ತೀರ್ಪು
ತೀರ್ಪು
ಇಂದು ನ್ಯಾಯಾಲಯದಲ್ಲಿ ಹೊರ ಬೀಳಲಿರುವ ತೀರ್ಪಿನ ಬಗ್ಗೆ ,ವಿಶ್ವನಾಥ ಕಳವಳಗೊಂಡಿದ್ದ.
ತನ್ನ ವೈವಾಹಿಕ ಜೀವನದಲ್ಲಿ ,ಉಂಟಾದ ಕಷ್ಟ ನಷ್ಟಗಳು,,.,.... ತನ್ನ ಮಗಳ ಜೀವನದಲ್ಲಿ ಮರುಕಳಿಸಬಾರದೆಂಬ ಎಚ್ಚರಿಕೆಯಿಂದ ,ತನ್ನ ಮಗಳು ಪಲ್ಲವಿಯ ಮದುವೆಯನ್ನು , ಹೇರಳವಾಗಿ ವರದಕ್ಷಿಣೆ ನೀಡಿ ,ನೂರಾರು ಜನರು ಅಸೂಯೆಪಡುವಂತೆ ,ಅದ್ದೂರಿ ಯಾಗಿ ಮಾಡಿ ಮುಗಿಸಿ,ಹಮ್ಮು ಬಿಮ್ಮುಗಳಿಂದ ಬೀಗಿದ್ದ. ಕೇಳಿ ದಷ್ಟು ವರೋಪಚಾರ ಮಾಡಿ,ಮಗಳಿಗೆ ಮದುವೆ ಮಾಡಿಬಿಟ್ಟರೆ ಬೇರೆ ಯಾವ ರೀತಿ ಸಮಸ್ಯೆ ಬಂದೀತು? ಎಂಬುದು ಅವನ ಲೆಕ್ಕಾಚಾರವಾಗಿತ್ತು. ಆದರೆ,ಮಗಳ ವಿಷಯದಲ್ಲಿ ಅವನ ಲೆಕ್ಕಾಚಾರ ತಪ್ಪಿತ್ತು. ಮದುವೆ ಯಾದ ವರ್ಷದ ಲ್ಲೇ ಮಗಳು ತವರಿಗೆ ಮರಳಿದಾಗ, ವಿಶ್ವನಾಥನಿಗೆ ಆಶ್ಚರ್ಯದೊಂದಿಗೆ ವಿಪರೀತ ಸಿಟ್ಟು ಬಂದಿತ್ತು.
ಮಗಳು ತವರಿಗೆ ಮರಳಿ ಬಂದ ಕಾರಣವನ್ನು ಹುಡುಕಿದಾಗ, ತನ್ನ ಅಳಿಯನ ಆಸಕ್ತಿ ಅವನ ಪ್ರೇಯಸಿಯ ಮೇಲಿದ್ದುದ್ದರಿಂದ ,ಅವನಿಗೆ ತನ್ನ ಮಗಳಿಗಿಂತ ತನ್ನ ಆಸ್ತಿಯ ಮೇಲೆ ಮಾತ್ರ ಕಣ್ಣಿತ್ತೆಂಬುದು ತಿಳಿದು ಬಂದಿತ್ತು.ಗಂಡನ ನಿರಾಕರಣೆಯಿಂದ ಬೇಸತ್ತು, ಮಗಳು ತವರನ್ನು ಸೇರಿ ಬಿಟ್ಟಾಗ,ಹೆತ್ತ ಕರುಳು ವಿಲಿವಿಲಿ ಒದ್ದಾಡಿ,ಇಂತಹ ಅಳಿಯನನ್ನು ಸುಮ್ಮನೆ ಬಿಡಬಾರದೆಂದು ನಿರ್ಧರಿಸಿ, ಮಗಳ ವಿಚ್ಛೇದನ ಕ್ಕಾಗಿ ಕೋರ್ಟ್ ಮೆಟ್ಟಲುಗಳನ್ನು ಏರಿದ್ದ.
ಕೇಸಿನ ಸಾಕ್ಷ್ಯಾಧಾರಗಳ ವಿಚಾರಣೆಗಳು ಮುಗಿದಿದ್ದು, ಕೊನೆಯ ಹಂತವಾಗಿ, ಇಂದು ಅದರ ತೀರ್ಪನ್ನು ಕಾದಿರಿಸಲಾಗಿತ್ತು.ಇಷ್ಟು ದಿನಗಳ ಹೋರಾಟದ ಕೊನೆಯ ಕ್ಲೈಮಾಕ್ಸ್ನ ಬಗ್ಗೆ ವಿಶ್ವನಾಥ ನಿಗೆ ಆತಂಕವಿತ್ತು.ಜೊತೆಗೆ ಪಾಪಪ್ರಜ್ಙೆ ಕಾಡತೊಡಗಿತು.
ನ್ಯಾಯಾಲಯದ ಕಲಾಪಗಳು ಆರಂಭಗೊಳ್ಳುವುದಕ್ಕೆ ಇನ್ನು ಸಮಯವಿದ್ದುದ್ದರಿಂದ, ಕೋಟ್೯ ಆವರಣದಲ್ಲಿ ಮಗಳೊಂದಿಗೆ ಕುಳಿತಿದ್ದ ವಿಶ್ವನಾಥ ನಿಗೆ, ಮಗಳ ಕಳೆಗುಂದಿದ ಮುಖವನ್ನು ನೋಡಿದಾಗ,ತಾನು ಈ ಹಿಂದೆ ,ದುಡ್ಡಿನ ದುರಾಸೆಯಿಂದ, ಒಂದು ಹೆಣ್ಣಿಗೆ ಮಾಡಿದ ಅನ್ಯಾಯದ ನೆನಪುಗಳು ಕಾಡತೊಡಗಿತು.ಪಾಪಪ್ರಜ್ಙೆಯಿಂದ ಹೈರಾಣಾಗಿದ್ದ.
ಈಗ ಪಶ್ಚಾತ್ತಾಪ ದಿಂದ ಬಳಲುತ್ತಿದ್ದ ರೂ,ಅಂದು ಮಾಡಿದ ಅನ್ಯಾಯಕ್ಕಾಗಿ, ಇಂದು ಮಗಳ ಜೀವನ ಬಲಿಯಾಗುತ್ತಿರುವುದನ್ನು ಅವನಿಂದ ನೋಡಲಾಗುತ್ತಿರಲಿಲ್ಲ. ಮಗಳ ಬದುಕನ್ನು ಸರಿಪಡಿಸಲು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದ. ಇಂದು ಮಗಳ ಜೀವನದ ಒಂದು ಪ್ರಮುಖ ತಿರುವು,ಇಂದಿನ ನ್ಯಾಯಾಲಯದ ತೀರ್ಪನ್ನು ಅವಲಂಬಿಸಿದೆ.
ಇದ್ದಕ್ಕಿದ್ದಂತೆ ಕೋರ್ಟ್ ಆವರಣದಲ್ಲಿ ಒಂದು ರೀತಿ ಸಂಚಲನವಾಗತೊಡಗಿ,ಎಲ್ಲರೂ ಮುಖ್ಯ ದ್ವಾರ ದತ್ತ ಹೋಗತೊಡಗಿದರು.ಇಂದು ನ್ಯಾಯಾಧೀಶರ ಸ್ಥಾನಕ್ಕೆ ಹೊಸತಾಗಿ ಬರುತ್ತಿರುವ ಮಹಿಳಾ ನ್ಯಾಯ ಮೂರ್ತಿ ಗಳನ್ನು ಸ್ವಾಗತಿಸಲು ಸಿಬ್ಬಂದಿಗಳೆಲ್ಲ ತಯಾರಾಗಿದ್ದರು.
ನಿಗಧಿತ ಸಮಯಕ್ಕೆ ಕೋರ್ಟ್ ನ ಕಲಾಪಗಳು ಪ್ರಾರಂಭಗೊಂಡು, ಎಲ್ಲರು ಕೋರ್ಟ್ ಹಾಲಿನೊಳಗೆ ಹೊರಟಾಗ, ವಿಶ್ವನಾಥ ನೂ ಸಹ ಮಗಳೊಂದಿಗೆ ಒಳಗೆ ಹೋಗಿ ಒಂದು ಕಡೆ ಕುಳಿತ.
ಹೊಸ ನ್ಯಾಯಾಧೀಶರು ಒಳಗೆ ಪ್ರವೇಶಿಸಿದಾಗ ಎಲ್ಲರೂ ಎದ್ದು ನಿಂತು ಗೌರವ ವನ್ನು ಸೂಚಿಸಿದರು. ಹೊಸ ನ್ಯಾಯಾಧೀಶರನ್ನು ಕಂಡು,ವಿಶ್ವನಾಥ ಅಚ್ಚರಿಗೊಂಡಿದ್ದ.ಅವನು ತನ್ನ ಕಣ್ಣನ್ನು ತಾನೇ ನಂಬಲಾರದಾದನು.ಹೊಸ ನ್ಯಾಯಮೂರ್ತಿ ಗಳ ಸ್ಥಾನವನ್ನು ಅಲಂಕರಿಸಿದ ವ್ಯಕ್ತಿ ಬೇರಾರೂ ಆಗಿರದೆ, ತನ್ನ ವಿಚ್ಛೇದಿತ ಪತ್ನಿ, ವೈದೇಹಿ ಎಂಬುದು ತಿಳಿದಾಗ, ಮತ್ತೂ ಕುಗ್ಗಿಹೋದ.ಈಗ್ಗೆ ಇಪ್ಪತ್ತೆರಡು ವರ್ಷಗಳ ಹಿಂದೆ, ತನ್ನಿಂದಾಗಿ ವಿಚ್ಛೇದನ ಪಡೆದ ಅವಳು, ತನ್ನಂದ ಸಲ್ಲಬೇಕಾದ ಪರಿಹಾರವನ್ನು ತಿರಸ್ಕರಿಸಿ, ಇದೇ ಕೋರ್ಟ್ ಆವರಣದಿಂದ ಹೊರಟುಹೋಗಿದ್ದ ಅವಳನ್ನು , ಇಂದು ಇಂತಹ ಉನ್ನತವಾದ ಸ್ಥಾನದಲ್ಲಿ ನೋಡುತ್ತಿನೆಂಬ ಕಲ್ಪನೆಯೇ ಇರದಿದ್ದ ವಿಶ್ವನಾಥನಿಗೆ ತುಂಬಾ ಶಾಕ್ ಅಗಿತ್ತು.ನಾಲಿಗೆಯ ಪಸೆ ಆರುತಿತ್ತ್ತು.
ಹೇಗೋ ಕಷ್ಟಪಟ್ಟು ತಲೆ ತಗ್ಗಿಸಿ ಕುಳಿತಿದ್ದ.ಅಪ್ಪನ ಪರಿಸ್ಥಿತಿಯನ್ನು ಕಂಡು ಮಗಳಿಗೆ ಆತಂಕವಾಗುತ್ತಿತ್ತು "ಪಲ್ಲವಿ ವಿಶ್ವನಾಥ್" "ಪಲ್ಲವಿ ವಿಶ್ವನಾಥ್"" ಪಲ್ಲವಿ ವಿಶ್ವನಾಥ'ಮೂರು ಬಾರಿ ಕೂಗಿದಾಗ,ವಿಶ್ವನಾಥ ತನ್ನ ಯೋಚನೆಗಳಿಂದ ಹೊರಬಂದ.ಮಗಳು ಕಟಕಟೆಯ ಲ್ಲಿ ಕಡೆಯ ಬಾರಿ ಉತ್ತರಿಸುತ್ತಿದ್ದಳು. ಈಗಾಗಲೇ ಸಿದ್ಧವಾಗಿದ್ದ ತೀರ್ಪನ್ನು ನ್ಯಾಯಮೂರ್ತಿ ಗಳು ಓದತೊಡಗಿದಾಗ ತನ್ನ ಮಾಜಿ ಪತ್ನಿಯೇ ತನ್ನ ಮಗಳ ವಿಚ್ಛೇದನ ದ ತೀರ್ಪನ್ನು ನೀಡಬೇಕಾದ ಸಂದಿಗ್ಧ ಸನ್ನಿವೇಶ ದಲ್ಲಿ, ವಿಶ್ವನಾಥ ಕುಬ್ಜನಾಗುತ್ತಿದ್ದರೆ, ನ್ಯಾಯಾಧೀಶಸ್ಥಾನದಲ್ಲಿ ಕುಳಿತು, ತೀರ್ಪನ್ನು ಓದುತ್ತಿದ್ದ ವೈದೇಹಿ ,ತನ್ನ ಮಾಜಿ ಗಂಡನ ಪರಿಸ್ಥಿತಿ ಯನ್ನು ಕಂಡು, ವಿಜಯದ ನಗೆ ಬೀರುತ್ತಿದ್ದ ಳು.
ಆ ನಗೆಯಲ್ಲಿ "ಮಾಡಿದ್ದುಣ್ಣೋ ಮಹಾರಾಯ". ..... ಎಂಬ ಭಾವವನ್ನು ಗಮನಿಸಿ ದ ವಿಶ್ವನಾಥ ಖಿನ್ನನಾಗುತ್ತ ಹೋದ.
