ನೆನಪಿನ ' ಬುಟ್ಟಿ '
ನೆನಪಿನ ' ಬುಟ್ಟಿ '
ಮೈಸೂರಿನ ಕುವೆಂಪು ನಗರದ ಮುಖ್ಯರಸ್ತೆಯಲ್ಲಿನ ಒಂದು ಭವ್ಯ ಬಂಗಲೆ. ಹತ್ತುವರ್ಷಗಳ ಹಿಂದೆ ಕಟ್ಟಿರಬಹುದಾದ ಕಟ್ಟಡ. ಇದರ ಒಡತಿ ಒಬ್ಬ ನಿವೃತ್ತ ಕಾಲೇಜ್ ಪ್ರಿನ್ಸಿಪಾಲ್ Dr ರಮ್ಯಾ ಶ್ರೀನಿವಾಸ್.ಇವರ ಮನೆಗೆ ಬೇಟಿ ಕೊಟ್ಟವರಿಗೆಲ್ಲಾ ಬಹಳ ಹಿಂದೆ ನಡೆದ ಒಂದು ಕಥೆ ಇವರು ಹೇಳಲೇಬೇಕು. ಇದಕ್ಕೆ ಕಾರಣ ಇವರು ಮನೆ ಕಟ್ಟಿಸುವಾಗ ಎಲ್ಲರಿಗೂ ಕಾಣುವ ಹಾಗೆ ಎದುರಿಗೆ ಗೋಡೆಯಲ್ಲಿ ಒಂದು ಹಳೆಯ ಬುಟ್ಟಿ ಯನ್ನ ಇಟ್ಟು ಅದಕ್ಕೆ ಸಣ್ಣದೊಂದು ದೀಪ ಹಾಕಿ ಗಾಜಿನಿಂದ ಮುಚ್ಚಿಟ್ಟಿರುವುದು . ಇದನ್ನು ಕಂಡ ಯಾರಿಗಾದರೂ ಕುತೂಹಲ ಹುಟ್ಟಿಸದೇ ಇರದು. ಹಾಗಾಗಿ ಈ ಸ್ವಾರಸ್ಯಕರ ಕಥೆ ಅವರ ಬಾಯಲ್ಲೇ ಕೊಳೋಣ ಬನ್ನಿ.
ನನ್ನ ಹೆಸರು Dr ರಮ್ಯಾ. ನಾವು ಮೊದಲು ವಾಸವಿದ್ದ ಮನೆಗೆ ಪಕ್ಕದ ಹಳ್ಳಿಯೊಂದರಿಂದ ಒಬ್ಬ ಮುದುಕ ತರಕಾರಿ ಮಾರಲು ವಾರಕ್ಕೊಮ್ಮೆ ತಪ್ಪದೆ ಬರುತ್ತಿದ್ದ . ಹಾಗೆ ಬರುವ ಅವನು ಮೊದಲು ನಮ್ಮ ಮನೆಗೆ ಬಂದು ನಂತರ ಬೇರೆ ಕಡೆ ಹೋಗುವ ಅಭ್ಯಾಸ. ಬಂದವನೇ ನಮ್ಮ ತಾಯಿಯನ್ನ ಅಮ್ಮಾ ಅಂತ ಕರೆದು, ಈ ತರಕಾರಿ ನಾವೇ ಬೆಳೆದದ್ದು, ಇದು ಚೆನ್ನಾಗಿದೆ ಮಕ್ಕಳಿಗೆ ಪಲ್ಯಮಾಡಿ ಹಾಕಿ . ಇದು ಆರೋಗ್ಯಕ್ಕೆ ಒಳ್ಳೇದು ಅಂತ ಹೇಳಿ ಎಲ್ಲವನ್ನೂ ಪಕ್ಕಕ್ಕೆ ಇಟ್ಟು ಹತ್ತು ರೂಪಾಯಿ ಕೊಡು ಅಂದರೆ ಅಮ್ಮ ಅದೆಲ್ಲಾ ಆಗಲ್ಲ ನೀನು ಯಾವಾಗಲೂ ನನಗೆ ಎರಡರಷ್ಟು ಬೆಲೆ ಹೇಳ್ತಿ. ನಾನು ಐದೇ ಕೊಡೋದು ಅಂತಾಳೆ. ಮಹಾಲಕ್ಷ್ಮೀ ದು ಮೊದಲ ಬೋಣಿ ಅಂತ ಬಂದರೆ ಏನಮ್ಮ ಯಾವಾಗಲೂ ಹೀಗೆ ಮಾಡ್ತಿಯೆ ಅಂತ ಹೇಳಿ ಹೋಗ್ಲಿ ಕೊಡು ಅಂತಾನೆ.. ಅಷ್ಟರಲ್ಲಿ ಅಪ್ಪ ಬಂದು ಏನಮ್ಮ ನೀನು ಐದು ರೂಪಾಯಿಗೆ ಇಷ್ಟೊಂದು ಚೌಕಾಸಿ ಮಾಡ್ತಿಯೆ ಬಿಸಿಲಲ್ಲಿ ಅದೂ ಈ ವಯಸ್ಸಲ್ಲಿ ಮನೆ ಮನೆ ಇಷ್ಟು ಭಾರ ಹೊತ್ತುಕೊಂಡು ಹೋಗ್ತಾನೆ ಪಾಪ ಒಂದು ರುಪಾಯಿ ಜಾಸ್ತಿ ಕೊಟ್ಟರೂ ತಪ್ಪಿಲ್ಲ. ಕೊಡಮ್ಮ ಅಂದರೆ ಅದಲ್ಲೆ ನಿಮಗ್ಯಾಕೆ ಅಂದಾಗ ಅವನೂ ನಗ್ತಾನೆ. ಅಮ್ಮಾನೆ ಬುಟ್ಟಿ ಮೇಲೆತ್ತಿ ಅವನ ತಲೆ ಮೇಲೆ ಇಟ್ಕೊಳ್ಳಕ್ಕೆ ಸಹಾಯ ಮಾಡ್ತಾರೆ. ಅಷ್ಟರಲ್ಲಿ ಇವತ್ತು ಮರತೇ ಬಿಟ್ಯ ಬಿಡು ಮುಂದಿನವಾರ ಕೊಡು ಅಂದಾಗ ಅಯ್ಯೋ ತಡಿ ಅಂತ ಬುಟ್ಟಿಯನ್ನ ಮತ್ತೆ ಕೆಳಗೆ ಇಳಿಸಿ, ಒಳಗೆ ಹೋಗಿ ಒಂದು ದೊಡ್ಡ ಪಾತ್ರೆ ತುಂಬಾ ಮಜ್ಜಿಗೆ ತಂದು ಕೊಡ್ತಾಳೆ. ಕುಡಿದು ಅವನೇ ಹೊರಗಡೆ ಗೇಟ್ ಹತ್ತಿರ ಇರೋ ನಲ್ಲಿಯಲ್ಲಿ ತೊಳೆದು ಕಂಬದ ಪಕ್ಕದಲ್ಲಿ ಬೋರಲು ಹಾಕ್ತಾನೆ. ಮತ್ತೆ ಅಮ್ಮಾ ಅಂದಾಗ ಬಂದು ಬುಟ್ಟಿ ಎತ್ತಿ ತಲೆ ಮೇಲೆ ಇಡಬೇಕು.ಇದು ಪ್ರತಿವಾರ ತಪ್ಪದೆ ನಮ್ಮ ಅಮ್ಮ ಮತ್ತು ತರಕಾರಿ ಮಾರೋ ಮುದುಕನ ನಡುವೆ ನಡೆಯುವ ವ್ಯಾಪಾರ.
ಒಂದು ವಾರ ಅವನು ಬಂದಿಲ್ಲ . ನಾವೂ ಗಡಿಬಿಡಿಯಲ್ಲಿ ಆ ಕಡೆ ಗಮನ ಹರಿಸಿಲ್ಲ. ಮತ್ತೊಂದು ವಾರ ಗೇಟ್ ಶಬ್ದ ಆದಾಗ ನೋಡಿದರೆ ಬುಟ್ಟಿ ತುಂಬಾ ಅಮ್ಮ ಇಷ್ಟ ಪಡುವ ಹಾಗಲಕಾಯಿ ಬೆಂಡೆಕಾಯಿ ಸೀ ಕುಂಬಳಕಾಯಿ ತಂದಿದ್ದೀನಿ ಕರೀ ಅಮ್ಮನ್ನ ಅಂದ ಉತ್ತರ ಕೊಡದೆ ಒಳಗೆ ಓಡಿ ಬಂದೆ. ಬಾಗಿಲ ಹಿಂದೆ ನಿಂತು ದುಃಖ ತಡಿಯಲಾರದೆ ಅಳ್ತಾ ಇದೀನಿ. ನನ್ನ ತಂಗಿ ಓಡಿ ಬಂದಳು. ನಾನು ಹೊರಗಡೆ ಕೈ ತೋರಿಸಿ ಮತ್ತೆ ಅತ್ತೆ. ಅವಳೂ ಸಹ ಅಪ್ಪಾ ತರಕಾರಿ ತಾತಾ ಅಂತ ಕೂಗಿದಾಗ ಅಪ್ಪ ಅಯ್ಯೋ ಹೇಗಪ್ಪಾ ಅವನಿಗೆ ಹೇಳೋದು ಅಂತಾನೆ ಹೊರಗೆ ಹೋದರು. ಅಮ್ಮನ್ನ ಕರೀರಿ ಅವರಿಗೆ ಇಷ್ಟದ ತರಕಾರಿ ತಂದಿದೀನಿ ಅಂದಾಗ. ಅಪ್ಪ ದುಃಖ ತಡ್ಕೊಂಡು ಹೇಳಿದರು . ಇನ್ನೆಲ್ಲಿ ಅಮ್ಮ .ನಮ್ಮನ್ನೆಲ್ಲಾ ಬಿಟ್ಟು ಹೊರಟು ಹೋದಳು. ಅಂದಾಗ ಅವನಿಗೆ ಮೊದಲು ಅರ್ಥ ಆಗಲಿಲ್ಲ. ಆ ಮೇಲೆ ಅಯ್ಯೋ ದೇವ. ಏನು ಹೇಳ್ತೀರಿ ಸ್ವಾಮಿ. ನಮ್ಮ ಲಕ್ಷ್ಮಿ ಗೆ ಏನಾಯ್ತು ಅಂತ ಮಗುತರಾ ಅತ್ತು ಬಿಟ್ಟ. ಏನೂ ಮಾತಾಡದೆ ಎದ್ದು ಗೇಟ್ ಆಚೆ ಹೊರಟೇ ಹೋದ . ತರಕಾರಿ ತುಂಬಿದ ಬುಟ್ಟಿಯನ್ನೂ ನಮ್ಮ ಮನೇಲೆ ಬಿಟ್ಟು ಎಲ್ಲಿಗೆ ಹೋದ ಅಂತಾನೆ ಗೊತ್ತಿಲ್ಲ. ಅಮ್ಮನಿಗೂ ಅವನಿಗೂ ಯಾವ ಹಿಂದಿನ ಜನ್ಮದ ಅನುಬಂಧವೋ ನಮಗಂತೂ ಗೊತ್ತಿಲ್ಲ.ನಮ್ಮ ತಂದೆ ಈ ಬುಟ್ಟಿಯನ್ನ ಅವನ ನೆನೆಪಿಗೆ ಬಹಳ ವರ್ಷ ಇಟ್ಟಿದ್ದರು. ನಾನು ಮನೆ ಕಟ್ಟಿದಾಗ ನಾನೂ ಅವರಂತೆ ಮುಂದುವರೆಸಿದೆ ಆ ಮರೆಯಲಾಗದ ನೆನೆಪಿನ ಕಥೆ ಯನ್ನ ಈ ರೀತಿ ಹೇಳುವಾಗ ಪ್ರತಿಸಾರಿ ಭಾವುಕರಾಗ್ತಾರೆ.