವಾತಾವರಣ ತುಂಬಿತ್ತು. ಇನ್ನೇನು ಮುಖ್ಯರಸ್ತೆ ದಾಟುವಷ್ಟರಲ್ಲಿ ಆ ದೈತ್ಯಾಕಾರದ ಮರವು ಅಲ್ಲಾಡಲು ಶುರುವಾಯಿತು. ಆಕಡೆ ನಾನು ಹತ್ತಿರ ಹತ್ತಿರ ಹೋದಂತೆ ಅದರ ಅಲುಗಾಟದ ಅನುಭವ ಜೋರಾದಂತೆ ತೋರಿತು. ನನಗೆ ವಿಪರೀತ ಭಯವಾಯಿತು. ಇಲ್ಲೇನು ಇದೆ ಎಂದು ಒಂದೇ ಸಮನೆ ಮನೆಗೆ ಓಡಿದೆ . ಓಡಿದರು ಓಡಿದರು ಮನೆ ಮುಟ್ಟುತ್ತಿರಲಿಲ್ಲ ಮನೆ ತಲುಪುವಷ್ಟರಲ್ಲಿ ಬಳಲಿ ಬೆಂಡಾಗಿ ಹೋಗಿದ್ದೆ. ಮನೆಯ ಕದ ತಟ್ಟಿ ಅಮ್ಮ ಅಮ್ಮ ಎಂದು ಜೋರಾಗಿ ಕೂಗತೊಡಗಿದೆ. ಮನೆಯಲ್ಲಿ ನಡೆದ ಘಟನೆಯ ಎಲ್ಲವನ್ನು ಹೇಳಿಬಿಟ್ಟೆ. ಅಮ್ಮ ಹಳೆ ಟ್ಯಾಪ್ ರೆಕಾರ್ಡ್ನಂತೆ ಬಯ್ಯಲು ಶುರು ಮಾಡಿಬಿಟ್ಟಳು. ಅವಳ ಬೈಗುಳ ಕೇಳಿ ಅಪ್ಪನಿಗೆ ಎಚ್ಚರಿಕೆ ಆಯಿತು. ಅಪ್ಪನಿಗೆ ಎಲ್ಲಾ ವಿಚಾರ ತಿಳಿಯಿತು. ಅಲ್ಲಿ ಯಾವ ಭೂತವಿಲ್ಲ ಪ್ರಯತ್ನವಿಲ್ಲ ಅದು ಗಾಳಿಮರ ಅದು ಗಾಳಿಗೆ ಎಷ್ಟು ಹೊತ್ತಿಗೆ ಬೇಕಾದರೂ ಅಲುಗಾಡುತ್ತದೆ ಅದು ಬಿಟ್ಟು ನೀನು ಏನೇನೋ ಕಲ್ಪನೆ ಮಾಡುವ ಅವಶ್ಯಕತೆ ಇಲ್ಲ. ನೀನು ಮಧ್ಯಾಹ್ನ ಹೋಗಿ ನೋಡು ಸ್ವಲ್ಪ ಹೊತ್ತು ಅಲ್ಲೇ ಇರು ಆಗ ನಿನಗೆ ನಿಜಾಂಶ ಅರಿವಿಗೆ ಬರುತ್ತದೆ. ಅದು ಬಿಟ್ಟು ನೀನು ಏನೇನೋ ಕಲ್ಪನೆ ಮಾಡುವ ಅವಶ್ಯಕತೆ ಇಲ್ಲ.
ಅಂದು ಅಪ್ಪ ಹೇಳಿದ ಮಾತು ಇಂದಿಗೂ ನೆನಪಾಗುತ್ತದೆ. ದೈರ್ಯ ಕಳೆದುಕೊಂಡರೆ ಸುತ್ತಲೂ ಏನೇನು ಇದೆ ಎಂದು ಭಾಸವಾಗುತ್ತದೆ . ಕೆಟ್ಟ ಶಕ್ತಿ ಆವರಿಸಿದೆ ಎಂದು ಅನುಭವವಾದಂತೆ ನಡೆಯುವುದು ಸಾಮಾನ್ಯ. ಧೈರ್ಯದಿಂದ ನಡೆದರೆ ಅದೆಲ್ಲವೂ ಭ್ರಮೆ ಎಂದು ತಿಳಿಯುತ್ತದೆ. ಇಲ್ಲಿ ಭೂತ-ಪ್ರೇತ ಇದೆ ಇಲ್ಲವೋ ನನಗಂತೂ ತಿಳಿಯದು ಆದರೆ ಧೈರ್ಯ ಕಳೆದುಕೊಂಡರೆ ಮುಂದೆ ಶುರುವಾಗುವುದೇ ಕಥೆ.