ಮುಗ್ಧ ಮನುಷ್ಯತ್ವ
ಮುಗ್ಧ ಮನುಷ್ಯತ್ವ
ಮನೆಗೆ ಬಂದದ್ದೇ ತಡ, ಅಭ್ಭರಿಸಿದೆ .
ಲೇ! ಬಾರೇ ಇಲ್ಲಿ!
ಹ್ಹಾ! ಬಂದೆ ತಡೀರೀ...
ಉತ್ತರ ಅಡಿಗೇ ಮನೆಯಿಂದ ಬಂತು. ಆದರೆ, ಕೋಪದ ತುಟ್ಟತುದೀಲಿದ್ದ ನನ್ನ ದನಿ ನಡುಗಿತ್ತು.
'ಅಲ್ಲೇನು ಮಾಡ್ತಿದ್ದೀ ಬಾಯಿಲ್ಲಿ'... ಕೂಗಿದೆ.
ಸ್ವಲ್ಪ ತಡೀರಿ, ರೊಟ್ಟೀ ಮಾಡ್ಲಿಕ್ಕೆ ಹತ್ತೀನಿ...ಕೈ ಕಾಲೀ ಇಲ್ರೀ..'
ಕೋಪ ಏರಿದ್ದು ಜರ್ರನೆ ಇಳೀತು..ಕರ್ಮ ಕರ್ಮ...ಎನ್ನುತ..
ಎಲ್ಲೂ ಹತ್ಬೇಡಮ್ಮಾ ತಾಯೀ..ಬೇಗ ಬಂದು ತೊಲಗು..' ಅಂದೆ
ಯಾಕೋ ತುಂಬ ಕೋಪ ಬಂದಿರೋ ಹಾಗಿದೆಂತ ಅವಳು ತೊಳೆದ ಕೈ ಸೆರಗಿಗೆ ಒರೆಸಿಕೊಳ್ಳುತ್ತಾ..ಬಂದಳು..
ಏನ್ರೀ..ಹಂಗ್ ಬಡ್ಕೋತೀರಿ..ಏನಾಗೇದಾಂತ.?
ನಿನ್ನೆ ನನ್ನ ಕಿಸೆಯಿಂದ ಹಣ ತಗೊಂಡ್ಯಾ..? ಕೇಳಿದೆ
ಹೌದ್ರೀ..ಹೇಳೂದ್ ಮರೆತೆ. ನೀವು ಮಲಗಿದ್ರಿ. ಹಾಲಿನವ ತಿಂಗಳ ಖರ್ಚು ಕೊಡ್ರಿ ಬಾಯರ ಅಂತ ಕೇಳಿದ. ನಾ ಕೊಟ್ಟೆ. ಈಗೇನಾತು ಅಂತ...'
ಎಷ್ಟು ಕೊಟ್ಟೆ ಅವನಿಗೆ?'
ಮುನ್ನೂರ ಐವತ್ತು...ಬರೋಬ್ಬರೀ ಎಣಿಸೀನಿ..'
ನಿನ್ತಲೇ ..ನೀ ಕೊಟ್ಟಿರೋದು ಐನೂರರ ಮೂರು ನೋಟು...' ಅವನು ವಾಪಸ್ಸು ಕೊಡೋದಂತೂ ಕನಸಿನ ಮಾತು ಬಿಡು. ನಿನ್ನನ್ನು ಅದೆಲ್ಲಿಂದ ಗಂಟ್ಹಾಕಿದ್ರೋ ನನ್ನ ಕರ್ಮ !!😳😳
ಅಯ್ಯೋ! ಹೌದಾ...ಈಗೇನು ಮಾಡೋದು? ನಾಳೆ ಬರ್ತಾನಲ್ಲ. ವಿಚಾರಿಸ್ತೀನಿ ಬಿಡಿ..ಏನೀಗ..' ಅವಳ ಸರಳ ಉತ್ತರಕ್ಕೆ ಧಂಗಾದೆ.. ಪೆಟ್ರೋಲ್ ಹಾಕಿಸಲೆಂದು ಹೋದಾಗಲೇ ಗೊತ್ತಾದದ್ದು ಜೇಬಲ್ಲಿ ಹಣವಿಲ್ಲವೆಂದು..ಇವಳು ನೋಡಿದರೆ, ಏನೂ ಆಗೇ ಇಲ್ಲವೆನ್ನುವಂತೆ ನಿರಾಳವಾಗಿದ್ದಾಳೆ...ಎಲ್ಲಾ ನನ್ನ ಹಣೆಬರಹ..ಹೋಗಿ ಹೋಗಿ..ಉತ್ತರ ಕನ್ನಡದ ಹುಡುಗೀರು ಚಂದ ಅಡಿಗೆ ತಿಂಡಿ ಮಾಡ್ತಾರೆಂತ ಮೆಚ್ಚಿ ಮದುವೆಯಾದೆ..ಅದೇ ತಪ್ಪಾಯಿತೇನೋ...
ಆ ನಾಳೆ ,,ಬಂತು..
ಹಾಲಿನವನ ಪತ್ತೆ ಇಲ್ಲ. ಇಬ್ಬರೂ ಕಾಯ್ತಿದ್ವಿ..ಕಾಫೀನೂ ಕುಡೀದೆ.
ಟ್ರೀನ್ ...ಟ್ರೀನ್..ಸದ್ದಾಯಿತು ಸೈಕಲ್ದು..
ಅವನೇ...ಬಾಗಿಲು ತಟ್ಟಿದ..ಕೈಯಲ್ಲಿ ಹಾಲಿನ ಪ್ಯಾಕೆಟ್ಟು..
ನನ್ನವಳು ಮುಂದೆ ಹೋಗಿ ಇಸಿದುಕೊಂಡಳು...
ಅಕ್ಕಾವರೇ....! ನಿನ್ನೇ....'
ಹೂಂ ಹೇಳು...ಏನು ನಿನ್ನೇ......?
ತಗೋಳಿ ನೀವು ನನಗೆ ಸಾವಿರ ರುಪಾಯಿ ಜಾಸ್ತಿ ಕೊಟ್ರೀ...ಮೇಲೆ ನೂರೈವತ್ತೂ ಸೇರಿಸಿ ಹಿಂದಿರುಗಿಸಿದ್ದ. ಸಧ್ಯ ! ಹೋದ ಜೀವ ಬಂತು. ಹಿಂದೆ ನಿಂತಿದ್ದ ನನಗೆ ..ಬಹಳ ಪಿಚ್ಚೆನಿಸಿತು...ಪಾಪದ ಹುಡುಗ. ಕಡುಬಡತನ.....ಆದರೂ ಹಣ ವಾಪಸ್ ಕೊಟ್ಟ ಬಗೆ ತೀರ ಅಪ್ಯಾಯಮಾನವಾಗಿತ್ತು...ಯಾಕೋ ನಾನೇ ತಪ್ಪು ಮಾಡಿದೆ ಅನಿಸಿತು...ಅವನಿಗೆ.
ಅವಳನ್ನು ಪಕ್ಕಕ್ಕೆ ಸರಿಸಿ...
ಸರಿ ಆಯಿತು ಕಣೋ ! ತುಂಬಾ ಥ್ಯಾಂಕ್ಸ್ !
ತಗೋ! ನಿನ್ನ ನಿಷ್ಟೆಗೆ ಮೆಚ್ಚಿ ನಾ ಕೊಡೋ ನೂರು ರೂ ತಗೋ...' ಎಂದ..
ಅದಕ್ಕವನು ಏನಂದ ಗೊತ್ತೇ....
ಅಬ್ಬಾ!! ಕೇಳಿದರೆ, ಮೂರು ದಿನ ನಾನು ನಾಚಿಕೆಯಿಂದ ಮುಸುಕೆಳೆದು ಮಲಗಬೇಕು..ಅಂತ ಅವಮಾನವಾಯಿತು ಮಾರ್ರೆ...
ಸಾರ್! ನಿಮ್ಮ ಹಣ ನಂಗೆ ಬ್ಯಾಡ ಸಾರೂ...ನನ್ನ ಕಷ್ಟದ ಸಂಪಾದನೆಯಲ್ಲೇ ನಾ ಬದುಕಬೇಕು. ನನ್ನ ನಂಬಿ ಇನ್ನೂ ಮೂರು ಜೀವ ಇದ್ದಾವೆ ಮನೇಲಿ...ಅವರಿಗೂ ನೋಡಬೇಕು...
ಆಮೇಲೆ, ಇನ್ನೂ ಒಂದಿಸ್ಯ ಹೇಳಿಲ್ಲ ನಿಮಗೆ ಸಾರೂ.
ನಾ ಹಾಲು ಹಾಕೋ ಮನಿಯಾಗೊಬ್ಬ ಪುಟ್ಟ ಹುಡುಗ ಇದ್ದಾನೆ. ಅನಾಥ...ಯಾರೂ ಇಲ್ಲ ಅವನಿಗೆ...ಅವನಜ್ಜೀಗೆ ವಯಸಾಗಿದೆ...ಕೈಕಾಲಾಡೋಲ್ಲ..
ಹೊಟ್ಟೆ ತುಂಬಿಸೋದೇ ಕಷ್ಟ. ಪಾಪ! ನಾನೇ ದಿನಾ ಅವರ ಮನೆಗೆ ಫ್ರೀ ಹಾಲು ಮೊಸರು ಹಾಕಿ, ತಿಂಗಳ ರೇಷನ್ ಕೂಡಾ ಕೊಡ್ತೀನಿ..ಹೆಂಗೋ ಬದುಕೋತಾರೆ...ನಾನೂ ಸಹಾಯ ಮಾಡ್ತೀನಿ ಸಾರೂ....ನೀವು ನಂಗೇನೂ ಸಹಾಯ ಮಾಡೋದ್ ಬೇಡ...' ಅಂದ...
ನನ್ನವಳು ಆಗಲೇ ಸೆರಗನ್ನು ಬಾಯಿಗಿಟ್ಟು ಕಣ್ಣೀರಿಡೋದು ಕಂಡಿತು. ಎಂತಾ ಕರುಣೆ ಈ ಹುಡುಗನ ಮನಸು..! ನಾನು ಕೈ ಚಾಚಿ ಹಿಡಿದ ನೂರು ರುಪಾಯಿ ಅಣಕಿಸಿದಂತಾಯ್ತು...
ಆ ಹುಡುಗ ಎತ್ತರದಲ್ಲಿದ್ದ. ನಾ ಕುಬ್ಜನಾಗಿ ಕುಗ್ಗಿಹೋದೆ. ಸಾಲದ್ದಕ್ಕೆ ಹೆಂಡತೀ ಮೇಲೆ ಬೇರೆ ರೇಗಿ ಬೆಳ್ಬೆಳಿಗ್ಗೆನೇ ಆವಾಂತರ ಬೇರೆ..
ಛೇ!! ಆ ಅಜ್ಜೀ ಸಂಸಾರಕ್ಕಾದರೂ ಕೈಲಾದಷ್ಟು ಸಹಾಯ ಮಾಡಬೇಕೆಂದು ನಿರ್ಧರಿಸಿದೆ. ಅವಳೂ ಅದನ್ನೇ ಸೂಚಿಸಿದಳು ಮೌನವಾಗಿ....
ನಾಳೆ...ಆ ಮನೆ ತೋರಿಸು ನಂಗೆ' ಎಂದೆ ಆ ಹುಡುಗನಿಗೆ...
ಆಯ್ತು ಸಾರ್.....' ಎನ್ನುತ್ತಾ ಸೈಕಲ್ ಹತ್ತಿ ಹೋದ ವನನ್ನು ಬಹಳ ಹೊತ್ತು ನೋಡುತ್ತ ಅಲ್ಲೇ ನಿಂತೆ. ವಯಸ್ಸಾದ ನಂತರ, ಕೈಕಾಲು ಶಕ್ತಿ ಕಳೆದುಕೊಂಡಾಗ, ಆಸರೆ ಅನ್ನೋದು ಬಹಳ ಮುಖ್ಯ ಅಲ್ಲವೇ? ಅದರಲ್ಲೂ ಹಣದ ಕೊರತೆಯಿದ್ದಾಗ, ಬದುಕು ಇನ್ನೂ ಬರ್ಬರ...ಇಂತಾ ಜೀವಿಗಳಿಗೆ ಆ ಭಗವಂತನೇ ದಾರಿ ತೋರಬೇಕೆಂದು ಬೇಡಿಕೊಂಡೆ...🙏